Friday, 20th September 2024

ಇತಿಹಾಸದ ಬರ್ಬರತೆ ನಮ್ಮ ನಾಲಗೆಯನ್ನು ಕಟ್ಟಿಹಾಕಿದೆಯಾ ?

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

‘ಖಾಸ್ ದರ್ಬಾರ್’ ಮೈಸೂರು ದಸರಾ ಪರಂಪರೆಯ ಮುಖ್ಯ ಭಾಗ. ಪಾಂಡವರಿಗೆ ಸೇರಿದ್ದು, ವಿಜಯನಗರದ ಅರಸರ ಮೂಲಕ ಮೈಸೂರು ರಾಜಮನೆತನಕ್ಕೆ ಪ್ರಾಪ್ತವಾದ ಬಂಗಾರದ ಸಿಂಹಾಸನದ ಮೇಲೆ ಮಹಾರಾಜರು ಆಸೀನರಾಗುತ್ತಾರೆ.

ಸೀಮಿತ ಜನರಿಗೆ ದರ್ಶನ ಲಾಭ ಸಿಗುತ್ತದಾದ್ದರಿಂದ ಪಾಸ್ ಪಡೆದು ಹೋಗಬೇಕು. ಶಿಫಾರಸು ಪಡೆದೋ, ದ್ವಾರಪಾಲನೆಗೆ ನಿಂತ
ಪೊಲೀಸರನ್ನು ಒಲಿಸಿಕೊಂಡೋ ಅತಿಕ್ರಮಣ ಮಾಡುವವರ ದೃಶ್ಯವೂ ಸರ್ವೇ ಸಾಮಾನ್ಯ. ಘನತೆಗೆ ಹೆಸರಾದ ರಾಜವಂಶಸ್ಥರು ಅಸಹಾಯಕರಾಗುತ್ತಾರೆ. ಹದಿನೇಳು ವರ್ಷಗಳ ಹಿಂದೆ, ವಿದೇಶದಿಂದ ಬಂದಿದ್ದ ಅತಿಥಿಗಳನ್ನು ಖಾಸ್ ದರ್ಬಾರ್‌ಗೆ ಕರೆದು ಕೊಂಡು ಹೋಗಿದ್ದೆ.

ದರ್ಬಾರ್ ಮುಗಿದು ಮಹಾರಾಜರು ಸಿಂಹಾಸನವನ್ನು ಅವರೋಹಣ ಮಾಡುತ್ತಿದ್ದಾರೆ. ಅಲ್ಲಿಂದ ಕದಲಲಾರಂಭಿಸಿದ್ದ ಸಾರ್ವಜನಿಕರಲ್ಲಿ ಅದೇನೊ ಗೊಂದಲ ಮೂಡಿ ಅಲ್ಲಲ್ಲಿ ಹಾರುತ್ತಾ ಹೆಜ್ಜೆ ಹಾಕುತ್ತಿದ್ದರು. ಕೆಲವರು ಮೂಗು ಮುಚ್ಚಿಕೊಂಡು ಮುಖ ಸೊಟ್ಟಗೆ ಮಾಡಿಕೊಂಡಿದ್ದರು. ಆದದ್ದು ಇದು: ಯಾರಿಗೋ ಅವಸರವಾಗಿದೆ. ಶೌಚಾಲಯ ಎಲ್ಲಿದೆ ಗೊತ್ತಿಲ್ಲವೇನೊ.
ಜನಜಂಗುಳಿಯಿಂದ ತಪ್ಪಿಸಿಕೊಂಡು ಹೊರಹೋಗುವ ಮುನ್ನ ನಿಯಂತ್ರಣ ತಪ್ಪಿದೆ. ದರ್ಬಾರಿನಲ್ಲಿ ಹೊಟ್ಟೆ ಖಾಲಿಯಾಗಿದೆ. ಈ ಕುರಿತು ಖಾರವಾಗಿ ಮುಖಪುಟದ ಸಂಪಾದಕೀಯ ಬರೆದೆ.

