Saturday, 21st September 2024

Chikkaballapur News: ರಾಧಾಕೃಷ್ಣನ್ ಆದರ್ಶ ಗುರುಪರಂಪರೆಗೆ ಮಾದರಿಯಾಗಲಿ-ಬಿಇಒ ವೆಂಕಟೇಶಪ್ಪ

ಬಾಗೇಪಲ್ಲಿ: ಸಮಾಜದ ಒಳ್ಳೆಯದನ್ನು ಬಯಸುವ ಶಿಕ್ಷಕರಿಗೆ ಹಲವಾರು ಸವಾಲು, ಸಮಸ್ಯೆಗಳು ಎದುರಾದರೂ ದೇಶದ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಕರು ಅಕ್ಷರ ಕ್ರಾಂತಿ ಬಿತ್ತುವ ಕೆಲಸವನ್ನು ನಿಲ್ಲಿಸಬಾರದು ಎಂದು ಡಾ.ಎಸ್.ರಾಧ ಕೃಷ್ಣನ್‌ರವರ ಧ್ಯೇಯವನ್ನು ನಾವೆಲ್ಲರೂ ಪಾಲಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ತಿಳಿಸಿದರು.

ಬಾಗೇಪಲ್ಲಿ ಪಟ್ಟಣದ ಸಂತೇ ಮೈದಾನದಲ್ಲಿರುವ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಸರ್ಕಾರಿ ನೌಕರರ ಸಂಘ ಸಂಯಕ್ತಾಶ್ರಯದಲ್ಲಿ ಅಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಶಿಕ್ಷಕರು ಎಂದಿಗೂ ತಮ್ಮ ಕರ್ತವ್ಯ ಮರೆಯ ಬಾರದು. ಮಕ್ಕಳ ಮೆದುಳಿನಲ್ಲಿ ಶಿಕ್ಷಣ ಎಂಬ ಬೀಜವನ್ನು ಬಿತ್ತುವಾಗ ತಮ್ಮ ಕರ್ತವ್ಯ ಸಮಯದಲ್ಲಿ ಶಿಕ್ಷಕರಿಗೆ ಹಲವು ಸಮಸ್ಯೆಗಳು ಎದುರಾದರು ಪ್ರಯತ್ನವನ್ನು ನಿಲ್ಲಿಸದೆ ಮುನ್ನಡೆಯುತ್ತಾರೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಎಷ್ಟು ಮುಖ್ಯವೂ ಸಂಸ್ಕಾರವೂ ಅಷ್ಟೇ ಮುಖ್ಯವಾಗಿದ್ದು ಶಿಕ್ಷಣದ ಜೊತೆಗೆ ಗುರು, ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸಿ. ದೇಶಾದ್ಯಂತ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಸಾಧಕರ ಸಾಧನೆ ಹಾಗೂ ದೇಶದ ಭವಿಷ್ಯ ತರಗತಿಯ ಕೊಠಡಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂಬುದನ್ನು ಮರೆಯಬಾರದು. ಅದ್ದರಿಂದ ಮಕ್ಕಳ ಭವಿಷ್ಯವನ್ನು ನಿರ್ಮಿಸುವ ಶಿಕ್ಷಕರು ಪಠ್ಯದ ಜೊತೆಯಲ್ಲಿ ದೇಶದ ಪರಂಪರೆಯನ್ನು ಸಾರುವ ಸಂಸ್ಕಾರ ವನ್ನು ಕಲಿಸಿ ಕೊಡಿ ಎಂದು ಶಿಕ್ಷಕರಿಗೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಹೊಂದಿರುವ ಶಿಕ್ಷಕರನ್ನು, ತಾಲೂಕು ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆ ಗಳಲ್ಲಿ ವಿಜೇತರಾಗಿರುವ ಶಿಕ್ಷಕರನ್ನು ಸನ್ಮಾನಿಸಿ ಬಹುಮಾನಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಪೊಲೀಸ್ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ, ನಿವೃತ್ತ ಪ್ರಾಂಶುಪಾಲ ನಂಜುಂಡಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟರವಣಪ್ಪ, ಕಾರ್ಯದರ್ಶಿ ವೆಂಕಟರಾಯಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ನಟರಾಜ್, ಶಿಕ್ಷಕರಾದ ಆರ್.ಹನುಮಂತರೆಡ್ಡಿ, ರಂಗಾರೆಡ್ಡಿ, ಫಯಾಜ್, ವರುಣ್, ಕದಿರಪ್ಪ ಮತ್ತಿತರರು ಇದ್ದರು.

ಇದನ್ನೂ ಓದಿ: Chickballapur News: ಜನಪ್ರತಿನಿಧಿ ಸಂಸ್ಥೆಗಳ ಕಾರ್ಯ ವೈಖರಿ ಬಗ್ಗೆ ಅರಿವು ಮೂಡಿಸುವುದೇ ಶಾಲಾ ಸಂಸತ್-ಬಿಇಒ ವೆಂಕಟೇಶ್