Friday, 20th September 2024

ಗಣಿಧಣಿಗಳೆದುರು ಆತ ದಣಿಯಲಿಲ್ಲ, ಮಣಿಯಲೂ ಇಲ್ಲ!

ಸುಪ್ತ ಸಾಗರ

rkbhadti@gmail.com

ಅರಣ್ಯದಲ್ಲಿ ಅನಧಿಕೃತ ನಿರ್ಮಾಣವೆಂಬ ಆರೋಪ ಹೊರಿಸಿ ಜೋಹಾಡ್‌ಗಳನ್ನು ಒಡೆಯಲು ಆದೇಶ ಹೊರಡಿಸ ಲಾಯಿತು. ಜನ ಮತ್ತೆ ಸೆಟೆದು ದಿನಗಳು -‘ಕಲಿ’ಯುಗ ನಿಂತರು. ‘ಮರಗಳೇ ಇಲ್ಲದ ಜಾಗವನ್ನು ಅದು ಹೇಗೆ ಅರಣ್ಯವೆಂದು ಕರೆಯುತ್ತೀರಿ’ ಎಂಬ ಪಾಟೀ ಸವಾಲಿಗೆ ಸರಕಾರದ ಬಳಿ ಉತ್ತರವಿರಲಿಲ್ಲ.

ಅಂಥದ್ದೇನು ಹೊಸತಲ್ಲ. ಆ ಧನಪಿಶಾಚಿಗಳಿಗೆ ಹಾಗೆ ಅಮಾನವೀಯವಾಗಿ ಹತ್ಯೆ ಮಾಡುವುದು ದೊಡ್ಡ ಸಂಗತಿಯೂ ಅಲ್ಲ. ಮೂರ‍್ನಾಲ್ಕು ದಶಕಗಳಲ್ಲಿ ಅದೆಷ್ಟು ಪ್ರಾಮಾಣಿಕ ಜೀವಗಳನ್ನು ಅವರು ಹಾಗೆ ಹೊಸಕಿ ಹಾಕಿಬಿಟ್ಟಿದ್ದಾರೋ. ಕಳೆದ ವಾರ ಹರಿಯಾಣದ ಅರಾವಳಿ ಬೆಟ್ಟ ಪ್ರದೇಶದಲ್ಲಿ ಸಿನಿಮೀಯ ಘಟನೆಯೊಂದು ವರಿದಿಯಾಗಿ ದೇಶದೆಲ್ಲೆಡೆ ಸುದ್ದಿಯಾಗಿತ್ತು. ಗಣಿ ಅಕ್ರಮ ತಡೆಯಲು ಹೋದ ಡಿವೈಎಸ್ಪಿ ಸುರೇಂದ್ರ ಸಿಂಗ್ ಎಂಬುವವರನ್ನು ಹಾಡಹಗಲೇ ಟ್ರಕ್ ಹಾಯಿಸಿ ಹತ್ಯ ಮಾಡಲಾ ಯಿತು.

ಗಣಿಗಾರಿಕೆ ನಡೆಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ ಈ ಪ್ರದೇಶದಲ್ಲಿ ಸರಿಸುಮಾರು ನಲವತ್ತು ವರ್ಷಗಳಿಂದ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ. ಗಣಿ ಮಾಫಿಯಾದಲ್ಲಿ ಭಾಗಿಯಾಗಿರುವವರು ದೊಡ್ಡ ಬಂಡೆಗಳನ್ನು ಟ್ರಕ್‌ಗಳಲ್ಲಿ ತುಂಬಿಕೊಂಡು ಕ್ರಷರ್‌ಗಳಿಗೆ ಸಾಗಿಸುತ್ತಾರೆ.

ತಡರಾತ್ರಿ ಹಾಗೂ ಮುಂಜಾನೆ ಸಮಯದ ಇಂತಹ ಟ್ರಕ್‌ಗಳ ಓಡಾಟ ಹೆಚ್ಚಿರುತ್ತದೆ. ಇವರಿಗೆ ಕಾನೂನಿನ ಮೇಲೆ ಕಿಂಚಿತ್ತೂ ಭಯವಿಲ್ಲ. ಡಿವೈಎಸ್ಪಿ ಸುರೇಂದ್ರ ಅವರ ಹತ್ಯೆ ಇದಕ್ಕೆ ಇತ್ತೀಚಿನ ಸಾಕ್ಷಿ. ಹಾಘೆ ನೋಡಿದರೆ ಈ ಗಣ ಅಕ್ರಮದ ವಿರುದ್ಧದ
ಹೋರಾಟಕ್ಕೆ ಬಹು ಸುದೀರ್ಘ ಇತಿಹಾಸವೇ ಇದೆ. ಪರಿಸರ ಸೂಕ್ಷ್ಮ ಪ್ರದೇಶವಾದ ಅರಾವಳಿ ಬೆಟ್ಟದಲ್ಲಿ ಯಾವುದೇ ಬಗೆಯ ಗಣಿಗಾರಿಕೆ ನಡೆಸಬಾರದು ಎಂದು 2002ರಲ್ಲೇ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