ಪ್ರತಿಷ್ಠಿತ ಮೈಸೂರು ಅರಮನೆಯ ದರ್ಬಾರ್‌ನ ಇಂತಹ ಹೀನಾಯ ಸ್ಥಿತಿಯಾದರೆ, ನಗರದ ಬೇರಾವ ಭಾಗವನ್ನು ನಾವು ಸಂರಕ್ಷಿಸಬವು? ನಗರದ ಮಧ್ಯ ಭಾಗದ, ಪೊಲೀಸ್ ಆಯುಕ್ತರ ಕಚೇರಿಯ ಸಮೀಪವೇ ಸ್ಥಾಪಿಸಿರುವ ಚಾಮರಾಜ ಒಡೆಯರ್ ಪುತ್ಥಳಿಯ ಕೈಲಿದ್ದ ಖಡ್ಗ ಇತ್ತೀಚಿನ ವರ್ಷಗಳ ಒಂದಲ್ಲ ಎರಡು ಬಾರಿ ನಾಪತ್ತೆಯಾಗಿತ್ತು. ಅದನ್ನು ಕಳುವು ಮಾಡಿದವರೋ,
ಅಥವಾ ವಿರೂಪಗೊಳಿಸಿದವರೋ ಪತ್ತೆಯಾದ ಬಗ್ಗೆ ಮಾಹಿತಿಯಲ್ಲ.

ನನ್ನ ಪರಿಚಯದ ಡಾ.ಪಿವಿ ನಾಥ್ ಅವರ ಮೂಲ ಹೊಸಪೇಟೆ. ಇಂಗ್ಲೆಂಡಿನಲ್ಲಿ ಅಪಾರ ಜನಸೇವೆ ಸಲ್ಲಿಸಿ ಬ್ರಿಟನ್ನಿನ ಮಹಾರಾಣಿಯಿಂದ ಸನ್ಮಾನಿಸಲ್ಪಟ್ಟವರು. ಪ್ರತಿಷ್ಠಿತ ಎಂಬಿಇ ಬಿರುದಾಂಕಿತರು. ಬಾಂಬೆ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಕನ್ನಡತಿ ಮಂಜುಳಾ ಚೆಲ್ಲೂರ್ ಅವರ ಭಾವ. ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ಕಣ್ಮನ ಸೆಳೆಯುವ ಆ ಸನ್ಮಾನ ಸಮಾರಂಭದ ವೀಡಿಯೊ ಪ್ರದರ್ಶನವನ್ನು ಪ್ರೊ.ಸಿಡಿ ನರಸಿಂಹಯ್ಯನವರ ಜೀವತಾವಧಿಯಲ್ಲಿ ಅವರು
ಸಂಸ್ಥಾಪಿಸಿದ ಹೆಸರಾಂತ ಸಂಸ್ಥೆ ಧ್ವನ್ಯಾಲೋಕದಲ್ಲಿ ವ್ಯವಸ್ಥೆ ಮಾಡಿದ್ದೆ. ನಾಥರ ಸಾಧನೆ ಭಾರತೀಯರಿಗೂ, ವಿಶೇಷವಾಗಿ
ಕನ್ನಡಿಗರಿಗೂ ಹೆಮ್ಮೆ ತರುವಂತಹದು. ಯಾವುದಾದರೂ ಟಿವಿ ಚಾನೆಲ್‌ನಲ್ಲಿ ಆ ವಿಡಿಯೊವನ್ನು ಪ್ರಸಾರ ಮಾಡೋಣವೆಂದರೆ ಬಕಿಂಗ್‌ಹ್ಯಾಮ್ ಅರಮನೆಯ ಆಡಳಿತ ವರ್ಗ ಅನುಮತಿ ಕೊಡುವುದಿಲ್ಲ. ಅದರಿಂದ ನಿರಾಸೆಗೊಂಡನಾದರೂ, ಅವರ ಬಿಗಿ ನೀತಿ ಮೆಚ್ಚುಗೆಯಾಯಿತು.

