Saturday, 21st September 2024

ಮೂಳೆಸೂಜಿಯಿಂದ ಹಿಡಿದು ಸ್ಟೇಪ್ಲರ್‌ಗಳವರೆಗೆ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

nasomeshwara@gmail.com

ನಮ್ಮ ಪೂರ್ವಜರು ತಮ್ಮ ಶತ್ರುಗಳ ಜತೆಯಲ್ಲಿ ಹೊಡೆದಾಡುವಾಗ, ಪ್ರಾಣಿಗಳ ಜತೆಯಲ್ಲಿ ಹೋರಾಟವನ್ನು ನಡೆಸುವಾಗ, ಆಕಸ್ಮಿಕವಾಗಿ ಅಪಘಾತಗಳಾದಾಗ, ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗುತ್ತಿದ್ದವು. ಅಪರೂಪಕ್ಕೆ ನಮ್ಮ ಪೂರ್ವಜರು ಪ್ರಜ್ಞಾಪೂರ್ವಕವಾಗಿ ಶರೀರವನ್ನು ಛೇದಿಸಿ, ಕೆಲವು ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದರು.

ಉದಾ: ಕಪಾಲರಂಧ್ರನ. ಅಂತಹ ಸಂದರ್ಭಗಳಲ್ಲಿ ರಕ್ತಸ್ರಾವವು ವಿಪರೀತವಾಗುತ್ತಿತ್ತು. ಒಂದು ವೇಳೆ ರಕ್ತಸ್ರಾವವು ಹೇಗೋ ನಿಂತಿತು ಎಂದು ಭಾವಿಸೋಣ. ಆದರೆ ಗಾಯವು ಮಾತ್ರ ಬಾಯಿ ತೆರೆದುಕೊಂಡು, ಕೀವು ತುಂಬಿ ಗುಣವಾಗುವುದು ಕಷ್ಟವಾಗುತ್ತಿತ್ತು. ಇಂತಹ ತೆರೆದುಕೊಂಡಿರುವ ಸೀಳುಗಾಯಗಳಿಗೆ ಹೊಲಿಗೆಯನ್ನು ಹಾಕಿದರೆ, ಅವು ಬೇಗ ಗುಣವಾಗುತ್ತದೆ ಎನ್ನುವುದನ್ನು ನಮ್ಮ ಯಾವ ಪೂರ್ವಜರು ಕಂಡುಕೊಂಡರೋ ಅದು ನಮಗೆ ತಿಳಿದಿಲ್ಲ.

ಕ್ರಿ.ಪೂ.30000 ವರ್ಷಗಳಷ್ಟು ಹಿಂದಿನ ಕಾಲದ ಮೂಳೆಯಿಂದ ಮಾಡಿದ ಸೂಜಿಗಳನ್ನು ಅವರು ರೂಪಿಸಿ ಕೊಂಡರು. ಈ ಮೂಳೆಸೂಜಿಯ ಕೆಳಭಾಗದಲ್ಲಿ ಒಂದು ಕಣ್ಣು ಇತ್ತು. ಬಹುಶಃ ಯಾವುದೋ ಗಿಡದ ನಾರನ್ನು ದಾರವನ್ನಾಗಿ ಪೋಣಿಸಿ ಗಾಯವನ್ನು ಹೊಲಿದಿರಬೇಕು. ಗಿಡ ಮರಗಳ ಬಲವಾದ ಮುಳ್ಳುಗಳನ್ನೂ ಸಹ ಸೂಜಿಗಳನ್ನಾಗಿ ಬಳಸಿರುವ ಸಾಧ್ಯತೆಯಿದೆ. ಕ್ರಿ.ಪೂ.3300-1200ವರೆಗೆ ಕಂಚುಯುಗವು  ಕಾಣಿಸಿ ಕೊಂಡಿತು. ಹಾಗಾಗಿ ಈ ಅವಧಿಯಲ್ಲಿ ತಾಮ್ರ/ ಕಂಚಿನಿಂದ ಮಾಡಿದ ಸೂಜಿಗಳು ಬಳಕೆಗೆ ಬಂದವು.

