Friday, 20th September 2024

ಶಿಕ್ಷಕರೇಕೆ ಕಮಿಟೆಡ್‌ ಆಗಿರುವುದಿಲ್ಲ ?

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್

dascapital1205@gmail.com

ಕಡಿಮೆ ವೇತನವಿದ್ದ ಕಾಲದಲ್ಲಿ ಶಿಕ್ಷಕರಲ್ಲಿ ವೃತ್ತಿಬದ್ಧತೆಯಿತ್ತು. ವೃತ್ತಿಘನತೆ ಮತ್ತು ಗೌರವವಿತ್ತು. ಕಿತ್ತು ತಿನ್ನುವ ಬಡತನವಿದ್ದರೂ ಸಮಾಜವೇ ಅವರನ್ನು ಬೆಂಬಲಿಸುವ ಕಾಲವದು. ಅವರನ್ನು ಉಳಿಸಿಕೊಳ್ಳುವ ಕಾಳಜಿಯನ್ನು ಸಮಾಜ ಹೊಂದಿತ್ತು.

ಕಾರಣ, ಶಿಕ್ಷಕರು ಕಮಿಟೆಡ್ ಆಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಆರ್ಥಿಕ ಪರಿಸ್ಥಿತಿಯೂ ಬದಲಾಗಿದೆ. ಶಿಕ್ಷಕರಿಗೆ ಉತ್ತಮ ಸಂಬಳವನ್ನು ಸರಕಾರ ನೀಡುತ್ತದೆ. ಹಲವು ಖಾಸಗಿ ಶಾಲೆಗಳಲ್ಲೂ ಉತ್ತಮ ಸಂಬಳವಿದೆ. ಆದ್ದರಿಂದ ಸಮಾಜಕ್ಕೆ ಶಿಕ್ಷಕರನ್ನು ಉಳಿಸಿಕೊಳ್ಳುವ ದರ್ದು ಮೊದಲಿನಷ್ಟು ಇಲ್ಲ. ತನ್ನನ್ನು ತಾನೇ ರಕ್ಷಿಸಿಕೊಳ್ಳಬೇಕೆಂಬ ಪ್ರಜ್ಞೆ ಶಿಕ್ಷಕರಲ್ಲಿದೆ. ಆದರೂ ಕೌಟುಂಬಿಕ ಜವಾಬ್ದಾರಿ ಹಾಗೂ ಭವಿಷ್ಯದ ಜೀವನದ ನಿರ್ವಹಣೆಗಾಗಿ ಎಷ್ಟು ಹಣವನ್ನು ಗಳಿಸಿದರೂ ಸಾಲದಾಗಿ ಶಿಕ್ಷಕ ಟ್ಯೂಷನ್ನುಗಳನ್ನು ಆರಂಭಿಸ ಬೇಕಾಗಿ ಬಂದುದರಿಂದ, ವೃತ್ತಿಗಿಂತ ಮುಖ್ಯವಾಗಿ ಅದಕ್ಕೇ ಮಹತ್ವ ಕೊಡಬೇಕಾದ ಅನಿವಾರ್ಯತೆ ವರ್ತಮಾನ ದಲ್ಲಿದೆ.

ಇದು ಭಾಗಶಃ ಸತ್ಯವೂ ಹೌದು. ಹಣವಿಲ್ಲದೆ ಬದುಕು ಒಂದು ತಾಸೂ ನಡೆಯದ ಕಾಲವಿದು. ಬದುಕಿನ ಎಲ್ಲ ಸಂದರ್ಭ – ಸನ್ನಿವೇಶಗಳೂ ಹಣದ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಶಾಲೆ- ಶಿಕ್ಷಕ- ವಿದ್ಯಾರ್ಥಿ- ಸಮಾಜದ ನಡುವಿನ ಭಾವನಾತ್ಮಕ ಸಂಬಂಧ ಮೊದಲಿನಂತಿಲ್ಲ. ಕಾರಣ ಎಲ್ಲವೂ ಶುದ್ಧ ವ್ಯವಹಾರವಾಗಿ ಬಿಟ್ಟಿದೆ. ವಿಶ್ವಾಸದಲ್ಲಿ ವ್ಯವಹಾರ ಬೇರೆ, ವ್ಯವಹಾರದಲ್ಲಿ ವಿಶ್ವಾಸ ಬೇರೆ. ಬದಲಾದ ಜಾಗತಿಕ ಸ್ಥಿತ್ಯಂತರಗಳು ಶಿಕ್ಷಕರಲ್ಲಿ ವೃತ್ತಿಬದ್ಧತೆಯನ್ನು ಅಪಮೌಲ್ಯ ಗೊಳಿಸುತ್ತಿದೆ. ಕಾರಣ ಅತಿಸೂಕ್ಷ್ಮವೆನಿಸಿದ ಕಾನೂನುಗಳು ಶಿಕ್ಷಣದ ನೀತಿಯಲ್ಲಿ ಒಳಸೇರಿದ್ದರಿಂದ.

ಇಂಥ ಕಾನೂನು ಗಳಿಗೆ ಶಿಕ್ಷಕ ಬದ್ಧನಾಗಬೇಕಾದ ಪರಿಸ್ಥಿತಿಯಿದೆ. ಆದ್ದರಿಂದ ವಿದ್ಯಾರ್ಥಿಯ ಮನಸ್ಸನ್ನು ಮುಟ್ಟಲು ಆತ ಪ್ರಯತ್ನಿಸಲಾರ. ಇಂದಿನ ಶಿಕ್ಷಣ ವ್ಯವಸ್ಥೆಯೂ ಮುಟ್ಟಲಾರದು. ಕಲಿಕೆಯ ವಿಚಾರವಾಗಿ ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ವಿಧೇಯತೆಯಲ್ಲಿ ಶೈಥಿಲ್ಯ ಹುಟ್ಟಿಕೊಂಡಿದೆ. ಅವರಲ್ಲಿ ಶಾಲೆ, ಶಿಕ್ಷಕರು, ಸಮಾಜದ ಬಗ್ಗೆ ಗೌರವವಿಲ್ಲ. ಕಲಿಕೆಯ ಬಗ್ಗೆಯೇ ಅವರಲ್ಲಿ ಉಢಾಪೆಯಿದೆ, ಉದಾಸೀನವಿದೆ. ತನ್ನ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಳ್ಳುವ ಪೋಷಕರು ಅವರನ್ನು ಏಕವಚನದಲ್ಲಿ ಏರುದನಿಯಲ್ಲಿ ಮಾತಾಡಿಸಿದರೆ ತಮ್ಮ ಮಕ್ಕಳ ಮನಸ್ಸಿನ ಮೇಲೆ ಯಾವ ಪರಿಣಾಮವನ್ನು ಉಂಟುಮಾಡೀತು ಎಂಬ ಸಾಮಾನ್ಯ ಪ್ರeಯನ್ನು ಕಳೆದುಕೊಂಡಿದ್ದಾರೆ.

