Friday, 20th September 2024

ತುಂಡಾದ ಜೀವ ಸರಪಳಿ; ನಾಡಿಗೆ ಚಿರತೆ, ಹುಲಿ !

ಸುಪ್ತ ಸಾಗರ

rkbhadti@gmail.com

ನಿಸರ್ಗದಲ್ಲಿ ಮನುಷ್ಯರ ಅನಗತ್ಯ ಹಸ್ತಕ್ಷೇಪದಿಂದಾಗಿ ಜೀವವೈವಿಧ್ಯ, ಜೈವಿಕ ಸಮತೋಲನ ಹಾಳಾಗಿದೆ. ಇವೆಲ್ಲದರ ನೇರ ಪರಿಣಾಮ ಕೃಷಿಯ ಮೇಲೆ ಉಂಟಾಗುತ್ತಿದೆ. ಕೃಷಿಕರ ಸಂಕಟಗಳು ಹೆಚ್ಚಾಗುತ್ತಲೇ ಇವೆ. ಆದರೆ ಶಾಶ್ವತ ಪರಿಹಾರಗಳು ಮರಿಚೀಕೆಯೇನೊ ಎನಿಸುತ್ತಿದೆ.

ಮೊನ್ನೆ ಮೊನ್ನೆ ರಾಜ್ಯದ ಅರಣ್ಯ ಸಚಿವ ಉಮೇಶ್ ಕತ್ತಿಯವರು ಸಣ್ಣದೊಂದು ಅಂಕಿ ಅಂಶಗಳನ್ನು ಮಾಧ್ಯಮಗಳ ಮುಂದಿ ಟ್ಟರು. ರಾಜ್ಯದಲ್ಲಿ ಹುಲಿ, ಆನೆ ಹಾಗೂ ಚಿರತೆಗಳ ಸಂಖ್ಯೆ ಗಣನೀಯ ಹೆಚ್ಚಳವಾಗಿದ್ದು, ದೇಶದಲ್ಲೇ ಇವುಗಳ ಸಂಖ್ಯೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂಬುದು ಅದರ ಸಾರ. ಹೆಮ್ಮೆಯ ಸಂಗತಿಯೇ.

ಅದರ ಬೆನ್ನಲ್ಲೇ ಕಳೆದ ಹದಿನೈದು ದಿನಗಳಿಂದ ಉತ್ತರಕನ್ನಡ, ಬೆಳಗಾವಿ, ಉಡುಪಿ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಚಿರತೆಯ ಹಾವಳಿ ಹೆಚ್ಚಿದೆ. ಬೆಳಗಾವಿಯಲ್ಲಂತೂ ಹಾಡ ಹಗಲೇ ನಗರದ ಹೊರವಲಯಗಳಲ್ಲಿ ಚಿರತೆ ಸಂಚರಿಸುತ್ತ ಆತಂಕ ಸೃಷ್ಟಿಸಿದೆ. ಹಾಗೆ ನೋಡಿದರೆ ಭಾರತದಲ್ಲಿ ವನ್ಯಜೀವಿ ಗಳೊಡನೆ (ಹಾವು, ಕೋತಿ, ಕಾಡುಹಂದಿ, ಮರವಿ, ಕರಡಿ, ತೋಳ, ಹುಲಿ, ಚಿರತೆ, ಆನೆ) ಸಂಘರ್ಷ ಪ್ರತಿನಿತ್ಯದ ಮಾತು.

ನಗರವಾಸಿಗಳಿಗೆ ಹೆಚ್ಚಾಗಿ ಹಾವು, ಕೋತಿಗಳೊಡನೆ ಸಂಘರ್ಷವಾದರೆ, ಗ್ರಾಮವಾಸಿಗಳಿಗೆ ಕಾಡು ಹಂದಿ, ಕೃಷ್ಣಮೃಗ, ನರಿ, ನವಿಲು, ಕರಡಿ, ಚಿರತೆಗಳು ಸಮಸ್ಯೆಯ ಮೂಲ. ಅದೇ ದೊಡ್ಡ ಕಾಡುಗಳ ಬದಿಯಲ್ಲಿರುವವರಿ ಹುಲಿ, ಆನೆ, ಜಿಂಕೆ, ಕಡವೆ, ಕಾಡು ಹಂದಿಗಳ ಬಾಧೆ. ಹೀಗೆ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ-ಮನುಷ್ಯರ ಸಂಘರ್ಷ ಹೊಸತೇನಲ್ಲ. ಪಶ್ಚಿಮ ಘಟ್ಟದ ದಟ್ಟ ಕಾನನವನ್ನು ಸುತ್ತುವರಿದಿರುವ ತಾಲ್ಲೂಕುಗಳ ಅರಣ್ಯ ಪ್ರದೇಶದಲ್ಲಿ ಹುಲಿ, ಚಿರತೆ, ಆನೆ, ಕರಡಿ, ಕಾಡುಕೋಣ, ಕಾಡೆಮ್ಮೆ, ಕಾಡು ಹಂದಿ, ಹಾವು ಸೇರಿದಂತೆ ಅಸಂಖ್ಯಾತ ವನ್ಯಜೀವಿಗಳು ನೆಲೆಸಿವೆ.

