Thursday, 24th October 2024

Gurpatwant Singh Pannun: ನ.1 ರಿಂದ 19ರವರೆಗೆ ವಿಮಾನ ಪ್ರಯಾಣ ಮಾಡ್ಬೇಡಿ; ಖಲಿಸ್ತಾನಿ ಉಗ್ರನಿಂದ ಬೆದರಿಕೆ-ಡೆಡ್ಲಿ ಅಟ್ಯಾಕ್‌ಗೆ ಸಂಚು?

Khalistani

ನವದೆಹಲಿ: ಕಳೆದ ಕೆಲವ ದಿನಗಳಿಂದ ಭಾರೀ ಸುದ್ದಿ ಮಾಡುತ್ತಿರುವ ಖಲಿಸ್ತಾನಿ ಉಗ್ರ(Khalistan Terrorist) ಗುರುಪತ್ವಂತ್ ಸಿಂಗ್(Gurpatwant Singh Pannun) ನವೆಂಬರ್ 1 ರಿಂದ 19 ರವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಹಾರಾಟ ನಡೆಸದಂತೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಸೋಮವಾರ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾನೆ. 1984ರ ಸಿಖ್‌ ವಿರೋಧಿ ದಂಗೆ ಮತ್ತು ಹತ್ಯಾಕಾಂಡಕ್ಕೆ ನಡೆದು 40 ವರ್ಷ ಸಂದಿರುವ ಹಿನ್ನೆಲೆ ಭಾರೀ ದಾಳಿಗೆ ಖಲಿಸ್ತಾನಿ ಉಗ್ರರು ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷವೂ ಇದೇ ದಿನ ಇಂಹದ್ದೇ ಒಂದು ಎಚ್ಚರಿಕೆಯನ್ನು ಕೆನಡಾದಲ್ಲಿರುವ ಗುರುಪತ್ವಂತ್‌ ಸಿಂಗ್‌ ನೀಡಿದ್ದಾರೆ.

ಕೆನಡಾ ಮತ್ತು ಯುಎಸ್‌ನಲ್ಲಿ ದ್ವಿಪೌರತ್ವ ಹೊಂದಿರುವ ಸಿಖ್ಸ್ ಫಾರ್ ಜಸ್ಟಿಸ್ (SFJ) ಸ್ಥಾಪಕರು ಕಳೆದ ವರ್ಷ ಇದೇ ಸಮಯದಲ್ಲಿ ಇದೇ ರೀತಿಯ ಬೆದರಿಕೆ ಹಾಕಿದ್ದರು. ಭಾರತದಲ್ಲಿನ ಹಲವಾರು ವಿಮಾನಯಾನ ಸಂಸ್ಥೆಗಳು ಸಂಭಾವ್ಯ ಬಾಂಬ್ ಸ್ಫೋಟಗಳ ಕುರಿತು ಅನೇಕ ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿರುವ ಮಧ್ಯೆ ಪನ್ನುನ್‌ನ ಈ ಹೊಸ ಬೆದರಿಕೆ ಬಂದಿದೆ. ಮತ್ತೊಬ್ಬ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸೇರಿದಂತೆ ಕೆನಡಾದಲ್ಲಿ ಖಲಿಸ್ತಾನಿಗಳನ್ನು ಗುರಿಯಾಗಿಸಿ ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿರುವ ಬೆನ್ನಲ್ಲೇ ಪನ್ನುನ್‌ ಈ ಬೆದರಿಕೆಯೊಡ್ಡಿರುವುದು ಆತಂಕಕ್ಕೆ ಕಾರಣವಾಗಿದೆ.