ಈಜಿಪ್ಷಿಯನ್ ಸಂಸ್ಕೃತಿಯಲ್ಲಿ ಮೃತ ಗಣ್ಯರ ದೇಹವನ್ನು ಸಂರಕ್ಷಿಸುತ್ತಿದ್ದರು. ಉದರವನ್ನು ಛೇದಿಸಿ ಒಳಗಿರುವ ಕರುಳನ್ನೆಲ್ಲ ತೆಗೆದು, ನಂತರ ಸೀಳುಗಾಯಕ್ಕೆ ಹೊಲಿಗೆಯನ್ನು ಹಾಕಿ ಉದರವನ್ನು ಮುಚ್ಚುತ್ತಿದ್ದರು. ಕ್ರಿ.ಪೂ. 1600 ಕಾಲಕ್ಕೆ ಸೇರಿದ, ಎಡ್ವಿನ್ ಸ್ಮಿತ್ ಪ್ಯಾಪಿರಸ್ (ಈಜಿಪ್ಷಿಯನ್ನರು ಪ್ಯಾಪಿರಸ್ ಗಿಡದ ತಿರುಳನ್ನು ಬಳಸಿ ದಪ್ಪ ಕಾಗದವನ್ನು ತಯಾರಿಸಿ ಅದರ ಮೇಲೆ ಬರೆಯುತ್ತಿದ್ದರು) ಎಂದು ಹೆಸರಾಗಿರುವ ದಾಖಲೆಯು ದೊರೆತಿದೆ. ಇದರಲ್ಲಿ ಹುಬ್ಬಿನ ಮೇಲೆ ಸೀಳುಗಾಯವಿದ್ದರೆ, ಅದರ ಅಂಚನ್ನು ಹೊಂದಿಸಿ ಹೊಲಿಗೆಯನ್ನು ಹಾಕು ಎನ್ನುವ ಮಾರ್ಗದರ್ಶನವು ದೊರೆಯುತ್ತದೆ. ಹಾಗಾಗಿ ಈಜಿಪ್ಷಿಯನ್ ವೈದ್ಯರಿಗೆ ಗಾಯಗಳನ್ನು ಹೊಲಿಯುವ ಕಲೆಯು ಚೆನ್ನಾಗಿ ತಿಳಿದಿತ್ತು ಎನ್ನಬಹುದು.

ಭಾರತೀಯ ಆಯುರ್ವೇದದ ಅಷ್ಠಾಂಗಗಳಲ್ಲಿ ಶಲ್ಯತಂತ್ರವೂ ಒಂದು. ಸುಶ್ರುತ ಮಹರ್ಷಿಗಳು ನಾನಾ ವಿಧವಾದ ಲೋಹದಿಂದ ಮಾಡಿರುವ ಶಸ್ತ್ರಚಿಕಿತ್ಸಾ
ಉಪಕರಣಗಳನ್ನು ರೂಪಿಸಿದ್ದರು. ಹಾಗಾಗಿ ಸೂಜಿಗಳನ್ನೂ ಲೋಹದಿಂದಲೇ ಮಾಡಿರುತ್ತಿದ್ದರು. ಶಲ್ಯತಂತ್ರವು ಅಷ್ಟವಿಧ ಶಸ್ತ್ರಕರ್ಮಗಳನ್ನು (ಛೇದನ, ಭೇದನ, ಲೇಖನ, ವೇದನ, ಈಶಾನ, ಆಹರಣ, ವಿಶ್ರವಣ ಮತ್ತು ಸೀವನ) ಪ್ರಸ್ತಾಪಿಸುತ್ತದೆ. ಸ್ತ್ರೀನ ಎಂದರೆ ಹೊಲಿಯುವುದು. ಹಾಗಾಗಿ ಶಸ್ತ್ರಚಿಕಿತ್ಸೆಯು ಯಶಸ್ವಿ ಯಾಗಿ, ಗಾಯಗಳು ಸಕಾಲದಲ್ಲಿ ಗುಣವಾಗಬೇಕಾದರೆ, ಹೊಲಿಗೆಯ ತಂತ್ರವು ಬಹಳ ಮುಖ್ಯ ಎಂಬುದನ್ನು ಅವರು ಮನಗಂಡಿದ್ದರು.

