Monday, 23rd September 2024

Bigg Boss Kannada 11 : ಈ ಬಾರಿಯ ಬಿಗ್‌ಬಾಸ್‌‌ನಲ್ಲಿ ಸ್ವರ್ಗ- ನರಕ ಎರಡೂ ಇದೆ! ಕಾಮನ್‌‌ಮ್ಯಾನ್‌‌ಗಳಿಗೆ ಎಂಟ್ರಿ!

Bigg Boss Kannada 11

ಬೆಂಗಳೂರು : ಬಿಗ್‌ಬಾಸ್‌ ಕನ್ನಡ 11ನೇ ಆವೃತ್ತಿಯ (Bigg Boss Kannada 11) ಕುರಿತು ಕೌತುಕ ಹೆಚ್ಚಾಗಿದ್ದು, ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಿಯಾಲಿಟಿ ಶೋ ಕುರಿತು ಕೆಲವೊಂದು ಸಂಗತಿಗಳನ್ನು ಅನಾವರಣ ಮಾಡಲಾಗಿದೆ. ಕಾರ್ಯಕ್ರಮದ ನಿರೂಪಕ ಸೇರಿದಂತೆ ಕಲರ್ಸ್ ಕನ್ನಡ ವಾಹಿನಿಯ ಹಾಗೂ ರಿಯಾಲಿಟಿ ಶೋ ತಂಡದ ಪ್ರಮುಖರು ಪಾಳ್ಗೊಂಡಿದ್ದ ಈ ಶೋದಲ್ಲಿ ಪ್ರಮುಖವಾಗಿ ಗಮನ ಸೆಳೆದಿರುವುದು ಸ್ವರ್ಗ ಮತ್ತು ನರಕ ತಂಡ. ಬಿಗ್‌ಬಾಸ್‌ 11ನೇ ಆವೃತ್ತಿಯ ಪ್ರೊಮೊದಲ್ಲಿ ಈ ಕುರಿತು ಸುಳಿವು ಸಿಕ್ಕಿದ್ದ ಹೊರತಾಗಿಯೂ ಸುದ್ದಿಗೋಷ್ಠೀಯಲ್ಲಿ ಕೆಲವೊಂದು ಮಾಹಿತಿಗಳನ್ನು ಸ್ಪಷ್ಟಪಡಿಸಲಾಗಿದೆ.

ಬಿಗ್ ಬಾಸ್ ಸೀಸನ್ 10 ಪ್ರಾರಂಭವಾಗುವ ವೇಳೆ ಸ್ಪರ್ಧಿಗಳನ್ನು ಸಮರ್ಥರು ಮತ್ತು ಅಸಮರ್ಥರು ಎಂದು ಪರಿಗಣಿಸಿ ಎರಡು ತಂಡಗಳಾಗಿ ಮಾಡಲಾಗಿತ್ತು. ಬಳಿಕ ಅವರು ತೇರ್ಗಡೆ ಹೊಂದಿದ್ದರು. ಆದರೆ, ಈ ತಂಡಗಳಿಗೆ ಹೊಸ ಹೆಸರು ನೀಡಲಾಗಿದ್ದು ಸ್ವರ್ಗ ಮತ್ತು ನರಕ ಎಂದು ಹೇಳಲಾಗಿದೆ. ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಂಗಡಿಸಿ ಅವರು ಮನೆಯೊಳಕ್ಕೆ ಕಳುಹಿಸಲಾಗುತ್ತದೆ. ಮುಂದೆ ಅವರ ನಡುವೆಯೇ ಸ್ಪರ್ಧೆಗಳು ನಡೆಯಲಿವೆ.

ನಾವು ಕಳೆದ ಬಾರಿ ತಂಡಗಳನ್ನಾಗಿ ಮಾಡಿ ಕಳುಹಿಸಲಿಲ್ಲ. ಅಂದರೆ ಒಳಗೆ ಹೋಗಿರುವ ಸ್ಪರ್ಧಿಗಳೇ ಟೀಮ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವಾಗಲೇ 2 ತಂಡ ಮಾಡುವುದೇ ಈ ಸೀಸನ್‌ನ ಸ್ಪೆಷಾಲಿಟಿ ಎಂದು ಸುದೀಪ್ ತಿಳಿಸಿದ್ದಾರೆ.