೨೦೦೯ರಲ್ಲೂ ಈ ಸಂಬಂಧ ಆದೇಶ ಹೊರಡಿಸಿತ್ತು. ಆದರೆ ರಾಜಕೀಯ ಕೃಪಾಪೋಷಿತ ಗಣಿದಂಧೆಕೋರರರಿಗೆ ಇದ್ಯಾವುದರ ಪರಿವೆಯೂ ಇಲ್ಲ. ಇವತ್ತು ಅಂತಲೇ ಅಲ್ಲ, ಅರಾವಳಿ ಬೆಟ್ಟ ಸಾಲಿನಲ್ಲಿ ಇಂಥ ದರೋಡೆ ಸರಣಿಗೆ ಮೊದಲ ತಡೆಯೊಡ್ಡಿದವರು, ಭಾರತದ ಆಧುನಿಕ ಭಗೀರಥ ಎಂದೇ ಹೆಸರಾದ ರಾಜಸ್ಥಾನದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್. ಆ ಕಥೆ ಇವತ್ತಿಗೆ
ರೋಮಾಂಚಕಾರಿ ಎನಿಸುತ್ತದೆ. ಆದರೆ ಅವತ್ತು ಅವರೆದುರಿಸಿದ ಜೀವ ಬೆದರಿಕೆ, ಪಟ್ಟ ಪಾಡು ನೆನೆದರೆ ಭಯ ಅರವಿಲ್ಲದೇ ಆಕ್ರಮಿಸಿಕೊಳ್ಳುತ್ತದೆ. ನಿಜಕ್ಕೂ ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆಯೇ ಅಥವಾ ಗೂಂಡಾ ರಾಜ್ಯದಲ್ಲಿ ದ್ದೇವೆಯೇ ಎಂಬ ಪ್ರಶ್ನೆ ಮೂಡದಿರದು.

***
ಬರೋಬ್ಬರಿ ನಾಲ್ಕು ದಶಕಗಳ ಹಿಂದಿನ ಮಾತು. ಅದೊಂದು ದಿನ ರಾಜೇಂದ್ರ ಭಯ್ಯಾ, ಸಂಗಡಿಗರೊಂದಿಗೆ ಹೊರಟಿದ್ದರು. ಜೋಹಾಡ್‌ಗಳ ನಿರ್ಮಾಣ ಎಗ್ಗಿಲ್ಲದೇ ಸಾಗಿತ್ತು. ದಿನದಿಂದ ದಿನಕ್ಕೆ ಅವರು ಜನಪ್ರಿಯರಾಗುತ್ತಿದ್ದರು. ನೀರಿಗಾಗಿ ಶತಪ್ರಯತ್ನ ನಡೆಯುತ್ತಿತ್ತು. ಏನಾದರೂ ಮಾಡಿ ಹಳ್ಳಿಗರ ಬದುಕನ್ನು ಹಸನು ಮಾಡಲೇ ಬೇಕೆಂಬ ಹಠ ಕಟ್ಟಿ ಹೊರಟಿದ್ದರು. ಪ್ರಯತ್ನ ಆಂದೋಲನದ ಸ್ವರೂಪಪಡೆದುಕೊಂಡಿತ್ತು. ಜಲಚಳವಳಿಗೆ ಜನ ಬೆಂಬಲವೂ ಹೆಚ್ಚುತ್ತಿತ್ತು. ಭಯ್ಯಾರ ‘ತರುಣಬಾರತ
ಸಂಘ’ದ ಜೋಹಾಡ್ ನಿರ್ಮಾಣ ಬಾಯಿಂದ ಬಾಯಿಗೆ ಹಬ್ಬಿ ರಾಜೇಂದ್ರ ಸಿಂಗ್ ಬರಬರುತ್ತಾ ‘ಜೋಹಾಡ್ ಬಾಬಾ’ ಆಗಿಯೇ ಹೊರಹೊಮ್ಮಿದರು.

ಯಶಸ್ಸು ಸಹಜವಾಗಿಯೇ ವೈರಿಗಳನ್ನು ಸೃಷ್ಟಿಸುತ್ತದೆ. ಮತ್ತು ಅಂಥ ಯಶಸ್ಸಿಗೆ ವಾರಸುದಾದರೂ ಹಲವರು. ಭಯ್ಯಾರ ವಿಚಾರದಲ್ಲೂ ಇದು ಸುಳ್ಳಾಗಲಿಲ್ಲ. ಹಾಗೆ ಚಳವಳಿಯಲ್ಲಿ ಮುಳುಗಿಕೊಂಡೇ ಹೊರಟಿದ್ದ ಅವರಿಗೆ ಅದು ಮರು ಹುಟ್ಟಿನ ದಿನ. ಅವತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಎಂ.ಸಿ. ಜೈನ್‌ರವರು ಸರಿಸ್ಕ ಬೆಟ್ಟದ ತಪ್ಪಲಿನ ಗ್ರಾಮಗಳಿಗೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದರು.

