Friday, 20th September 2024

ಇಷ್ಟೆಲ್ಲ ಆದ ಮೇಲೆ, ಭೂತಾಯಮ್ಮನ ಸೀರೆ ಹರಿದದ್ದೇಕೆ ?

ಸುಪ್ತ ಸಾಗರ

rkbhadti@gmail.com

ಹಾಗೆ ನೋಡಿದರೆ, ಇದು ಆಗಬಾರದಿತ್ತು. ಯಾಕೆ ಹೀಗಾಯಿತು? ಮೂರು ವರ್ಷಗಳ ಹಿಂದೆ ಎಡೆ ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಭೂಮಂಡಲದ ಬಹುತೇಕ ದೇಶಗಳು ಲಾಕ್ ಡೌನ್‌ಗೆ ಒಳಗಾಗಿದ್ದವು. ವಾಹನಗಳ ಅಬ್ಬರ ಇರಲಿಲ್ಲ, ಕೈಗಾರಿಕೆ ಗಳು ಸ್ಥಗಿತಗೊಂಡಿದ್ದವು.

ಎಡೆ ಪರಿಸರ ಮಾಲಿನ್ಯ ಕಡಿಮೆಯಾಗುತ್ತಿದೆ, ನದಿ-ಕೊಳ್ಳಗಳು ತಿಳಿಗೊಳ್ಳುತ್ತಿವೆ ಎಂಬಂಥ ವರದಿಗಳು ಬರುತ್ತಿದ್ದರೆ, ಇತ್ತ ಸೂರ್ಯನ ವಿಕಿರಣದ ದುಷ್ಪರಿಣಾಮ ತಡೆದು ನಮ್ಮನ್ನು ರಕ್ಷಿಸುತ್ತಿದ್ದ ಓಝೋನ್ ಪರದೆ ಮತ್ತೆ ಹರಿದಿದೆಯಂತೆ!

ಸಾಲದ್ದಕ್ಕೆ ಹವಾಮಾನ ಬದಲಾವಣೆಯಿಂದಾಗಿ ನಮ್ಮ ನೆರೆಯ ಪಾಕಿಸ್ಥಾನ ತೀವ್ರ ಅತಿವೃಷ್ಟಿಗೆ ಸಿಲುಕಿದ್ದರೆ, ಇನ್ನೊಂದು ನೆರೆ ದೇಶ ಚೀನಾ ಭೀಕರ ಬರಗಾಲಕ್ಕೆ ತುತ್ತಾಗಿದೆ. ನಮ್ಮಲ್ಲೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ, ಅರ್ಧ ಬೆಂಗಳೂರು ಅಲ್ಲೋಲ ಕಲ್ಲೋಲ ವಾಗಿತ್ತು.

ಇವೆಲ್ಲಕ್ಕೂ, ಹವಾಮಾನ ಬದಲಾವಣೆಗೂ, ಓಝೋನ್ ಪದರಕ್ಕೂ ಸಂಬಂಧವಿದೆಯೆಂದು ಹೇಳುತ್ತಿರುವಾಗಲೇ ಸೆಪ್ಟೆಂಬರ್ ೧೬ ಕಣ್ಣ ಮುಂದೆ ಬಂದು ನಿಂತಿದೆ. ಅವತ್ತು ಅಂತಾ ರಾಷ್ಟ್ರೀಯ ಓಝೋನ್ ದಿನವಂತೆ! ಓಝೋನ್ ಪದರಕ್ಕೆ ನಿಧಾನವಾಗಿ ತೇಪೆ ಹಚ್ಚಿ, ಹರುಕನ್ನು ಮುಚ್ಚಲಾಗುತ್ತಿದೆ ಎಂದು ಸಮಾಧಾನಗೊಳ್ಳುತ್ತಿರುವಾಗಲೇ, ಆರ್ಕ್ಟ್ರಿಕ್ ಮೇಲ್ಬಾಗದಲ್ಲಿ ಬರುವ ಓಝೋನ್ ವಲಯದಲ್ಲಿ ಭಾರೀ ರಂಧ್ರವೊಂದು ಕಾಣಿಸಿಕೊಂಡಿದೆ ಎಂದೂ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಕೊಪರ್ನಿಕಸ್ ಸೆಂಟಿನೆಲ್ 5ಪಿ ಉಪಗ್ರಹದ ಮಾಹಿತಿ ಆಧರಿಸಿ ವಿಜ್ಞಾನಿಗಳ ತಂಡ ಈ ವರದಿ ಬಿಡುಗಡೆ ಮಾಡಿದೆಯಂತೆ. ಜನರ ಜಂಜಡ, ವಾಹನಗಳ ಅಬ್ಬರ, ಕೈಗಾರಿಕೆಗಳ ಅಪಸವ್ಯ ಇತ್ಯಾದಿಗಳೆಲ್ಲ ಇಲ್ಲದೇ ಭೂಮಂಡಲದ ಮೇಲಿನ ಮಾಲಿನ್ಯ ಕಡಿಮೆ ಯಾಗಿದ್ದರೂ ಓಜೋನ್ ಪರದೆ ಹರಿಯಲು ಕಾರಣವೇನೋ? ಸಂಶಯ ಸಹಜ. ಇದಕ್ಕೆ ಉತ್ತರ ಸಿಗಬೇಕೆಂದರೆ ಓಝೋನ್ ಬಗ್ಗೆ ಒಂದಷ್ಟು ಪ್ರಾಥಮಿಕ ಮಾಹಿತಿಗಳು ಗೊತ್ತಾಗಬೇಕು.

