Saturday, 26th October 2024

Vishwavani Editorial: ಕುಟುಂಬ ರಾಜಕಾರಣದ ವರಸೆ

ಚನ್ನಪಟ್ಟಣಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಶಿಗ್ಗಾವಿಗೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಮತ್ತು ಸಂಡೂರು ಕ್ಷೇತ್ರಕ್ಕೆ ಸಂಸದ ಇ.ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ದೊರೆಯು ತ್ತಿದ್ದಂತೆ ಕುಟುಂಬ ರಾಜಕಾರಣದ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.

ಇಂದು ಕುಟುಂಬ ರಾಜಕಾರಣ ಎಲ್ಲ ಪಕ್ಷಗಳಲ್ಲೂ ಇದೆ. ಮುಂದೆಯೂ ಇರಲಿದೆ. ಆದರೆ ಈ ಭಾರಿ ತುಸು ಹೆಚ್ಚಾ ಗಿಯೇ ವಿರೋಧ ವ್ಯಕ್ತವಾಗುತ್ತಿದೆ. ವಾಸ್ತವವಾಗಿ ಈ ಫ್ಯಾಮಿಲಿ ಪಾಲಿಟಿಕ್ಸ್ ಟ್ರೀಗೆ ನೀರೆರೆಯುತ್ತಿರುವವರು
ಮತದಾರರೇ! ಚುನಾವಣಾ ಕಣಕ್ಕಿಳಿಯುವ ಎಲ್ಲ ಪಕ್ಷಗಳಿಗೆ ಗೆಲ್ಲುವ ಕುದುರೆಗಳು ಬೇಕು. ಗೆಲ್ಲಬೇಕಾದರೆ ಕೋಟಿ ಕೋಟಿ ಹಣ ಚೆಲ್ಲಬೇಕು. ಆ ಕೋಟಿ ಹಣ ಇರುವುದು ಈಗಾಗಲೇ ರಾಜಕಾರಣದಲ್ಲಿ ಹತ್ತಾರು ವರ್ಷ ಅಧಿಕಾರ ಅನುಭವಿಸಿದ ಕುಟುಂಬಗಳ ಬಳಿಯೇ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.

ಹೀಗಾಗಿ ಸಹಜವಾಗಿಯೇ ಈಗಾಗಲೇ ರಾಜಕಾರಣದಲ್ಲಿ ಅಧಿಕಾರ ಅನುಭವಿಸಿದ ಕುಟುಂಬದ ಕುಡಿಗಳೇ ಪಕ್ಷಗಳ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಇಂದು ಒಬ್ಬ ರಾಜಕಾರಣಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯ ನಾಗಿರಬೇಕೆಂದರೆ ಪ್ರತಿದಿನವೂ ಸಾಕಷ್ಟು ಹಣ ಖರ್ಚು ಮಾಡಲೇ ಬೇಕು. ಚುನಾವಣೆಗಳಷ್ಟೇ ಅಲ್ಲ, ರಾಜಕಾರಣಿ ಗಳ ದೈನಂದಿನ ಚಟುವಟಿ ಕೆಗಳೆಲ್ಲವೂ ಹಣ ವ್ಯಯಿಸುವ ಮತ್ತು ಹೂಡುವ ಪ್ರಕ್ರಿಯೆ ಆಗಿದೆ.

ಹಣವಿಲ್ಲದವರು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ಈಗ ಸೃಷ್ಟಿಯಾಗಿದೆ. ವಿಧಾನ ಸಭೆ/ ಲೋಕಸಭೆ ಚುನಾವಣೆಗಳಲ್ಲಿ ಒಂದು ಮತಕ್ಕೆ ಕನಿಷ್ಠ ಎರಡು ಸಾವಿರ ರುಪಾಯಿ ಕೊಟ್ಟಿದ್ದನ್ನು, ಪಡೆದಿ ದ್ದನ್ನು ಅಭ್ಯರ್ಥಿಗಳು ಮತ್ತು ಮತದಾರರು ನಿರ್ಲಜ್ಜೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಹಣ ಸುರಿಯುವ ‘ಸಮರ್ಥ’ ಅಭ್ಯರ್ಥಿಯನ್ನು ಪಕ್ಷಗಳು ಮತ್ತು ಮತದಾರರು ಅಪೇಕ್ಷಿಸುತ್ತಿದ್ದಾರೆ.

ಕೋಟಿ ಖರ್ಚು ಮಾಡಿ ಶಾಸಕರಾದವರು ಸಹಜವಾಗಿಯೇ ತಮ್ಮ ಹೂಡಿಕೆಯನ್ನು ವಾಪಸ್ಸು ಪಡೆಯ ಬಯಸು ತ್ತಾರೆ. ಭ್ರಷ್ಟಾಚಾರಿಗಳನ್ನು, ಕುಟುಂಬ ರಾಜಕಾರಣಿಗಳನ್ನು ದೂರ ಮಾಡುವ ಮತ ಅಸ್ತ್ರ ಮತದಾರರ
ಬಳಿಯೇ ಇದೆ.

ಇದನ್ನೂ ಓದಿ: Vishwavani Editorial: ಹದ್ದಿನ ಕಣ್ಣುಗಳು ಮಂಜಾಗಿದ್ದೇಕೆ?