Monday, 28th October 2024

ಹೆಣ್ಣು ಮಕ್ಕಳ ಫೋಟೋ ಅಪ್ ಲೋಡ್ ಮಾಡದಂತೆ ಭಾಸ್ಕರ್ ರಾವ್ ಸೂಚನೆ

ಬೆಂಗಳೂರು

ಸರ್ಕಾರದ ಬಲ ನಾವು. ನಾವೇ ಸೋಂಕಿತರಾದರೇ ಕಷ್ಟವಾಗುತ್ತದೆ. ಆದ್ದರಿಂದ ಪೊಲೀಸ್ ಠಾಣೆಯಲ್ಲಿ ಹಗ್ಗ ಕಟ್ಟಿ ಅಂತರ ಕಾಯ್ದುಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗಳಿಗೆ ಕೆಲವೊಂದು ನಿರ್ದೇಶನ ನೀಡಲಾಗಿದೆ. ಕಳೆದ ಎರಡು ತಿಂಗಳಿನಿಂದ ಕೊರೊನಾ ಜೊತೆ ಹೋರಾಟ ಸಮರ ಸಾರುತ್ತಿದ್ದೇವೆ ಎಂದರು.

ಕಳೆದ ಮಾರ್ಚ್​​ನಿಂದಲೇ ಎಲ್ಲಾ ಪೊಲೀಸ್ ಠಾಣೆಯಲ್ಲೂ ಜಾಗೃತಿ ಮೂಡಿಸಲಾಗಿದ್ದು, ಮಹಾಮಾರಿ ಕೊರೊನಾ ಹೆಚ್ಚು ಬಲಿ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಜೀವ ಕಾಪಾಡುವುದು ಅಗತ್ಯವಾಗಿದೆ ಎಂದರು.

ಹೆಡ್​​ ಕಾನ್ಸ್‌ಟೇಬಲ್, ಕಾನ್ಸ್ ಟೇಬಲ್ ರನ್ನು, ಎಎಸ್​ಐ ತಮ್ಮ ಕೆಳ ಸಿಬ್ಬಂದಿಗಳನ್ನು ಕಾಪಾಡಬೇಕು. ಹೀಗೆ ಒಬ್ಬರಿಗೊಬ್ಬರು ಸಹಕಾರವನ್ನು ನೀಡುವ ಮೂಲಕ ಪೊಲೀಸ್ ಠಾಣೆಯಲ್ಲೂ ಹಗ್ಗ ಕಟ್ಟಿ ಅಂತರ ಕಾಪಾಡಿಕೊಳ್ಳಬೇಕು.‌ ಅಲ್ಲದೇ, ಬಂದವರಿಗೆ ಸ್ಯಾನಿಟೈಸರ್​​ ಮಾಡಬೇಕು. ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಸೂಚನೆ ನೀಡಿದ್ದೇನೆ ಎಂದರು.

ಸದಾ ಬಿಸಿ ನೀರು ಕುಡಿಯಲು ಸೂಚನೆ ನೀಡಲಾಗಿದ್ದು, ಕೆಲವೊಂದು ಪೊಲೀಸ್ ಠಾಣೆಯಲ್ಲಿ ಸ್ವಚ್ಛ ಬಟ್ಟೆಗಳನ್ನು ಬಳಸುವುದಕ್ಕಾಗಿ ವಾಷಿಂಗ್​ ಮೆಷಿನ್ ಕೂಡ ಇರಿಸಲಾಗಿದೆ. ಶೀಘ್ರವೇ ಅಂತರ ಕಾಯ್ದುಕೊಂಡು ಪರೇಡ್ ಕೂಡ ಆರಂಭಿಸಲಾಗುವುದು ಎಂದರು.

ಕೊರೊನಾ ಸೋಂಕಿತ ಸಿಬ್ಬಂದಿಗೆ ಎಲ್ಲಾ ರೀತಿಯಲ್ಲಿ ಸೌಲಭ್ಯ ನೀಡಲಾಗಿದ್ದು, ಅವರ ಕುಟುಂಬಕ್ಕೂ ಒಳ್ಳೆಯ ಕಡೆ ಕ್ವಾರೆಂಟೈನ್ ಮಾಡಿಸಿದ್ದೇವೆ ಎಂದು ಆಯುಕ್ತರು ತಿಳಿಸಿದ್ದಾರೆ.

ಲಾಕ್​ಡೌನ್​ಯಿಂದಾಗಿ ಸೈಬರ್ ಕ್ರೈಮ್​ಗಳ ಸಂಖ್ಯೆ ಅಧಿಕವಾಗಿದ್ದು, ಮನೆಯಲ್ಲೇ ಕುಳಿತು ಅಪರಾಧ ಕೃತ್ಯ ಎಸಗಲಾಗುತ್ತಿದೆ. ರಾಂಗ್ ಟ್ರಾನ್ಜಾಂಕ್ಷನ್ , ಫೇಸ್​ಬುಕ್ ಪೋರ್ನ್ ಕೇಸುಗಳು ನಡೆದಿವೆ ಎಂದ ಅವರು, ಸೈಬರ್ ಕೂಡ ಮನೆ‌ ಇದ್ದ ಹಾಗೇ ಅದಕ್ಕೆ ಕಿಟಕಿ ಬಾಗಿಲು ಇರುತ್ತದೆ ಎಂದು ಆಯುಕ್ತರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ನಮ್ಮ ಮನೆಯನ್ನು ಜೋಪಾನವಾಗಿ ಕಾಯ್ದುಕೊಡಂತೆ ಆನ್​ಲೈನ್ ಬಗ್ಗೆನೂ ಎಚ್ಚರ ವಹಿಸಬೇಕಾದ ಅಗತ್ಯವಿದೆ. ಆದ್ದರಿಂದ ತಮ್ಮ ಮನೆಯವರ ವಿಶೇಷವಾಗಿ ಹೆಣ್ಣುಮಕ್ಕಳ ಫೋಟೋಗಳನ್ನು ದಯವಿಟ್ಟು ಅಪ್ ಲೋಡ್ ಮಾಡಬೇಡಿ. ಏಕೆಂದರೆ ಕೆಲವರು ಮನೆಯವರ ಫೊಟೋವನ್ನು ಅಶ್ಲೀಲ ಚಿತ್ರಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಇಂತಹ ಘಟನೆಗಳು ಲಾಕ್​ಡೌನ್ ಸಮಯದಲ್ಲಿ ಮನೆಯಿಂದ ಕೂಳಿತವರಿಂದ ನಡೆಯುತ್ತಿದೆ. ಪರ್ಸನಲ್ ಬೇರೆ ಪ್ರೊಫೆಷನಲ್ ಬೇರೆ ಆದ್ದರಿಂದ ಆನ್​ಲೈನ್​ನಲ್ಲಿ ಏನನ್ನು ಶೇರ್​ ಮಾಡಬೇಡಿ ಎಂದು ಆಯುಕ್ತರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.