Friday, 25th October 2024

Bribe: ಲಂಚ: ಪಿಡಿಒಗೆ 3 ವರ್ಷ ಜೈಲು

ತುಮಕೂರು: ಲಂಚ ತೆಗೆದುಕೊಳ್ಳುವಾಗ ಸಿಕ್ಕಿ ಬಿದ್ದಿದ್ದ ಪಿಡಿಒಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್‌.ನಾಗರಾಜ್‌ಗೆ ಶಿಕ್ಷೆಗೊಳಗಾದ ಪಿಡಿಒ.

ಏನಿದು ಪ್ರಕರಣ?

2021 ಸೆಪ್ಟೆಂಬರ್ 8ರಂದು ಹೊಯ್ಸಳಕಟ್ಟೆ ಗ್ರಾಮದ ಎಚ್‌.ಇ.ಮಧು ಎಂಬುವರಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ 2,150 ರುಪಾಯಿ ಲಂಚ ತೆಗೆದುಕೊಳ್ಳುವಾಗ ಎಸಿಬಿ ಪೊಲೀಸರು ನಾಗರಾಜ್‌ ನನ್ನು ಬಂಧಿಸಿದ್ದರು.

ತಮ್ಮ ತಾಯಿ ಮಲ್ಲಮ್ಮ ಹೆಸರಿನಲ್ಲಿದ್ದ ನಿವೇಶನಕ್ಕೆ ಇ-ಸ್ವತ್ತು ಮಾಡಿಕೊಡುವಂತೆ ಕೋರಿ ಗ್ರಾ.ಪಂಗೆ ಮಧು ಅರ್ಜಿ ಸಲ್ಲಿಸಿದರು. ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಒತ್ತಾಯಿಸಿದ್ದರು, ಲಂಚ ಕೊಡದೆ ಎಸಿಬಿಗೆ ದೂರು ನೀಡಿದ್ದರು.

ಇನ್‌ಸ್ಪೆಕ್ಟ‌ರ್ ಎಸ್.ವಿಜಯಲಕ್ಷ್ಮಿ ನೇತೃತ್ವದ ತಂಡ ಲಂಚದ ಹಣ ತೆಗೆದುಕೊಳ್ಳುವ ಸಮಯದಲ್ಲಿ ನಾಗರಾಜ್‌ ನನ್ನು ಬಂಧಿಸಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅವರು ಆರೋಪ ಸಾಬೀತಾಗಿದ್ದರಿಂದ 3 ವರ್ಷ ಶಿಕ್ಷೆ, 10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಲೋಕಾಯುಕ್ತರ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆ‌ರ್.ಪಿ.ಪ್ರಕಾಶ್ ವಾದ ಮಂಡಿಸಿದ್ದರು.

ಇದನ್ನೂ ಓದಿ: Tumkur News: ಸರಕಾರ ನಿಮ್ಮೊಂದಿಗಿದೆ: ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಮುರುಳೀಧರ ಹಾಲಪ್ಪ