ಮೈಸೂರು ಅರಮನೆಯ ಒಳಗೂ ಅಂತಹ ಬಿಗಿಯನ್ನು ತಂದರೆ ಉತ್ತಮವೆಂದು ಶ್ರೀಕಂಠ ದತ್ತ ಒಡೆಯರ್‌ಗೆ ಸಲಹೆ ನೀಡಿದ್ದೆ. ದಸರಾ ಹಬ್ಬದ ಪ್ರಯುಕ್ತ ಉತ್ಸವದುದ್ದಕ್ಕೂ ಅರಮನೆಯೊಳಗೆ ನಡೆಯುವ ಪೂಜಾವಿಧಾನಗಳನ್ನು ವೀಕ್ಷಿಸಲು ಅನುವು ಮಾಡಿ ಕೊಟ್ಟ ಆರಂಭದ ದಿನಗಳು. ಜನ ಸಾಮಾನ್ಯರ ಭೇಟಿಗೆ ಅವಕಾಶ ಮಾಡಿಕೊಡುವ ಸದುದ್ದೇಶ ಅವರದ್ದು. ಆದರೆ ಬರುವ ಜನರೆಲ್ಲರಿಗೂ ನಡವಳಿಕೆ ಗೊತ್ತಿರಬೇಕೆಂದಿಲ್ಲವಲ್ಲ? ಪ್ರಜಾಪ್ರಭುತ್ವದ ಹೆಗ್ಗುರುತಾದ ಸಂಸತ್ತಿನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುವುದಕ್ಕೂ ರೀತಿ ರಿವಾಜುಗಳಿವೆ.

ಒಮ್ಮೆ ಅರಮನೆಯಿಂದ ಹೊರಬರುತ್ತಿದ್ದೆ. ಪ್ರವೇಶ ದ್ವಾರದ ಬಳಿ ಕಾರ್ ನಿಲ್ಲಿಸಿ ಡ್ಯೂಟಿಯಲ್ಲಿದ್ದ ಪೇದೆಯನ್ನು ಕರೆದೆ. ನನ್ನಲ್ಲಿದ್ದ ಸಿಹಿಯ ತುಣುಕೊಂದನ್ನು ನೀಡಿದೆ. ಸಂತೋಷದಿಂದ ಬಾಯಿಗೆ ಹಾಕಿಕೊಂಡರು. ನೀವು ಸ್ವೀಕರಿಸಿದ್ದು ನನಗೆ ಖುಷಿ ಯಾಯಿತು, ಆದರೆ ಅಪರಿಚಿತರಾರೋ ಕೊಟ್ಟಿದ್ದನ್ನು ತೆಗೆದುಕೊಳ್ಳಬೇಡಿ. ಟೆರರಿಸ್ಟ್ ಯಾರಾದರೂ ಮದ್ದು ಹಾಕಿದ ಸಿಹಿ ಕೊಟ್ಟು, ಒಳನುಗ್ಗಿ ಪ್ಯಾಲೇಸನ್ನು ಉಡಾಯಿಸಿಬಿಟ್ಟರೇನು ಗತಿ? ಅರಮನೆ ನಿಮಗೆ, ನಮಗೆ ಎಲ್ಲರಿಗೂ ಸೇರಿದ್ದು ಎಂದು ಹೇಳಿ ದಾಗ ಆತ ಪೆಚ್ಚಾದರು.

