Friday, 20th September 2024

Tumkur News: ಶಿಕ್ಷಣ ಸರ್ವ ಸಮಸ್ಯೆಗಳಿಗೆ ರಾಮಬಾಣ- ವೀರೇಶಾನಂದ ಸ್ವಾಮೀಜಿ

ಮಧುಗಿರಿ: ಶಿಕ್ಷಣವೇ ರಾಷ್ಟ್ರದ ಶಕ್ತಿಯ ದ್ಯೋತಕ, ಸರ್ವ ಸಮಸ್ಯೆಗಳಿಗೆ ರಾಮಬಾಣ. ಶಿಕ್ಷಣದ ಸಂವಾಹಕನಾದ ಶಿಕ್ಷಕನು ಕಲಿಕೆಯಲ್ಲಿ ಆಸಕ್ತವಾದರಷ್ಟೇ ಕಲಿಸಲು ಸಮರ್ಥನಾಗುತ್ತಾನೆ. ಶಿಕ್ಷಕನಿಗೆ ಸಾಮಾಜಿಕ ಹೊಣೆಗಾರಿಕೆ ಇದೆ. ಮೌಲ್ಯಾಧಾರಿತ ಸಮಾಜ ನಿರ್ಮಾಣವು ಸಮರ್ಥ ಶಿಕ್ಷಕರಿಂದಷ್ಟೇ ಸಾಧ್ಯ’ ಎಂದು ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದ ಸರಸ್ವತೀ ಅಭಿಪ್ರಾಯಪಟ್ಟರು.

ಅವರು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜನೆಗೊಂಡಿದ್ದ ‘ಶೈಕ್ಷಣ ಕ ಪುನಶ್ಚೇತನ ಹಾಗೂ ವಿವೇಕಧಾರಾ ಕೃತಿಯ ಲೋಕಾರ್ಪಣ’ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ದಿಕ್ಸೂಚಿ ಭಾಷಣ ಮಾಡಿದರು.

‘ಶಿಕ್ಷಕನೊಬ್ಬ ಸಪ್ತರ್ಷಿ. ಬಾಳೆಂಬ ಬೆಳಕಿನ ಕಿರಣದಲ್ಲಿ ಏಳು ಬಣ್ಣಗಳಿರುವಂತೆ ಶಿಕ್ಷಕನ ವ್ಯಕ್ತಿತ್ವದಲ್ಲಿ ಸಪ್ತ ಆಯಾಮಗಳಿವೆ. ಅವನು ವಿದ್ಯಾರ್ಥಿಗಳ ಭವಿಷ್ಯ ಜೀವನಕ್ಕೆ ಭದ್ರಬುನಾದಿ ಹಾಕುವುದರಿಂದ ಅವನೊಬ್ಬ ಪ್ರವಾದಿ ಎಂದು ಹೇಳಿದರು.

ಸಮಾಜವು ಶಿಕ್ಷಕನಿಗೆ ಸಮಾಜ ನಿರ್ಮಾಣ ಮತ್ತು ಅಭಿವೃದ್ಧಿಗೆ ಆಯ್ಕೆ ಮಾಡಿ ಪರವಾನಗಿ ನೀಡುರುವುದರಿಂದ ಅವನೊಬ್ಬ ನಾಗರಿಕ. ಇತರರಿಗೆ ಅಸಾಧ್ಯ ಅಥವಾ ಕಷ್ಟಸಾಧ್ಯ ಎನ್ನಿಸುವುದನ್ನೇ ಆಯ್ಕೆ ಮಾಡಿಕೊಂಡು ಶಿಕ್ಷಕನು ಗೆಲುವು ಸಾಧಿಸುತ್ತಾನೆಯಾದ್ದರಿಂದ ಅವನೊಬ್ಬ ಪ್ರವರ್ತಕ. ಅಂತಿಮವಾಗಿ ಜನಾಂಗದ ಸುಧಾರಣೆಯ ಪ್ರಕ್ರಿಯೆ ಯಲ್ಲಿ ಇತರರೆಲ್ಲರಿಗಿಂತಲೂ ಅಧಿಕ ನಂಬಿಕೆ ಶಿಕ್ಷಕನಿಗೇ ಇರುವುದರಿಂದ ಅವನೊಬ್ಬ ನಂಬಿಕಸ್ಥ. ಇದನ್ನೆಲ್ಲ ಶಿಕ್ಷಕನು ಮರೆತಿರುವುದರಿಂದ ಅಥವಾ ನಿರ್ಲಕ್ಷಿಸಿರುವುದರಿಂದ ಅವನಿಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾನೆ ಎಂದು ಸ್ವಾಮೀಜಿ ನೊಂದು ನುಡಿದರು.

ಉಪನಿರ್ದೇಶಕರಾದ ಗಿರಿಜಾ ಮಾತನಾಡಿ, ಸ್ವಾಮಿ ವೀರೇಶಾನಂದರ ‘ವಿವೇಕಧಾರಾ’ ಕೃತಿಯನ್ನು ಲೋಕಾರ್ಪಣೆ ಗೈದರು.

ಸಮಾರಂಭವನ್ನು ಉದ್ಘಾಟಿಸಿದ ಸಚಿವ ಕೆ.ಎಸ್.ರಾಜಣ್ಣ ಮಾತನಾಡಿ, ‘ಇಪ್ಪತ್ತೈದು ವರ್ಷಗಳಿಂದ ಸ್ವಾಮೀಜಿ ಯವರನ್ನು ಬಹಳ ಹತ್ತಿರದಿಂದ ಬಲ್ಲೆ. ಅವರ ಮಾತು-ಕೃತಿಗಳಲ್ಲಿ ಸ್ಪಷ್ಟತೆ, ಸಮಾಜಸೇವೆಯಲ್ಲಿ ಅವರ ಬದ್ಧತೆ ಮತ್ತು ನಿಖರತೆಗಳು ನನ್ನ ಮನಸ್ಸಿಗೆ ತೃಪ್ತಿ ತಂದಿದೆ. ಅವರ ವಿಚಾರಗಳು ನಮ್ಮ ಶಿಕ್ಷಕರ ಹಾಗೂ ಸಮಾಜದ ಹಿತಚಿಂತಕರಿಗೆ ಮುಟ್ಟುವಂತಾಗಬೇಕೆಂಬ ಆಶಯ ನನ್ನದು’ ಎಂದು ಅಭಿಮಾನಪೂರ್ವಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿಗಳಾದ ರಾಜಣ್ಣ, ಆಂಜನಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್ ಮತ್ತು ಡಾ.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು. ಕೊರಟಗೆರೆ, ಮಧುಗಿರಿ, ಶಿರಾ ಮತ್ತು ಪಾವಗಡ ತಾಲ್ಲೂಕುಗಳ ಪ್ರೌಢ ಶಾಲಾ ಶಿಕ್ಷಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Road Accident: ಹಬ್ಬದ ಮರುದಿನ ಖುಷಿಯಿಂದ ಶಾಲೆಗೆ ಹೊರಟ ತಾಯಿ- ಮಗಳನ್ನು ಬಲಿ ಪಡೆದ ಬಸ್