ಅಂಥವರು ಎಂಥ ಮೌಲ್ಯಗಳನ್ನು ಮನೆಯಲ್ಲಿ ಕಲಿಸಿಯಾರು? ಇದರಿಂದಾಗಿ ವಿದ್ಯಾರ್ಥಿಗಳ ಅಂತರಂಗ-ಬಹಿರಂಗವನ್ನು ಅನುಸಂಧಿಸುವ ಪ್ರಕ್ರಿಯೆ ತರಗತಿ ಯಲ್ಲಿ ನಡೆಯುವುದಿಲ್ಲ. ಕೇವಲ ಭೌತಿಕಜ್ಞಾನವನ್ನು ನೀಡುವುದರ ಕಡೆಗೆ ಗಮನ ಕೊಡುವುದರಿಂದ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಾಲೆಯ ನಡುವೆ ಯಾವ ಉತ್ತಮ ಬಾಂಧವ್ಯವೂ ಇಲ್ಲವಾಗಿದೆ. ಇದಕ್ಕೆಸಮಾಜವೂ ಕಾರಣವಾದರೆ, ಶಿಕ್ಷಣ ಸಂಸ್ಥೆಗಳ ಧ್ಯೇಯ- ಧೋರಣೆಗಳೂ ಕಾರಣವಾಗಿದೆ. ಯಾವ ಶಿಕ್ಷಣ ವ್ಯವಸ್ಥೆ ಯಲ್ಲಿ ವಿಶ್ವಾಸಕ್ಕಿಂತ ಹೆಚ್ಚಾಗಿ ವ್ಯವಹಾರಮುಖಿ ಸಂಬಂಧಗಳಿರುತ್ತವೆಯೋ ಅಲ್ಲಿ ಆರ್ಥಿಕತೆ ಪ್ರಧಾನ ವಾಗುತ್ತದೆ.

ಶಿಕ್ಷಣದ ಮೂಲ ಉದ್ದೇಶ ಆರ್ಥಿಕತೆಯನ್ನು ಬಲಗೊಳಿಸುವುದಾದರೂ ತರಗತಿಯಲ್ಲಿ ಆ ವಿಚಾರವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಬೋಧಿಸಲಾಗದು.
ಜೀವನಮೌಲ್ಯಗಳ ಬೋಧನೆಯಾಗಬೇಕಾಗುತ್ತದೆ. ಆದರೆ ಸಮಾಜ ಇದನ್ನು ಸ್ವೀಕರಿಸಲಾರದಷ್ಟು ಮಟ್ಟಿಗೆ ಶಾಲೆಯಿಂದ ದೂರವಾಗಿದೆ. ಇದಕ್ಕೆ ಪೂರಕವಾಗಿ ಕಾರ್ಪೋರೇಟ್ ಪ್ರಪಂಚದ ಶೈಕ್ಷಣಿಕಾತ್ಮಕವಾದ ಆಡಳಿತದ ಪರಿಕಲ್ಪನೆಗಳು ಶಿಕ್ಷಕರನ್ನೇ ಪ್ರತಿಯೊಂದಕ್ಕೂ ಗುರಿಯಾಗಿಸಿ, ಅಗತ್ಯಕ್ಕಾಗುವಷ್ಟು ಸಂಬಳವನ್ನೂ ನೀಡದೆ ವೃತ್ತಿಬದ್ಧತೆಯನ್ನು ಆಗ್ರಹಿಸುತ್ತದೆ. ಎಲ್ಲವೂ ವ್ಯವಹಾರವಾದದ್ದು ಇಂಥ ಪರಿಸ್ಥಿತಿಯಿಂದ. ನಾವು ಸಂಬಳ ಕೊಡುತ್ತೇವೆ, ಅವರು ಫೀಸು ಕೊಡುತ್ತಾರೆ, ಆದ್ದರಿಂದ ಇಂತಿಷ್ಟು ಅಂಕಗಳು ಬರಲೇಬೇಕು ಎನ್ನಲು ಕಲಿಕೆ ಮತ್ತು ಬೋಧನೆಯೇನು ಸಂತೆಯಲ್ಲಿ ಮಾರಾಟಕ್ಕಿಟ್ಟ ಸರಕುಗಳೇ? ಶಿಕ್ಷಣ ನೀತಿಯ ವ್ಯವಸ್ಥೆಯಲ್ಲಿ
ಅಂತರಂಗದ ಜ್ಞಾನಕ್ಕೆ ಮಹತ್ತ್ವ ಕೊಡದೇ ಹೋದರೆ ಯಾವ ಶಿಕ್ಷಕನೂ ವೃತ್ತಿಯ ಬಗ್ಗೆ ಕಮಿಟೆಡ್ ಆಗಿರಲು ಸಾಧ್ಯವಿಲ್ಲ.