ಇದಾದ ನಂತರದಲ್ಲಿ, ಅಂದಿನ ಪೊಲೀಸ್ ಮಹಾ ನಿರ್ದೇಶಕರಾದ ಅಜಯ್ ಕುಮಾರ್ ಸಿಂಗ್ ಮತ್ತು ಆಯುಕ್ತರಾದ ಸುನಿಲ್ ಅಗರ್ವಾಲ್ ಅವರಿಗೆ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಭದ್ರತಾ ಸಮ್ಮೇಳನವೊಂದನ್ನು ಏರ್ಪಡಿಸಲು ಸಲಹೆ ನೀಡಿದೆ.
ಸಲಹೆಯನ್ನು ಸ್ವಾಗತಿಸಿದ ಪೊಲೀಸ್ – ದ್ವಯರು ನಾನೇ ಆ ಕಾರ್ಯಕ್ರಮದ ಉಸ್ತುವಾರಿಯ ಹೊಣೆ ಹೊರಲು ಹೇಳಿದರು. ಅಮೆರಿಕದ ಸ್ನೇಹಿತ ಕೆಆರ್‌ಎಸ್ ಮೂರ್ತಿ ಅವರಿಗೆ ವಿಷಯ ತಿಳಿಸಿದೆ. ಉತ್ಸುಕರಾದ ಅವರು ಕ್ಷಿಪ್ರ ಗತಿಯಲ್ಲಿ ಕಾರ್ಯ ಸಾಽಸಿ ಸರ್ವಿಲೆನ್ಸ್ ತಂತ್ರಜ್ಞಾನದಲ್ಲಿ ಪ್ರಮುಖ ರಾಷ್ಟ್ರಗಳಾದ ಸ್ವಿಜರ್ಲ್ಯಾಂಡ್, ಅಮೆರಿಕ, ಮತ್ತು ಇಸ್ರೇಲ್‌ಗಳಿಂದ ಪ್ರತಿನಿಽಗಳನ್ನು ಕರೆತರಲು ಮುಂದಾದರು.

ಅಂತಹ ಸೂಕ್ಷ್ಮ ವಿಚಾರಕ್ಕೆ ಸಂಬಂಧಿಸಿದ ಸಮಾರಂಭಕ್ಕೆ ವಿದೇಶೀಯರನ್ನು ಆಮಂತ್ರಿಸಲು ಕೇಂದ್ರ ಗೃಹ ಸಚಿವಾಲಯದ ಅನುಮತಿ ಅಗತ್ಯ. ಅದಕ್ಕೆ ಸರಕಾರಿ ಇಲಾಖೆಯ ಬೆಂಬಲ ಅವಶ್ಯಕ. ಆದರೆ ಸಮಯ ಮಿಂಚಿತ್ತು. ದಸರಾ ಮುನ್ನ, ಮೈಸೂರಿನ ಸುರಕ್ಷತೆಗಾಗಿ ಮಾಡಬೇಕಿದ್ದ ಕಾರ್ಯಕ್ರಮ. ಸಮಯದ ಅಭಾವದಿಂದ ಮಾಡಲಾಗಲಿಲ್ಲ. ಆ ನಂತರದ ಒಂದಿಬ್ಬರು ಆಯುಕ್ತರು
ಪ್ರತಿಸ್ಪಂದಿಸಲಿಲ್ಲ. (2006ರಲ್ಲಿ ಮೈಸೂರು ನಗರದ ಭಯೋತ್ಪಾದಕರಿಬ್ಬರ ಬಂಧನವಾಯಿತು.) ಇತ್ತೀಚಿಗೆ ಮೂರ್ತಿ ಮತ್ತು ನಾವೆಂದುಕೊಂಡಿದ್ದ ಭದ್ರತಾ ಕಾರ್ಯಕ್ರಮದ ಒಂದಂಶವನ್ನು ನೆರವೇರಿಸಲಾಯಿತು.