ಓಝೋನ್ ಪದರ ಒಂದಷ್ಟು ಕಣಗಳು ಗುಂಪಾಗಿ ಅಥವಾ ಸಾಲುಗಟ್ಟಿ ಸೇರಿರುವ ತಾಣ. ನಾವೆಲ್ಲ ಅಂದುಕೊಂಡಂತೆ ಓಝೋನ್ ಕಣಗಳು ನಮ್ಮ ರಕ್ಷಕನಷ್ಟೇ ಅಲ್ಲ, ಅದು ರಾಕ್ಷಸನೂ ಹೌದು. ಅವು ಎಲ್ಲಿರಬೇಕೋ ಅಲ್ಲಿದ್ದರೆ ನಮ್ಮ ರಕ್ಷಸ. ತಮ್ಮ ಸ್ಥಾನಬಿಟ್ಟು ಕೆಳಗಿಳಿದರೆ ರಾಕ್ಷಸ. ಹೌದು, ಎತ್ತರದಲ್ಲಿರುವ ವ್ಯಕ್ತಿಗಳು ಘನತೆ ಕಳೆದುಕೊಂಡರೂ ಕಷ್ಟ, ಕೆಳಗಿರುವ ವ್ಯಕ್ತಿಗಳಿಗೆ ಅಹಮಿಕೆ
ಬಂದರೂ ಅಪಾಯವೇ. ಓಝೋನ್ ವಿಚಾರದಲ್ಲೂ ಹೀಗೆಯೇ. ಮೇಲಿದ್ದು ನಮ್ಮನ್ನು ರಕ್ಷಿಸಬೇಕಾದ ಕಣಗಳು ಅನೇಕ ಬಾರಿ ಧುತ್ತೆಂದು ಕೆಳಗಿಳಿದು ನಮ್ಮ ಸುತ್ತಲೇ ಸೃಷ್ಟಿಯಾಗಿ ಅನರ್ಥ ಉಂಟುಮಾಡುತ್ತವೆ.

ನಮ್ಮ ದೇಹದೊಳಕ್ಕೆ ಹೊಕ್ಕು ನಂಜಾಗಿ ಕಾಡುತ್ತವೆ. ಮನಃಶಾಸ್ತ್ರದಲ್ಲಿ ಬರುವ split personality ಇದರದ್ದು. ಹಾಗಾದರೆ ಯಾಕೆ ಇದಕ್ಕೆ ದ್ವಿಮುಖ ವ್ಯಕ್ತಿತ್ವ? ಯಾಕಿದಕ್ಕೆ ಮಹತ್ವ? ಹೀಗೇಕೆ ವರ್ತಿಸುವುದು? ನಾವು ಉಸಿರಾಡೋ ಗಾಳಿ ಯಲ್ಲಿರುವ ಮೂಲ ವಸ್ತು ಗೊತ್ತಿದೆ ತಾನೇ? ಆಕ್ಸಿಜನ್ ಅಥವಾ ಆಮ್ಲಜನಕ. ಇದರ ಎರಡು ಪರಮಾಣುಗಳು(O೨) ಸೇರಿದರೆ ಜೀವ ಉಳಿಸು ತ್ತದೆ. ಅದೇ ನಮ್ಮ ಪ್ರಾಣ ವಾಯು. ಒಂದೊಮ್ಮೆ ಆಮ್ಲಜನಕದ ಮೂಲ ಧಾತುವಿನ ಮೂರು ಪರಮಾಣುಗಳು (O೩) ಸೇರಿದರೆ ಜೀವ ತೆಗೆ ಯುತ್ತದೆ. ಆಗ ಅದು ಸಾರಜನಕ ಅಂದರೆ ನೈಟ್ರೋಜನ್ ಆಗಿ ಪರಿವರ್ತನೆ ಆಗುತ್ತದೆ. ನಮ್ಮ ವಾಹನಗಳ ಬಿಸಿ ಹೊಗೆ, ಫ್ರೀಜನರ್ ಆವಿ, ಏಸಿಯ ಬಿಸಿಗಳಲ್ಲಿ ಈ ಮೂರನೆಯ ಅನಪೇಕ್ಷಿತ ಅತಿಥಿಯ ಉತ್ಪತ್ತಿ.