ಹಾಗಾಗಿ ಆಯುರ್ವೇದ ಶಸ್ತ್ರವೈದ್ಯರು ಹೊಲಿಗೆ ಹಾಕುವುದನ್ನು ಕರಗತ ಮಾಡಿಕೊಳ್ಳಲೇಬೇಕಾಗಿತ್ತು, ಹೊಲಿಗೆಯನ್ನು ಹಾಕಲು ಸೂಕ್ಷ್ಮ ಸೂತ್ರ (ಹತ್ತಿಯ ದಾರ)
ಅಸ್ಮಂತಕ (ತೊಗಟೆಯ ನಾರು) ಕ್ಷುಮಸೂತ್ರ (ರೇಷ್ಮೆದಾರ) ಸಾನ (ಸೆಣಬಿನ ದಾರ) ಮೂರ್ವ ಸಸ್ಯದ ನಾರು, ಅಮೃತಬಳ್ಳಿಯ ನಾರು, ಪ್ರಾಣಿಗಳ ಕೂದಲು ಮತ್ತು ಪ್ರಾಣಿಗಳ ಕಂಡರ (ಟೆಂಡನ್) ಇತ್ಯಾದಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ದಾರವನ್ನಾಗಿ ಬಳಸುತ್ತಿದ್ದರು. ಜತೆಗೆ ಉದರ ಶಸ್ತ್ರಚಿಕಿತ್ಸೆಯನ್ನು ಮಾಡು ವಾಗ, ಛೇದಿಸಿದ ಕರುಳಿನ ಅಂಚುಗಳನ್ನು ನಿಖರವಾಗಿ ಹೊಂದಿಸಿ ಹೊಲಿಯಲು, ಕೆಂಜಿರುವೆಗಳ (ಈಸೋಫಿಲ್ಲ ಸ್ಮರಾಗ್ಡಿನ, ಈಸಿಟಾನ್ ಬರ್ಷೆಲ್ಲಿ) ಇರುವೆ ಗಳನ್ನು ಬಳಸುತ್ತಿದ್ದರು.

ಇವು ಆಧುನಿಕ ವೈದ್ಯಕೀಯದಲ್ಲಿ ಬಳಸುವ ಸ್ಟೇಪ್ಲರ್‌ಗಳನ್ನು ನೆನಪಿಗೆ ತರುತ್ತವೆ. ಈ ಇರುವೆಗಳಿಗೆ ಬಲವಾದ ದವಡೆಗಳಿರುತ್ತವೆ. ಅವು, ಛೇದಿಸಿದ ಕರುಳಿನ ಎರಡು ಅಂಚುಗಳನ್ನು ತಮ್ಮ ಬಲವಾದ ದವಡೆಗಳಿಂದ ಕಚ್ಚಿ ಹಿಡಿಯುತ್ತಿದ್ದವು. ಆಗ ವೈದ್ಯರು ಆ ಇರುವೆಯ ಕುತ್ತಿಗೆಯನ್ನು ಮುರಿಯುತ್ತಿದ್ದರು. ಕರುಳಿನ ಅಂಚುಗಳು ಸ್ವಸ್ಥಾನದಲ್ಲಿ ಉಳಿಯುತ್ತಿದ್ದವು. ಹಾಗಾಗಿ ತ್ವರಿತವಾಗಿ ಗುಣವಾಗುತ್ತಿದ್ದವು. ಇವುಗಳ ಜತೆಗೆ, ನಾನಾ ಸಂದರ್ಭಗಳಲ್ಲಿ ಹಾಕಬೇಕಾದ ನಾಲ್ಕು ಹೊಲಿಗೆಯ ತಂತ್ರಗಳ ವಿವರಣೆಯೂ ದೊರೆಯುತ್ತದೆ.

ಆಧುನಿಕ ವೈದ್ಯಕೀಯದ ಪಿತಾಮಹ, ಪ್ರಾಚೀನ ಗ್ರೀಸ್ ಸಾಮ್ರಾಜ್ಯದ ಗಣ್ಯ ವೈದ್ಯನಾದ ಹಿಪ್ರೋಕ್ರೇಟ್ಸ್ (ಕ್ರಿ.ಪೂ.460-ಕ್ರಿ.ಪೂ.370) ಮೊದಲು ಗಾಯವನ್ನು
ವಿನಿಗರ್, ವೈನ್ ಮತ್ತು ನೀರಿನಿಂದ ಗಾಯಗಳನ್ನು ತೊಳೆಯಬೇಕು; ಆನಂತರ ಗಾಯದ ಅಂಚುಗಳನ್ನು ಸರಿಹೊಂದಿಸಿ ಹೊಲಿಯಬೇಕೆಂದ. ಹೊಲಿಯುವ ಹಲವು ತಂತ್ರಗಳನ್ನು ರೂಪಿಸಿದ. ಐಲಿಯಸ್ ಗ್ಯಾಲನಸ್ / ಕ್ಲಾಡಿಯಸ್ ಗ್ಯಾಲನಸ್ / ಪೆರ್ಗಮಾನಿನ ಗ್ಯಾಲನ್ (ಕ್ರಿ. ಶ.129-ಕ್ರಿ.ಶ.210) ಗ್ರೀಕ್ ಮತ್ತು ರೋಮ್ ಸಾಮ್ರಾಜ್ಯದ ವೈದ್ಯ, ಶಸ್ತ್ರವೈದ್ಯ ಹಾಗೂ ದಾರ್ಶನಿಕ.