ಆದರೆ ಆದರಲ್ಲಿ ನಮ್ಮ ಪಾತ್ರವಿರಲಿಲ್ಲ. ದರ್ಬಾರ್ ಹಾಲ್‌ನಲ್ಲಿ ಅಂದು ಸಂಜೆ ವೀಕ್ಷಿಸಿದ ಅಸಹ್ಯಕರ ದೃಶ್ಯದ ನಂತರ ಸ್ವಚ್ಛತೆಗೆ ಸಂಬಂಧಿಸಿದಂತೆ ಒಂದು ಆಂದೋಲನವನ್ನು ನಿಯೋಜಿಸಿದೆ. ನಾನು ಸಂಪಾದಕನಾಗಿದ್ದ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸು ವುದೂ ನನ್ನ ಗಮನದಲ್ಲಿತ್ತು. ನಮ್ಮ ಕಚೇರಿಯಲ್ಲಿಯೇ ಅದಕ್ಕೆ ಬೇಕಿದ್ದ ಬೆಂಬಲ ಸಿಗಲಿಲ್ಲ. ಈ ಹದಿನೇಳು ವರ್ಷಗಳಲ್ಲಿ, ಸಮಯ ಸಿಕ್ಕಾಗಲೆ ಆ ಕಾರ್ಯಕ್ರಮವನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಲೇ ಬಂದಿದ್ದೇನೆ. ಹತ್ತು ವರ್ಷದ ಕೆಳಗೆ ಮೈಸೂರು ನಗರ ಪಾಲಿಕೆ ಅದರಲ್ಲಿ ಆಸಕ್ತಿ ತೋರಿತು. ಪಾಲಿಕೆಯ ಆಯುಕ್ತರಾಗಿದ್ದ ಮಣಿವಣ್ಣನ್ ಆಂದೋಲನಕ್ಕೆ ಸರಕಾರದಿಂದ ಅನುಮೋದನೆ ಪಡೆದರಾದರೂ ತದನಂತರದಲ್ಲಿ ಮೈಸೂರು ಜಿಲ್ಲಾಧಿಕಾರಿಯಾದ ಅವಧಿಯಲ್ಲಿ ನನ್ನ ಒಂದು ನಿಷ್ಠುರವಾದ ನಿಲುವಿಗೆ ಅಸಂತುಷ್ಟರಾಗಿ ಕಾರ್ಯಕ್ರಮ ಮುಂದುವರಿಯಲಿಲ್ಲ.

ಅವರ ನಂತರ ನೇಮಕವಾದ ಒಂದಿಬ್ಬರು ಪಾಲಿಕಾ ಆಯುಕ್ತರಾಗಲೀ, ಜಿಲ್ಲಾಧಿಕಾಗಳಾಗಲೀ ಶುಚಿತ್ವ ಕುರಿತ ಈ ಪ್ರಸ್ತಾವನೆ ಯಲ್ಲಿ ಆಸಕ್ತಿ ತೋರಲಿಲ್ಲ. ಇತ್ತೀಚಿನವರೆಗೂ ಸೇವೆ ಸಲ್ಲಿಸಿದ ಜಿಲ್ಲಾಧಿಕಾರಿ ನನಗೆ ಈ ಪ್ರಸ್ತಾವನೆ ಕುರಿತಂತೆ ಸಂದರ್ಶನ ನೀಡಲು ಒಂದು ವರ್ಷ ಸತಾಯಿಸಿ ನಂತರ ಅದನ್ನು ಮುಂದಿನ ವರ್ಷ ಪರಿಗಣಿಸಬಹುದೆಂದು ಹೇಳಿದರು. ಈ ಯೋಜನೆಯ ವ್ಯಾಪ್ತಿ ಯನ್ನು ವಿಸ್ತರಿಸಿ ಜಗತ್ತಿನ 400 ದಶಲಕ್ಷ ಮಂದಿ ಅದರ ಫಲಾನುಭವಿಗಳಾಗಿ ಪ್ರಯೋಜನ ಪಡೆಯಲೆಂಬ ಇಂಗಿತ ನನ್ನದಾ ಗಿತ್ತು.