ಬಹುಶಃ ಲಾಕ್ ಡೌನ್ ಸಂದರ್ಭದಲ್ಲಿ ಓಜೋನ್ ಪದರಕ್ಕೆ ಧಕ್ಕೆ ಬಂದಿರುವುದಕ್ಕೂ ಇದೇ ಕಾರಣ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಹಲವು ಅಂಶಗಳು ವಾಯುಮಂಡಲ ಇರುವ ಓಝೋನ್ನ ಭಾಗವಾಗಿರುವ ಸ್ಟ್ರಾಟೋ ಸ್ಪಿಯರ್ ಮೇಲೆ ಗಂಭೀರ ಪರಿಣಾಮ ಬೀರಿದ್ದು ಗೊತ್ತೇ ಇದೆ. ಅದರ ಜತೆಗೆ ವಿಲಕ್ಷಣ ಎಂಬಂತೆ ಸ್ಟ್ರಾಟೋಸ್ಪಿಯರ್ ಕೆಳ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಲಾಕ್ ಡೌನ್‌ನಿಂದ ಏಕಾಏಕಿ ತಾಪಮಾನ ಭಾರೀ ಕುಸಿತ ಕಂಡಿರುವುದೂ ಓಝೋನ್ ಪತನಕ್ಕೆ ಕಾರಣವೆಮದು ವಿಶ್ಲೇಷಿಸಲಾಗುತ್ತಿದೆ.

ಆಮ್ಲಜನಕದ ಕಣಗಳಿಂದಲೇ ಆಗಿದ್ದರೂ ಈ ಓಝೋನ್‌ನ ಗುಣಧರ್ಮ ಆಮ್ಲಜನಕಕ್ಕಿಂತ ಭಿನ್ನ. ಇದು ನಮ್ಮ ಸುತ್ತ ಇರುವಷ್ಟೂ ಹೊತ್ತು ನಮ್ಮ ಉಸಿರು ಕಟ್ಟಿಸುತ್ತದೆ. ಕೆಮ್ಮು, ಶ್ವಾಸನಾಳದ ಉರಿ, ಅಸ್ತಮಕ್ಕೆ ಇತ್ಯಾದಿ ಸಮಸ್ಯೆ ಪಟ್ಟ ಪ್ರದೇಶದಲ್ಲಿ ಅಮರಿಕೊಳ್ಳಲು ಇದೇ ಕಾರಣ. ಬರೀ ಬಿಸಿಲು ಮತ್ತು ವಾಹನದ ಹೊಗೆ ಇರುವ, ಗಾಳಿಯ ಓಡಾಟವಿಲ್ಲದ ಜಾಗದಲ್ಲಿ ಓಝೋನ್ ಮಡುಗಟ್ಟುತ್ತದೆ. ಮಕ್ಕಳು ಮತ್ತು ವಯೋವೃದ್ಧರಿಗೆ ಇದು ತೀರಾ ಅಪಾಯಕಾರಿ.