ಮಲೆನಾಡು, ಕರಾವಳಿ ಜಿಲ್ಲೆಗಳ ಅರ್ಧಭಾಗವನ್ನು ಆವರಿಸಿರುವ ದಟ್ಟ ಅರಣ್ಯದ ಮಧ್ಯೆ ಇರುವ ಐವತ್ತಕ್ಕೂ ಹೆಚ್ಚು ಗ್ರಾಮ ಗಳಲ್ಲಿ ಮನುಷ್ಯರೂ ವಾಸಿಸುತ್ತಿದ್ದಾರೆ. ಕೃಷಿ ಮತ್ತು ಹೈನುಗಾರಿಕೆ ಕಾಡಂಚಿನ ಭಾಗಗಳಲ್ಲಿ ವಾಸಿಸುತ್ತಿರುವವರ ಮುಖ್ಯ ಕಸುಬು. ಇವರು ಹಲವು ವರ್ಷಗಳಿಂದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೃಷಿ ಭೂಮಿಗಳಲ್ಲಿ ಭತ್ತ, ರಾಗಿ, ಕಬ್ಬು ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯ ಕಠಿಣ ಕಾನೂನುಗಳ ಕಾರಣ ವನ್ಯ ಪ್ರಾಣಿಗಳ ಬೇಟೆಗೆ ಕಡಿವಾಣ ಹಾಕಲಾಗಿದೆ. ಹೀಗಾಗಿ ಕಾಡಿನಲ್ಲಿ ವಾಸಿಸುತ್ತಿರುವ ವನ್ಯಜೀವಿಗಳು ಜೀವ ಭಯವಿಲ್ಲದೆ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಕಾಡುಕೋಣ,
ಕಾಡೆಮ್ಮೆ, ಕರಡಿಗಳಂತಹ ಬಲಾಢ್ಯ ಪ್ರಾಣಿಗಳು ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡಿವೆ. ಆದರೆ, ದಟ್ಟ ಅರಣ್ಯದಲ್ಲಿ ವಾಸಿಸುವ ಕರಡಿ, ಕಾಡುಕೋಣ, ಕಾಡಾನೆ, ಚಿರತೆ ಸೇರಿದಂತೆ ಕೆಲ ವನ್ಯಜೀವಿಗಳಿಗೆ ಮಳೆಯ ಅನಿಶ್ಚಿತತೆ, ಕಾಡಿನಲ್ಲಿ
ಹುಲ್ಲು, ಹಣ್ಣು-ಹಂಪಲು, ಗೆಡ್ಡೆ-ಗೆಣಸುಗಳು ಮತ್ತಿತರ ಕಾರಣಗಳಿಂದಾಗಿ ಹೊಟ್ಟೆ ತುಂಬುವಷ್ಟು ಆಹಾರ ಮತ್ತು ನೀರು ಸಿಗುತ್ತಿಲ್ಲ.

ಆ ಸಂದರ್ಭಗಳಲ್ಲಿ ವನ್ಯಜೀವಿಗಳು ಆಹಾರ ಅರಸಿ ಮನುಷ್ಯರ ವಸತಿ ಪ್ರದೇಶಗಳತ್ತ ಲಗ್ಗೆ ಇಡುವ ಘಟನೆಗಳು ತಾಲ್ಲೂಕಿನ ಅರಣ್ಯ ಪ್ರದೇಶಗಳಲ್ಲಿ ಆಗಾಗ ನಡೆಯುತ್ತಿವೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಜೈವಿಕ ಸಮತೋಲದಲ್ಲಿನ ಏರುಪೇರು. ವನ್ಯ ಜೀವಿಗಳ ಸಂಖ್ಯೆ ಹೆಚ್ಚಿದೆ ಎಂಬುದು ಸಮಾಧಾನದ ಸಂಗತಿಯಾದರೂ, ಕೆಲವೇ ಪ್ರಾಣಿಗಳ ಸಂಖ್ಯೆ ಯಲ್ಲಷ್ಟೇ ಏರಿಕೆಯಾಗಿರುವುದು ಮುಂದಿನ ದಿನಗಳಲ್ಲಿ ಸಮಸ್ಯೆ ಸೃಷ್ಟಿಸುವ ಎಲ್ಲ ಸಾಧ್ಯತೆಗಳಿವೆ. ಹತ್ತು ಹಲವಾರು ಸಮಸ್ಯೆಗಳ ನಡುವೆ ಇತ್ತೀಚಿನ ದಿನಗಳಲ್ಲಿ ಕೃಷಿಕರನ್ನು ಬಾಧಿಸುತ್ತಿರುವ ಇನ್ನೊಂದು ಸಂಕಷ್ಟ ಇಲಿ, ಮಂಗಳ, ನವಿಲುಗಳಂಥ ಪ್ರಾಣಿ-ಪಕ್ಷಿಗಳ ಕಾಟದ್ದು.