ಕೊನೆಗೂ ಶುಚಿತ್ವಕ್ಕೆ ಮಹತ್ವ ಕೊಟ್ಟು ನಿಯೋಜಿಸಲಾದ ಸ್ವಚ್ಛ ಭಾರತ್ ಅಭಿಯಾನವನ್ನು ಮೇಲ್‌ಸ್ತರಕ್ಕೆ ಕರೆದೊಯ್ಯುವ
ಆಶಯ ಈ ಯೋಜನೆಗಿತ್ತು. ಏತನ್ಮಧ್ಯೆ ಕೋವಿಡ್ ಮಾರಿ ಜಗತ್ತನ್ನಾವರಿಸಿತು. ನನ್ನ ಪ್ರಾಮಾಣಿಕ ಅನಿಸಿಕೆ ಇದು: ನಮ್ಮ ಅಧಿಕಾರಶಾಹಿ ಪ್ರತಿಸ್ಪಂದಿಸಿದ್ದಲ್ಲಿ ಕೋವಿಡ್-19 ಹರಡುವುದನ್ನು, ಕೇವಲ ಭಾರತದಲ್ಲಲ್ಲದೆ, ವಿಶ್ವಾದ್ಯಂತ ಗಣನೀಯವಾಗಿ ತಪ್ಪಿಸಬಹುದಿತ್ತು. ಯುದ್ಧಕಾಲದಲ್ಲಿ ಶಸಾಭ್ಯಾಸ ನೀಡುವಂತೆ ಜನಸಾಮಾನ್ಯರಿಗೆ, ಕುತ್ತಿಗೆಗೆ ಬಂದಾಗ, ಸ್ವಚ್ಛತೆಯ ಪ್ರಥಮ
ಪಾಠಗಳನ್ನು ಮಾಡುವುದು ತಪ್ಪುತ್ತಿತ್ತು.

ಇಲ್ಲಿ ಪ್ರಸ್ತಾವಿಸಲು ಹೊರಟಿದ್ದು ಪಕ್ಕದ ಹಾಸನ ಜಿಯ ದೊಡ್ದಗದ್ದವಳ್ಳಿಯ ಕಾಳಿಕಾ ಮಾತೆಯ ಮೂರ್ತಿಯ ಭಂಜನೆಯ ವಿಚಾರವನ್ನು. ಹೆಜ್ಜೆ-ಹೆಜ್ಜೆಗೆ ನಮ್ಮ ಪರಂಪರೆಯ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ಅಧಿಕಾರಿಶಾಹಿಯೂ ಸೇರಿದಂತೆ ನಮ್ಮೆಲ್ಲ ರಲ್ಲೂ ಅಂತರ್ಗತವಾಗಿರುವ ದಿವ್ಯ ನಿರ್ಲಕ್ಷತೆಯನ್ನು ಕೆಲವು ದೃಷ್ಟಾಂತಗಳ ಮೂಲಕ ನಿರೂಪಿಸುವುದು ನನ್ನ ಉದ್ದೇಶ.
ಕಾಳಿಕಾಮಾತೆಯ ಪುತ್ಥಳಿಗೆ ಬಂದೊದಗಿದ ಸ್ಥಿತಿ ನಮ್ಮೆಲ್ಲರೊಳಗಿನ ರಕ್ತವನ್ನು ಕುದಿಸಬೇಕಿತ್ತು. ಕೆರಳಲು ನಾವು ಕಾಳಿಯ ಭಕ್ತರಾಗಬೇಕಿಲ್ಲ. ಸಂಸ್ಕೃತಿಯ ಚಿಕ್ಕಾಸು ಅರಿವಿದ್ದರೂ ಸಾಕು. ಇತಿಹಾಸದ ಅಲ್ಪ ಗಂಧವಿದ್ದರೂ ಸಾಕು. ಸೌಂದರ್ಯ ಪ್ರe, ಕಲಾಭಿರುಚಿಯ ಮಾತು ಬಿಡಿ, ಶಿಲ್ಪಕಲೆಯ ಮೂರುಕಾಸು ಪರಿಜ್ಞಾನವಿದ್ದರೂ ಸಾಕು, ಭಂಜಕರಾರೇ ಆಗಿರಲಿ, ಸಮಸ್ತ ಭಾರತೀಯರು ಕ್ರುದ್ಧರಾಗುತ್ತಿದ್ದವು.

