Wednesday, 23rd October 2024

BBMP news: ಬೆಂಗಳೂರಿಗರೇ, ಹಬ್ಬದ ಕಸ ಹೀಗೆ ವಿಲೇವಾರಿ ಮಾಡುವುದು ಕಡ್ಡಾಯ!

bbmp

ಬೆಂಗಳೂರು: ನಗರದಲ್ಲಿ ದಸರ (Dasara 2024) ಹಾಗೂ ಮುಂಬರುವ ದೀಪಾವಳಿ (Deepavali) ಹಬ್ಬದ ದಿನಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು (Solid Waste) ಸಮರ್ಪಕವಾಗಿ ನಿರ್ವಹಣೆ ಮಾಡುವ ಕುರಿತು ಮಾರ್ಗಸೂಚಿಯನ್ನು ಬಿಬಿಎಂಪಿಯಿಂದ (BBMP news) ಪ್ರಕಟಿಸಲಾಗಿದೆ. ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಸರ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚುವರಿ ತ್ಯಾಜ್ಯ, ಉತ್ಪತ್ತಿಯಾಗುತ್ತದೆಂದು ಅಂದಾಜಿಸಲಾಗಿದ್ದು, ಹಬ್ಬದ ದಿನಗಳಂದು ಹಾಗೂ ನಂತರ ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಈ ಕೆಳಕಂಡಂತೆ ವಿಲೇವಾರಿ ಕ್ರಮಗಳನ್ನು ಅನುಸರಿಸಬೇಕಾಗಿರುತ್ತದೆ.

1) ಬಾಳೇಕಂದು, ಮಾವಿನ ಎಲೆ, ಹೂವು ಹಾಗೂ ಇತರೆ ಹಬ್ಬದ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ವಿಶೇಷವಾಗಿ ಮಾರುಕಟ್ಟೆಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ ನೀಡಲು ಅರಿವು ಮೂಡಿಸುವುದು.

2) ಮಾರುಕಟ್ಟೆಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬದ ಸಾಮಾನುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಏಕ ಬಳಕೆ ಪ್ಲಾಸ್ಟಿಕ್‌ಗಳನ್ನು ಬಳಸದಂತೆ ನಿಗಾವಹಿಸಲು ವಾರ್ಡ್‌ಗಳಲ್ಲಿ ಘನತ್ಯಾಜ್ಯ ಆರೋಗ್ಯ ಅಧಿಕಾರಿಗಳ ಮತ್ತು ಮಾರ್ಷಲ್‌ಗಳು ತಂಡಗಳನ್ನು ರಚಿಸಿಕೊಂಡು ದಿನಂಪ್ರತಿ ಪರಿವೀಕ್ಷಣೆ ಕೈಗೊಂಡು ಪ್ಲಾಸ್ಟಿಕ್ ಮಾರಾಟ / ಬಳಕೆದಾರರಿಗೆ ನಿಯಮಾನುಸಾರ ದಂಡ ವಿಧಿಸಿ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡು ಮರುಬಳಕೆಯಾಗದಂತೆ ಅಗತ್ಯ ಕ್ರಮವಹಿಸುವುದು.

3) ದಸರ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಉತ್ಪತ್ತಿಯಾಗುವ ಹೆಚ್ಚುವರಿ ತ್ಯಾಜ್ಯವನ್ನು ಅಂದಾಜಿಸಿ. ಸದರಿ ತ್ಯಾಜ್ಯವನ್ನು ಸಂಪೂರ್ಣವಾಗಿ ಸಂಗ್ರಹಿಸಿ, ವಿಲೇವಾರಿ ಮಾಡಲು ಅಗತ್ಯ ಕ್ರಮ ವಹಿಸುವುದು.

4) ಬ್ಲಾಕ್‌ಸ್ಪಾಟ್‌(ಕಸ ಸುರಿಯುವ ಸ್ಥಳ)ಗಳಲ್ಲಿ ತ್ಯಾಜ್ಯ ಶೇಖರಣೆಗೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಶೇಷ ಗಮನ ಹರಿಸುವುದು ಹಾಗೂ ಮಾರುಕಟ್ಟೆಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣವಾಗುವ ಬ್ಲಾಕ್ ಸ್ಪಾಟ್‌ ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಕ್ರಮವಹಿಸುವುದು.

5) ಹಬ್ಬದ ಪ್ರಯುಕ್ತ ಮಾರುಕಟ್ಟೆಗಳು ಹಾಗೂ ಇತರೆ ಪ್ರದೇಶಗಳಲ್ಲಿ ಬಾಳೇಕಂದು, ಮಾವಿನ ಎಲೆ, ಹೂವು ಮತ್ತು ಇತರೆ ಹಸಿ ತ್ಯಾಜ್ಯವನ್ನು ಆದ್ಯತೆ ಮೇರೆಗೆ ವಾರ್ಡ್‌ಗಳಲ್ಲಿಯೇ ಹಸಿ / ತೋಟಗಾರಿಕೆ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ಕಲ್ಪಿಸಿಕೊಂಡು ವಿಲೇವಾರಿ ಮಾಡುವುದು ಅಥವಾ ವಾರ್ಡ್‌ಗಳಲ್ಲಿ ವಿಕೇಂದ್ರೀಕೃತ ಹಸಿ ತ್ಯಾಜ್ಯ ಸಂಸ್ಕರಣಾ ಘಟಕಗಳಿದ್ದಲ್ಲಿ ಅಲ್ಲಿಗೆ ವಿಲೇವಾರಿ ಮಾಡುವುದು.

6) ಹಬ್ಬದ ದಿನಗಳಂದು ಉತ್ಪತ್ತಿಯಾಗುವ ಬಾಳೇಕಂದು, ಮಾವಿನ ಎಲೆ ಹಾಗೂ ಇತರೆ ಹಸಿರು ತ್ಯಾಜ್ಯವನ್ನು ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಇರುವ ಶೆಡ್ಡರ್ಸ್ ಗಳಿಗೆ ವಿಲೇವಾರಿ ಮಾಡುವುದು.

ಮೇಲಿನ ನಿರ್ದೇಶನಗಳನ್ನು ಕಟ್ಟುನಿಟಾಗಿ ಪಾಲಿಸಿ ದಸರ ಹಾಗೂ ದೀಪಾವಳಿ ಹಬ್ಬದ ದಿನಗಳಂದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಆದೇಶದ ಮೂಲಕ ಸೂಚಿಸಿದ್ದಾರೆ.

ಇದನ್ನೂ ಓದಿ: Bengaluru news: ಪರವಾನಗಿ ಇಲ್ಲದ ಪಿಜಿಗಳಿಗೆ ಬಿಬಿಎಂಪಿ ಬೀಗ