ಹಲವೆಡೆ ಕಾಡು ಹಂದಿ, ಜಿಂಕೆಗಳು, ಆನೆಗಳಂಥವುಗಳ ಹಾವಳಿಯೂ ವಿಪರೀತವಾಗುತ್ತಿದೆ. ಪ್ರಾಣಿಗಳ ಹಾವಳಿಯಿಂದ ಪ್ರತಿ ವರ್ಷ ಶೇ.೬೦-೬೮ ರಷ್ಟು ಬೆಳೆ ನಷ್ಟವನ್ನು ಕೃಷಿಕರು ಕಾಣುತ್ತಿದ್ದಾರೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಒಂದು  ಸಮೀಕ್ಷೆಯ ಪ್ರಕಾರ ಪ್ರತಿ ಕೃಷಿ ಕುಟುಂಬ ಸರಾಸರಿ ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಮೊತ್ತದ ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ.

ಸಣ್ಣ ಲೆಕ್ಕ ನೋಡಿ, ಒಂದು ಎಕರೆ ಹೊಲದಲ್ಲಿ ಕನಿಷ್ಠ ಮೂರು ಚೀಲ ಭತ್ತವನ್ನು ಇಲಿಗಳು ತಿಂದು ಹಾಳು ಮಾಡುತ್ತಿದೆ. ಕನಿಷ್ಠ ಒಂದು ಟ್ರ್ಯಾಕ್ಟರ್ ಹುಲ್ಲನ್ನು ಕಡಿದು ತುಂಡು ಮಾಡಿ ಗೊಬ್ಬರವಾಗಿಸುತ್ತಿದೆ. ಒಂದು ಎಕರೆ ತೋಟದಲ್ಲಿ ವರ್ಷಕ್ಕೆ  ಏನಿಲ್ಲ ವೆಂದರೂ ಒಂದು ಕ್ವಿಂಟಲ್ ನಷ್ಟು ಅಡಕೆಯನ್ನು ಮಂಗಗಳು ನಾಶ ಮಾಡುತ್ತಿವೆ. ವರ್ಷಕ್ಕೆ ಒಂದು ಸಾವಿರ ಕೊನೆಗಳನ್ನು ಬೆಳೆಯುವ ಮುನ್ನವೇ ತಿಂದು ಹಾಕುತ್ತಿವೆ. ತೆಂಗು, ಏಲಕ್ಕಿ, ಹಣ್ಣುಗಳು, ತರಕಾರಿ, ಕೋಕೋ ಹೀಗೆ ಪ್ರತಿಯೊಂದಕ್ಕೂ ಬಾಧೆಗಳಿವೆ.

ಯಾಕೆ ಹೀಗೆ? ಇದ್ದಕ್ಕಿದ್ದಂತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಯಾಕೆ? ನಮ್ಮ ಮನೆಯಲ್ಲಿ ನಮಗೆ ಬೇಕಷ್ಟು ಆಹಾರ ಸಿಗುತ್ತಿಲ್ಲವೆಂದ ಮೇಲೆ ಸಹಜವಾಗಿ ಪಕ್ಕದ ಮನೆಯತ್ತ ಮಕ್ಕಳು ಮುಖ ಮಾಡುತ್ತಾರೆ. ಹಾಗೆಯೇ ಪ್ರಾಣಿಗಳ ವಿಚಾರದಲ್ಲೂ ಆಗುತ್ತಿರುವುದು. ಗಮನಿಸಬೇಕಾದುದೆಂದರೆ ಪ್ರಾಣಿಗಳು ಈ ಪರಿಸರದ ಅವಿಭಾಜ್ಯ ಅಂಗ. ನಾವು ಹಲವಾರು ರೀತಿಯಲ್ಲಿ ಪ್ರಾಣಿಗಳನ್ನು ಅವಲಂಬಿಸಿದ್ದೇವೆ. ಪ್ರಾಣಿಗಳೂ ಪರಸ್ಪರ ಒಂದಕ್ಕೊಂದು ಅವಲಂಬಿಸುತ್ತಿರುತ್ತವೆ.

ಎಲ್ಲವೂ ನಿಸರ್ಗವನ್ನು ಅವಲಂಬಿಸಿವೆ. ನಿಸರ್ಗ ತನ್ನೊಡಲಿನ ಜೀವಿಗಳ ಸಮತೋಲನ ಕಾಪಾಡಿಕೊಳ್ಳುವಲ್ಲಿ ತಮ್ಮದೇ
ವ್ಯವಸ್ಥೆಯನ್ನು ಹೊಂದಿರುತ್ತವೆ. ನಮ್ಮ ಆಧುನೀಕರಣ, ಅಭಿವೃದ್ಧಿ ಹೆಸರಿನ ಚಟುವಟಿಕೆ, ಸ್ವಾರ್ಥದ ಹೆಸರಿನಲ್ಲಿ ನಡೆಸುತ್ತಿರುವ ಹಸ್ತಕ್ಷೇಪದಿಂದಾಗಿ ನಿಸರ್ಗದ ಸಮತೋಲನ ತಪ್ಪುತ್ತಿದೆ. ಕೆಲವು ಸಾಮಾನ್ಯ ಸಂಗತಿಗಳನ್ನು ನಿರ್ಲಕ್ಷಿಸುವುದರಿಂದಾಗಿ ಸ್ವತಃ ನಮ್ಮನ್ನು ನಾವು ಸಂಕಷ್ಟಕ್ಕೆ ಈಡು ಮಾಡಿಕೊಳ್ಳುತ್ತಿದ್ದೇವೆ.