ಆ ಭಾಗ(ಅದೂ ಅರಾವಳಿಬೆಟ್ಟ ಸಾಲೇ)ದಲ್ಲಿ ಮಿತಿ ಮೀರಿದ ಗಣಿಗಾರಿಕೆ ವಿರುದ್ಧದ ಮೊಕದ್ದಮೆಯ ಸಂಬಂಧದ ಪ್ರಕ್ರಿಯೆ ಅದು. ಆ ಭಾಗದ ಆಪದ್ಬಾಂಧವನೆನಿಸಿದ ರಾಜೆಂದ್ರಸಿಂಗ್ ಸಹಜವಾಗಿಯೇ ಜತೆಯಲ್ಲಿದ್ದರು. ಕಾರುಗಳ ಸರಣಿ ಮುಂದೆ ಸಾಗುತ್ತಿರುವಾಗಲೇ ಅದೆಲ್ಲಿಂದಲೋ ತೂರಿ ಬಂದ ಕಲ್ಲೊಂದು ಭಯ್ಯಾರಪಯಣಿ ಸುತ್ತಿದ್ದ ಕಾರಿಗೆ ಅಪ್ಪಳಿಸಿತು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಮೊದಲೇ ಕಲ್ಲು ತೂರಾಟ ಹೆಚ್ಚಿತು.

ಅಷ್ಟರಲ್ಲೇ ಅದೆಲ್ಲಿಂದಲೋ ಬಂದ ಬಾರೀ ವಾಹನವೊಂದು ಭಯ್ಯಾ ಕಾರಿಗೆ ಡಿಕ್ಕಿ ಹೊಡೆಯಿತು. ಅದೃಷ್ಟ ಭಯ್ಯಾರನ್ನು
ಉಳಿಸಿತ್ತು. ಅದು ಖಂಡಿತಾ ಆಕಸ್ಮಿಕವಲ್ಲ. ಮತ್ತೊಮ್ಮೆ ಜಿಲ್ಲಾಽಕಾರಿ ಹಾಗೂ ರಾಜಸ್ಥಾನ ಸರಕಾರದ ವನ್ಯಜೀವಿ ಇಲಾಖೆಯ ಮುಖ್ಯಸ್ಥ ವಿಷ್ಣುದತ್ತ ಶರ್ಮಾ ಅವರೆದುರೇ ಭಯ್ಯಾರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ಕಾರಿನಿಂದ ಭಯ್ಯ ರವರನ್ನು ಹೊರಗೆಳೆದ ದುಷ್ಕರ್ಮಿಗಳು ಅವರನ್ನು ಮನಬಂದಂತೆ ಥಳಿಸಿದರು.

ಸ್ಥಳದಲ್ಲೇ ಇದ್ದ ಅಧಿಕಾರಿಗಳೂ ಮೂಕಪ್ರೇಕ್ಷಕರಾದರು. ಹೀಗೆ ಮೂರು ಬಾರಿ ಅವರ ಹತ್ಯೆಯತ್ನ ನಡೆಯುತ್ತದೆ. ಇದು ಹಣಕ್ಕಾಗಿ ನಡೆದ ಯತ್ನವಂತೂ ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಸಮಾಜ ಸೇವೆಗೆ ಟೊಂಕಕಟ್ಟಿ ಹೊರಟಿದ್ದ ಫಕೀರನ ಬಳಿ ಹಣವೆಲ್ಲಿಂದ ಬರಬೇಕು? ರಾಜಕೀಯ ಉದ್ದೇಶವಿದ್ದರೂ ಅದಷ್ಟೇ ಆಗಿರಲಿಲ್ಲ. ಭಯ್ಯಾ ಇಂದಿಗೂ ಚುನಾವಣೆಯತ್ತ ಮುಖ ಮಾಡಿದವರಲ್ಲ. ಆ ವ್ಯವಸ್ಥೆಯ ಮೇಲೆ ಅವರಿಗೆ ನಂಬಿಕೆಯೂ ಇಲ್ಲ.

ಇನ್ನು ಕುಟುಂಬ ವೈಶಮ್ಯವೆನ್ನಲು ಮನೆಮಠವನ್ನೆಲ್ಲ ತೊರೆದುಬಂದು ಅದೆಷ್ಟೋ ವರ್ಷಗಳಾಗಿದ್ದವು. ಆದರೂ ಮೇಲಿಂದ ಮೇಲೆ ಅವರ ಹತ್ಯೆ ಯತ್ನಕ್ಕೆ ಇದ್ದ ಕಾರಣವಾದರೂ ಎಂಥದ್ದು? ಮತ್ತದೇ ಪಾರಿಸಾರಿಕ ಕಾರಣವದು. ಅಚ್ಚರಿಯಾದರೂ ಇದು ಸತ್ಯ. ಪರಿಸರ ನಾಶದ ವಿರುದ್ಧ ಇವರು ಮೊಳಗಿಸಿದ ಕಹಳೆ ಇವರ ವಿರುದ್ಧ ಯುದ್ಧ ಸಾರಲು ಕಾರಣವಾಯಿತು.

ತರುಣ ಭಾರತ ಸಂಘದ ಸದಸ್ಯರು ಸ್ಥಳೀಯರ ನೆರವಿನೊಂದಿಗೆ ಹಗಲೂ ರಾತ್ರಿ ಶ್ರಮಿಸಿ ಸರಿಸ್ಕ ಗುಡ್ಡದ ಸುತ್ತಮುತ್ತ ಸಾವಿರಾರು ಜೋಹಾಡ್‌ಗಳನ್ನು ನಿರ್ಮಿಸಿ ದರು. ರಾಜೇಂದ್ರ ಭಯ್ಯಾರದ್ದಂತೂ ಒಂದೇ ಮಂತ್ರ. ಜೋಹಾಡ್, ಜೋಹಾಡ್, ಜೋಹಾಡ್.

