Monday, 28th October 2024

Chikkaballapur News: ಪೌರಕಾರ್ಮಿಕರು ನಗರ ನೈರ್ಮಲ್ಯ ಕಾಪಾಡುವ ಸೇನಾನಿಗಳು-ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಚಿಕ್ಕಬಳ್ಳಾಪುರ: ನಗರದ ಜನತೆ ತಮ್ಮ ಮನೆಗಳಲ್ಲಿ ಬೆಚ್ಚಗೆ ಮಲಗಿರುವ ಹೊತ್ತಲ್ಲಿ ನಗರದ ಕಸವನ್ನು ಗುಡಿಸಿ ಸ್ವಚ್ಚಗೊಳಿಸಲು ಬರುವ ಪೌರಕಾರ್ಮಿಕರು ನಿಜಾರ್ಥದಲ್ಲಿ ನಿರ್ಮಲ ನಗರದ ಸೇನಾನಿಗಳೇ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬಣ್ಣಿಸಿದರು.

ನಗರದ ನಗರಸಭಾ ಆವರಣದಲ್ಲಿ ಸೋಮವಾರ ಏ ರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಸೇವಾ ನಿರತ ಪೌರ ಕಾರ್ಮಿ ಕರ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಾ ಬರುತ್ತಿರುವದು ಅತ್ಯಂತ ಸ್ವಾಗತಾರ್ಹ ಕಾರ್ಯ ವಾಗಿದೆ. ನಗರ ಸೇರಿ ನಮ್ಮ ನಮ್ಮ ಪರಿಸರದ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರೊಂದಿಗೆ ನಗರವಾಸಿಗಳೂ ಕೈಜೋಡಿಸಬೇಕಿದೆ.ನಗರಸಭೆಯ ನಿರ್ದೇಶನದಂತೆ ಹಸಿಕಸ ಒಣಕಸ ವಿಭಜಿಸಿ ಮನೆಯ ಬಳಿ ಬರುವ ವಾಹನಕ್ಕೆ ಹಾಕುವ ಮೂಲಕ ಜವ್ದಾರಿ ಮೆರೆಯೋಣ ಎಂದರು.

ನಗರಸಭೆಯ ನೂತನ ಅಧ್ಯಕ್ಷ ಎ.ಗಜೇಂದ್ರ ಮಾತನಾಡಿ,ಪರಿಸರ ಸ್ವಚ್ಛತೆಯ ಜೊತೆಗೆ ಜನರ ಮನೋಭಾವವನ್ನು ಬದಲಾಯಿಸುವುದು ಸ್ವಚ್ಛ ಭಾರತದ ಪರಿಕಲ್ಪನೆಯಾಗಿದೆ. ಸ್ವಚ್ಛತೆಯ ಕುರಿತು ಕಾನೂನು ಜಾರಿಗೆ ಬಂದರೆ ಸಾಲದು. ಜನರ ಮನಸ್ಥಿತಿ ಪರಿವರ್ತನೆ ಆಗಬೇಕು. ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರವಾಗಿದೆ.ಇವರ ಆರೋಗ್ಯ ಕಾಪಾಡುವಲ್ಲಿ ನಗರಸಭೆಯಿಂದ ಏಲೆಲ್ಲಾ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಇದೆಯೋ ಅವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು.ಸುರಕ್ಷತೆ ಕ್ರಮಗಳನ್ನು ಅನುಸರಿಸಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

ನಗರಸಭೆ ಉಪಾಧ್ಯಕ್ಷ ಜೆ,ನಾಗರಾಜು ಮಾತನಾಡಿ, ಹಿಂದಿನ ಅಧ್ಯಕ್ಷ ಆನಂದ ಬಾಬುರೆಡ್ಡಿಯವರ ಆಡಳಿತಾವಧಿ ಯಲ್ಲಿ ರಾಜ್ಯದ ಸ್ವಚ್ಛ ನಗರಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಏಳನೇ ಸ್ಥಾನದ ಪ್ರಶಸ್ತಿ ಬಂದಿತ್ತು. ಇದರಲ್ಲಿ ಪೌರಾಡಳಿತ ಹಾಗೂ ಪೌರಕಾರ್ಮಿಕರ ಕೊಡುಗೆ ಅಪಾರವಾಗಿದೆ.ಅದೇ ರೀತಿ ಈಗಿನ ನೂತನ ಅಧ್ಯಕ್ಷ ಎ.ಗಜೇಂದ್ರರ ಆಡಳಿತಾ ವಧಿಯಲ್ಲಿ ಸಾಕಷ್ಟು ಪ್ರಶಸ್ತಿಗಳು ಬರುವಂತೆ ಪೌರಕಾರ್ಮಿಕರು ತಮ್ಮ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು. ನಗರಸಭೆಯಲ್ಲಿ ಕಳೆದ ಸಾಲಿನಲ್ಲಿ ಏಳು ಜನ ಪೌರ ಕಾರ್ಮಿಕರು ಮೃತರಾಗಿದ್ದು, ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಉತ್ತಮ ಸೇವೆ ನೀಡುತ್ತಿರುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆಯ ಪ್ರಭಾರಿ ಪೌರಾಯುಕ್ತ ಹಾಗೂ ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ನಗರಾಭಿ ವೃದ್ದಿ ಕೋಶಾಧೀಕಾರಿ ಮಾಧವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳ, ತಾಲ್ಲೂಕು ಸಮಾಜ ಕಲ್ಯಾಣಾ ಧಿಕಾರಿ ಶೇಷಾದ್ರಿ, ಪರಿಸರ ಅಭಿಯಂತರ ಉಮಾಶಂಕರ್, ಜಿಲ್ಲಾ ಜಾಗೃತಿ ಸಮಿತಿಯ ಜೀವಿಕಾ ರತ್ನಮ್ಮ, ಸಫಾಯಿ ಕರ್ಮಚಾರಿ ಯೋಗ ಕ್ಷೇಮ ಸಮಿತಿ ನಾರಾಯಣಸ್ವಾಮಿ, ನಗರಸಭೆ ಸದಸ್ಯರಾದ ನಿರ್ಮಲಪ್ರಭು, ವೀಣಾರಾಮು, ಅಫ್ಜಲ್ ಪಾಷ, ಇನ್ನಿತರ ಸದಸ್ಯರು,ಪೌರಕಾರ್ಮಿಕರು ಮತ್ತಿತರರು ಇದ್ದರು.