Friday, 20th September 2024

ವಿವೇಕವುಳ್ಳ ವೈದ್ಯರು ಅಗತ್ಯ: ಡಾ.ಅನುಪಮಾ

ವೈದ್ಯ ವೈವಿಧ್ಯ

drhsmohan@gmail.com

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ವೈದ್ಯರು ಹಣ ಗಳಿಸುವ ಯಂತ್ರಗಳಾಗಿರುವರೇ ಹೊರತು, ಮಾನವೀಯ ಗುಣಗಳ ವೈದ್ಯರಾಗಿಲ್ಲ.
ಜನರ ಸಮಸ್ಯೆ ಅರ್ಥಮಾಡಿಕೊಂಡು ತಿಳಿವಳಿಕೆ ನೀಡುವಲ್ಲಿ ವೈದ್ಯರಿಗೆ ಆಸಕ್ತಿ ಇಲ್ಲ. ನಮಗೀಗ ಜಾಣವೈದ್ಯರಿಗಿಂತ ವಿವೇಕವುಳ್ಳ ವೈದ್ಯರು ಬೇಕಾಗಿದ್ದಾರೆ.

ಕಳೆದ ವಾರದ ವೈದ್ಯಕೀಯ ಸಾಹಿತ್ಯ ಅವಲೋಕನವನ್ನು ಮುಂದುವರಿಸುತ್ತ, ಈ ವಾರ ಡಾ. ಅನುಪಮಾ ನಿರಂಜನ ಮತ್ತು ಡಾ. ಡಿ.ಎಸ್. ಶಿವಪ್ಪ ಇವರುಗಳ ಅಭಿಪ್ರಾಯಗಳನ್ನು ಗಮನಿಸೋಣ. ೫೫ ವರ್ಷದ ಡಾ. ಅನುಪಮಾ ನಿರಂಜನ ಅವರು ಸೃಷ್ಟಿಸಿದ ಸಾಹಿತ್ಯ ಅಗಾಧವಾದುದು.
೧೯೫೨ರಿಂದಲೂ ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರು ಇದುವರೆಗೆ ಹಲವು ನೂರು ಬಿಡಿಲೇಖನಗಳು, ೧೦ ವೈದ್ಯಕೀಯ ಪುಸ್ತಕಗಳು, ೯ ಕಥಾಸಂಗ್ರಹಗಳು, ೨೧ ಕಾದಂಬರಿಗಳು, ೧ ನಾಟಕ, ೧೩ ಶಿಶುಸಾಹಿತ್ಯದ ಪುಸ್ತಕಗಳು, ೧ ಆತ್ಮವೃತ್ತ, ೨ ಪ್ರವಾಸ ಕಥನ, ೨ ಲೇಖನ ಸಂಗ್ರಹ, ೩ ಮಹಿಳೆಯರ ಪುಸ್ತಕಗಳನ್ನು ರಚಿಸಿದ್ದಾರೆ.

ಇನ್ನೂ ಬರೆಯುತ್ತಲೇ ಇದ್ದಾರೆ. ಇವರ ಕೆಲವು ಪುಸ್ತಕಗಳು ಎಷ್ಟು ಜನಪ್ರಿಯವಾಗಿವೆ ಎಂಬುದಕ್ಕೆ ಇವರ ‘ದಾಂಪತ್ಯ ದೀಪಿಕೆ’ ಕೃತಿ ೧೪ ಬಾರಿ ಪುನರ್  ಮುದ್ರಣಗೊಂಡಿದೆ (ಪ್ರತಿಬಾರಿ ೩,೦೦೦ ಪ್ರತಿಗಳು), ‘ತಾಯಿ ಮಗು’ ಕೃತಿ ೧೨ ಬಾರಿ, ‘ಕೇಳು ಕಿಶೋರಿ’ ೫ ಬಾರಿ ಪುನರ್‌ಮುದ್ರಣ
ಗೊಂಡಿವೆ ಎಂಬ ಅಂಶವೇ ಸಾಕ್ಷಿ. ಅಲ್ಲದೆ, ಇವರ ಅನೇಕ ಲೇಖನಗಳು, ಕಥೆಗಳು, ಪುಸ್ತಕಗಳು ಮಲಯಾಳಂ, ತೆಲುಗು, ಇಂಗ್ಲಿಷ್, ಜರ್ಮನ್, ಉರ್ದು, ಮರಾಠಿ ಭಾಷೆಗಳಿಗೆ ಭಾಷಾಂತ ರಗೊಂಡಿವೆ. ಇವರಿಗೆ ಸಂದ ಪ್ರಶಸ್ತಿಗಳು, ಪುರಸ್ಕಾರಗಳು ಹಲವು.