***
ಒಂದೇ ಒಂದು ದಶಕ, 5 ನದಿಗಳು, 650 ಹಳ್ಳಿಗಳು, 1200 ಜೋಹಾಡ್. ಇವು ಕೇವಲ ಅಂಕಿ ಸಂಖ್ಯೆಗಳಲ್ಲ. ರಾಜಸ್ಥಾನದ ಜೀವವಾಹಿನಿಯೊಂದರ ಪುನರುತ್ಥಾನಕ್ಕೆ ಸಾಕ್ಷಿಯಾಗಿ ದಾಖಲಾಗಿರುವ ಈ ಸಂಖ್ಯೆಗಳನ್ನು ಅಷ್ಟಕ್ಕೇ ಸೀಮಿತಗೊಳಿಸಲಾಗದು. ಇದರೊಂದಿಗೆ ಹಳ್ಳಿಗಳು ಚಿಗಿತುಕೊಂಡಿವೆ. ಬರಡು ಬದುಕು ಬೆಳಗಿದೆ. ಮುಗ್ಧ ಹಳ್ಳಿಗರ ಜ್ಞಾನ ಭಂಡಾರ ವಿಸ್ತರಣೆಯಾಗಿದೆ. ಮಾನವೀಯತೆ ಜಾಗೃತಗೊಂಡಿದೆ. ಸಂಘಟನೆ ಬಲಗೊಂಡಿದೆ.

ಕಮರಿ ಹೋಗಿದ್ದ ಕಾಡುಗಳು ಚಿಗುರಿವೆ. ಹೊಲಗದ್ದೆಗಳು ಹಸಿರಾಗಿವೆ. ಹಸಿದ ಹೊಟ್ಟೆಗಳು ತಣ್ಣಗಾಗಿವೆ. ಪರಂಪರೆಯ
ಮೌಲ್ಯ ವೃದ್ಧಿಸಿದೆ. ಸಂಸ್ಕೃತಿಯ ಗೌರವ ಇಮ್ಮಡಿಸಿದೆ…. ರಾಜಸ್ಥಾನದಲ್ಲಿ ಏನಾಗಿಲ್ಲ ಎಂಬುದನ್ನು ಕೇಳಬೇಕಷ್ಟೆ. ರಾಜೇಂದ್ರ ಸಿಂಗ್‌ರ ಯಶೋಗಾಥೆ ನೀರಿಗಷ್ಟೇ ಸೀಮಿತವಾಗಿದ್ದರೆ ಅವರನ್ನು ಈ ಮಟ್ಟದಲ್ಲಿ ಅಭಿಮಾನದಿಂದ ಹಳ್ಳಿಗರು ನೋಡುತ್ತಿರಲಿಲ್ಲ ವೇನೋ? 1980ರಲ್ಲಷ್ಟೇ ಕಪ್ಪು ಪ್ರದೇಶವೆಂದು ಘೋಷಣೆಯಾಗಿತ್ತು ತಾನಾಗಾಜಿ ಬ್ಲಾಕ್ ಪ್ರದೇಶ. ಸಿಂಗ್‌ಜಿ ತಂಡ ಕಾಲಿಟ್ಟದ್ದು ಇದಾದ ಐದು ವರ್ಷಗಳ ಬಳಿಕ. ಮತ್ತೈದು ವರ್ಷಗಳಲ್ಲಿ ಅದು ತನ್ನು ಕರಾಳ ಮುಖವನ್ನು ಕಳಚಿಟ್ಟು ಬೆಳ್ಳಗೆ ಬಯಲಾಯಿತು.

ಹಾಲು ಮತ್ತದರ ಉತ್ಪನ್ನಗಳೇ ಇಲ್ಲಿನ ಅತಿಮುಖ್ಯ ಜೀವನಾಧಾರವಾಗಿತ್ತು. ಊರಿಗೆ ಊರೇ ಬರಗಾಲದಿಂದ ಕರಕಲಾಗಿ ಹೋಗಿ ದ್ದಾಗ ನೀರು ಹುಡುಕಿಕೊಂಡು ಹೋದ ಜಾನುವಾರುಗಳು ಒಣಗಿದ ನದಿಯ ಒಡಲ್ಲಲೇ ಅಸ್ಥಿ ಪಂಜರವಾಗಿ ಬೀಳ ತೊಡಗಿದ್ದವು. ಒಂದು ಕಾಲದಲ್ಲಿ ಇಡೀ ರಾಜ್ಯಕ್ಕೆ ಹಾಲಿನ ಹೊಳೆ ಹರಿಸುತ್ತಿದ್ದ ತಾನಾಗಾಜಿಯಲ್ಲಿ ಹಾಲಿರಲಿ, ಬಿಂದು ನೀರಿಗೂ ಸಂಘರ್ಷ ಗಳಾಗಲು ತೊಡಗಿತ್ತು. ಐದು ವರ್ಷಗಳ ಸತತ ಪ್ರಯತ್ನದ ಬಳಿಕ ಗುಡ್ಡಗಳಲ್ಲಿ ಮೇವು ಚಿಗುರೊಡೆಯಿತು.

