Friday, 25th October 2024

Tumkur News: ಸರಕಾರ ನಿಮ್ಮೊಂದಿಗಿದೆ: ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಮುರುಳೀಧರ ಹಾಲಪ್ಪ

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಸೋರಲಮಾವು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮೃತ ಪಟ್ಟಿದ್ದು, ಅನೇಕರು ವಾಂತಿ ಭೇಧಿಯಿಂದ ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬ0ಧಿಸಿದ0ತೆ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಾಲ್ಲೂಕು ವೈದ್ಯಾಧಿಕಾರಿ ಯಶವಂತ್ ಅವರನ್ನು ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಿದರು.

ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಪ್ರಕರಣದಲ್ಲಿ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವ ಕುರಿತು ವರದಿ ಕೈ ಸೇರಿದ ನಂತರ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲದೇ ಕಲುಷಿತ ನೀರು ಕುಡಿಯವ ನೀರು ಸರಬರಾಜು ಮಾಡುವ ಪೈಪ್‌ಲೈನ್ ಗೆ ಹೇಗೆ ಮಿಶ್ರಣ ಆಯಿತು ಎಂಬುದನ್ನು ತಾಲ್ಲೂಕು ಆಡಳಿತ ಪತ್ತೆಹಚ್ಚಬೇಕು. ಸರಕಾರ ನಿಮ್ಮೊಂದಿಗಿದೆ ಮತ್ತು ಇದಕ್ಕೆ ಪರಿಹಾರ ಕಂಡುಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬ0ಧಿಸಿದ0ತೆ ಆಶಾ ಕಾರ್ಯಕರ್ತೆಗೆ ನೋಟೀಸ್ ನೀಡಲಾಗಿದೆ. ಕಲುಷಿತ ನೀರು ಸೇವನೆಯಿಂದ ೧೫ ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇಧಿ ಕಾಣಿಸಿಕೊಂಡಿದೆ. ಕೆಲವರು ತಿಪಟೂರು, ಹಾಸನ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದು ಸಾಕಷ್ಟು ಜನರು ಚೇತರಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಅಂಬುಲೆನ್ಸ್ ಸಹಿತ ಒಬ್ಬ ವೈದ್ಯರು ಮೊಕ್ಕಾಂ ಹೂಡಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಟಿಎಚ್‌ಓ ಯಶವಂತ್ ವಿವರಿಸಿದರು. ವೈದ್ಯ ಕುಮಾರಸ್ವಾಮಿ ಆರೋಗ್ಯ ರಕ್ಷಾ ಕಮಿಟಿ ಸದಸ್ಯ ಕೃಷ್ಣೇಗೌಡ, ಪುರಸಭಾ ನಾಮಿನಿ ಸದಸ್ಯ ಮಹಮದ್ ಹುಸೇನ್, ಸೇವಾದಳದ ನಿಶಾನಿ ಕಿರಣ್, ಸೀಮೆಎಣ್ಣೆ ವಿನಯ್ ಪಾಲ್ಗೋಂಡಿದ್ದರು.

ಮಾಧ್ಯಮಕ್ಕೆ ನಿಖರ ಮಾಹಿತಿ ನೀಡಿ
ಈ ಪ್ರಕರಣಕ್ಕೆ ಸಂಬ0ಧಿಸಿದ0ತೆ ಮಾಧ್ಯಮಗಳಿಗೆ ನಿಖರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಹಾಗು ತಾಲ್ಲೂಕು ಆಡಳಿತಕ್ಕೆ ಮುರುಳೀಧರ ಹಾಲಪ್ಪ ಸಲಹೆ ನೀಡಿದರು. ಗ್ರಾಮಗಳಲ್ಲಿ ಸ್ವಚ್ಚತೆ, ಚರಂಡಿಗಳ ನಿರ್ವಹಣೆ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು. ನೀರುಗಂಟಿಗಳು, ಆಶಾ ಕಾರ್ಯಕರ್ತೆಯರನ್ನು ಆ ಗ್ರಾಮದ ಪ್ರತಿ ಮನೆಗೂ ಕಳುಹಿಸಿ ನೀರಿನ ಶೇಖರಣೆ ಹಾಗು ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ನೀರಿನ ಸಂಗ್ರಹಣೆ, ಮೂಲ ಹಾಗು ಪೂರೈಕೆಯ ಬಗ್ಗೆ ಅಧಿಕಾರಿಗಳು ಗುಣಮಟ್ಟ ಪರಿಶೀಲಿಸಬೇಕೆಂದು ತಿಳಿಸಿದರು.