ಕೇವಲ ಭೌತಿಕ ಉಪಯುಕ್ತತೆಯ ಬಗ್ಗೆ ಮಾತ್ರ ಆತ ಬದ್ಧನಾಗುತ್ತಾನೆ. ಅಂದರೆ ಮತ್ತೆ ಹಣದ ಅಸ್ತಿತ್ವವೇ ಮುಖ್ಯವಾಗುತ್ತದೆ. ಅಂಕಗಳಿಗೆ ಹೊರತಾಗಿ ಯಾವ ಜೀವನ ಮೌಲ್ಯಗಳು ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ದೊರೆಯದೇ ಇದ್ದಾಗ ಶಾಲೆ- ಶಿಕ್ಷಕ- ಸಮುದಾಯದ ಮಧ್ಯೆ ಯಾವ ಸಂಬಂಧಗಳು ಏರ್ಪಡಲು ಸಾಧ್ಯ ಹೇಳಿ? ಯಾವುದನ್ನು ಸರಕುಗಳನ್ನಾಗಿ ನೋಡಬಾರದಿತ್ತೋ, ಸರಕುಗಳನ್ನು ಮಾರುವ ಮಾಲೀಕನಂತೆ ಶಿಕ್ಷಕನು ಕಾಣಬಾರದಿತ್ತೋ ಅದು ಘಟಿಸಿದ್ದ ರಿಂದಾಗಿಯೇ ಶಿಕ್ಷಣ ವ್ಯವಸ್ಥೆ ಕೊಡು-ಕೊಳ್ಳುವಿಕೆಯ ದಾರಿಹಿಡಿದಿದ್ದು.

ಕೇವಲ ಅಂಕಗಳಿಕೆಗೆ ವ್ಯವಸ್ಥೆ ಮಹತ್ವ ನೀಡಿದ್ದರಿಂದ ಶಿಕ್ಷಕನಿಗೆ ಬದ್ಧತೆಗೆ ಅವಕಾಶವಿಲ್ಲವಾಗಿದೆ. ವ್ಯವಸ್ಥೆಗೆ ಶಿಕ್ಷಕರು ಹೊಂದಿಕೊಳ್ಳುತ್ತಾ ಶಾಲೆಗಳಲ್ಲಿ ಪ್ರತಿಭೆ ಗಳನ್ನು ಗುರುತಿಸುವ ಗೋಜಿಗೆ ಹೋಗದೆ ಕೇವಲ ಉತ್ತಮವಾದ ಅಂಕಗಳು ಬರುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಲೆತ್ನಿಸುತ್ತಾರೆ. ಹೆತ್ತವರೂ ಶಾಲೆಯವರೂ ತಮ್ಮ ಮಕ್ಕಳು ಹೆಚ್ಚು ಹೆಚ್ಚು ಅಂಕಗಳನ್ನು ಪಡೆದರೆ ಸಾಕೆಂಬ ಮನಸ್ಥಿತಿಯನ್ನು ಹೊಂದಿರುವುದರಿಂದ ಶಿಕ್ಷಕರು ಅವರಿಗೆ ಅನುಕೂಲವಾಗುವ
ರೀತಿಯಲ್ಲಿ ಪಾಠಬೋಧನೆಯನ್ನು ಅಂಕಗಳಿಕೆಯ ಮಾರ್ಗೋಪಾಯವಾಗಿ ಮಾಡಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯೂ, ಪ್ರತಿಶಾಲೆಯೂ ಬೋಧನೆ ಮತ್ತು ಕಲಿಕೆಗೆ ಹೆಚ್ಚು ಒತ್ತು ನೀಡುವುದು ಸತ್ಯವಾದರೂ ಹೆಚ್ಚು ಅಂಕಗಳನ್ನೇ ಪಡೆಯುವಂತಾಗಬೇಕೆಂಬುದು ಇದರ ಹಿಂದಿನ ಉದ್ದೇಶವಾಗಿದೆ.

ಇಂಥಲ್ಲಿ ಶಿಕ್ಷಕ ಕಮಿಟೆಡ್ ಆಗಿರುವವನಂತೆ ನಟಿಸಬೇಕಾಗುತ್ತದೆ. ಕಾರಣ ಉದ್ಯೋಗ ಕಳೆದುಕೊಳ್ಳುವ ಭಯ ಅವನಲ್ಲಿರುತ್ತದೆ. ಈ ನಟನೆಯೂ ಕೂಡ
ಬೋಧನೆಗಲ್ಲ, ವಿದ್ಯಾರ್ಥಿಗಳಿಗಲ್ಲ, ಕೇವಲ ಮ್ಯಾನೇಜುಮೆಂಟಿಗೆ. ಇಂದಿನ ಮ್ಯಾನೇಜುಮೆಂಟಿಗೆ ಶಿಕ್ಷಕನ ಪ್ರತಿಭೆ ಮುಖ್ಯವಲ್ಲ, ಅವನ ಹುಸಿ ನಟನೆಯಾದರೂ ಸರಿ, ಸೆಲ್ಯೂಟ್ ಹೊಡೆಯಲೇಬೇಕೆಂಬ ಮನಸ್ಥಿತಿಯಿದೆ. ಯಾರು ಸೆಲ್ಯೂಟ್ ಹೊಡಿತಾನೋ ಅದೇ ಅವನ ಉದ್ಯೋಗ ಭದ್ರತೆ ಮತ್ತು ಸಂಬಳದೇರಿಕೆಯ ಮಾನದಂಡ!. ಆದರೆ ಸತ್ಯವಿದಲ್ಲ.

ಶಿಕ್ಷಕನೊಬ್ಬನ ನಿಜವಾದ ಕಮಿಟ್‌ಮೆಂಟ್ ಅಥವಾ ಬದ್ಧತೆಯಿರಬೇಕಾದುದು ವಿದ್ಯಾರ್ಥಿಗೆ ಹೊರತು ಮ್ಯಾನೇಜುಮೆಂಟಿಗಲ್ಲ. ಸಂಸ್ಥೆಗೆ, ವಿದ್ಯಾರ್ಥಿಗೆ ಪೋಷಕ ರಿಗೆ ತೋರಿಕೆಯ ಬದ್ಧತೆಯ ನಾಟಕವಾಡುತ್ತಾ ಸಂಸ್ಥೆಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವವರಿದ್ದಾರೆ. ಲಕ್ಷಗಟ್ಟಲೆ ಫೀಸು ಕೊಡುವ ಪೋಷಕರು ಇಂಥ ಶಾಲೆ ಗಳಲ್ಲಿ ಪ್ರಭುತ್ವವನ್ನು ಸ್ಥಾಪಿಸ ಬಯಸುವುದು ತಪ್ಪಲ್ಲ. ಶಿಕ್ಷಕ ಅಂಥ ಪೋಷಕರಿಗೂ ಬದ್ಧತೆಯ ನಾಟಕವಾಡಬೇಕಾಗುತ್ತದೆ. ವರ್ತಮಾನದ ಈ ಎಲ್ಲಾ ಒತ್ತಡಗಳು ಸೃಷ್ಟಿಸುವ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಶಿಕ್ಷಕ ವೃತ್ತಿಗೆ ಕಮಿಟೆಡ್ ಆಗಲು ಸಾಧ್ಯವಾಗುವುದಾದರೂ ಹೇಗೆ? ಶಿಕ್ಷಣ ವ್ಯವಸ್ಥೆಯ ಒಟ್ಟೂ ನಡೆಯೇ ಹಳಿ ತಪ್ಪಿದ್ದರಿಂದ
ಕಮಿಟ್‌ಮೆಂಟ್ ಎಂಬುದು ಕೇವಲ ಪ್ರಹಸನವಾಗಿದೆ.