ನದಿಯಂಚಿನಲ್ಲಿ ಗರಕೆಯ ಮಾದರಿಯ ಹುಲ್ಲುಗಳು ಬೆಳೆದವು. ಹೊಲ ಹದವಾಯಿತು. ಮತ್ತೆ ಜಾನುವಾರುಗಳು ಮೈದುಂಬಿ
ಕೊಂಡವು. ವಲಸೆ ಹೋಗಿದ್ದ ಮಂದಿ ಮತ್ತೆ ಬಂದು ಜಾನುವಾರುಗಳ ವಾಗಾಯ್ತಿಗೆ ನಿಂತರು. ಕೆನೆವಾಲ ಸವಿ ಮೊದಲಿಗಿಂತಲೂ ಈಗ ಹೆಚ್ಚಾಗಿತ್ತು. ದೇಶದ ಅತ್ಯಂತ ದೊಡ್ಡ ಮರಳುಗಾಡು, ಕೇವಲ 500 ರಿಂದ 570 ಮಿಲಿಮೀಟರ್ ಮಳೆ ಪಡೆಯುವ ರಾಜಸ್ಥಾನದ ರೂಪಾರೆಲ್, ಅರಾವರಿ, ಜಹಜವಾಲಿ, ಸರಸಾ ಮತ್ತು ಭಗನಿಯರು ಮತ್ತೆ ಪ್ರತ್ಯಕ್ಷರಾಗಿ ನಲಿದಾಡತೊಡಗಿದ್ದು ಕೇವಲ ಮಳೆ ನೀರ ಸಂರಕ್ಷಣೆಯಿಂದ ಅಂದರೆ ಜಗತ್ತೇ ಮೂಗಿನ ಮೇಲೆ ಬೆರಳಿಡುತ್ತದೆ. ಆದರಿದು ಸತ್ಯ.

ನಿಸರ್ಗವನ್ನು ಅದರಷ್ಟಕ್ಕೆ ಅದು ಇರುವಂತೆ ನೀಡಿದ ಸ್ವಾತಂತ್ರ್ಯ, ಅರಣ್ಯ ಪರಿಸರದಲ್ಲಿ ನಿರ್ಬಂಧಿಸಿದ ಮಾನವನ ಹಸ್ತಕ್ಷೇಪ ಹಾಗೂ ಮಳೆ ನೀರಿನ ಓಟಕ್ಕೆ ಹಾಕಿದ ತಡೆ ಇವಿಷ್ಟೇ ತಮ್ಮ ಯಶಸ್ಸಿನ ಗುಟ್ಟು ಎನ್ನುವ ರಾಜೇಂದ್ರ ಭಯ್ಯಾ ‘ನಾವು ಕೆಲಸ ಮಾಡಲಾರಂಭಿಸಿದ ಕೇವಲ ಐದು ವರ್ಷಗಳಲ್ಲಿ 36 ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲದ ಮಟ್ಟ 6 ಮೀಟರ್‌ಗಳಷ್ಟು ಏರಿತ್ತು. 100 ರು. ಖರ್ಚು ಮಾಡಿ ಕಟ್ಟಿದ ಜೋಹಾಡ್‌ಗಳು 400 ರು. ಉತ್ಪನ್ನವನ್ನು ಮರಳಿ ಕೊಡಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಊರಿನ ಹೆಣ್ಣು ಮಕ್ಕಳಿಗೆ ಶಾಲೆಗೆ ಹೋಗಲು ಸಮಯ ಮಿಗಲಾರಂಭಿಸಿತು…’ಎನ್ನುವಾಗ ಸಿಂಗ್‌ಜಿ ಕಣ್ಣಲ್ಲಿ ಕೋಲ್ಮಿಂಚು.

‘ಸರಕಾರಿ ದಾಖಲೆಗಳ ಅಂಕಿ ಅಂಶಗಳಿಗಾಗಿ ನಾವು ಕೆಲಸ ಮಾಡಿರಲಿಲ್ಲ. ಟೆಂಡರ್ ಕರೆದು ಗುತ್ತಿಗೆ ಕೊಡುವ ಪ್ರಮೇಯ ನಮಗಿರ ಲಿಲ್ಲ. ಪ್ರತಿ ಜೋಹಾಡ್ ಕಟ್ಟಲು ಆರಂಭಿಸಿದಾಗಲೂ, ನೀರಿನ ಕೊನೇಯ ಬಳಕೆದಾರ ಕಾಮಗಾರಿಯ ಮುಂಚೂಣಿ ಯಲ್ಲಿರು ತ್ತಿದ್ದ. ಡೆಡ್‌ಲೈನ್ ನೊಳಗೆ ಟಾಗೇಟ್ ರೀಚ್ ಮಾಡುವ ಹಂಬಲಕ್ಕಿಂತ ಅಲ್ಲಿ ನೊಂದ ಜೀವದ ನೋವಿನ ದುಡಿಮೆ ಯಿತ್ತು. ಹೀಗಾಗಿ ಐದೂ ನದಿಗಳು ಪುನರ್ಜನ್ಮ ಪಡೆದವು. ವಿಶೇಷ ಗೊತ್ತೇ ನದಿಗಳಿಗೆ ಪುನರ್ಜನ್ಮ ಕೊಡುವುದು ನಮ್ಮ ಉದ್ದೇಶವೇ ಆಗಿರಲಿಲ್ಲ. ಹಾಗೊಂದು ನಿರೀಕ್ಷೆಯೂ ಇರಲಿಲ್ಲ. ಆದರೆ ಜೋಹಾಡ್‌ಗಳು ತಲೆ ಎತ್ತಿದಂತೆಲ್ಲ, ಅರಣ್ಯ ಭೂಮಿ
ಹಸಿರಾದಂತೆಲ್ಲ ನದಿಯಲ್ಲಿ ತನ್ನಿಂದ ತಾನೇ ಹರಿವು ಆರಂಭವಾಯಿತು.