ಇವನು ಪ್ರಾಣಿಗಳ (ಕುರಿ, ಕುದುರೆ ಇತ್ಯಾದಿ) ಕರುಳಿನಲ್ಲಿರುವ ನಾರು ಅಂಗಾಂಶವನ್ನು ಹೊಸೆದು ದಾರವನ್ನು (ಬೀವು) ಮಾಡಿ, ಅದರಿಂದ ಗಾಯಗಳನ್ನು ಹೊಲಿಯಬಹುದೆಂದ. ಅಂದಿನ ದಿನಗಳಲ್ಲಿ, ವಿವಿಧ ತಂತಿವಾದ್ಯಗಳಲ್ಲಿ, ತಂತಿಯ ಸ್ಥಾನದಲ್ಲಿ ಇಂತಹುದೇ ಬೀವುಗಳನ್ನು ಬಳಸುತ್ತಿದ್ದರು. ಆಗ ಲೋಹದ
ತಂತಿಗಳು ಬಳಕೆಗೆ ಬಂದಿರಲಿಲ್ಲ. ಗ್ಲೇಡಿಯೇಟರ್‌ಗಳು ಕಾದಾಡುವಾಗ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗುತ್ತಿದ್ದವು. ಅವುಗಳನ್ನು ಕ್ಯಾಟ್‌ಗಟ್ ಎಂದು
ಮುಂದಿನ ದಿನಗಳಲ್ಲಿ ಪ್ರಸಿದ್ಧವಾಗಿ, ಇಂದಿಗೂ ಸೀಮಿತವಾಗಿ ಬಳಕೆಯಲ್ಲಿರುವ, ಬೀವುಗಳನ್ನು ಯಶಸ್ವಿಯಾಗಿ ಬಳಸಿ ಗಾಯಗಳನ್ನು ಹೊಲಿದ.

ಗ್ಯಾಲಿಯ ಪ್ರದೇಶದಿಂದ ರೇಷ್ಮೆಯ ದಾರವನ್ನು ಆಮದು ಮಾಡಿಕೊಂಡು ಅದರಿಂದಲೂ ಗಾಯಗಳನ್ನು ಹೊಲಿಯಲಾರಂಭಿಸಿದ. ನಂತರದ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿಯಿಂದ ಮಾಡಿದ ದಾರಗಳನ್ನು ಬಳಸಿ ಹೊಲಿಗೆಯನ್ನು ಹಾಕುವ ಪದ್ಧತಿಯು ಬಂದಿತು. ಚಿನ್ನ ಹಾಗೂ ಬೆಳ್ಳಿಯ ದಾರಗಳನ್ನು ಬಳಸಿದಾಗ, ಗಾಯ ಗಳು ಕೀವುಗಟ್ಟುವ ಸಾಧ್ಯತೆಯು ಕಡಿಮೆ ಇರುತ್ತಿತ್ತು. ಬ್ರಿಟನ್‌ನ ಶಸವೈದ್ಯನಾದ ಜೋಸೆ- ಲಿಸ್ಟರ್ (1827-1912) ಕ್ರಿಮಿರಹಿತ ಶಸ್ತ್ರಸಚಿಕಿತ್ಸೆಯನ್ನು ಜಾರಿಗೆ ತಂದ ಮಹಾನುಭಾವ. ಲೂಯಿ ಪ್ಯಾಶ್ಚರ್ ಬರೆದ ಪ್ರಬಂಧಗಳನ್ನು ಓದಿದಾಗ, ಅವನಿಗೆ ನಮ್ಮ ಬರಿಗಣ್ಣಿಗೆ ಕಾಣದ ರೋಗಜನಕಗಳ ಪರಿಚಯ ವಾಯಿತು.