ಒಂದು ಸಣ್ಣ ಅವಲೋಕನ ಮಾಡೋಣ: ಇತ್ತೀಚಿನ ದಿನಗಳಲ್ಲಿ ಬೇರೆಬೇರೆ ಕಾರಣಕ್ಕೆ ನಮ್ಮ ಪರಿಸರದಲ್ಲಿನ ಕೇರೆ ಹಾವುಗಳು ಕಣ್ಮರೆಯಾಗುತ್ತಿವೆ. ಮನೆಯ ಸುತ್ತ ಮುತ್ತ, ಗದ್ದೆ ತೋಟಗಳಲ್ಲಿ ಎಂದರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ನಿರುಪದ್ರವಿ, ವಿಷರಹಿತ ರೈತಮಿತ್ರ ಕೇರೆ ಹಾವುಗಳ ವಿನಾಶಕ್ಕೆ ಪ್ರಮುಖ ಕಾರಣ ಅವನ್ನು ಕಂಡಲ್ಲಿ ಕೊಲ್ಲುವ ನಮ್ಮ ಪ್ರವೃತ್ತಿ ಹಾಗೂ ಗ್ರಾಮೀಣ ಭಾಗದಲ್ಲಿ ನವಿಲುಗಳು, ಕಾಳಿಂಗ ಸರ್ಪಗಳಮಥ ವಿಷಕಾರಿ ಹಾವುಗಳ ಸಂಖ್ಯೆ ಹೆಚ್ಚಾಗಿದೆ.

ಹಳ್ಳಿಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ಕಾಡುಗಳು ನಾಶವಾಗುತ್ತಿದ್ದಂತೆಯೇ ಆಹಾರದ ಹುಡುಕಾಟಕ್ಕೆ ಬಿದ್ದ ನವಿಲು, ಕಾಳಿಂಗ ಸರ್ಪದಂಥವು ಜಮೀನಿಗೆ ಬರತೊಡಗಿದವು. ಇವಕ್ಕೆ ಕೇರೆ ಹಾವುಗಳು ಬಲಿಯಾಗಿವೆ. ಇದರ ಫಲವಾಗಿ ಗುಡ್ಡದ ಇಲಿಗಳನ್ನು ನಿಯಂತ್ರಿಸುವವರಿಲ್ಲದೇ, ಹಾವಳಿ ಹೆಚ್ಷಾಗಿ ವಿಪರೀತವಾಗಿ ಭತ್ತದ ಗದ್ದೆಗಳು ನಾಶವಾಗುತ್ತಿವೆ. ಆಹಾರ ಧಾನ್ಯಗಳು ಕೊಳ್ಳೆ ಹೋಗುತ್ತಿವೆ. ಕೊಯ್ಲಿಗೆ ಸಿದ್ಧವಾದ ಪೈರುಗಳನ್ನು ನಾಜೂಕಾಗಿ ಕತ್ತರಿಸುತ್ತಿರುವ ಇಲಿ ಹಾಗೂ ಹೆಗ್ಗಣಗಳು ಬಹುತೇಕ ಇಳುವರಿಯನ್ನು ನಾಶ ಮಾಡುತ್ತಿವೆ. ಸೀಮಿತ ಪ್ರದೆಶದಲ್ಲಿ ಇಲಿಗಳ ಸಂಖ್ಯೆ ಸಾವಿರಾರು ಆಗುತ್ತಿರುವುದು ಭತ್ತ ಸೇರಿದಂತೆ
ಧಾನ್ಯಗಳ ಬೆಳೆಗಾರರರನ್ನು ಚಿಂತೆಗೀಡುಮಾಡಿದೆ.