1995ರ ನಂತರ ರೂಪಾರೆಲ್ ಸೇರದಂತೆ ಯಾವ ನದಿಗಳೂ ಮತ್ತೆ ಬತ್ತಲೇ ಇಲ್ಲ. ಈ ವರ್ಷಕ್ಕೆ ಅದಕ್ಕೆ ಇನ್ನೂ ಎರಡು ಹೆಚ್ಚುವರಿ ನದಿಗಳು ಸೇರಿಕೊಂಡಿವೆ. ಒಟ್ಟು ಏಳು ನದಿಗಳು ನಮ್ಮ ಕಾರ್ಯದಿಂದ ಹೆಮ್ಮೆಯಿಂದ ತುಂಬಿ ಹರಿಯುತ್ತಿವೆ…’ ಭಯ್ಯಾ ಹೇಳುತ್ತಾ ಸಾಗುತ್ತಾರೆ. ಆದರೆ ಅಷ್ಟೇ ಸುಲಭದಲ್ಲೇನೂ ಕೆಲಸ ನಡೆದದ್ದಲ್ಲ. ಯಶಸ್ಸಿಗೆ ಅಪ್ಪಂದಿರು ಹತ್ತಾರು ಎನ್ನುವ ಮಾತು ಕನ್ನಡದಲ್ಲಿ ಜನಜನಿತ. ನೀರಿನ ಹಾಹಾಕಾರ ಎದ್ದಾಗ ಇತ್ತ ತಲೆ ಹಾಕಿ ನೋಡದ ನೀರಾವರಿ ಇಲಾಖೆ ಜೋಹಾಡ್‌ಗಳು ತುಂಬಿ ನಿಂತಾಗ ಇದು ತಮ್ಮ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ನೀರಿನ ಬಳಕೆಗೆ ಅನುಮತಿ ಅಗತ್ಯ ಎಂಬ ಬಾಲಿಶ ಆದೇಶ ಹೊರಡಿಸಿತ್ತು. ರೈತರು ಆದೇಶಕ್ಕೆ ಸಡ್ಡು ಹೊಡೆದು ನಿಂತರು. ಬೋಳು ಬೆತ್ತಲಾದ ಗುಡ್ಡಗಳಲ್ಲಿ ಸಸಿ ಚಿಗುರುವವರೆಗೆ ಸುಮ್ಮನಿದ್ದ ಅರಣ್ಯಾಧಿಕಾರಿಗಳು, ನಂತರದ ದಿನಗಳಲ್ಲಿ ಅರಣ್ಯ ಪ್ರದೇಶದ ಅತಿಕ್ರಮಣದ ಮೊಕದ್ದಮೆಯನ್ನು ದಾಖಲಿಸಿದರು. ಗ್ರಾಮ ಸಭೆ ಸದಸ್ಯರು ದಂಗೆ ಎದ್ದು ಕೋರ್ಟ್ ಮೆಟ್ಟಿಲೇರಿದರು.

ಇವತ್ತು ರಕ್ಷಾಬಂಧನದ ದಿನ ಊರವರು ಸಾಮೂಹಿಕವಾಗಿ ಅರಣ್ಯಕ್ಕೆ ಹೋಗಿ ಹಬ್ಬಾಚರಣೆ ಮಾಡಿ ಒಬ್ಬೊಬ್ಬರು
ಒಂದೊಂದು ಮರಕ್ಕೆ ರಕ್ಷೆ ಕಟ್ಟಿ ಬರುತ್ತಿದ್ದಾರೆ. ಹೀಗೆ ಅನೂಹ್ಯ ಒಡನಾಟವನ್ನು ಪ್ರಕೃತಿಯೊಂದಿಗೆ ಅಲ್ಲಿನ ಜನ ಬೆಳೆಸಿಕೊಂಡಿ ದ್ದರ ಫಲವಾಗಿ ಶೇ.66ರಷ್ಟು ಅರಣ್ಯ ಪ್ರದೇಶ ಮತ್ತೆ ಊರ್ಜಿತಗೊಂಡಿದೆ. ಅರಣ್ಯದಿಂದ ಯಾವುದೇ ಉತ್ಪನ್ನವನ್ನು ಊರಿಗೆ ತರಲು ಅಲ್ಲಿ ಗ್ರಾಮಸಭೆಯ ಪೂರ್ವಾನುಮತಿ ಅಗತ್ಯ. ಒಣಗಿದ ಕಟ್ಟಿಗೆ, ತರಗೆಲೆಯ ಹೊರತಾಗಿ ಬೇರೇನನ್ನೂ ಅಲ್ಲಿಂದ ಹೊತ್ತು ತರುವಂತಿಲ್ಲ. ಹಸಿ ಹುಲ್ಲು ಕೊಯ್ದು ತಂದರೂ ದಂಡ ವಿಧಿಸಲಾಗುತ್ತದೆ. ಇದೆಲ್ಲ ಸರಕಾರ ಜಾರಿಗೆ ತಂದ ನಿಯಮಗಳೇನೂ ಅಲ್ಲ.

