Sunday, 6th October 2024

Konda Surekha: ಕ್ಷಮೆಯಾಚಿಸಿದರೂ ಸಚಿವೆ ಕೊಂಡಾ ಸುರೇಖಾಗೆ ಕಾನೂನು ಸಂಕಷ್ಟ; ಕೋರ್ಟ್‌ ಮೆಟ್ಟಿಲೇರಿದ ನಾಗಾರ್ಜುನ ಅಕ್ಕಿನೇನಿ

konda surekha

ಹೈದರಾಬಾದ್: ನಟಿ ಸಮಂತಾ ಪ್ರಭು ಮತ್ತು ನಾಗಚೈತನ್ಯ ಅವರ ವಿಚ್ಛೇದನಕ್ಕೆ ಭಾರತ್ ರಕ್ಷಾ ಸಮಿತಿ (BRS) ಮುಖಂಡ ಕೆ.ಟಿ.ರಾಮರಾವ್ ಕಾರಣ ಎಂದು ಆರೋಪಿಸುವ ಮೂಲಕ ವಿವಾದ ಸೃಷ್ಟಿಸಿದ್ದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ(Konda Surekha) ಅವರ ವಿರುದ್ಧ ನಟ ನಾಗಾರ್ಜುನ ಅಕ್ಕಿನೇನಿ(Nagarjuna Akkineni) ಕುಟುಂಬ ಕಾನೂನು ಸಮರಕ್ಕೆ ಮುಂದಾಗಿದೆ.

ಈಗಾಗಲೇ ಕೊಂಡಾ ಸುರೇಖಾ ಅವರು ತಮ್ಮ ಹೇಳಿಕೆ ಹಿಂತೆಗೆದುಕೊಳ್ಳಬೇಕು ಮತ್ತು ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೆಟಿಆರ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ ನಂತರ ಅವರು ಕ್ಷಮೆಯಾಗಿಚಿಸಿದ್ದಾರೆ. ಇದೀಗ ಅಕ್ಕಿನೇನಿ ಕುಟುಂಬ ಕೂಡ ಆಕೆಯ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ ನೋಟಿಸ್‌ ಜಾರಿಗೊಳಿಸಲಿದೆ. ಮತ್ತೊಂದೆಡೆ ತೆಲುಗು ಚಿತ್ರರಂಗ ಕೂಡ ಪ್ರತ್ಯೇಕ ನೋಟಿಸ್‌ ಜಾರಿಗೊಳಿಸಲಿದೆ.

ಸುರೇಖಾ ಹೇಳಿದ್ದೇನು?

ತೆಲಂಗಾಣ ಅರಣ್ಯ ಹಾಗೂ ಪರಿಸರ ಸಚಿವೆ ಕೊಂಡಾ ಸುರೇಖಾ ಅವರು ಹೈದರಾಬಾದ್‌ನ ಲಾಂಗರ್‌ಹೌಸ್‌ನಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಬಿಆರ್​ಎಸ್​​​​ ನಾಯಕನ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಕೆಟಿಆರ್​ ಒಬ್ಬ ಮಾದಕ ದ್ರವ್ಯಗಳ ವ್ಯಸನಿ. ಚಿತ್ರರಂಗದ ಖ್ಯಾತನಾಮರಿಗೆ ಆತ ರೇವ್​​ ಪಾರ್ಟಿ ಆಯೋಜನೆ ಮಾಡುತ್ತಿದ್ದರು. ತಾನು ಡ್ರಗ್ಸ್​ ತೆಗೆದುಕೊಳ್ಳುವುದಲ್ಲದೇ, ಚಿತ್ರರಂಗದ ನಾಯಕಿಯರಿಗೂ ಈ ಚಟವನ್ನು ಕಲಿಸಿದ್ದಾರೆ. ಇವರ ದೌರ್ಜನ್ಯದಿಂದಾಗಿ ಹಲವು ನಾಯಕಿಯರು ಸಿನಿಮಾ ಕ್ಷೇತ್ರವನ್ನೇ ತೊರೆದಿದ್ದಾರೆ. ಇನ್ನು ಕೆಲವರು ಮದುವೆಯಾಗಿದ್ದಾರೆ ಎಂದು ಹೇಳಿದ್ದರು. ನಾಗಾರ್ಜುನ ಒಡೆತನದ ಎನ್​​- ಕನ್ವೆನ್ಷನ್​​ ಸೆಂಟರ್​​ ಬೇಡ ಎಂಬುದಾದರೆ ತನ್ನ ಬಳಿಗೆ ಅವರನ್ನು ಕಳುಹಿಸುವಂತೆ ಮಾಜಿ ಸಚಿವ ಕೆಟಿಆರ್​ ನಟ ನಾಗಾರ್ಜುನ ಬಳಿ ಬೇಡಿಕೆ ಇಟ್ಟಿದ್ದ. ಅವರ ಬಳಿ ಹೋಗುವಂತೆ ನಟಿಗೆ ನಾಗಾರ್ಜುನ ಬಲವಂತ ಮಾಡಿದಾಗ, ಅದನ್ನು ಆಕೆ ವಿರೋಧಿಸಿದ್ದರು. ಇದೇ ವಿಚಾರಕ್ಕಾಗಿ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದರು ಎಂದು ವಿವಾದಿತ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ನಟಿ ಸಮಂತಾ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದರು. ತಮ್ಮ ಹೆಸರನ್ನು ರಾಜಕೀಯಕ್ಕೆ ಎಳೆಯಬೇಡಿ ಎಂದು ಮನವಿ ಮಾಡಿದ್ದರು.

ನಟ ನಾಗಚೈತನ್ಯ ತಂದೆ ನಟ ನಾಗಾರ್ಜುನ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದರು. ಸಚಿವೆ ನೀಡಿರುವ ಹೇಳಿಕೆಗಳು ಸುಳ್ಳು, ಅಸಂಬದ್ಧವಾಗಿವೆ. ತಕ್ಷಣವೇ ಅವರು ನೀಡಿದ ಹೇಳಿಕೆಗಳನ್ನು ವಾಪಸ್​ ಪಡೆಯಬೇಕು ಎಂದು ಒತ್ತಾಯಿಸಿದ್ದರು. ನಾಗ ಚೈತನ್ಯ ಕೂಡ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ವಿಚ್ಛೇದನದ ನಿರ್ಧಾರವು ಅತ್ಯಂತ ನೋವಿನ ಮತ್ತು ದುರದೃಷ್ಟಕರ ಜೀವನ ನಿರ್ಧಾರಗಳಲ್ಲಿ ಒಂದಾಗಿದೆ. ಬಹಳಷ್ಟು ಯೋಚಿಸಿದ ನಂತರ, ನಾನು ಮತ್ತು ನನ್ನ ಮಾಜಿ ಸಂಗಾತಿಯು ಬೇರೆಯಾಗಲು ಪರಸ್ಪರ ನಿರ್ಧಾರವನ್ನು ತೆಗೆದುಕೊಂಡೆವು ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Konda Surekha : ಸಮಂತಾ- ನಾಗಚೈತನ್ಯ ಕ್ಷಮೆ ಕೋರಿದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