Thursday, 19th September 2024

Murder Case: ಶ್ರೀಮತಿ ಶೆಟ್ಟಿ ಕೊಲೆ: ಚಿಟ್‌ಫಂಡ್‌ ಮಾಲಕಿಯ ಕೊಂದು ಪೀಸ್‌ ಪೀಸ್‌ ಮಾಡಿ ಎಸೆದ 3 ಆರೋಪಿಗಳಿಗೆ ಸೆ.17ರಂದು ಶಿಕ್ಷೆ

srimati shetty murder case

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಶ್ರೀಮತಿ ಶೆಟ್ಟಿ ಕೊಲೆ (Srimati Shetty Murder Case) ಪ್ರಕರಣದ ಮೂವರು ಆರೋಪಿಗಳನ್ನು ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. 2019ರಲ್ಲಿ ನಡೆದ ಈ ಪ್ರಕರಣದಲ್ಲಿ ಚಿಟ್‌ಫಂಡ್‌ ಮಾಲಕಿಯನ್ನು ಆರೋಪಿಗಳು ಕೊಂದು ಪೀಸ್‌ ಪೀಸ್‌ ಮಾಡಿ ಮಂಗಳೂರು ನಗರದ (Mangalore Crime News) ಹಲವು ಕಡೆ ಎಸೆದು ಪಾರಾಗಲು ಯತ್ನಿಸಿದ್ದರು.

ಸೆಮಿನರಿ ಕಂಪೌಂಡ್‌, ಅತ್ತಾವರ ನ್ಯೂರೋಡ್‌ ಕಂಕನಾಡಿಯ ಮೂಲ ನಿವಾಸಿಯಾಗಿರುವ ಜೋನಸ್‌ ಸ್ಯಾಮ್ಸನ್‌ ಅಲಿಯಾಸ್‌ ಜೋನಸ್‌ ಜೌಲಿನ್‌ ಸ್ಯಾಮ್ಸನ್‌, ಆತನ ಪತ್ನಿ ವೆಲೆನ್ಸಿಯಾದ ವಿಕ್ಟೋರಿಯಾ ಮಥಾಯಿಸ್‌ ಹಾಗೂ ಕುಂಜತ್‌ಬೈಲ್‌ ಮರಕಡ ಗ್ರಾಮ ತಾರಿಪಾಡಿ ಗುಡ್ಡೆಯ ರಾಜು ಘೋಷಿತ ಆರೋಪಿಗಳು. ಇವರಿಗೆ ಶಿಕ್ಷೆ ಪ್ರಮಾಣವನ್ನು ಕೋರ್ಟ್‌ ಇದೇ 17ರಂದು ಪ್ರಕಟಿಸಲಿದೆ.

ಶ್ರೀಮತಿ ಶೆಟ್ಟಿ ಅತ್ತಾವರ ಸಮೀಪ ಎಲೆಕ್ಟ್ರಾನಿಕ್ಸ್ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲದೆ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದು, ಕೊಲೆ ಆರೋಪಿಗಳಲ್ಲಿ ಜೋನಸ್‌ ಸ್ಯಾಮ್ಸನ್‌ ಕುರಿಚಿಟ್‌ ಫಂಡ್‌ನಲ್ಲಿ ಎರಡು ಸದಸ್ಯತ್ವ ಹೊಂದಿದ್ದ. ಅವಧಿಗೆ ಮೊದಲೇ ಎರಡೂ ಸದಸ್ಯತ್ವದ ಹಣವನ್ನು ಪಡೆದುಕೊಂಡಿದ್ದ. ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಕಂತು ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸಿದ್ದರು.

2019 ಮೇ 11 ರಂದು ಶ್ರೀಮತಿ ಶೆಟ್ಟಿ ಹಣ ಕೇಳಲು ಸ್ಯಾಮ್ಸನ್ ಮನೆಗೆ ತೆರಳಿದ್ದರು. ಈ ವೇಳೆ ನಡೆದ ಗಲಾಟೆಯಲ್ಲಿ ಸ್ಯಾಮ್ಸನ್, ಶ್ರೀಮತಿ ಶೆಟ್ಟಿ ಅವರ ಮೇಲೆ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ನೆಲಕ್ಕೆ ಬಿದ್ದ ಶ್ರೀಮತಿ ಶೆಟ್ಟಿ ಅವರನ್ನು ಕೊಲೆ ಮಾಡಿ ಅವರ ಮೈಮೇಲಿದ್ದ ಚಿನ್ನಾಭರಣ ದೋಚಿ ಶವವನ್ನು ಮನೆಯಲ್ಲೇ ತುಂಡು ತಂಡು ಮಾಡಿ ನಗರದ ವಿವಿಧೆಡೆ ಎಸೆದಿದ್ದ. ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಮಹೇಶ್‌ ಎಂ. ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವೆನ್ಲಾಕ್‌ ಆಸ್ಪತ್ರೆಯ ಫೊರೆನ್ಸಿಕ್‌ ವಿಭಾಗದ ವೈದ್ಯಾಧಿಕಾರಿ ಡಾ. ಜಗದೀಶ್‌ ರಾವ್‌ ಶವಪರೀಕ್ಷೆ ನಡೆಸಿ ವರದಿ ನೀಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು, ಈ ಮೂವರು ದೋಷಿತರು ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣದ ಮೇಲೆ ವಿಚಾರಣೆಯನ್ನು ಇದೇ 17ಕ್ಕೆ ನಿಗದಿ ಪಡಿಸಲಾಗಿದೆ. ಸರ್ಕಾರದ ಪರವಾಗಿ ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ಅವರು ವಾದ ಮಂಡಿಸಿದ್ದರು.

ಇದನ್ನೂ ಓದಿ: Viral Video: ಬೆಂಗಳೂರಿನಲ್ಲಿ ನೆಕ್ಸ್ಟ್‌ ಲೆವೆಲ್‌ ತಲುಪಿದ ರೋಡ್‌ ರೇಜ್‌, ಮಹಿಳೆಗೆ ಅತ್ಯಾಚಾರ-ಕೊಲೆ ಬೆದರಿಕೆ