ಓಝೋನ್ ಹೊರಗೆಲ್ಲಿಂದಲೋ ಬಂದು ಬೀಳುತ್ತಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ನಮ್ಮ ನಿತ್ಯಬಳಕೆಯಲ್ಲಿನ ಕಣಗಳೇ ಹೆಚ್ಚು ಅಪಾಯಕಾರಿಯಾಗಿವೆ ಎಂಬುದು ನಿಮಗೆ ಗೊತ್ತಿರಲಿ. ನಾವು ಬಳಸುವ ಸಾಬೂನು ಪುಡಿಗಳಲ್ಲಿ, ನೀರಿನ ಶುದ್ದೀಕರಣದ ಘಟಕದಲ್ಲಿ ಬಳಸುವ ರಾಸಾಯನಿಕಗಳಲ್ಲಿ, ಕಾರ್ಖಾನೆಗಳಲ್ಲಿ, ವಾಹನಗಳ ಹೊಗೆಯಲ್ಲಿ ಓಜೋನ್ ಕಣಗಳು ಮುತ್ತುತ್ತಲೇ ಇರುತ್ತವೆ. ಮೊದಲಿನ ಎರಡು ಅಂಶಗಳಲ್ಲಿ ಬಳಕೆಯಾಗುವ ಓಝೋನ್ ಅಪಾಯಕಾರಿ ಅಲ್ಲ. ಆದರೆ ಉಳಿದೆರಡರಿಂದ ಹೊರ
ಸೂಸುವ ಕಣಗಳು ತೀರಾ ಅಪಾಯಕಾರಿ.

ನಗೆಯುಕ್ಕಿಸುವ ಅನಿಲವೆಂದೇ ಹೆಸರಾದ ನೈಟ್ರಸ್ ಆಕ್ಸೈಡ್ ಸಹ ಓಝೋನ್ ಪದರಕ್ಕೆ ಧಕ್ಕೆ ತರುತ್ತದೆ ಎಂಬುದನ್ನು ಕಂಡು ಹಿಡಿದವರು ನಮ್ಮ ಹೆಮ್ಮೆಯ ಕನ್ನಡಿಗ ಅಕ್ಕಿ ಹೆಬ್ಬಾಳ ರವಿಶಂಕರ್. ಇದಲ್ಲದೇ ಸೌಕರ್ಯ, ಸವಲತ್ತುಗಳಿಗೆಂದು ನಾವು ಸಂಶೋಧಿಸುವ ಹೊಸ ಹೊಸ ಕೃತಕ ಕೆಮಿಕಲ್‌ಗಳಿಂದ, ರೆಫ್ರಿಜರೇಟರ್ ಮತ್ತು ಏರ್‌ಕಂಡೀಷನ್ ಗಳಲ್ಲಿ ಕ್ಲೋರಿನ್ ಇರುವ ಕ್ಲೋರೋ ಫ್ಲೋರೋ ಕಾರ್ಬನ್ ನಿಂದ, ಬ್ರೋಮಿನ್ ಇರುವ ಬ್ರೋಮೋ ಫ್ಲೋರೋ ಕಾರ್ಬನ್ ರಾಸಾಯನಿಕದಿಂದ, ಥರ್ಮೋ ಕೋಲ್‌ಗಳಲ್ಲಿ ಬಳಸುವ ಸಿಎಫ್ ಸಿಯಿಂದ, ಬೆವರಿನ ನಾತ ದೂರ ಮಾಡುವ ಪರಿಮಳ ದ್ರವ್ಯಗಳಿಂದ, ನೋವು ನಿವಾರಕ ತೈಲ
(ಇವು ಚಿಮ್ಮಿಸಲು ಬಳಸುವ ಸಿಎಫ್ಸಿ ಅಥವಾ ಬಿಎಫ್ ಸಿ) ಗಳಿಂದ ಓಝೋನ್ ಪದರಕ್ಕೆ ಹೆಚ್ಚಿನ ಅಪಾಯವಿದೆ.

ಒಂದು ಸಿಎಫ್ ಸಿ, ನೆಲ ಮಟ್ಟದಲ್ಲಿ ತಟಸ್ಥವಾಗಿರುತ್ತದೆ. ಆದರೆ ಅದು ಮೇಲೆ ಹೋದಂತೆಲ್ಲ ಅತಿನೇರಳೇ ಕಿರಣಗಳ ಪ್ರಭಾವಕ್ಕೆ ಒಳಪಟ್ಟು ಬೇರ್ಪಡುತ್ತವೆ. ಹೀಗೆ ಬೇರ್ಪಟ್ಟ ಒಂದು ಕ್ಲೋರಿನ್ ಕಣ, ಒಂದು ಲಕ್ಷ ಓಝೋನ್ ಕಣಗಳನ್ನು ನಾಶ ಮಾಡುತ್ತದೆ. ಇದೇ ಪ್ರಮಾಣದಲ್ಲಿ ನಾವು ಕ್ಲೋರಿನ್ ಅಥವಾ ಬ್ರೋಮಿನ್ ಸಂಯುಕ್ತಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡಿದರೆ, ಇನ್ನು ನಾಲ್ಕಾರು ವರ್ಷಗಳ ಬಳಿಕ ವಾಯುಮಂಡಲದಲ್ಲಿರುವ ಓಝೋನ್ ಪದರ ಸಂಪೂರ್ಣ ನಾಶವಾಗುವ ಅಪಾಯವಿದೆ.

