Thursday, 19th September 2024

3ನೇ ವಿಮಾನದಲ್ಲಿ ಪೋಲೆಂಡ್‌ನಿಂದ 208 ಭಾರತೀಯರ ಆಗಮನ

ನವದೆಹಲಿ: ಪೋಲೆಂಡ್‌ನ ರ್ಜೆಸ್ಜೋವ್‌ನಿಂದ 208 ಭಾರತೀಯರೊಂದಿಗೆ ಭಾರತೀಯ ವಾಯು ಪಡೆಯ 3ನೇ ವಿಮಾನವು ಗುರುವಾರ ಹಿಂಡನ್ ವಾಯುನೆಲೆಗೆ ಬಂದಿಳಿದಿದೆ.

ಸಿ-17 ಮಿಲಿಟರಿ ಸಾರಿಗೆ ವಿಮಾನವು ದೆಹಲಿಗೆ ಬಂದಿಳಿದಿದ್ದು, ಯುದ್ಧ ಪೀಡಿತ ರಾಷ್ಟ್ರದಿಂದ ಹೊರ ಬಂದ ಭಾರತೀಯ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ ನಂತರ, ಉಕ್ರೇನ್‌ನಿಂದ ಸಿಲುಕಿ ರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಭಾರತ ಸರ್ಕಾರವು ‘ಆಪರೇಷನ್ ಗಂಗಾ’ವನ್ನು ಪ್ರಾರಂಭಿಸಿದೆ. ಪೋಲೆಂಡ್, ರೊಮೇನಿಯಾ, ಹಂಗೇರಿ ಮತ್ತು ಸ್ಲೋವಾಕಿಯಾ ಗಡಿ ದಾಟಿದ ಬಳಿಕ ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆತರಲಾಗುತ್ತಿದೆ. ವಿಶೇಷ ವಿಮಾನಗಳ ಮೂಲಕ ಉಕ್ರೇನ್‌ನಲ್ಲಿ ಇನ್ನುಳಿದ ಭಾರತೀಯರನ್ನು ಉಚಿತವಾಗಿ, ಸರ್ಕಾರದ ವೆಚ್ಚದಲ್ಲಿ ವಾಪಾಸ್‌ ಕರೆತರಲಾಗು‌ತ್ತದೆ.

ಹರ್ದೀಪ್ ಸಿಂಗ್ ಪುರಿ ಹಂಗೇರಿಯಲ್ಲಿದ್ದು, ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾದಲ್ಲಿ, ಕಿರಣ್ ರಿಜಿಜು ಸ್ಲೋವಾಕಿಯಾದಲ್ಲಿ ಮತ್ತು ವಿ ಕೆ ಸಿಂಗ್ ಪೋಲೆಂಡ್‌ನಲ್ಲಿದ್ದಾರೆ.