ಈ ರೋಗಜನಕಗಳೇ ಗಾಯವು ಕೀತುಕೊಳ್ಳಲು ಕಾರಣವೆಂದು ತರ್ಕಿಸಿ, ಅವುಗಳನ್ನು ನಿಗ್ರಹಿಸಲು ಕಾರ್ಬಾಲಿಕ್ ಆಮ್ಲವನ್ನು ಬಳಸಿದ. ಹಾಗೆಯೇ
ಹೊಲಿಯಲು ಬಳಸುತ್ತಿದ್ದ ಸೂಜಿ, ದಾರ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳನ್ನೂ ಕಾರ್ಬಾಲಿಕ್ ಆಮ್ಲದಲ್ಲಿ ಮುಳುಗಿಸಿ, ಅವುಗಳನ್ನು ಬಳಸಿ ಶಸ್ತ್ರಚಿಕಿತ್ಸೆಗಳನ್ನು ಮಾಡಿದ. ಗಾಯಗಳು ಕಿತ್ತುಕೊಳ್ಳಲಿಲ್ಲ. ಅವು ಸಕಾಲದಲ್ಲಿ ಗುಣವಾಗುತ್ತಿದ್ದವು. 1887ರಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯು ದೊಡ್ಡ ಪ್ರಮಾಣದಲ್ಲಿ ಕ್ಯಾಟ್‌ಗಟ್ ಮತ್ತು ರೇಷ್ಮೆ ದಾರಗಳನ್ನು ಕ್ರಿಮಿಶುದ್ಧಿಗೊಳಿಸಿ (ಸ್ಟೆರಿಲೈಜ಼ೇಶನ್) ಶಸವೈದ್ಯರಿಗೆ ಪೂರೈಸಿದರು.

1912ರಲ್ಲಿ ಫ್ರೆಂಚ್ ಶಸ್ತ್ರವೈದ್ಯ ಅಲೆಕ್ಸಿಸ್ ಕ್ಯಾರಲ್ (1873-1944) ಸೂಕ್ಷ್ಮರಕ್ತನಾಳಗಳನ್ನು ಹೊಲಿಯುವ ತಂತ್ರವನ್ನು ರೂಪಿಸಿದನು. ಜತೆಗೆ ಪರ್ಫ್ಯೂಶನ್ ಪಂಪ್ ರೂಪಿಸಿದ ಕಾರಣ, ಅಂಗಗಳ ಬದಲಿ ಜೋಡಣೆಯ ಕನಸು ನನಸಾಯಿತು. ಈತನಿಗೆ ನೊಬೆಲ್ ಪಾರಿತೋಶಕವೂ ದೊರೆಯಿತು. 1920ರ ದಶಕದಲ್ಲಿ ಸ್ಕಾಟಿಶ್ ಫಾರ್ಮಸಿಸ್ಟ್ ಜಾರ್ಜ್ ಮೆರ್ಸನ್, ಮೊದಲ ಬಾರಿಗೆ ಕಣ್ಣಿಲ್ಲದ ಸೂಜಿಯನ್ನು ಬಳಕೆಗೆ ತಂದ. ಅಂದರೆ ಕಾರ್ಖಾನೆಯಲ್ಲಿಯೇ ಸೂಜಿಯ ಬುಡಕ್ಕೆ ದಾರ ವನ್ನು ಜೋಡಿಸಿರುತ್ತಿದ್ದರು. ಇವು ಒಂದು ಸಲ ಬಳಸಿ ಎಸೆಯುವಂತಹ ಸೂಜಿಗಳು. ಜತೆಗೆ ದಾರದ ಎಳೆ ಒಂದೇ ಇರುತ್ತಿತ್ತು.