ಗ್ರಾಮಸ್ಥರು ತಾವೇ ಕೈಗೊಂಡ ಪ್ರತಿಜ್ಞೆ. ಇನ್ನೂ ವಿಶೇಷವೆಂದರೆ ತಪ್ಪು ಮಾಡಿದಾತ ತಾನೇ ಅದನ್ನು ಒಪ್ಪಿಕೊಂಡರೆ ಶಿಕ್ಷೆ, ದಂಡದ ಪ್ರಮಾಣ ಕಡಿಮೆ, ಗ್ರಾಮ ಸಭೆಯ ಗಮನಕ್ಕೆ ಬಂದು, ಇಲ್ಲವೇ ಬೇರೆಯವರ ದೂರಿನಿಂದ ತಪ್ಪು ಬಯಲಾದರೆ ಶಿಕ್ಷೆ ಇಮ್ಮಡಿ. ಜಲ್- ಜಂಗಲ್- ಜಮೀನ್ ಗಳ ಸಂಬಂಧ ಈಗ ಅಲ್ಲಿನ ಗ್ರಾಮಸ್ಥರಿಗೆ ಮನವರಿಕೆಯಾಗಿದೆ. ನದಿಗಳು ತುಂಬಿ ಹರಿಯ ತೊಡಗಿದಾಗ ಅಲ್ಲಿ ಮೀನುಗಳು ಸಮೃದ್ಧವಾದವು. ಒಮ್ಮೆ ಸರಕಾರ ಇಲ್ಲಿ ಮೀನುಗಾರಿಕೆ ನಡೆಸಲು ಟೆಂಡರ್ ಆಹ್ವಾನಿಸಿತು.

ಜನ ಕೂಡಲೇ ಎಚ್ಚೆತ್ತರು. ಮೀನುಗಾರಿಕೆಯ ಗುತ್ತಿಗೆ ಪಡೆದ ನಗರದ ಶ್ರೀಮಂತ ನದಿಯ ಬುಡಕ್ಕೆ ಬಂದಾಗ ಆತನಿಗೆ ಊರವರೆಲ್ಲ ಸೇರಿ ಘೇರಾವು ಹಾಕಿದರು. ಹಕ್ಕಿನ ವಿಚಾರದಲ್ಲಿ ಸಂಘರ್ಷ ಆರಂಭವಾಯಿತು. ನಾವು ಜೀವಂತವಾಗಿಸಿದ  ನದಿಯಲ್ಲಿ ಮೀನು ಹಿಡಿಯಲು ಯಾರಿಗೂ ಹಕ್ಕಿಲ್ಲ ಎಂಬ ಘೋಷಣೆಯೊಂದಿಗೆ ಜನ ಕಾವಲಿಗೆ ನಿಂತರು. ಸರಕಾರ ಬಲ ಪ್ರಯೋಗಕ್ಕೆ ನಿಂತಿತು. ಮೊಕದ್ದಮೆ ದಾಖಲಿಸಿ ಕೋರ್ಟ್‌ಗೆ ಎಳೆಯಿತು. ಹಳ್ಳಿಗರು ಸುಮ್ಮನಾಗಲಿಲ್ಲ. ಕೋರ್ಟ್‌ಗೆ ಜನ
ಮನವರಿಕೆ ಮಾಡಿಕೊಟ್ಟರು. ಸರಕಾರ ದಾಖಲೆ ಸಲ್ಲಿಸುವಲ್ಲಿ ವಿಫಲವಾಯಿತು.

ಜನಾಂದೋಲನಕ್ಕೆ ಜಯ ಸಿಕ್ಕಿತ್ತು. ಅಧಿಕಾರಿಗಳ ದ್ವೇಷ ಹೊಗೆಯಾಡತೊಡಗಿತು. ಅರಣ್ಯ ಪ್ರದೇಶದಲ್ಲಿ ಅನಧಿಕೃತ ನಿರ್ಮಾಣವೆಂಬ ಆರೋಪ ಹೊರಿಸಿ ಜೋಹಾಡ್‌ಗಳನ್ನು ಒಡೆಯಲು ಆದೇಶ ಹೊರಡಿಸಲಾಯಿತು. ಜನ ಮತ್ತೆ ಸೆಟೆದು ನಿಂತರು. ‘ಮರಗಳೇ ಇಲ್ಲದ ಜಾಗವನ್ನು ಅದು ಹೇಗೆ ಅರಣ್ಯವೆಂದು ಕರೆಯುತ್ತೀರಿ’ ಎಂಬ ಪಾಟೀ ಸವಾಲಿಗೆ ಸರಕಾರದ ಬಳಿ ಉತ್ತರವಿರಲಿಲ್ಲ. ಸಮುದಾಯದ ಆಸ್ತಿಯಾಗಿದ್ದ ಗುಡ್ಡಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿ ಅಕ್ರಮವೆಸಗಿದ್ದು ಸರಕಾರವೇ
ಎಂಬ ದಿಟ್ಟ ವಾದದೊಂದಿಗೆ ಸುಪ್ರೀಂ ಕೋರ್ಟ್‌ವರೆಗೂ ಹೋರಾಟ ನಡೆಯಿತು. ಸುದೀರ್ಘ ಹೋರಾಟದ ನಡುವೆಯೇ ಸ್ವಯಂಸೇವಕರ ಮೇಲೆ ನಡೆದ ಹಲ್ಲೆ, ಕೊಲೆ ಯತ್ನ, ಅತ್ಯಾಚಾರ ಆರೋಪ… ಇತ್ಯಾದಿ ಯಾವುದಕ್ಕೂ ಜನ ಬಗ್ಗಲಿಲ್ಲ. ಗಣಿ ಉದ್ಯಮಿಗಳ ಬೆದರಿಕೆಗಳಿಗೆ, ಆಮಿಷಗಳಿಗೆ, ಅಽಕಾರಿಗಳ ದರ್ಪಕ್ಕೆ ಸೊಪ್ಪು ಹಾಕಲಿಲ್ಲ.