ನವೆಂಬರ್ 2023 ರಲ್ಲಿ, ಪನ್ನುನ್ ಅವರು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮರುನಾಮಕರಣ ಮಾಡಲಾಗುವುದು ಮತ್ತು ನವೆಂಬರ್ 19 ರಂದು ಮುಚ್ಚಲಾಗುವುದು ಎಂದು ಹೇಳುವ ವೀಡಿಯೊವನ್ನು ಬಿಡುಗಡೆ ಮಾಡಿದ್ದ. ಅಲ್ಲದೇ ಆ ದಿನ ಏರ್ ಇಂಡಿಯಾದಲ್ಲಿ ಹಾರಾಟ ಮಾಡದಂತೆ ಜನರಿಗೆ ಎಚ್ಚರಿಕೆ ನೀಡಿದ್ದ. ಇನ್ನು ಪನ್ನುನ್‌ ಇದೀಗ ಮತ್ತೆ ದಾಳಿಯ ಬೆದರಿಕೆಯೊಡ್ಡಿರುವ ಹಿನ್ನೆಲೆ ಅಲರ್ಟ್‌ ಆಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು(NIA) ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

ಕೆಲವು ದಿನಗಳ ಹಿಂದೆಯಷ್ಟೇ ತಮಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ(Justin Trudeau) ಜತೆ ನಂಟು ಇರುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಒಪ್ಪಿಕೊಂಡಿದ್ದ. ಸಿಖ್ಸ್ ಫಾರ್ ಜಸ್ಟಿಸ್ (SFJ) ಗುಂಪಿನ ಸಾಮಾನ್ಯ ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಈಗಾಗಲೇ ಭಾರತ ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ. ಕೆಲವು ದಿನಗಳ ಹಿಂದೆ ಕೆನಡಾದ ನೆಲದಲ್ಲಿ ಭಾರತ ಬೇಹುಗಾರಿಕೆ ನಡೆಸುತ್ತಿದೆ ಎಂದು ಕೆನಡಾ ಆರೋಪವನ್ನು ಎತ್ತಿಹಿಡಿದಿರುವ ಪನ್ನುನ್‌, ಅವರು ಕಳೆದ ಹಲವಾರು ವರ್ಷಗಳಿಂದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಕಚೇರಿಯೊಂದಿಗೆ ಸಂವಹನ ನಡೆಸುವುದನ್ನು ಒಪ್ಪಿಕೊಂಡಿದ್ದ.

ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ (RCMP) ಕಮಿಷನರ್ ಮೈಕ್ ಡುಹೆಮ್ ಅವರ ಇತ್ತೀಚಿನ ಆರೋಪಗಳಿಗೆ ಅವರ ಪ್ರತಿಕ್ರಿಯಿಸಿದ ಪನ್ನುನ್‌, ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯು ಕಳೆದ ಎರಡು ಮೂರು ವರ್ಷಗಳಿಂದ ಪ್ರಧಾನಿ ಕಾರ್ಯಾಲಯದೊಂದಿಗೆ ಸಂವಹನ ನಡೆಸುತ್ತಿದ್ದು, ಎಲ್ಲಾ ಗೂಢಚಾರಿಕೆ ಜಾಲಗಳ ವಿವರಗಳನ್ನು ನೀಡುತ್ತಿದೆ. ಕೆನಡಾದ ಸರ್ಕಾರಕ್ಕೆ ಮಾಹಿತಿ ನೀಡಿದ ವರ್ಷಗಳ ನಂತರ, PM ಟ್ರುಡೊ ಈ ಬಗ್ಗೆ ಧ್ವನಿ ಎತ್ತಿರುವುದು ಸಕಾರಾತ್ಮಕ ಮುನ್ಸೂಚನೆಯಾಗಿದೆ ಎಂದು ತಿಳಿಸಿದ್ದ.

ಈ ಸುದ್ದಿಯನ್ನೂ ಓದಿ: Indian Raw Agent: ಪನ್ನುನ್‌ ಹತ್ಯೆಗೆ ಸಂಚು ಆರೋಪ ಹೊತ್ತಿರುವ ಮಾಜಿ ʻರಾʼ ಏಜೆಂಟ್‌ ವಿಕಾಸ್‌ ಯಾದವ್‌ ಬಗ್ಗೆ ಶಾಕಿಂಗ್‌ ಸಂಗತಿ ಲೀಕ್!