ಹಾಗಾದರೆ ಏನಿದು ಓಝೋನ್ ಪದರ? ಇದನ್ನು ತಿಳಿದುಕೊಲ್ಳು ತುಸು ಇತಿಹಾಸಕ್ಕೆ ಹೋಗಬೇಕು. 1913 ರಲ್ಲಿ ಇಬ್ಬರು ಫ್ರೆಂಚ್ ವಿಜ್ಞಾನಿಗಳು ವಾತಾವರಣದ ಎತ್ತರದ ಸ್ತರದಲ್ಲಿ ಇಡೀ ಭೂಮಿಯನ್ನು ಕಾವಲು ಕಾಯುತ್ತಿರುವ ಈ ಸೈನಿಕರ ಗುಂಪನ್ನು ಕಂಡುಹಿಡಿದರು. ಸಾಮಾನ್ಯವಾಗಿ ನೆಲ ಮಟ್ಟದಿಂದ 20 ಕಿ.ಮೀ. ಎತ್ತರದಲ್ಲಿ ಈ ಅನಿಲ ತೀರಾ ತೆಳುವಾಗಿ ಹರಡಿ ಕೊಂಡಿರುತ್ತದೆ. ಸೂರ್ಯನಿಂದ ಹೊಮ್ಮುವ ಅತಿನೇರಳೇ ಕಿರಣಗಳು ತೀಕ್ಷ್ಣವಾಗಿ ಭೂಮಂಡಲವನ್ನು ರಕ್ಷಿಸುತ್ತವೆ.

ಒಂದು ರೀತಿಯಲ್ಲಿ ನಾವು ಬಳಸುವ ಸೊಳ್ಳೆ ಪರದೆಯಂತೆ. ಅಥವಾ ಭೂಮಿಯ ಈ ಬಟ್ಟೆ see through saree ಇದ್ದ ಹಾಗೆ. ಆದರೆ ಅಷ್ಟು ದಪ್ಪ ಮತ್ತು ಸದೃಢವೂ ಅಲ್ಲ. ಈ ಪೊರೆ ತೀರಾ ಅಂದರೆ ತೀರಾ ವಿರಳ ಕಣಗಳಿಂದ ಕೂಡಿರುವಂಥದ್ದು. ವಾತಾ ವರಣದಲ್ಲಿ ಇಂಗಾಲದ ಪ್ರಮಾಣ ಜಾಸ್ತಿಯಾದಂತೆಲ್ಲ ಆಗಾಗ ಛಿದ್ರಗೊಳ್ಳುವ ಈ ತೆಳು ಪರದೆ ತನ್ನಿಂದ ತಾನೇ ಜೋಡಣೆ ಗೊಳ್ಳುತ್ತ 20 ಕಿ.ಮೀ.ಗಳಿಂದ ಮೇಲಕ್ಕೆ 50 ಕಿ.ಮೀ.ನವರೆಗೂ ಕಾವಲು ಕಾಯುತ್ತ, ಸೂರ್ಯ ಶಾಖದಿಂದ ಜೀವಕೋಟಿಯನ್ನು ಕಾಪಾಡುವ ರಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುತ್ತದೆ.

ಇಡೀ 30, 40 ಕಿ.ಮೀ. ದಪ್ಪನೆಯ ಪದರವನ್ನು ನೆಲಕ್ಕೆ ಇಳಿಸಿದರೆ, ಎಲ್ಲವನ್ನೂ ಸೇರಿಸಿ ಅಪ್ಪಚ್ಚಿ ಮಾಡಿದರೆ ಹೆಚ್ಚೆಂದರೆ ಒಂದು ಕಿತ್ತಲೆ ಸಿಪ್ಪೆಯಷ್ಟು ಗಾತ್ರ, ಅಂದರೆ ಮೂರು ಮಿ.ಮೀ.ನಷ್ಟು ತೆಳುವಾಗುತ್ತದೆ. ಓಝೋನ್‌ನ ಗಾತ್ರವನ್ನು ಅಳೆಯಲು ಡಾಬ್ಸನ್ ಮೀಟರ್ ಅನ್ನು ಬಳಸಲಾಗುತ್ತದೆ. ಬ್ರಿಟೀಷ್ ವಿಜ್ಞಾನಿ ಜಿ.ಎಂ.ಬಿ. ಡಾಬ್ಸನ್, 1928ರಲ್ಲಿ ಮೊದಲ ಬಾರಿಗೆ ಓಝೋನ್ ಅಳೆಯುವ ಮೀಟರ್ ಕಂಡುಹಿಡಿದದ್ದರಿಂದ ಆತನ ಹೆಸರನ್ನೇ ಇದಕ್ಕೆ ಇಡಲಾಗಿದೆ.