ಕೆರೆಹಾವುಗಳು ಹೆಚ್ಚಾಗಿದ್ದ ಸನ್ನಿವೇಶದಲ್ಲಿ ಅವುಗಳು ಇಲಿಗಳನ್ನು ನಿಯಂತ್ರಿಸುತ್ತಿದ್ದವು. ಆದರೆ ಇತ್ತಿಚಿನ ಎರಡು ದಶಕಗಳಲ್ಲಿ ಕೇರೆ ಹಾವುಗಳು ಇಲ್ಲವೇ ಇಲ್ಲ ಎನ್ನಿಸುವಷ್ಟು ಕಡಿಮೆಯಾಗಿವೆ. ಇದರಿಂದ ಬೆಳೆ ನಷ್ಟವೂ ಹೆಚ್ಚುತ್ತಿದೆ. ಮಲೆನಾಡಿನ ಕೃಷಿಕ ಆಂಜನೇಯ ಗೌಡ ಅವರ ಪ್ರಕಾರ ‘ಹೆಗ್ಗಣಗಳು ಬಂದು ಹುಲ್ಲು ಬಣವೆಯಲ್ಲಿ ಗೂಡು ಹಾಕುತ್ತಿವೆ. ಹುಲ್ಲು ಪಿಂಡಿಗಳನ್ನೆಲ್ಲ ಕತ್ತರಿಸಿ ಹಾಕಿವೆ. ಕಂಡಕಂಡಲ್ಲಿ ನೆಲವನ್ನು ಅಗೆದು ಗೆಣಸು, ಗಡ್ಡೆಗಳನ್ನು ತಿಂದು ಹಾಳು ಮಾಡುತ್ತಿವೆ. ಆಹಾರ ಹುಡುಕುವ ಭರದಲ್ಲಿ ತೋಡುವ ಬಿಲದ ಮೂಲಕ ಹೊಲದಲ್ಲಿನ ನೀರು, ಸಾರಾಂಶ ಸೋರಿ ಹೋಗುತ್ತಿದೆ.

ರಾತ್ರಿ ಬೆಳೆಗಾಗುವುದರೊಳಗೆ ಇಡೀ ಹೊಲದ ಬೆಳೆಗಳೆಲ್ಲ ಬುಡಮೇಲಾಗುತ್ತಿದೆ. ಇಲಿ ಹೆಗ್ಗಣ ಗಳನ್ನು ಹಿಡಿದು, ತಿಂದು ಹತೋಟಿ ಮಾಡುತ್ತಿದ್ದ ಕೇರೆ ಹಾವುಗಳು ಕಾಣೆಯಾಗಿರುವುದೇ ಅವುಗಳ ಹಾವಳಿ ಹೆಚ್ಚಳಕ್ಕೆ ಕಾರಣವಾಗಿದೆ. ಕೇರೆ ಹಾವುಗಳ ನಾಶದಿಂದ ಆಗಿರುವ ಇನ್ನೊಂದು ಸಮಸ್ಯೆ ವಿಕಕಾರಿ ಹಾವುಗಳು ಸಂಖ್ಯೆ ಹೆಚ್ಚಿರುವುದು. ಸರ್ಪಗಳ ಮರಿ-ಮೊಟ್ಟೆಗಳನ್ನೂ ತಿಂದು ನಿಯಂತ್ರಿಸುತ್ತಿದ್ದ ಕೇರೆ ಹಾವುಗಳ ಸಂಖ್ಯೆ ಕಡಿಮೆ ಆಗುತ್ತಿದ್ದಂತೆಯೇ ಅವುಗಳ ಸಂತತಿ ಹೆಚ್ಚಾಗಿದೆ. ಅದೇ ರೀತಿ ದೊಡ್ಡ ಹಾವುಗಳು ಕೇರೆ ಹಾವುಗಳನ್ನು ತಿನ್ನಲು ಊರಿಗೆ ನುಗ್ಗತೊಡಗಿದವು.

ಹೀಗಾಗಿ ಎಂದರಲ್ಲಿ ಕೃಷಿಕರು ಹಾವುಗಳ ಕಡಿತಕ್ಕೆ ಒಳಗಾಗುತ್ತಿzರೆ. ಕಾಳಿಂಗ ಸರ್ಪದಂಥ ವಿಷದ ಹಾವುಗಳು ಹಿಂದಿ ನಿಂದಲೂ ಇದ್ದವು. ಆದರೆ ಅಪರೂಪಕ್ಕೊಮ್ಮೆ ತೋಟದ, ಊರಿನ ಕಾಣಿಸಿಕೊಳ್ಳುತ್ತಿದ್ದ ಅವು ಹತ್ತಾರು ಚದರ ಕಿಲೋಮೀಟರ್ ವ್ಯಾಪ್ತಿಯ ವಲಯದಲ್ಲಿ ಒಂದರಂತೆ ಓಡಾಡಿಕೊಂಡು ಬದುಕುತ್ತಿದ್ದವು. ಇತ್ತೀಚೆಗೆ ಅವುಗಳ ಸಂಖ್ಯೆ ಅಸಹಜವಾಗಿ ವೃದ್ಧಿಸಿದ್ದಕ್ಕೆ ಕಾರ, ಕಾಡಿನ ಪ್ರಮಾಣ ಕಡಿಮೆ ಆಗಿರುವುದು.