ಶಸವೈದ್ಯರು ಗಾಯದ ಅಂಚುಗಳನ್ನು ಹೊಂದಿಸಿ ಹೊಲಿಯುವಾಗ, ಅಂಚುಗಳಿಗೆ ಹೆಚ್ಚು ಹಾನಿಯಾಗುತ್ತಿರಲಿಲ್ಲ. ಅವು ಬೇಗನೆ ಗುಣವಾಗುತ್ತಿದ್ದವು. 1960ರ ದಶಕದಲ್ಲಿ ವಿಕಿರಣವನ್ನು ಬಳಸಿ ಸೂಜಿ ಮತ್ತು ದಾರಗಳನ್ನು ಕ್ರಿಮಿಶುದ್ಧಗೊಳಿಸುವ ತಂತ್ರಜ್ಞಾನವನ್ನು ಎಥಿಕಾನ್ ಸಂಸ್ಥೆಯು ಜಾರಿಗೆ ತಂದಿತು. ವಿಕಿರಣ
ತಂತ್ರಜ್ಞಾನವು ಸೂಜಿ ಮತ್ತು ದಾರದಲ್ಲಿ ಒಂದೂ ರೋಗಜನಕವು ಇರದಂತೆ ಕ್ರಿಮಿಶುದ್ಧಗೊಳಿಸುತ್ತಿತ್ತು. ಇದರಿಂದ ಶಸ್ತ್ರಚಿಕಿತ್ಸೆಯ ನಂತರದ ಸೋಂಕುಗಳು
ಬಹುಪಾಲು ಕಡಿಮೆಯಾದವು. 1969ರಲ್ಲಿ ಸಂಯೋಜಿತ ಕ್ರಿಮಿಶುದ್ಧ ಹೊಲಿಗೆಯ ನೂಲುಗಳು (ಸಿಂಥೆಟಿಕ್ ಸ್ಟೆರೈಲ್ ಸ್ಯೂಚರ್) ಮಾರುಕಟ್ಟೆಗೆ ಬಂದವು. ಪ್ರೋಲಿನ್ ಎಂಬ ಮಾರುಕಟ್ಟೆಯ ಹೆಸರಿನ ಪಾಲಿಪ್ರೊಪಿಲೀನ್ ಹೊಲಿಗೆಯ ದಾರವನ್ನು ಬಳಸಿ ಬೈಪಾಸ್ ಸರ್ಜರಿಯಂತಹ ಗಂಭೀರ ಸ್ವರೂಪದ ಶಸ್ತ್ರಚಿಕಿತ್ಸೆ ಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಯಿತು.

ಇದು ಸುಲಭವಾಗಿ ಹರಿಯುತ್ತಿರಲಿಲ್ಲ. ಆದರೆ ಸಾಕಷ್ಟು ನಮ್ಯತೆಯನ್ನು (ಸ್ಟ್ರೆಚ್) ಉಳಿಸಿಕೊಂಡಿತ್ತು. ನಂತರ ವಿಕ್ರಿಲ್, ಮಾನೋಕ್ರಿಲ್, ಪಾಲಿಡಾಯಾಕ್ಸನೋನ್ ಮುಂತಾದ ಸಂಯೋಜಿತ ಹೊಲಿಗೆಯ ಎಳೆಗಳು ದೊರೆಯಲಾರಂಭಿಸಿದವು. ಈ ಹೊಸ ಹೊಲಿಗೆಗಳ ಜತೆಯಲ್ಲಿ ಟ್ರಿಕ್ಲೋಸಾನ್ ಎನ್ನುವ ಪ್ರತಿಜೈವಿಕ ಲೇಪಿತ (ಆಂಟಿಬ್ಯಾಕ್ಟೀರಿಯಲ್ ಸ್ಯೂಚರ್ಸ್)ಹೊಲಿಗೆಯ ನೂಲುಗಳೂ ಮಾರುಕಟ್ಟೆಗೆ ಬಂದು ಶಸ್ತ್ರಚಿಕಿತ್ಸಾ ಸೋಂಕನ್ನು ನಿಯಂತ್ರಿಸಿದವು. 1998ರ ಹೊತ್ತಿಗೆ ಶಸ್ತ್ರ ಚಿಕಿತ್ಸೆಯನ್ನು ಮುಗಿಸಿದ ಚರ್ಮವನ್ನು ಹೊಲಿಯುವ ಬದಲು ಒಂದು ಚರ್ಮ ಅಂಟುಪಟ್ಟಿಯನ್ನು (ಸ್ಕಿನ್ ಅಡೆಸಿವ್) ಅಂಟಿಸುವ ತಂತ್ರವು ಜನಪ್ರಿಯ ವಾಯಿತು.