ಗಮನಿಸಬೇಕಾದ ಸಂಗತಿಯೆಂದರೆ, ನಮ್ಮ ಮೇಲೆ ಹಚ್ಚಡವನ್ನು ಹೊದಿಸಿರುವ ಈ ಓಝೋನ್ ಸೀರೆ ಎಲ್ಲ ಕಡೆ ಒಂದೇ ರೀತಿ ಇಲ್ಲ. ಧ್ರುವ ಪ್ರದೇಶಗಳಲ್ಲಿ ಇದರ ಸಾಂದ್ರತೆ ದಟ್ಟವಾಗಿರುತ್ತದೆ. ಭೂಮಧ್ಯ ರೇಖೆ ಕಡೆ ಬರುತ್ತಿದ್ದಂತೇ ತೆಳುವಾಗುತ್ತ ಸಾಗುತ್ತದೆ. ಋತುಗಳು ಬದಲಾದಂತೆ ಓಝೋನ್ ಸ್ವರೂಪವೂ ಬದಲಾಗುತ್ತದೆ. ಉತ್ತರ ಧ್ರುವದ ಬಳಿ ಚಳಿಗಾಲದಲ್ಲಿ ತೆಳುವಾಗಿದ್ದರೆ,
ಬೇಸಿಗೆಯಲ್ಲಿ ದಟ್ಟವಾಗಿರುತ್ತದೆ.

ಒಂದೊಮ್ಮೆ ಸೂರ್ಯನಿಂದ ಬಿಡುಗಡೆಯಾಗುವ ಅತಿನೇರಳೇ ಕಿರಣಗಳು ನೆಲದವರೆಗೂ ಬಂದು ಬಿಟ್ಟಿದ್ದರೆ, ಅದನ್ನು ತಾಳಿ ಕೊಳ್ಳುವ ಶಕ್ತಿ ನಮಗಿಲ್ಲ. ಕ್ರಮೇಣ ಸಸ್ಯಗಳು, ಪ್ರಾಣಿಗಳು, ಸೂಕ್ಷ್ಮಜೀವಿಗಳು ಒಟ್ಟಾರೆ ಜೀವ ಸಂಕುಲದ ನಾಶಕ್ಕೆ ಇದೇ ನಾಂದಿ ಯಾಗುತ್ತದೆ. ಈಗಾಗಲೇ ಹೇಳಿದಂತೆ ನೀರಿನ ಶುದ್ಧೀಕರಣಕ್ಕೂ ಇದೇ ತಂತ್ರ ಬಳಸಲಾಗುತ್ತದೆ. ಕುಡಿಯುವ ನೀರಿನಲ್ಲಿ ಅಡಗಿರುವ ಅಸಂಖ್ಯಾತ ಸೂಕ್ಷ್ಮ ಜೀವಿಗಳನ್ನು ಕೊಲ್ಲಲು ಈ ಯುವಿ ಕಿರಣಗಳನ್ನೇ ಹಾಯಿಸಲಾಗುತ್ತದೆ.