ರಸ್ತೆ, ಹೆದ್ದಾರಿಗಳಿಗಾಗಿ ಕಾಡಿನ ವಲಯಗಳೂ ಇಬ್ಭಾಗವಾಗಿ ಕಿರಿದಾಗತೊಡಗಿದವು. ಅವುಗಳ ಆಹಾರ ಕ್ರಮದಲ್ಲಿ ಪ್ರಥಮ ಆದ್ಯತೆಯಾದ ಕೇರೆ ಹಾವುಗಳು ಬಲಿಯಾಗತೊಡಗಿದವು. ವಿಸ್ತಾರವಾದ ಹಾಗೂ ನುಣುಪಾದ ರಸ್ತೆಯನ್ನು ಸುಲಭದಲ್ಲಿ ತೆವಳಿ ದಾಟಲಾಗದೇ ವಾಹನಗಳ ಚಕ್ರಕ್ಕೆ ಸಿಲುಕಿ ಸಾಯುವ ಜೀವಿಗಳಲ್ಲಿ ಕೇರೆ ಹಾವುಗಳೇ ಸಂಖ್ಯೆಯೇ ಅಧಿಕ. ಮಿತಿ ಮೀರಿದ ನಾಗರಿಕ ಚಟುವಟಿಕೆಗಳು ನಿಸರ್ಗದ ಸಮತೋಲನಗಳನ್ನು ಬುಡಮೇಲು ಮಾಡುತ್ತಿವೆ. ಅದರ ದುಷ್ಪರಿಣಾಮ ಗಳನ್ನು ಹಳ್ಳಿಗಳ ರೈತರು ಎದುರಿಸಬೇಕಾಗಿದೆ. ಇನ್ನು ನವಿಲುಗಳು ಹೆಚ್ಚಿರವುದು ಸಹ ಕೇರೆಹಾವುಗಳ ಸಂಖ್ಯೆ ಕಡಿಮೆ ಯಾಗಿರಬಹುದು ಕಾಗೋಡಿನ ಕೃಷಿಕ ಬಿಳಿಯಪ್ಪ.

ಬೃಹತ್ ನೀರಾವರಿ ಯೋಜನೆಗಳ ಅಬ್ಬರದಲ್ಲಿ ಬಹುತೇಕ ದಟ್ಟಾರಣ್ಯಗಳು ಮುಳುಗಡೆಯಾಗಿದೆ. ಕೃಷಿ ಭೂಮಿ
ವಿಸ್ತರಣೆಗೆ ಕಾಡುಗಳು ನೆಲಸಮವಾಗಿದೆ. ಕಾಡಿನಲ್ಲಿ ಆಹಾರ ಕಂಡುಕೊಂಡಿದ್ದ ಪ್ರಾಣಿಗಳು ಅಲ್ಲಿಂದ ಖಿರಿಗೆ ನುಗ್ಗಲಾ ರಂಭಿಸಿವೆ. ಹೀಗಾಗಿ ಮಲೆನಾಡಿನ ಭಾಗದಲ್ಲಿ ಕಾಡುಕೋಣ, ಕಾಡು ಹಂದಿಗಳು, ಆನೆಗಳ ಹಾವಳಿಯೂ ವಿಪರೀತವಾಗಿವೆ ಎನ್ನುತ್ತಾರೆ ಶಿರಸಿಯ ವಿ.ಪಿ.ಹೆಗಡೆ. ಇನ್ನು ಮಂಗಗಳ ಹಾವಳಿ ಸಹ ಹೆಚ್ಚಲು ಇದೇ ಕಾರಣ.

ಕಾಡು ಕಡಿಮೆ ಆಯಿತು. ಹೀಗಾಗಿ ಅಲ್ಲಿ ಸಿಗುತ್ತಿದ್ದ ಕಾಡಿನ ಹಣ್ಣುಗಳು ಇಲ್ಲವಾಯಿತು. ಮಂಗಗಳಿಗೆ ಆಹಾರವಿಲ್ಲದೇ  ಊರಿನ ನುಗ್ಗಲಾರಂಭಿಸಿದವು. ಇಲ್ಲಿ ಕಷ್ಟಪಡದೇ ತೋಟದಲ್ಲಿ ಸುಲಭದಲ್ಲಿ ಸಿಗುವ ಹಣ್ಣು-ಕಾಯಿಗಳ ರುಚಿಗೆ ಮನಸೋತು ಇಲ್ಲೇ ಉಳಿದುಬಿಟ್ಟಿವೆ. ಮಂಗಗಳು ತೋಟ, ಗದ್ದೆಗಳಿಗೆ ಲಗ್ಗೆ ಇಡುತ್ತಿದ್ದು, ಮನುಷ್ಯರ ಭಯವೇ ಇಲ್ಲದಂತೆ ಮನೆಯೊಳಕ್ಕೆ ನುಗ್ಗಲಾರಂಭಿಸಿವೆ. ಮಲೆನಾಡು ಭಾಗದಲ್ಲಿ ಬೆರಳೆಣಿಕೆಯಷ್ಟಿದ್ದ ಕೆಂಪು ಮೂತಿ ಮಂಗಗಳ ಸಂಖ್ಯೆ ಇಂದು ಹತ್ತಾರು ಪಟ್ಟು
ಹೆಚ್ಚಿದೆ. ತಂಡೋಪತಂಡವಾಗಿ ಕೃಷಿ ಜಮೀನಿಗೆ ನುಗ್ಗಿ, ಫಸಲನ್ನು ಹಾಳು ಮಾಡುವ ಮಂಗಗಳು ಜಿಲ್ಲೇಯ ಅನ್ನದಾತರನ್ನು ಹೈರಣಾಗಿಸಿದೆ. ಮಲೆನಾಡಿನ ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ಭಾಗದ ಅರಣ್ಯದಂಚಿನ ರೈತರು ತಮ್ಮ ಬೆಳೆಗಳನ್ನು ಮಂಗಗಳ ಕಾಟದಿಂದ ಕಳೆದುಕೊಂಡು ಕಂಗಾಲಾಗಿದ್ದಾರೆ.