ಒಂದಲ್ಲ, ಎರಡಲ್ಲ, ಮೊಘಲರ ಆಳ್ವಿಕೆಯಲ್ಲಿ 60000 ದೇವಾಲಯಗಳ ವಿನಾಶವನ್ನು ಅರಗಿಸಿಕೊಂಡ ದೇಶ ನಮ್ಮದಲ್ಲವೇ! ಸ್ವಾತಂತ್ರ್ಯಪೂರ್ವದ ಮಾತೇಕೆ? ನಿರ್ಜೀವ ಮೂರ್ತಿಗಳ ಮಾತೇಕೆ? ಕಾಶ್ಮೀರದ ಹತ್ಯಾಕಾಂಡವನ್ನೇ ಕಂಡೂ ಅಲುಗಾಡದ ಜನ ನಾವು. ಇತಿಹಾಸಾದ್ಯಂತ ಕಂಡ ಬರ್ಬರತೆ ನಮ್ಮ ಮಾತನ್ನು ಕಸಿದುಕೊಂಡಿದೆ. ರಕ್ತ ಕುದಿಯಲಾರದಷ್ಟು ಹೆಪ್ಪುಗಟ್ಟಿದೆ.
ಐತಿಹಾಸಿಕ ಸ್ಮಾರಕಗಳನ್ನು ವಿರೂಪಗೊಳಿಸುವವರಿಗೆ 5000 ರುಪಾಯಿ ದಂಡ ಮತ್ತು ಮೂರು ತಿಂಗಳು ಜೈಲು ಎಂದಿದ್ದ ಕಾನೂನಿಗೆ 2010ರಲ್ಲಿ ತಿದ್ದುಪಡಿ ತಂದು ದಂಡವನ್ನು ಒಂದು ಲಕ್ಷ ರುಪಾಯಿಗೂ, ಕಾರಾಗೃಹವಾಸದ ಅವಧಿಯನ್ನು ಎರಡು ವರ್ಷಗಳಿಗೂ ವಿಸ್ತರಿಸಲಾಯಿತು.

ಸದ್ಯದ ಆರ್ಥಿಕ ಕುಸಿತದಿಂದ ದೇಶವನ್ನು ಮೇಲೆತ್ತಲು ವಿವಿಧ ಮಾರ್ಗಗಳನ್ನನುಸರಿಸುತ್ತಿರುವ ಸರಕಾರ ಈ ಕಾನೂನನ್ನು ಕಟ್ಟು ನಿಟ್ಟಾಗಿ ಆಚರಣೆಗೆ ತಂದಲ್ಲಿ ಬೊಕ್ಕಸ ತುಂಬಿ ತುಳುಕಬಲ್ಲದು.

ಹದಿನೇಳು ವರ್ಷಗಳ ಹಿಂದೆ, ವಿದೇಶದಿಂದ ಬಂದಿದ್ದ ಅತಿಥಿಗಳನ್ನು ಖಾಸ್ ದರ್ಬಾರ್‌ಗೆ ಕರೆದುಕೊಂಡು ಹೋಗಿದ್ದೆ. ದರ್ಬಾರ್ ಮುಗಿದು ಮಹಾರಾಜರು ಸಿಂಹಾಸನವನ್ನು ಅವರೋಹಣ ಮಾಡುತ್ತಿದ್ದಾರೆ. ಅಲ್ಲಿಂದ ಕದಲಲಾರಂಭಿಸಿದ್ದ ಸಾರ್ವಜನಿಕರಲ್ಲಿ ಅದೇನೊ ಗೊಂದಲ ಮೂಡಿ ಅಲ್ಲಲ್ಲಿ ಹಾರುತ್ತಾ ಹೆಜ್ಜೆ ಹಾಕುತ್ತಿದ್ದರು. ಕೆಲವರು ಮೂಗು ಮುಚ್ಚಿಕೊಂಡು ಮುಖ ಸೊಟ್ಟಗೆ
ಮಾಡಿಕೊಂಡಿದ್ದರು.