Saturday, 26th October 2024

ಬೆಂಗಳೂರು

ಕರೋನಾ ಕರ್ಫ್ಯೂನಿಂದ ತೊಂದರೆಗೀಡಾಗಿರುವ ರಾಜ್ಯದ ಕೈಗಾರಿಕಾ ವಲಯದ ಚೇತರಿಕೆಗೆ ಅಗತ್ಯ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳಲಿದೆ ಎಂದು *ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌* ಇಂದು ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳಿಗೆ ಭರವಸೆ ನೀಡಿದರು.

ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಚೇಂಬರ್‌ ಆಫ್‌ ಇಂಡಸ್ಟ್ರಿ & ಕಾಮರ್ಸ್‌ ಹಾಗೂ ಪೀಣ್ಯ ಕೈಗಾರಿಕಾ ಸಂಘದ ಪಧಾಧಿಕಾರಿಗಳು ಹಾಗೂ ಕೆಲವು ಕೈಗಾರಿಕೋದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಕಾರ್ಮಿಕರಿಗೆ ವೇತನ, ಲಾಕ್‌ ಡೌನ್‌ ನಿಂದಾಗಿ ಕೈಗಾರಿಕಾ ವಲಯಕ್ಕೆ ಆಗಿರುವ ತೊಂದರೆಗಳು ಹಾಗೂ ಅವುಗಳಿಂದ ಹೊರ ಬರಲು ರಾಜ್ಯ ಸರಕಾರದಿಂದ ಬೇಕಾದ ಸೌಲಭ್ಯಗಳ ಬಗ್ಗೆ ಕೈಗಾರಿಕೋದ್ಯಮಿಗಳು ಸಚಿವ ಜಗದೀಶ್‌ ಶೆಟ್ಟರ್‌ ಅವರ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಗದೀಶ್‌ ಶೆಟ್ಟರ್‌, ಕರೋನಾ ದಿಂದಾಗಿ ದೇಶ ಅಷ್ಟೇ ಅಲ್ಲದೆ ಇಡೀ ಜಗತ್ತೇ ತೊಂದರೆಯನ್ನು ಅನುಭವಿಸುತ್ತಿದೆ. ಇಂತಹ ಸಂಧರ್ಭದಲ್ಲಿ ಹಲವಾರು ವಲಯಗಳು ತೊಂದರೆಗೀಡಾಗುವುದು ಸಹಜ. ಕೈಗಾರಿಕಾ ಇಲಾಖೆಯ ಅಡಿಯಲ್ಲಿ ಈಗಾಗಲೇ ಕೆಲವು ನಿರ್ಭಂಧಗಳನ್ನು ಸಡಿಲಗೊಳಿಸುವ, ಅಗತ್ಯ ಕೈಗಾರಿಕೆಗಳು ಕಾರ್ಯಪ್ರಾರಂಭಿಸುವಂತೆ ಆದೇಶ ನೀಡಲಾಗಿದೆ. ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ನೌಕರರಿಗೆ ವೇತನ, ಸಾರಿಗೆ ಹಾಗೂ ಇನ್ನಿತರ ಸೌಲಭ್ಯಗಳ ಕುರಿತಂತೆ ಮನವಿಗಳನ್ನು ಸಲ್ಲಿಸಿದ್ದಾರೆ. ಈ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಅಲ್ಲದೆ, ಕೈಗಾರಿಕೆಗಳ ಚೇತರಿಕೆಗೆ ಬೇಕಾದ ಕ್ರಮಗಳು ಹಾಗೂ ಅನುಕೂಲತೆಗಳ ಬಗ್ಗೆ ರಾಜ್ಯ ಸರಕಾರ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಗೌರವ್‌ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಶ್ರೀಮತಿ ಗುಂಜನ್‌ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ* ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.