Thursday, 19th September 2024

ರಾಮಮಂದಿರದ ಗರ್ಭಗುಡಿಗೆ ಸಿಎಂ ಯೋಗಿ ಶಂಕುಸ್ಥಾಪನೆ

ಲಖನೌ: ಹಿಂದುಗಳ ದಶಕಗಳ ಕನಸಾದ ಅಯೋಧ್ಯೆ ರಾಮಮಂದಿರ ನಿರ್ಮಾಣ ಮಹತ್ವದ ಘಟ್ಟ ತಲುಪಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಗರ್ಭಗುಡಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಅಯೋಧ್ಯೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ ಮಂದಿರದ ಗರ್ಭಗುಡಿಯ ಮೊದಲ ಶಿಲೆಗೆ ಪೂಜೆ ಸಲ್ಲಿಸಿದರು.

ಮಂದಿರ ನಿರ್ಮಾಣದ ಹೊಣೆ ಹೊತ್ತ ರಾಮ ಜನ್ಮಭೂಮಿ ಟ್ರಸ್ಟ್, ದೇವಾಲಯದ ಗರ್ಭಗುಡಿಯನ್ನು ರಾಜಸ್ಥಾನದ ಮಖ್ರಾನಾ ಬೆಟ್ಟದಿಂದ ತರಿಸಲಾದ ಬಿಳಿ ಅಮೃತ ಶಿಲೆಯಿಂದ ನಿರ್ಮಾಣ ಮಾಡಲಾಗುವುದು. ಸುಮಾರು 13,300 ಕ್ಯೂಬಿಕ್ ಅಡಿ ಅಮೃತ ಶಿಲೆಯನ್ನು ಬಳಸಲಾಗುವುದು ಎಂದು ಹೇಳಿದೆ.

ದೇವಾಲಯದ ಗರ್ಭಗುಡಿಯ ನಿರ್ಮಾಣ ಕಾಮಗಾರಿಯು 2023ರ ಅಂತ್ಯದೊಳಗೆ ಹಾಗೂ ಇಡೀ ರಾಮಮಂದಿರದ ನಿರ್ಮಾಣ ಕಾಮಗಾರಿಯು 2024ರ ಅಂತ್ಯದೊಳಗೆ ಮುಕ್ತಾಯವಾಗಬಹುದು ಎನ್ನಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 2020ರಲ್ಲಿ ರಾಮಮಂದಿರದ ಭೂಮಿ ಪೂಜೆ ನಡೆಸಿ, ಶಂಕು ಸ್ಥಾಪನೆ ನೆರವೇರಿಸಿದ್ದರು.