ಅಡಿಕೆ, ಎಳನೀರು, ಶುಂಠಿ, ತರಕಾರಿಗಳನ್ನು ಕಿತ್ತು ತಿನ್ನುವ ಮಂಗಗಳು, ಬಾಳೆಮರದ ಮೊಳಕೆಗಳನ್ನು ಸಹ ಬಿಡುತ್ತಿಲ್ಲ. ನಾಯಿ, ಏರ್ಗನ, ಪಟಾಕಿಗಳ ಸದ್ದಿಗೆ ಕ್ಯಾರೇ ಎನ್ನದ ಮಂಗಗಳ ಉಪಟಳ ಇಂದು ರೈತರ ನಿzಗೆಡಿಸಿವೆ. ಕೆಲವು ಬೆಳೆಗಳನ್ನು ಎಳವೆಯಲ್ಲಿಯೇ ಕಿತ್ತು ತಿಂದರೆ, ಇನ್ನೇನು ಫಸಲು ಕಟಾವಿಗೆ ಬರಬೇಕು ಎನ್ನುವ ಹಂತದಲ್ಲಿ ಏಕಾಏಕಿ ದಾಳಿ ಬೆಳೆಗಳನ್ನು
ನಾಶ ಮಾಡುತ್ತಿವೆ.

ಇಷ್ಟೇ ಅಲ್ಲ. ವಿಪರೀತ ರಾಸಾಯನಿಕಗಳನ್ನು ಬಳಸಲಾರಂಭಿಸುತ್ತಿದ್ದಂತೆ, ನಿಸರ್ಗದಲ್ಲಿ ಹದ್ದುಗಳ ಸಂಖ್ಯೆಯೂ ನಾಶವಾ ಯಿತು. ಜಾನುವಾರುಗಳಿಗೆ ಕೊಡುವ ಡೈಕ್ಲೋಫಿನಾಕ್ ಚುಚ್ಚುಮದ್ದುಗಳಲ್ಲಿನ ರಾಸಾಯನಿಕ ವಿಷಕಾರಿ ಅಂಶದಿಂದಲೂ ಹದ್ದುಗಳು ಸಂತತಿ ಕ್ಷೀಣಿಸಿದೆ. ಮೃತ ಜಾನುವಾರುಗಳ ದೇಹದಲ್ಲಿನ ಈ ರಾಸಾಯನಿಕ ಹದ್ದುಗಳ ದೇಹ ಸೇರಿ ಅವು ನಶಿಸುತ್ತಿದೆ.

ಹೀಗಾಗಿ ಮಂಗನ ಮರಿಗಳನ್ನು ತಿಂದು ಅವುಗಳ ಸಂಖ್ಯೆಯನ್ನು ನಿಯತ್ರಿಸುತ್ತಿದ್ದ ಹದ್ದುಗಳಿದೇ ಮಂಗಗಳ ಸಂತತಿ ವೃದ್ಧಿಸಿದೆ. ಹೆಚ್ಚುತ್ತಿರುವ ಸಂಖ್ಯೆಗೆ ಅನುಗುಣವಾಗಿ ಆಹಾರ ಸಿಗದ ಮಂಗಗಳು ಊರಿಗೆ- ತೋಟಕ್ಕೆ ದಾಂಗುಡಿಯಿಡುತ್ತಿವೆ. ಒಂದು ಅಂದಾಜಿನ ಪ್ರಕಾರ ಮಲೆ ನಾಡಿನ ಹಳ್ಳಿಯೊಂದರಲ್ಲಿ ಮಂಗಗಳ ಹಾವಳಿಯಿಂದ ಸರಾಸರಿ ವಾರ್ಷಿಕ ಆಗುತ್ತಿರುವ ನಷ್ಟ ಐದು ಕೋಟಿಗೂ ಮೀರುತ್ತಿದೆ.