ಅಷ್ಟಕ್ಕೂ ಈ ಕಮಿಟ್ ಮೆಂಟ್ ಎಂಬುದು ಎಲ್ಲಾ ಕ್ಷೇತ್ರದಲ್ಲೂ ಮರೆಯಾಗಿ ಹೋಗಿದೆ. ಪಿಯುಸಿಯಲ್ಲಿ ಒಳ್ಳೆಯ ಕಾಲೇಜಿಗೆ (ಹೆಚ್ಚು ಫೀಸು ತಗೊಳ್ಳುವ ಕಾಲೇಜು ಒಳ್ಳೆಯದೆಂಬ ಮನಸ್ಥಿತಿ) ಸೇರಬೇಕಾದರೆ ಉತ್ತಮ ಅಂಕಗಳು ಬೇಕು, ಇಲ್ಲವಾದರೆ ಹೆಚ್ಚು ಹಣ ನೀಡಬೇಕು. ಈ ಅನಿವಾರ್ಯತೆಯಿಂದ ಹೆತ್ತವರು ಅಂಕಕ್ಕೇ ಪ್ರಾಧಾನ್ಯ ಕೊಡುವುದರಿಂದ ಶಿಕ್ಷಕರಲ್ಲಿ ವೃತ್ತಿಬದ್ಧತೆ ಅಂಕಕ್ಕಷ್ಟೇ ಆಗಿದೆ. ಬೋಧನೆಗೆ ಹೆಚ್ಚಿನ ಓದು ಅನಗತ್ಯವೆನಿಸಿ ಇರುವ ಜ್ಞಾನದಲ್ಲೇ ಬೋಧಿಸುವ
ವಾತಾವರಣ ಬೆಳೆದಿದೆ. ಪುಸ್ತಕಗಳನ್ನು ಓದುವ ಅಭ್ಯಾಸ ಅಥವಾ ಹವ್ಯಾಸ ಶಿಕ್ಷಕರಲ್ಲೂ ವಿದ್ಯಾರ್ಥಿಗಳಲ್ಲೂ ಕಡಿಮೆಯಾಗುತ್ತಿರುವುದು ಈ ಕಾರಣದಿಂದಾಗಿ.
ತರಗತಿಯಲ್ಲಿ ಪಾಠಮಾಡುವ ಶಿಕ್ಷಕನನ್ನು ಯಾವುದೋ ವಿಚಾರಣೆಗೆ ಅಥವಾ ಅನನ್ಯಕಾರ್ಯಕ್ಕೆ ಹೊರಬರುವಂತೆ ಮಾಡುವ ಮೆಲಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕುವಂಥ ಹಕ್ಕು ಆ ಶಿಕ್ಷಕನಿಗಿದ್ದರೆ ಪಾಠಬೋಧನೆ ಸುಗಮವಾಗಬಹುದು.

ಶಿಕ್ಷಕರೂ ಈ ಬದ್ಧತೆಯನ್ನು ತರಗತಿಯಲ್ಲಿ ಹೊಂದಿರಬೇಕಾಗುತ್ತದೆ. ತಾನು ಬೋಧಿಸುವ ವಿದ್ಯಾರ್ಥಿಯ ಜಾತಿಹಿನ್ನೆಲೆ, ಆರ್ಥಿಕ ಹಿನ್ನೆಲೆಯ ಬಗ್ಗೆ ಗಮನ ಹರಿಸದೆ ಇವನು ನನ್ನ ವಿದ್ಯಾರ್ಥಿಯೆಂದಷ್ಟೇ ಪರಿಗಣಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಬದ್ಧತೆಯನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕಾಗುತ್ತದೆ. ಶಾಲೆಯ ಆಂತರಿಕವಾದ ಶೈಕ್ಷಣಿಕ ಆಡಳಿತ ನೀತಿಯು ಶಿಕ್ಷಕರ ಬದ್ಧತೆಯನ್ನು ಕ್ಷೀಣಿಸುವಂತಿರಬಾರದು. ವೇತನ ತಾರತಮ್ಯ, ಕೆಲಸ ಹಂಚುವಿಕೆಯಲ್ಲಿ ಪಕ್ಷಪಾತ,
ಜಾತೀಯತೆ, ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಪ್ರತಿಭೆಯನ್ನು ಗುರುತಿಸದಿರುವುದು, ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ಮೇಲಧಿಕಾರಿಗಳಿಗೆ ನೀಡುವುದು –
ಹೀಗಿರುವೆಡೆಯೆಲ್ಲ ಶಿಕ್ಷಕ ತನ್ನ ಬದ್ಧತೆಯನ್ನು ನಾಟಕೀಯವಾಗಿ ತೋರ್ಪಡಿಸುತ್ತಾ ಮೇಲಧಿಕಾರಿಗಳನ್ನು ಓಲೈಸಲು ಮುಂದಾಗುತ್ತಾನೆ. ಸರ್ಕಾರಿ ಶಾಲೆಗಳಲ್ಲಿ ಯಂತೆ ಖಾಸಗೀ ಶಾಲೆಗಳಲ್ಲೂ ಇಂಥ ನಾಟಕಗಳು ಸಾಮಾನ್ಯ ವಾಗಿರುತ್ತದೆ. ಅಲ್ಲಿ ಒಬ್ಬ ಶಿಕ್ಷಕನ ಬದ್ಧತೆಯ ಅಸ್ತಿತ್ವವಿರುವುದು ಪಾಲಕರಿಂದ ಯಾವ ದೂರು ಬಾರದಂತೆ ಎಚ್ಚರವಹಿಸುವುದರಲ್ಲಿ, ತನ್ನ ವಿದ್ಯಾರ್ಥಿಗಳನ್ನೇ ಓಲೈಸುವುದರಲ್ಲಿ, ಮುಖವಾಡ ಧರಿಸಿ ಮ್ಯಾನೇಜ್ ಮೆಂಟನ್ನು ತೃಪ್ತಿಗೊಳಿಸುವು ದರಲ್ಲಿ. ಆದರೆ, ಶಿಕ್ಷಕನೊಬ್ಬನ ನಿಜವಾದ ಬದ್ಧತೆಯಿರಬೇಕಾದ್ದು ವಿದ್ಯಾರ್ಥಿಯ ಬಗ್ಗೆ, ಅನ್ನ ನೀಡುವ ಶಾಲೆಯ ಬಗ್ಗೆ. ಆದರೆ ಲಕ್ಷಗಟ್ಟಲೆ ಸುರಿದು ತಮ್ಮ ಪ್ರಭುತ್ವ ಸ್ಥಾಪಿಸಿ ಕೊಳ್ಳುವ ಪೋಷಕರಿಂದಾಗಿಯೂ ಶಿಕ್ಷಕನ ಬದ್ಧತೆ ಕ್ಷೀಣವಾಗುತ್ತದೆ.