ಪ್ರೊಮೊದಲ್ಲಿ ಮಾತನಾಡಿದ ಸುದೀಪ್, “ಬೆಳಕು, ಸಂತೋಷ, ಸುಖ, ನೆಮ್ಮದಿ. ಸ್ವರ್ಗ. ಕತ್ತಲು, ನೋವು, ಕಷ್ಟ, ಹಿಂಸೆ.. ನರಕ ಸ್ವರ್ಗದಲ್ಲಿ ಇರಬೇಕಾದವರು, ನರಕದಲ್ಲಿ ಇರಬಹುದು.. ನರಕದಲ್ಲಿ ಇರಬೇಕಾದವರು ಸ್ವರ್ಗದಲ್ಲಿ ಇರಬಹುದು ಎಂದು ಹೇಳಿದ್ದಾರೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಶೋ ಆರಂಭಕ್ಕೂ ಮುನ್ನ ರಿವೀಲ್‌ ಆಗಲಿದೆ ಸ್ಪರ್ಧಿಗಳ ವಿವರ

ಬಿಗ್‌ಬಾಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಶೋ ಆರಂಭಕ್ಕೂ ಮುನ್ನ ರಿವೀಲ್‌ ಆಗಲಿದೆ ಸ್ಪರ್ಧಿಗಳ ವಿವರ
ಬೆಂಗಳೂರು: ಹೊಸ ಅಧ್ಯಾಯ ಎನ್ನುವ ಧ್ಯೇಯ ಇಟ್ಟುಕೊಂಡು ಆರಂಭವಾಗಲಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಇತಿಹಾಸದಲ್ಲಿ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ಮೊದಲ ಬಾರಿಗೆ ಸ್ಪರ್ಧಿಗಳನ್ನು ಶೋ ಆರಂಭವಾಗುವುದಕ್ಕೆ ಮೊದಲೇ ಪ್ರಕಟಿಸಲಾಗುತ್ತದೆ. ಹೌದು, ಈ ಬಗ್ಗೆ ಬಿಗ್‌ಬಾಸ್‌ ತಂಡ ಇಂದು (ಸೆಪ್ಟೆಂಬರ್‌ 23) ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದೆ. (Bigg Boss Kannada 11).

ಇದನ್ನೂ ಓದಿ: Parvati Nair: ಕೆಲಸದವನ ಮೇಲೆ ಹಲ್ಲೆ: ನಟಿ ಪಾರ್ವತಿ ನಾಯರ್ ವಿರುದ್ಧ ಎಫ್‌ಐಆರ್

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಸೆಪ್ಟೆಂಬರ್‌ 29ರಂದು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಕಿಚ್ಚ ಸುದೀಪ್‌ (Kiccha Sudeep), ಪ್ರಮುಖರಾದ ಪ್ರಶಾಂತ್‌, ಅಲೋಕ್‌ ಜೈನ್‌, ಧೀಪಕ್‌ ದಾರ್‌ ಮತ್ತಿತರರು ಪ್ರಶ್ನೆಗಳಿಗೆ ಉತ್ತರಿಸಿದರು. ಈ ಬಾರಿಯ ಬಿಗ್‌ಬಾಸ್‌ನ ವಿಶೇಷತೆಗಳು ರಿವೀಲ್‌ ಆಗಿದೆ.

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ʼರಾಜಾರಾಣಿ ಶೋʼದ ಫೈನಲ್‌ ಸೆಪ್ಟೆಂಬರ್‌ 28ರಂದು ನಡೆಯಲಿದೆ. ಈ ವೇಳೆ ಬಿಗ್‌ಬಾಸ್‌ನ ಕೆಲವು ಸ್ಪರ್ಧಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ. ವಿಶೇಷ ಎಂದರೆ ಈ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕೆ, ನರಕಕ್ಕೆ ಹೋಗಬೇಕೆ ಎನ್ನುವುದನ್ನು ವೋಟು ಮೂಲಕ ನಿರ್ಧರಿಸಬಹುದು ಎಂದು ತಿಳಿಸಲಾಯಿತು.