ಇನ್ನೊಂದೆಡೆ ಕಾಡುಕೋಣ, ಜಿಂಕೆ, ನವಿಲು, ಕಾಡು ಹಂದಿಗಳು ಕೆಳಗಡೆಯಿಂದ ದಾಳಿ ಮಾಡುತ್ತವೆ. ಸಂಜೆಯವರೆಗೆ ಚೆನ್ನಾಗಿಯೇ ಇದ್ದ ಅಡಕೆ ಸಸಿ ತೋಟ, ಬಾಳೆ ತೋಟ ಬೆಳಗಾಗುವಷ್ಟರಲ್ಲಿ ಬಹುತೇಕ ನಿರ್ನಾಮ ಮಾಡಿಬಿಡುತ್ತವೆ ಕಾಡು
ಕೋಣಗಳು ಹಾಗೂ ಹಂದಿಗಳು. ಜೀವ ವೈವಿಧ್ಯಕ್ಕೆ ಕುತ್ತು ತಂದಲ್ಲಿ ಆಗುವ ಅಸಮತೋಲನದ ಒಂದು ನೈಜ ಉದಾಹರಣೆ ಇದು. ನಿಸರ್ಗದಲ್ಲಿ ಮನುಷ್ಯರ ಅನಗತ್ಯ ಹಸ್ತಕ್ಷೇಪದಿಂದಾಗಿ ಜೀವವೈವಿಧ್ಯ, ಜೈವಿಕ ಸಮತೋಲನ ಹಾಳಾಗಿದೆ.

ಇವೆಲ್ಲದರ ನೇರ ಪರಿಣಾಮ ಕೃಷಿಯ ಮೇಲೆ ಉಂಟಾಗುತ್ತಿದೆ. ಕೃಷಿಕರ ಸಂಕಟಗಳು ಹೆಚ್ಚಾಗುತ್ತಲೇ ಇವೆ. ಆದರೆ ಶಾಶ್ವತ ಪರಿಹಾರಗಳು ಮರಿಚೀಕೆಯೇನೊ ಎನಿಸುತ್ತಿದೆ. ಇದಕ್ಕೆ ಪರಿಹಾರ ನಿಸರ್ಗ ದಿಂದಲೇ ದೊರಕಬೇಕು. ಅದರಲ್ಲಿ ಅನಗತ್ಯ ಹಸ್ತಕ್ಷೇಪ ಮಾಡದಿದ್ದರೆ ಅದೇ ಪರಿಹಾರವನ್ನು ಒದಗಿಸಿಕೊಡುತ್ತದೆ ಎಂದನಿಸಿದೆ.

ಮೊದಲು ಒಂದು ಕಾಡಿನ ತುದಿಗೆ ಇನ್ನೊಂದು ಕಾಡು ಆರಂಭವಾಗುತ್ತಿತ್ತು. ಈಗ ಅಂತಹ ಸಂಪರ್ಕವನ್ನೇ ಕಡಿದು ಹಾಕಲಾಗುತ್ತಿದೆ. ಈಗಿರುವ ಕಾಡುಗಳ ಸುತ್ತ ಒತ್ತಡ ಹೆಚ್ಚುತ್ತಿದೆ. ಕಾಡುಗಳ ನಡುವೆ ಕಾರಿಡಾರ್‌ಗಳು ಇಲ್ಲ. ಒಂದೊಂದು ಕಾಡು ಒಂದೊಂದು ದ್ವೀಪವಾಗುತ್ತಿದೆ. ನಿಸರ್ಗದಲ್ಲಿ ಆಹಾರ ಸರಪಳಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಸರಪಳಿಯಲ್ಲಿ ಯಾವುದಾದರೂ ಒಂದು ಕೊಂಡಿ ಕಳಚಿದರೂ ಪರಿಸರದಲ್ಲಿ ಅಸಮತೋಲನ ಉಂಟಾಗಿ ವಿವಿಧ ರೀತಿಯಲ್ಲಿ ಪರಿಣಾಮಗಳು ಉಂಟಾಗುತ್ತವೆ.

ಆಹಾರ ಸರಪಳಿಯಲ್ಲೂ ಯಾವ ಪ್ರಾಣಿ ಯಾವ ಜಾಗದಲ್ಲಿ ಇರಬೇಕೋ ಅಲ್ಲಿಯೇ ಇದ್ದರೆ ಸುರಕ್ಷಿತ. ಕೇವಲ ಮನುಷ್ಯ ಮಾತ್ರ ಈ ಪರಿಸರದ ಜೀವಿಯಲ್ಲ. ಬೇರೆ ಪ್ರಾಣಿಗಳಿಗೂ ಬದುಕುವ ಸ್ವಾತಂತ್ರ್ಯವಿದೆ. ಆಲೋಚಿಸಿ ಅನುಕೂಲ, ಅನನುಕೂಲಗಳಿಗೆ ಹೊಂದಿಕೊಂಡು ಬಾವಲಿಗಳನ್ನು ಹಾಗೂ ಇತರೇ ಕಾಡು ಪ್ರಾಣಿಗಳನ್ನು ರಕ್ಷಣೆಮಾಡಿ ನಮ್ಮ ಪರಿಸರವನ್ನು ಸಮತೋಲನ ವಾಗಿಟ್ಟುಕೊಳ್ಳುವಲ್ಲಿ ಮನುಷ್ಯರಾದ ನಮ್ಮ ಪಾತ್ರ ಬಹುಪಾಲು ದೊಡ್ಡದು.