Wednesday, 23rd October 2024

Baba Ramdev: ಆಹಾರ ಪದಾರ್ಥಗಳನ್ನು ಕೊಳಕು ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಧ್ವನಿ ಎತ್ತಿ; ಮುಸ್ಲಿಂ ಮುಖಂಡರಿಗೆ ಬಾಬಾ ರಾಮದೇವ್‌ ಕರೆ

BABA RAMADEV

ನವದೆಹಲಿ: ಆಹಾರ ಪದಾರ್ಥ ಮತ್ತು ಪಾನೀಯಗಳಲ್ಲಿ ಕೊಳಕು ವಸ್ತುಗಳನ್ನು ಬೆರಸುವುದನ್ನು ಖಂಡಿಸಬೇಕೆಂದು ಮುಸ್ಲಿಂ ಧಾರ್ಮಿಕ ನಾಯಕರಿಗೆ ಯೋಗ ಗುರು ರಾಮ್‌ದೇವ್(Baba Ramdev) ಕರೆ ನೀಡಿದ್ದಾರೆ. ದೇಶದ ಹಲವೆಡೆಗಳಿಂದ ಆಹಾರ ಪದಾರ್ಥಗಳಲ್ಲಿ ‘ಕೊಳಕು ವಸ್ತುಗಳನ್ನು’ ಬೆರೆಸುತ್ತಿರುವುದು, ಕೆಲವು ಕಿಡಿಗೇಡಿಗಳು ಉಗುಳುತ್ತಿರುವ ವಿಡಿಯೊಗಳು ಕೋಲಾಹಲಕ್ಕೆ ಕಾರಣವಾದ ನಂತರ ರಾಮ್‌ದೇವ್ ಪ್ರತಿಕ್ರಿಯಿಸಿದ್ದಾರೆ.

ಮುಸ್ಲಿಂ ಧಾರ್ಮಿಕ ಮುಖಂಡರು ಮುಂದೆ ಬಂದು ಇಂತಹ ಘಟನೆಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ರಾಮದೇವ್ ಬಾಬಾ ಹೇಳಿದ್ದಾರೆ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಧಾರ್ಮಿಕ ಮುಖಂಡರು ಮೌನ ವಹಿಸುತ್ತಿರುವುದು ಅಚ್ಚರಿ ಮೂಡಿಸಿದೆ ಎಂದರು. ಇಂತಹ ವಿಚಾರಗಳನ್ನು ಹುರುಪಿನಿಂದ ವಿರೋಧಿಸಬೇಕು, ಇದೆಲ್ಲವೂ ಸುಸಂಸ್ಕೃತ ಸಮಾಜಕ್ಕೆ ಕಳಂಕದಂತಿದೆ ಎಂದು ಹೇಳಿದ್ದಾರೆ.

ರಾಮದೇವ್ ಬಾಬಾ ಅವರು ಆಚಾರ್ಯ ಬಾಲಕೃಷ್ಣ ಅವರೊಂದಿಗೆ ಹರಿದ್ವಾರಕ್ಕೆ ಭೇಟಿ ನೀಡಿದರು ಮತ್ತು ವಿಜಯದಶಮಿಯಂದು ಕಂಖಾಲ್‌ನಲ್ಲಿ ಕನ್ಯಾ ಪೂಜೆಯಲ್ಲಿ ಭಾಗಿಯಾದರು. ಬಳಿಕ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಟೀ ಪಾಟ್ ಕುದಿಸುವಾಗ ಅದರಲ್ಲಿ ಉಗುಳಿರುವ ಘಟನೆ ಉತ್ತರಾಖಂಡದ ಮಸ್ಸೂರಿಯಲ್ಲಿ ಕೋಲಾಹಲ ಸೃಷ್ಟಿಸಿತ್ತು. ಇದು ಎಲ್ಲೆಡೆ ಚರ್ಚೆಗೆ ಗ್ರಾಸವಾಯಿತು. ಇಂತಹ ವೀಡಿಯೋಗಳು ಪ್ರತಿದಿನ ಇಂತಹ ಘಟನೆಗಳಿ ಬೆಳಕಿಗೆ ಬರುತ್ತಲೇ ಇವೆ. ಆದರೂ ಮುಸ್ಲಿಂ ಧರ್ಮ ಗುರುಗಳು ಈ ಬಗ್ಗೆ ಮೌನವಹಿಸಿದ್ದಾರೆ. ಮುಸ್ಲಿಂ ಧಾರ್ಮಿಕ ಮುಖಂಡರು ಈ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ತಿಂಗಳು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲೋನಿಯಲ್ಲಿ ಕೊಳಕು ಬೆರೆಸಿದ ಜ್ಯೂಸ್ ಮಾರಾಟ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮಕ್ಕೆ ಆದೇಶ ನೀಡಿದ್ದರು. ಹೊಲಸು ಬೆರೆಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ ನಂತರ ಬಂಧಿಸಲಾಯಿತು.