Friday, 18th October 2024

ಆಲಮಟ್ಟಿ ಜಲಾಶಯ ಭರ್ತಿಗೆ 2 ಮೀಟರ್ ಬಾಕಿ

ವಿಜಯಪುರ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ (ಲಾಲ್ ಬಹದ್ದೂರ ಶಾಸ್ತ್ರಿ) ಜಲಾಶಯ ಭರ್ತಿಗೆ 2 ಮೀಟರ್ ಬಾಕಿಯಿದೆ. ಹೀಗಾಗಿ ಜಲಾಶಯದ 18 ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ.

ಅಣೆಕಟ್ಟೆಯಿಂದ 75,000 ಕ್ಯೂಸೆಕ್ ಹೊರಹರಿವು, 1,04,852 ಒಳಹರಿವಿದ್ದು ಜಲಾ ಶಯದಲ್ಲಿ 517.28 ಮೀಟರ್ ನೀರು ಸಂಗ್ರಹ ವಿದೆ. ಜಲಾಶಯದ ಮಟ್ಟ 519.60 ಮೀ. ಇದೆ. ಒಟ್ಟು ಜಲಾಶಯದ ನೀರಿನ ಸಂಗ್ರಹ ಮಟ್ಟ 123.08 ಟಿಎಂಸಿ ಇದ್ದು, ಇದೀಗ 87.992 ಟಿಎಂಸಿ ಸಂಗ್ರಹವಿದೆ.

ಇಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಹಾಗೂ ಉಪ ವಿಭಾಧಿಕಾರಿಗಳ ತಂಡ ಪ್ರವಾಹಪೀಡಿತ ಯಲಗೂರ ಗ್ರಾಮದ ನದಿಪಾತ್ರದ ಜಾಕವೆಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊರಹರಿವು ಹೆಚ್ಚಾದರೆ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು. ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆಯೂ ಸೂಚಿಸಿದರು.‌

ಮಳೆಯ ಪ್ರಮಾಣ: ಜಿಲ್ಲೆಯಲ್ಲಿ ನಿನ್ನೆ 2.02 ಮಿ.ಲೀ ಮಳೆಯಾಗಿದೆ.‌ ತಾಳಿಕೋಟೆ ತಾಲೂಕಿನಲ್ಲಿ ಅತಿ ಹೆಚ್ಚು 3.08 ಮಿ.ಮೀಟರ್‌ ನಷ್ಟು ಮಳೆಯಾಗಿದೆ. ಅತಿ ಕಡಿಮೆ ಇಂಡಿ ತಾಲೂಕಿನಲ್ಲಿ 0.56 ಮಿ.ಮೀಟರ್ ಮಳೆಯಾದರೆ, ದೇವರಹಿಪ್ಪರಗಿಯಲ್ಲಿ ಮಳೆ ಯಾದ ವರದಿ ಲಭ್ಯವಾಗಿಲ್ಲ. ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಮಳೆಯಿಂದ ಒಂದು ಮನೆ ಕುಸಿದು ಬಿದ್ದಿದೆ ಎಂದು ಜಿಲ್ಲಾಡಳಿತ ವರದಿ ನೀಡಿದೆ.