ಸಯನೋ ಅಕ್ರಿಲೇಟ್ ಎಂಬ ಸೂಪರ್ ಗಮ್ ಒಳಗೊಂಡ ಈ ಅಂಟುಪಟ್ಟಿಯು ಕನಿಷ್ಠ 72 ಗಂಟೆಗಳವರೆಗೆ, ರೋಗಜನಕಗಳು ಗಾಯದ ಒಳಗೆ ಹೋಗದಂತೆ
ರಕ್ಷಣೆಯನ್ನು ಒದಗಿಸಲಾರಂಭಿಸಿದವು. 1908ರಲ್ಲಿ ಹಂಗರಿಯ ಶಸವೈದ್ಯ ಹ್ಯೂಮರ್ ಹುಲ್ಟ್ (1868-1940) ಹೊಲಿಗೆಯ ದಾರದ ಬದಲು ಲೋಹದ ಕೊಂಡಿಗಳನ್ನು (ಸ್ಟೇಪಲ್) ಬಳಸುವ ಪ್ರಸ್ತಾಪವನ್ನಿಟ್ಟ. ಆತನ ಪರಿಕಲ್ಪನೆಯು ಸೊಗಸಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವುದು ಅಷ್ಟು ಸುಲುಭ ವಾಗಿರಲಿಲ್ಲ. ಕೊನೆಗೆ ಎಥಿಕಾನ್ ಸಂಸ್ಥೆಯು ಛೇದಿಸಿದ ಚರ್ಮದ ಅಂಚುಗಳನ್ನು ಜೋಡಿಸಬಲ್ಲ ಸ್ಟೇಯಿನ್‌ಲೆಸ್ ಸ್ಟೀಲ್ ಮತ್ತು ಟೈಟೇನಿಯಂ ಸ್ಟೇಪಲ್ ಗಳನ್ನು ಮಾರುಕಟ್ಟೆಗೆ ಬಿಟ್ಟಿತು. ಪಾಲಿಗ್ಲೈಕಾಲಿಕ್ ಆಸಿಡ್ ಸ್ಟೇಪಲ್ಲುಗಳನ್ನು ಬಳಸಿ ಕರುಳು ಮುಂತಾದ ಒಳಾಂಗಗಳನ್ನೂ ಸ್ಟೇಪಲ್ ಮಾಡಬಹುದು.

ಈ ಸ್ಟೇಪಲ್ಲುಗಳು ಕಾಲಕ್ರಮೇಣ ಉದರದಲ್ಲಿಯೇ ಕರಗಿಹೋಗುತ್ತವೆ. ಹೊಲಿಗೆಯ ನೂಲು ಬೆಳೆದ ಬಂದ ದಾರಿಯು ಕುತೂಹಲಕರವಾದದ್ದು. ನಮ್ಮ ಪೂರ್ವಜರು ರೂಪಿಸಿದ ಹೊಲಿಗೆ ನೂಲುಗಳಲ್ಲಿ ಮುಖ್ಯವಾದದ್ದು ಬೀವು ಅಥವ ಕ್ಯಾಟ್‌ಗಟ್. ಜಗತ್ತಿನ ಕೆಲವು ದೇಶಗಳು ಇಂದಿಗೂ ಈ ಕ್ಯಾಟ್ ಗತ್ ಬಳಸುತ್ತಾರಾದರೂ ಯೂರೋಪ್ ಮತ್ತು ಜಪಾನ್ ದೇಶಗಳು ಇವನ್ನು ಸಂಪೂರ್ಣವಾಗಿ ನಿರ್ಬಂಽಸಿವೆ. ಇವನ್ನು ಪ್ರಾಣಿಗಳ ಕರುಳಿನಿಂದ ಮಾಡುವ
ಕಾರಣ, ಪ್ರಾಣಿಗಳ ಬೊವೈನ್ ಸ್ಪಾಂಜಿಫಾರಂ ಎನ್ಸೆಫಲೋಪಥಿ (ಮಿದುಳು ಸ್ಪಂಜಿನಂತೆ ತೂತುಬಿದ್ದು ಸಾವನ್ನು ತರುವ ರೋಗ) ನಮಗೂ ಅಂಟಿಕೊಳ್ಳ ಬಹುದೆಂಬ ಭೀತಿಯಿಂದ, ಮನುಕುಲವು ಈ ಹೊಲಿಗೆಗೆ ಶಾಶ್ವತ ವಿಶ್ರಾಂತಿಯನ್ನು ನೀಡಿದೆ.