Monday, 28th October 2024

ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು

ಬಸವನಬಾಗೇವಾಡಿ: ಸರ್ಕಾರದ ಯೋಜನೆಗಳು ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ತಲುಪಬೇಕು. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
 ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ದಿ. ದೇವರಾಜ ಅರಸ ನಿಗಮದಿಂದ ಪ್ರತಿ ರೈತರಿಗೆ ರೂ. 2 ಲಕ್ಷದಂತೆ 16 ಜನ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಹಾಗೂ ಅದರ ಉಪಕರಣಗಳು, ತಾ.ಪಂ ಅಭಿವೃದ್ಧಿ ಅನುದಾನದಲ್ಲಿ ಅಂಗವಿಕಲರಿಗೆ ಟ್ರೈಸೈಕಲ್, ಕಂಪ್ಯೂಟರ್, ಸೋಲಾರ ಲ್ಯಾಂಪ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ನಿಗಮದಿಂದ ರೈತರ ಭೂಮಿಯಲ್ಲಿ ಕೊಳವೆಬಾವಿ ನಿರ್ಮಾಣದಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪ ರೈತರಿಂದ ಆರೋಪ ಕೇಳಿಬರುತ್ತಿದೆ. ಅವ್ಯವಹಾರ ಆದಲ್ಲಿ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿ ದರು.
ಗಂಗಾಕಲ್ಯಾಣ ಯೋಜನೆಯಲ್ಲಿ ರೈತರ ಜಮೀನಿನಲ್ಲಿ 500 ಅಡಿ ಕೊಳವೆಬಾವಿ ಕೊರೆದು ಸರ್ಕಾರದ ವರದಿಯಲ್ಲಿ 700 ರಿಂದ 800 ಅಡಿ ಕೊರೆಯಲಾಗಿದೆ ಎಂಬ ಮಾಹಿತಿ ಇದೆ. ತಕ್ಷಣವೇ ಈ 16 ಫಲಾನು ಬಾವಿಗಳ ಜಮೀನಿಗೆ ತೆರಳಿ ಕೊಳವೆಬಾವಿ ಎಷ್ಟು ಅಡಿ ಕೊರೆಯಲಾಗಿದೆ ಎಂಬ ಮಾಹಿತಿ ಸಂಗ್ರಹಿಸಿ ನನಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಮ್ಮ ಜಮೀನಿನಲ್ಲಿ 500 ರಿಂದ 600 ಅಡಿ ಕೊಳವೆ ಬಾವಿ ಕೊರೆಯಲಾಗಿದೆ. ಆದರೆ ಈಗ ಅಧಿಕಾರಿಗಳ ವರದಿಯಲ್ಲಿ 700 ರಿಂದ 800 ಅಡಿ ಕೊರೆಯಲಾಗಿದೆ ಎಂಬ ಮಾಹಿತಿ ಇದೆ ಎಂದು ಫಲಾನುಬಾವಿಗಳಾದ ಪರಸಪ್ಪ ಬಿದರಿ, ಶಾಂತಾಬಾಯಿ ಬಬಲೇಶ್ವರ, ಈರಮ್ಮ ಹಳಬರ ಸಭೆಯಲ್ಲಿ ಶಾಸಕರ ಗಮನಕ್ಕೆ ತಂದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚಲುವಯ್ಯ, ದಿ. ದೇವರಾಜ ಅರಸ ನಿಗಮದ ತಾಲ್ಲೂಕು ಸಹಾಯಕ ತಾಲ್ಲೂಕು ಸಹಾಯಕ ಅಧಿಕಾರಿ ಅನಿಲ ಕುಂಬಾರ, ವಿಶ್ವಕರ್ಮ ನಿಗಮದ ಸಹಾಯಕ ಪ್ರಶಾಂತ ಪತ್ತಾರ, ತಾ.ಪಂ ಅಧಿಕಾರಿಗಳಾದ ಎಸ್.ಬಿ. ಬಿರಾದಾರ, ಬಿ.ಎಸ್. ಬಡಿಗೇರ, ಅಪ್ಪು ದನಶೆಟ್ಟಿ, ಆರ್.ಪಿ. ಪಾಟೀಲ, ಎಸ್.ಡಿ. ಬಿರಾದಾರ, ಸುಮಿತ್ರಾ ದಡ್ಡಿ ಇದ್ದರು.
ಶಶಿಧರ ಪಾಟೀಲ ಸ್ವಾಗತಿಸಿದರು, ಶಿವಾನಂದ ಹೆರಕಲ್ಲ ಕಾರ್ಯಕ್ರಮ ನಿರೂಪಿಸಿದರು, ಎಸ್.ಎಂ. ಬಿಜ್ಜುರ ವಂದಿಸಿದರು.