ಗಣಿಗಾರಿಕೆ ನಿರ್ಬಂಧಿಸಿ ಕೋರ್ಟ್ ಆದೇಶ ಹೊರಡಿಸುವ ವೇಳೆಗಾಗಲೇ ಜೋಹಾಡ್‌ಗಳ ಸುತ್ತ ಹುಲ್ಲು ಚಿಗುರಲಾರಂಭಿಸಿತ್ತು. ಮರಗಳು ಬಲಿಯ ತೊಡಗಿದ್ದವು. ಗುಡ್ಡಗಳಲ್ಲಿನ ಹಸಿರು ಮತ್ತೆ ಅಧಿಕಾರಿಗಳ, ರಾಜಕಾರಣಿಗಳ ಕಣ್ಣು ಕುಕ್ಕಿತು. ‘ವನಪಾಲ’ ಕಾಯ್ದೆಯಡಿ ಜನರನ್ನು ಅರಣ್ಯದಿಂದ ಹೊರದಬ್ಬಲಾಯಿತು. ಜನ ಕಂಗೆಡಲಿಲ್ಲ. ಪ್ರತೀಕಾರದ ಜ್ವಾಲೆಗೆ ನಲುಗಲಿಲ್ಲ. ಬದಲಾಗಿ
ಪ್ರತಿಯೊಬ್ಬರೊಳಗೂ ಒಬ್ಬೊಬ್ಬ ‘ವಿಶ್ವಾಮಿತ್ರ’ ಹುಟ್ಟಿಕೊಂಡು. ಮರು ಸೃಷ್ಟಿಗೆ ನಿಂತ ಅಂಥ ವಿಶ್ವಾಮಿತ್ರರ ಇಚ್ಛಾಶಕ್ತಿಯ ಫಲವಾಗಿ ಜನರದ್ದೇ ಪ್ರತ್ಯೇಕ ಅಭಯಾರಣ್ಯ ತಲೆ ಎತ್ತಿ ನಿಂತಿತು.

ಇದರ ಮೇಲೆ ಸರಕಾರಕ್ಕೆ ಯಾವುದೇ ಹಕ್ಕಿರಲಿಲ್ಲ. ಇದರಿಂದ ಆದ ಮಹತ್ತರ ಪ್ರಯೋಜನವೆಂದರೆ ಅರಾವಳಿ ಪರ್ವತ ಶ್ರೇಣಿ ಯಲ್ಲಿ ಶೇ.6ಕ್ಕೆ ಇಳಿದು ಹೋಗಿದ್ದ ಅರಣ್ಯ ಪ್ರದೇಶ, 15 ವರ್ಷಗಳಲ್ಲಿ ಶೇ. 40ರ ಪ್ರಮಾಣಕ್ಕೆ ಏರಿತು. ಇದರಲ್ಲಿ ಬಹುತೇಕ ಸಮುದಾಯದ ಸ್ವತ್ತಾಗಿದ್ದ ಖಾಸಗೀ ಅರಣ್ಯಗಳೇ. ಇವತ್ತು ದೆಹಲಿಯಿಂದ ಹಿಮ್ಮತ್ ನಗರದವರೆಗಿನ ಸರಿ ಸುಮಾರು 2500 ಕಿ.ಮೀ. ಉದ್ದದ ಅರಾವಳಿ ಪರ್ವತ ಶ್ರೇಣಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. 300 ಕಿ.ಮೀ ಜಾಗದಲ್ಲಿ ತಬಾಸಂ ಪ್ರೇರ
ಣೆಯ ಪ್ರತಿ ಸ್ವರ್ಗದ ಸವಾಲಿನ ವಿಶ್ವಾಮಿತ್ರರ ಸೃಷ್ಟಿಯೇ.

ಇದೀಗ ಅಕ್ರಮ ಗಣಿಗಾರಿಕೆ ತಡೆದು ಹಸಿರು ಮರಳಿ ತರಲು, ಜನಜಾಗೃತಿ ಮೂಡಿಸಲು ಅದೇ ಅರಾವಳಿ ಬೆಟ್ಟ ಸಾಲಿನ ಇನ್ನೊಂದು ರಾಜ್ಯ ಹರಿಯಾಣಕ್ಕೊಬ್ಬ ರಾಜೇಂದ್ರ ಭಯ್ಯಾ ಹುಟ್ಟಬೇಕಿದೆ. ಅಲ್ಲಿಯರೆಗೂ ಗಣಿದಣಿಗಳ ಅಟ್ಟಹಾಸ ಮುಂದು ವರಿಯುತ್ತಲೇ ಇರುತ್ತದೆ.