ಯಾವುದಕ್ಕೂ ಹೆದರಬೇಕಾದ ಕಾಲದಲ್ಲೂ ಹಿಂದಿನ ತಲೆಮಾರಿನ ಶಿಕ್ಷಕರಲ್ಲಿ ಬದ್ಧತೆಯೆಂಬುದು ತರಗತಿಯಾಚೆಯೂ ಇತ್ತು. ತನ್ನ ವಿದ್ಯಾರ್ಥಿ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆಯಬೇಕೆಂಬ ಬದ್ಧತೆಯನ್ನು ಹಿಂದಿನವರು ಹೊಂದಿರುವುದರಿಂದ ಅಂಥ ಅಧ್ಯಾಪಕರಲ್ಲಿ ಕಲಿತ ಆ ತಲೆಮಾರಿನ ವಿದ್ಯಾರ್ಥಿಗಳಲ್ಲಿ ತಾವೆಷ್ಟೇ ದೊಡ್ಡ ಅಧಿಕಾರದಲ್ಲಿದ್ದರೂ ಇಂದಿಗೂ ತಮ್ಮ ಗುರುಗಳ ಮೇಲಿನ ಪ್ರೀತಿ, ಭಕ್ತಿ, ಗೌರವ, ಘನತೆಯೇನೂ ಕಡಿಮೆಯಾಗಲಿಲ್ಲ.

ಈಗಲೂ ಅವರ ಪಾಲಿಗೆ ಅಂದಿನ ಅಧ್ಯಾಪಕರು ಗುರುಗಳಾಗೇ ಇದ್ದಾರೆ. ಅವರೇನೇ ಹೇಳಿದರೂ, ಮಾಡಿದರೂ ಸರಿಯೆಂಬ ಧೋರಣೆ ಈ ಸಮಾಜದಲ್ಲಿ
ಆಗಲೂ ಇತ್ತು, ಈಗಲೂ ಇದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದಾಗ ಎರಡೆರಡು ಕಾರ್ಯಗಳನ್ನು ಒಬ್ಬನೇ ಶಿಕ್ಷಕ ನಿರ್ವಹಿಸಬೇಕಾದ ಸಂದರ್ಭ
ಗಳಲ್ಲಿ ಯಾವ ಬದ್ಧತೆಯನ್ನು ಶಿಕ್ಷಕರಿಂದ ನಿರೀಕ್ಷಿಸುವುದು ಸಾಧ್ಯ? ಖಾಸಗಿ ಶಾಲೆಗಳಲ್ಲಿ ಈ ಸಮಸ್ಯೆ ಇರಲಾರದು. ಇದ್ದರೆ ಪಾಲಕರು ಗಲಾಟೆ ಮಾಡುತ್ತಾರೆ. ಆದರೆ ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಪಾಲಕರು ಬಡವರಾಗಿರುತ್ತಾರೆ.