ಒ3(ಟ3) ಮೂಲಕ ಅತಿನೇರಳೇ ಕಿರಣಗಳು ಹಾಯ್ದು ಬರುವಾಗ ಮತ್ತೆ ಆಮ್ಲಜನಕದ ಕಣಗಳು ಒಡೆಯುತ್ತವೆ. ಆಗ ಒ2 + ಒ(02+೦) ಆಗುತ್ತದೆ. ಹಾಗಾದಾಗ ಅತಿನೇರಳೇ ಕಿರಣಗಳು ಧ್ವಂಸವಾಗುತ್ತವೆ. ಗುಂಪಿನಿಂದ ಬೇರ್ಪಟ್ಟ ಒಂದು ಒ ಪರಮಾಣು ಮತ್ತೆ ತುಂಟತನ ಶುರು ಮಾಡುತ್ತದೆ. ಅದು ಕೆಳಗಿಳಿದು ಮತ್ತೊಂದು ಒ2 ಕುಟುಂಬಕ್ಕೆ ಸೇರಲು ಹವಣಿಸುತ್ತದೆ. ಕ್ಷಣ ಕ್ಷಣವೂ ನಡೆಯುವ ಈ ಜಟಾಪಟಿಯಲ್ಲಿ ಅತಿನೇರಳೇ ಕಿರಣಗಳ ಶೇಕಡಾ 90 ಭಾಗ ಅ ಬೆಚ್ಚಿ ನಿಲ್ಲುತ್ತವೆ. ಇದೇ ಜೀವ ಕೋಟಿಗೆ ಮಾಡುವ
ಉಪಕಾರ.

ಒಂದೊಮ್ಮೆ ಹೀಗಾಗದಿದ್ದರೆ ಸಂಪೂರ್ಣ ಪರದೆ ಹರಿದು ಹೋಗಿ ಇಡೀ ಜೀವ ಸಂಕುಲ ನಾಶವಾಗುತ್ತಿತ್ತು. ಹರಿದ ಓಜೋನ್ ಬಟ್ಟೆ ತನ್ನಿಂದ ತಾನೇ ಸೇರಿಕೊಂಡು ಸರಿಯಾಗುತ್ತಲೇ ಇರುತ್ತದೆ. ಹಾಗೆಂದು ನಾವು ಸುಮ್ಮನೆ ಊರುವಂತಿಲ್ಲ. ನಮ್ಮಲ್ಲಿನ್ನೂ ಸಿಎ-ಸಿ ಬಳಕೆ ಪೂರ್ಣ ನಿಷೇಧಗೊಂಡಿಲ್ಲ. ಜತೆಗೆ ಹೊಸ ಹೊಸ ಕೆಮಿಕಲ್‌ಗಳು ಬಳಕೆಯಾಗುತ್ತಲೇ ಇವೆ. ಪಾಶ್ಚಿಮಾತ್ಯ ದೇಶಗಳು ಪ್ರತೀ
ದಿನ ಇದರ ಮೇಲೆ ಕಣ್ಣಿಟ್ಟಿzರೆ. ಪ್ರತೀ ಘನ ಮೀ.ಗೆ ಒಂದು ಗಂಟೆಯ ಅವಽಯಲ್ಲಿ 100 ಮೈಕ್ರೋ ಗ್ರಾಂ.ನಷ್ಟಿದ್ದರೆ ತೊಂದರೆ ಯಿಲ್ಲ, 180ಕ್ಕೆ ಏರಿದರೆ ಅಪಾಯಕಾರಿ. ಒಂದೊಮ್ಮೆ 360ಕ್ಕೆ ಏರಿದರೆ ಅವಘಡ.

ಇದಕ್ಕೊಂದು ತಾಜಾ ಉದಾಹರಣೆ ಪ್ಯಾರೀಸ್‌ನ ತುರ್ತು ಸ್ಥಿತಿ. 1997ರಲ್ಲಿ ಪ್ಯಾರೀಸ್‌ನಲ್ಲಿ ಅದೊಂದು ದಿನ ಅತೀ ಹೊಗೆ ಮತ್ತು ಮಂಜು (ಹೊಂಜು) ದಟ್ಟವಾಗಿತ್ತು. ಇಂತಹ ತುರ್ತು ಸ್ಥಿತಿ ಅಲ್ಲಿ ಮೂರು ಬಾರಿ ನಿರ್ಮಾಣ ವಾಗಿತ್ತು. ಇದಕ್ಕೆ ಕಾರಣ ಪ್ಯಾರೀಸ್ ನಗರದಲ್ಲಿ ಬಳಕೆ ಯಾಗುವ ಜಗತ್ತಿನಲ್ಲಿಯೇ ಅತೀ ಹೆಚ್ಚು ಸಂಖ್ಯೆಯ ಡೀಸೆಲ್ ವಾಹನಗಳು. ಡೆಲ್ಲಿಯೂ ಇಂತಹ ಪರಿಸ್ಥಿತಿ
ಯಿಂದ ಹೆಚ್ಚೇನೂ ದೂರವಿಲ್ಲ.