ಇಂಥ ಗಲಾಟೆಗೆ ಬರುವ ಧೈರ್ಯ ಅವರಲ್ಲಿರುವುದಿಲ್ಲ. ಕಾರಣ ಹಣದ ಮದವಿರುವುದಿಲ್ಲ. ಬದಲಿಗೆ ಊರವರೆಲ್ಲಾ ಸೇರಿ ಒಂದು ತೀರ್ಮಾನಕ್ಕೆ ಬಂದು ಸಂಬಂಧ ಪಟ್ಟ ಮೇಲಧಿಕಾರಿಗೆ ದೂರು ಕೊಡುತ್ತಾರೆ. ತನ್ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ಸರಕಾರಿ ಶಾಲೆಗಳಲ್ಲಿ ಕೊರತೆ, ಅವ್ಯವಸ್ಥೆ, ಅಧಿಕಾರದ ದರ್ಪ ಕಾಣುತ್ತ ದಾದರೆ, ಖಾಸಗಿ ಶಾಲೆಗಳಲ್ಲಿ ಬಾಸಿಸಂ ಮತ್ತು ಶೋಷಣೆ ಕಾಣುತ್ತದೆ. ಎಲ್ಲವೂ ಹಣದಿಂದಲೇ ಅಳೆಯುವ ಮನಸ್ಥಿತಿಯವರಿಗೆ ಕಲಿಕೆಯೆಂಬುದು ಈಗ ಹೇಳಿ ಇನ್ನೊಂದು ಗಳಿಗೆಯಲ್ಲಿ ನೂರಕ್ಕೆ ನೂರು ಅಂಕ ಬಂದು ಬಿಡಬೇಕು. ಬರಲು ಸಾಧ್ಯವೇ ಇಲ್ಲವೆಂದಾದರೆ ಹೇಗಾದರೂ ಮಾಡಿ ಬರಿಸಲೇಬೇಕೆಂಬ ಮನಸ್ಥಿತಿಯುಳ್ಳವರಲ್ಲಿ ಶಿಕ್ಷಕರ ಬಗ್ಗೆ ಯಾವ ಒಳ್ಳೆಯ ಭಾವನೆ ಇರಲು ಸಾಧ್ಯ? ತಮ್ಮ ಮಕ್ಕಳಿಗೆ ಕಲಿಸುವ ಶಿಕ್ಷಕನನ್ನು ತಮ್ಮ ಮಕ್ಕಳೆದುರೇ ಏಕವಚನದಲ್ಲಿ ಅಗೌರವದಿಂದ ಪ್ರಶ್ನಿಸುವ ಪಾಲಕರ ಮುಂದೆ ತನ್ನ ವೃತ್ತಿ ಬದ್ಧತೆಯನ್ನು ಶಿಕ್ಷಕ ಹೇಗೆ ಉಳಿಸಿಕೊಂಡಾನು? ಅವನೂ ಹಣಗಳಿಕೆಯ ಸುಲಭಮಾರ್ಗಕ್ಕೆ ಆತುಕೊಳ್ಳುತ್ತಾನೆ. ಆಗಲೇ ವೃತ್ತಿಬದ್ಧತೆ ಸಂಪೂರ್ಣವಾಗಿ ಸಾಯುವುದು. ಪರೋಕ್ಷವಾಗಿ ಇದು ಪರಿಣಾಮ ಬೀರುವುದು ಮಕ್ಕಳ ಕಲಿಕೆಯ ಮೇಲೆ. ಶಾಲೆಯ
ಮೇಲೆ. ಶಿಕ್ಷಣವ್ಯವಸ್ಥೆಯ ಮೇಲೆ.

ಯಾವ ಶಿಕ್ಷಕನೂ ವೃತ್ತಿಬದ್ಧತೆಯನ್ನು ಅಷ್ಟು ಸುಲಭವಾಗಿ ಕಳೆದುಕೊಳ್ಳಲಾರ. ಕಲಿಕೆಯಲ್ಲಿ ಕಳ್ಳಬುದ್ಧಿಯ ವಿದ್ಯಾರ್ಥಿಯಿರಬಹುದು, ಆದರೆ ಬೋಧನೆಯಲ್ಲಿ
ಕಳ್ಳಬುದ್ಧಿಯ ಶಿಕ್ಷಕನಿರಲಾರ. ಇದ್ದರೂ ಸಾವಿರಕ್ಕೊಂದು! ಸಿಲೆಬಸ್ ಮುಗಿಸಬೇಕು, ಪುನರಾವರ್ತನೆ ಮಾಡಿ ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸಬೇಕು, ತಾನು ಬೋಧಿಸುವ ವಿಷಯದಲ್ಲಿ ಉತ್ತಮ ಅಂಕಗಳನ್ನು ಮಕ್ಕಳಿಂದ ತೆಗೆಸಬೇಕು, ಪೋಷಕರಿಗೆ ಅವರ ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಹೇಳಬೇಕು, ತನ್ನ ಶಾಲೆಯು ಅತ್ಯುತ್ತಮ ಶ್ರೇಣಿಯಲ್ಲಿರಬೇಕೆಂಬ ಹಂಬಲದಲ್ಲೇ ಶೈಕ್ಷಣಿಕ ವರ್ಷದುದ್ದಕ್ಕೂ ಚಿಂತಿಸುವ ಶಿಕ್ಷಕರ ಬದ್ಧತೆಯನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ. (ಒಂದು ವಿಚಾರವನ್ನು ಇಲ್ಲಿ ಹೇಳಬೇಕು: ಒಬ್ಬ ವ್ಯಕ್ತಿಯ ಕಲಿಕೆಯ ಸಾಮರ್ಥ್ಯವು ಸುಮಾರು ಮೂವತ್ತು-ಮೂವತ್ತೈದು ವರ್ಷಗಳ ಅನಂತರ ಇಳಿಮುಖವಾಗುತ್ತಾ ಬರುತ್ತದೆ. ಆ ವಯಸ್ಸಿಗೆ ಬರುವಷ್ಟರಲ್ಲಿ ಒಂದು ಧೋರಣೆ ಅನುಭವ ಸಹಜವಾಗಿಯೇ ರೂಪುಗೊಂಡಿರುತ್ತದೆ.