1978ರಲ್ಲಿ ಕೆನಡಾ, ಅಮೇರಿಕ ಹಾಗೂ ನಾರ್ವೆ ದೇಶಗಳು ಸಿಎ-ಸಿಗೆ ನಿಷೇಧ ಹೇರಿವೆ. ಅಷ್ಟರಗಲೇ ಅಟ್ಲಾಂಟಿಕ್ ಮಹಾಸಾಗದರ ಮೇಲೆ ಓಝೋನ್ ಬಟ್ಟೆ ಹರಿದುಹೋಗಿತ್ತು. ಇದನ್ನರಿಯದ ಯೂರೋಪಿಯನ್ನರು ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದರು. ಆಗ ಬಂದದ್ದೇ ಕೆನಡಾದ ಮಾಂಟ್ರಿಯಲ್ ಒಪ್ಪಂದ (1987) ಸಿಎ-ಸಿ ಬದಲಾಗಿ ಎಚ್‌ಸಿಎ-ಸಿ (ಹೈಡ್ರೋ-
ಕ್ಲೋರೋ-ಫ್ಲೋರೋ ಕಾರ್ಬನ್) ಬಳಸಬೇಕೆಂಬ ನಿಯಮ ಜಾರಿಯಾದದ್ದೇ ಆಗ. ಜತೆಗೆ ೨೦೧೯ ರಲ್ಲಿ ‘32
Years and Healing’ ಎಂಬ ಘೋಷಣೆಯ ಮೂಲಕ ಕನಿಷ್ಠ ಮೂರು ದಶಕಗಳ ಕಾಲ ಜಗತ್ತಿನ ಎಲ್ಲ ರಾಷ್ಟ್ರಗಳೂ ಓಝೋನ್ ಪದರ ರಕ್ಷಣೆಗೆ ಕೈ ಜೋಡಿಸಬೇಕೆಂಬ ಒಪ್ಪಂದವನ್ನು ಜಾರಿಗೊಳಿಸಲಾಯಿತು.

ಯಾವುದೆಲ್ಲ ಓಝೋನ್ ಪರದೆ ಹರಿಯುತ್ತದೆ ಎಂಬುದು ನಮಗೆ ಗೊತ್ತಾದ ಮೇಲೆ ಅವುಗಳ ಬಳಕೆಯನ್ನು ಕಡಿಮೆ ಮಾಡುವುದೇ ಇದಕ್ಕಿರುವ ಸುಲಭ ಪರಿಹಾರ. ಇದರ ಜತೆ ಕೆಲವೊಂದು ಸರಳ ಕ್ರಮಗಳನ್ನು ಅಳವಡಿಸಿಕೊಂಡರೆ ಉತ್ತಮ. 15 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳ ಬಳಕೆ ಬೇಡವೇ ಬೇಡ. ನಗರದ ವಾಯುಮಾಲಿನ್ಯದ ಅಳತೆಯ ಜತೆ ಓಝೋನ್ ಮಾಲಿನ್ಯವನ್ನೂ ಅಳೆಯೋಣ. ಈ ಬಗ್ಗೆ ಜಾಗ್ರತೆ ಮೂಡಿಸುವ ಕಾರ್ಯ ಮಾಡೋಣ. ಸಿಗ್ನಲ್‌ಗಳಲ್ಲಿ, ಮಾತನಾಡುತ್ತ ನಿಂತಾಗ ವಾಹನಗಳ ಎಂಜಿನ್ ಆಫ್ ಮಾಡೊಣ. ಸಾರ್ವಜನಿಕ ವಾಹನ ಬಳಕೆ ಹೆಚ್ಚಿಸೋಣ.

ಹತ್ತಿರದ ಸ್ಥಳಕ್ಕೆ ಸೈಕಲ್ ಸವಾರಿಯೇ ಉತ್ತಮ. ಬಸ್, ರೈಲುಗಳಲ್ಲೂ ಏಸಿ ಬೇಕೆಂಬ ಸೌಕರ್ಯಬಾಕತನ ತೊರೆದು ಫ್ರಿಜ್, ಏಸಿ ಗಳಿಂದ ಸಾಧ್ಯವಾದಷ್ಟು ದೂರವಿರೋಣ. ಎಲ್ಲಕ್ಕಿಂತ ಮುಕ್ಯವಾಗಿ ರಾಸಾಯನಿಕಗಳಿಂದ ದೂರವುಳಿದು ಸಾವಯವ ಕೃಷಿ
ಉತ್ತೇಜಿಸೋಣ.