ಆ ಮೇಲಿನ ಕಲಿಕೆಯಲ್ಲಿ ಮಾಹಿತಿಗಳ ಸಂಗ್ರಹದಲ್ಲಿ ವ್ಯತ್ಯಾಸವಾಗಬಹುದೇ ಹೊರತು ಧೋರಣೆಗಳಲ್ಲಲ್ಲ. ರೂಪಿತಗೊಂಡ ಧೋರಣೆಗಳಲ್ಲಿ ಕಾಣುವ ವ್ಯಕ್ತಿತ್ವಾಂಶಗಳು ವೃತ್ತಿಯ ಮೇಲೂ ಪರಿಣಾಮ ಬೀರುತ್ತವೆ. ಸಮಾಜದ ಆಲೋಚನೆಗಳು, ಸಂಬಳ, ಸ್ಥಾನಮಾನ, ನಡೆಸಿಕೊಳ್ಳುವ ರೀತಿ, ಜಾತೀಯತೆ, ಕೆಲಸಕ್ಕೆ ಸಿಗುವ ಗೌರವ, ಮೈಗಳ್ಳತನ- ಇವೆಲ್ಲವೂ ಶಿಕ್ಷಕರಾದ ಮೇಲೂ ವ್ಯಕ್ತಿತ್ವದ ಮೇಲೆ, ವೃತ್ತಿಯ ಮೇಲೆ ಪರಿಣಾಮ ಬೀರುವಂಥವು. ಅನಾವಶ್ಯಕವಾಗಿ ಶಿಕ್ಷಕರನ್ನು ಪ್ರತಿಯೊಂದಕ್ಕೂ ದೂಷಿಸುತ್ತಾ ಹೋದರೆ ತರಗತಿಯೊಳಗಿನ ಬೋಧನೆ-ಕಲಿಕೆಯ ವರ್ತನೆಗಳು ಅಂಥಾದ್ದೇನೂ ಪರಿಣಾಮವನ್ನು ಉಂಟು ಮಾಡಲಾರದು. ಇದು ಸಮಾಜಕ್ಕೆ, ದೇಶಕ್ಕೆ ವಿಹಿತವಲ್ಲಶಿಕ್ಷಕನಿಗೆ ಪರ್ಯಾಯ ವೆಂಬುದನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ, ಸಾಧ್ಯವಾಗುವುದೂ ಇಲ್ಲ) ಪರಿಸ್ಥಿತಿ, ಸಂದರ್ಭ, ಸನ್ನಿವೇಶಗಳು ಸೃಷ್ಟಿಸುವ ಬಿಕ್ಕಟ್ಟು, ಶಿಕ್ಷಣ ವ್ಯವಸ್ಥೆ, ಶೈಕ್ಷಣಿಕ ಆಡಳಿತ ನೀತಿಗಳು, ಮೆಲಧಿಕಾರಿಗಳ ಕಣ್ಣಿಗೆ ಗುರಿಯಾಗುವುದು, ಅವರ ಮರ್ಜಿಗೆ ಬಲಿಯಾಗುವುದು, ಶಿಕ್ಷಕರನ್ನು ಸಮಾಜ ನಡೆಸಿಕೊಳ್ಳುವ ಬಗೆಯಿಂದಾಗಿ ಶಿಕ್ಷಕನಲ್ಲಿ ವೃತ್ತಿಬದ್ಧತೆ ಮತ್ತು ಗೌರವ ಬಲಹೀನವಾಗುತ್ತದೆಯೇ ಹೊರತು ಅನ್ಯ ಕಾರಣಗಳಿಂದಲ್ಲ.

ಶಿಕ್ಷಣ ವ್ಯವಸ್ಥೆಯೇ ಶುದ್ಧ ವ್ಯವಹಾರದ ದೃಷ್ಟಿಯಲ್ಲಿ ಎಲ್ಲೆಡೆಯೂ ನಡೆಯುತ್ತಿರುವುದು ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವುದರಿಂದ ಶಿಕ್ಷಣವ್ಯವಸ್ಥೆ ಅಥವಾ ಶಿಕ್ಷಕರು ಅಂತಲ್ಲ, ಎಲ್ಲಾ ವಿಧದಲ್ಲೂ ವೃತ್ತಿಬದ್ಧತೆಯೆಂಬುದು ಮಾಯವಾಗುತ್ತಿದೆ. ಎಲ್ಲಿ ನೋಡಿದರೂ ಹೊಲಸು ರಾಜಕೀಯದ ಛಾಯೆಯೇ ಕಾಣುತ್ತಿರುವುದು ನಮ್ಮ ನಡುವಿನ ದುರಂತ.

ಕೊನೆಯ ಮಾತು: ಯುವಕನೊಬ್ಬ ತನ್ನ ಪ್ರಾಥಮಿಕ ಶಾಲಾ ಶಿಕ್ಷಕನನ್ನು ಮದುವೆಯಲ್ಲಿ ನೋಡಿದ. ಆ ಶಿಕ್ಷಕರು ಎಲ್ಲರ ಗೌರವ ಮತ್ತು ಮೆಚ್ಚುಗೆಗೆ ಪಾತ್ರ ರಾಗಿದ್ದವರು. ಅವನು ಅವರಿಗೆ ನಮಸ್ಕರಿಸುತ್ತಾ. ಟೀಚರ್, ನನ್ನ ನೆನಪಿದೆಯೇ? ಎಂದು ಕೇಳಿದ. ಶಿಕ್ಷಕ: ಇಲ್ಲಪ್ಪಾ, ದಯವಿಟ್ಟು ನಿಮ್ಮ ಪರಿಚಯವನ್ನು ನೀವೇ ಹೇಳಿ.

ವಿದ್ಯಾರ್ಥಿ: ನಾನು ಮೂರನೆಯ ತರಗತಿಯಲ್ಲಿ ನಿಮ್ಮ ವಿದ್ಯಾರ್ಥಿಯಾಗಿದ್ದೆ. ತರಗತಿಯಲ್ಲಿ ಒಬ್ಬ ಹುಡುಗನ ಕೈಗಡಿಯಾರವನ್ನು ಕದ್ದಿದ್ದೆ. ಆ ಕಥೆಯನ್ನು ನಿಮಗೆ ನೆನಪಿಸುತ್ತಿದ್ದೇನೆ ಅಷ್ಟೆ. ಆದರೆ ನಿಮಗೆ ಆ ಕಥೆ ನೆನಪಿದೆ ಎಂದು ನನಗೆ ಖಾತ್ರಿಯಿದೆ. ನನ್ನ ತರಗತಿಯ ಹುಡುಗನೊಬ್ಬ ಸುಂದರವಾದ ಗಡಿಯಾರವನ್ನು ಹೊಂದಿದ್ದ. ನಾನು ಅದನ್ನು ಕದ್ದೆ. ತನ್ನ ಕೈಗಡಿಯಾರವನ್ನು ಯಾರೋ ಕದ್ದಿದ್ದಾರೆ ಎಂದು ಅಳುತ್ತಾ ಅವನು ನಿಮ್ಮ ಬಳಿಗೆ ಬಂದ. ಎಲ್ಲ ವಿದ್ಯಾರ್ಥಿಗಳ ಜೇಬುಗಳನ್ನು ಹುಡುಕಲು ಅನುವಾಗುವಂತೆ ಎಲ್ಲರೂ ಎದ್ದು ನಿಲ್ಲುವಂತೆ ನೀವು ಹೇಳಿದಿರಿ. ನಾನು ಮಾಡಿದ ಕಳ್ಳತನವು ಎಲ್ಲರ ಮುಂದೆ ಬಹಿರಂಗಗೊಳ್ಳುತ್ತ ದೆಂದು ನಾನು ಹೆದರಿದೆ. ಎಲ್ಲರೂ ನನ್ನನ್ನು ಕಳ್ಳ-ಸುಳ್ಳುಗಾರ ಎಂದು ಕರೆಯುತ್ತಾರೆ. ಮತ್ತು ನನಗೆ ಆ ಪಟ್ಟ ಶಾಶ್ವತವಾಗಿ ಉಳಿದು ನನ್ನ ವ್ಯಕ್ತಿತ್ವ ಚೂರು ಚೂರಾಗುತ್ತದೆ ಎಂದು ಒಳಗೊಳಗೇ ಪರಿತಪಿಸತೊಡಗಿದ್ದೆ.

ಎಲ್ಲರೂ ಎದ್ದು ನಿಂತು ಗೋಡೆಗೆ ಮುಖ ಮಾಡಿ ನಮ್ಮ ಕಣ್ಣುಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ನೀವು ಹೇಳಿ, ಎಲ್ಲರ ಜೇಬನ್ನು ಹುಡುಕಲು ಆರಂಭಿಸಿದಿರಿ. ಆಗ ನಿಮಗೆ ನನ್ನ ಜೇಬಿನಿಂದ ಕೈಗಡಿಯಾರ ಸಿಕ್ಕಿದರೂ ಹುಡುಕಾಟವನ್ನು ಕೊನೆಯ ವಿದ್ಯಾರ್ಥಿಯವರೆಗೂ ಮುಂದುವರೆದಿರಿ. ಆಮೇಲೆ ನಮ್ಮ ಕಣ್ಣುಗಳನ್ನು ತೆರೆಯಲು ಹೇಳಿ ನಮ್ಮ ನಮ್ಮ ಜಾಗಗಳಲ್ಲಿ ಕುಳಿತುಕೊಳ್ಳಲು ಹೇಳಿದಿರಿ.

ಎಲ್ಲ ವಿದ್ಯಾರ್ಥಿಗಳ ಮುಂದೆ ನನ್ನ ಹೆಸರನ್ನು ಹೇಳುತ್ತೀರಿ ಎಂದು ನಾನು ಹೆದರುತ್ತಿದ್ದೆ. ಆದರೆ ನೀವು ಹಾಗೆ ಮಾಡದೆ ಕೈಗಡಿಯಾರವನ್ನು ಎಲ್ಲರಿಗೂ ತೋರಿಸಿ ಆ ಹುಡುಗನಿಗೆ ಹಿಂತಿರುಗಿಸಿದಿರಿ. ಗಡಿಯಾರ ಕದ್ದವನ ಹೆಸರನ್ನು ಎಲ್ಲರ ಮುಂದೆ ನೀವು ಹೇಳಲೇ ಇಲ್ಲ. ಕೊನೆಯವರೆಗೂ ಆ ವಿಚಾರವಾಗಿ ಒಂದು ಮಾತನ್ನೂ
ನನ್ನಲ್ಲಿ ನೀವು ಕೇಳಲಿಲ್ಲ, ಯಾರೊಂದಿಗೂ ಪ್ರಸ್ತಾಪಿಸಲಿಲ್ಲ. ನನ್ನ ಶಾಲಾ ಜೀವನದುದ್ದಕ್ಕೂ ಶಿಕ್ಷಕರು ಅಥವಾ ವಿದ್ಯಾರ್ಥಿಗಳು ಯಾರೂ ನಾನು ವಾಚ್ ಕದ್ದ ಬಗ್ಗೆ
ಮಾತನಾಡಲಿಲ್ಲ. ಆ ದಿನ ನೀವು ನನ್ನ ಮರ್ಯಾದೆಯನ್ನು ಉಳಿಸಿದಿರಿ.

ಟೀಚರ್, ನೀವು ನನ್ನನ್ನು ಹೇಗೆ ತಾನೆ ಮರೆಯಲು ಸಾಧ್ಯ? ನಾನು ನಿಮ್ಮ ವಿದ್ಯಾರ್ಥಿಯಾಗಿದ್ದೆ ಮತ್ತು ಈ ಕಥೆಯನ್ನು ನೆನಪಿಸಿಕೊಂಡಿದ್ದೀರಿ ಎಂದು ನನಗೆ
ಖಾತ್ರಿಯಿದೆ. ನಾನು ಗಡಿಯಾರವನ್ನು ಕದ್ದಿದ್ದು ಮತ್ತು ನೀವು ನನ್ನನ್ನು ಮುಜುಗರಕ್ಕೀಡು ಮಾಡದಿದ್ದುದು ಅವಿಸ್ಮರಣೀಯ. ಆಗ ಶಿಕ್ಷಕರು, ಆ ದಿನ ಗಡಿಯಾರ ವನ್ನು ಯಾರು ಕದ್ದಿದ್ದರೆಂದು ನನಗೆ ನೆನಪಿಲ್ಲ, ಏಕೆಂದರೆ ನಾನೂ ನನ್ನ ಕಣ್ಣುಗಳನ್ನು ಮುಚ್ಚಿಕೊಂಡು ನಿಮ್ಮೆಲ್ಲರ ಜೇಬುಗಳನ್ನು ಹುಡುಕಿದ್ದೆ. ವಾಚ್ ಸಿಕ್ಕಿತಾದರೂ ಯಾರು ಅಂತ ಗೊತ್ತಾಗಲಿಲ್ಲ. ಅವನನ್ನು ಕಂಡು ಹಿಡಿಯುವ ಆವಶ್ಯಕತೆಯೂ ನನಗಿರಲಿಲ್ಲ ಎಂದರು.

ಮುಂದಿನ ತಲೆಮಾರುಗಳನ್ನು ತಿದ್ದಲು ಶಿಕ್ಷಕರಿಗೆ ಸಹನೆ ಹಾಗೂ ಬುದ್ಧಿವಂತಿಕೆ ಬೇಕು. ನಮ್ಮ ಕ್ರಿಯೆಗಳ ಪರಿಣಾಮಗಳು ಮುಂದಿನ ತಲೆಮಾರುಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ದೂರದೃಷ್ಟಿ ಶಿಕ್ಷಕನಲ್ಲಿರಬೇಕು. ಮುಖ್ಯವಾಗಿ ವೃತ್ತಿ ಕಮಿಟೆಡ್ ಮನೋಧರ್ಮವಿರಬೇಕು