ಮುಖ್ಯವಾದವುಗಳೆಂದರೆ- ೧೯೭೮ರ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೮ರ ಸೋವಿಯೆಟ್ ಲ್ಯಾಂಡ್ ನೆಹರು ಪ್ರಶಸ್ತಿ, ೧೯೮೧ರ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೮೭ರ ನಂಜನಗೂಡು ತಿರುಮಲಾಂಬ ರಾಷ್ಟ್ರೀಯ ಪ್ರಶಸ್ತಿ. ಅಲ್ಲದೆ ೧೯೮೮ರಲ್ಲಿ ಪುತ್ತೂರು ಕರ್ನಾಟಕ ಸಂಘದವರು ‘ಅನುಪಮಾ ಅಭಿನಂದನ’ ಎಂಬ ಬೃಹತ್ ಗ್ರಂಥ ಪ್ರಕಟಿಸಿ ಸನ್ಮಾನಿಸಿದರು. ಇವರ ‘ಋಣ’ ಕಾದಂಬರಿಯು ಪುಟ್ಟಣ್ಣ ಕಣಗಾಲರ ನಿರ್ದೇಶನದಲ್ಲಿ ಚಲನಚಿತ್ರ ಕೂಡ ಆಗಿದೆ. ಪ್ರಸಿದ್ಧ ಸಾಹಿತಿ ನಿರಂಜನರ ಪತ್ನಿ ಡಾ. ಅನುಪಮಾ ಸ್ವತಃ ಅನಾರೋಗ್ಯದಿಂದ ಬಳಲುತ್ತಿದ್ದರೂ, ಬೇರೆಯವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ ನಡೆಸಿದ ಈ ‘ಸಾಹಿತ್ಯಯಜ್ಞ’ವನ್ನು ಎಷ್ಟು ವಿವರಿಸಿದರೂ ಕಡಿಮೆಯೇ.

ಪ್ರಶ್ನೆ ೧: ಕನ್ನಡದಲ್ಲಿ ವೈದ್ಯಕೀಯ ಲೇಖನಗಳು, ಪುಸ್ತಕಗಳು ನೀವು ಮೊದಲು ಬರೆಯುವಾಗ ಪ್ರಕಟಗೊಳ್ಳುತ್ತಿದ್ದುದಕ್ಕಿಂತ ಈಗ ಜಾಸ್ತಿ ಪ್ರಕಟಗೊಳ್ಳುತ್ತಿವೆಯೇ? ಇದಕ್ಕೆ ಕಾರಣ ಹೇಳಬಲ್ಲಿರಾ? ಸುಮಾರು ೨೫ ವರ್ಷಗಳಿಂದ ನಾನು ವೈದ್ಯಕೀಯ ಲೇಖನಗಳನ್ನು ಬರೆಯುತ್ತಿದ್ದೇನೆ. ಹಿಂದಿಗಿಂತ ಈಗ ಇಂಥ ಲೇಖನಗಳ ಪ್ರಕಟಣೆ ಜಾಸ್ತಿಯಾಗಿದೆ. ಇದಕ್ಕೆ ಓದುಗರ ತೀವ್ರ ಆಸಕ್ತಿಯೇ ಮುಖ್ಯಕಾರಣ. ಕನ್ನಡದಲ್ಲಿ ಸಮರ್ಥವಾಗಿ
ಬರೆಯಬಲ್ಲ ವೈದ್ಯರೂ ಹೆಚ್ಚಾಗಿದ್ದಾರೆ. ತತ್ಪರಿಣಾಮವಾಗಿ ಅನೇಕ ಪತ್ರಿಕೆಗಳಲ್ಲಿ ವೈದ್ಯಕೀಯ ಲೇಖನಗಳನ್ನು ಕಾಣಬಹುದು. ಅವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲೂ ಪ್ರಕಾಶಕರು ಮುಂದೆ ಬರುತ್ತಿದ್ದಾರೆ.

ಪ್ರಶ್ನೆ ೨: ನಿಮ್ಮ ಅಭಿಪ್ರಾಯದಲ್ಲಿ ವೈದ್ಯಕೀಯ ಲೇಖನಗಳ ಬಗ್ಗೆ ಜನರ ನಿರೀಕ್ಷೆ ಏನು?
ಜನರು (ಪಟ್ಟಣಗಳಲ್ಲಿ) ಹೆಚ್ಚು ಪ್ರಜ್ಞಾವಂತರಾಗುತ್ತಿರುವುದರಿಂದ ಅವರಿಗೆ ತಮ್ಮ ದೇಹ, ಅದರ ಕಾರ್ಯವಿಧಾನ, ರೋಗಗಳು, ಆಹಾರ ಮುಂತಾ
ದವುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅಪೇಕ್ಷೆ ಇದೆ. ಈ ಬಗ್ಗೆ ವಿವರ, ಮಾಹಿತಿಗಳನ್ನು ಅವರು ವೈದ್ಯಕೀಯ ಲೇಖನಗಳಿಂದ ನಿರೀಕ್ಷಿಸುತ್ತಾರೆ. ಈ
ಲೇಖನಗಳು ಸ್ಪಷ್ಟವಾಗಿ, ಸರಳವಾಗಿ, ಸುಲಭವಾಗಿ ಅರ್ಥವಾಗುವ ಹಾಗೆ ಇರಬೇಕು ಎಂದು ಅವರು ಆಶಿಸುತ್ತಾರೆ. ಲೇಖನಗಳಿಗೆ ಚಿತ್ರಗಳಿದ್ದಷ್ಟೂ
ಗ್ರಹಿಸುವುದು ಸುಲಭ ಎಂಬುದು ಅವರ ನಂಬಿಕೆ.

ಪ್ರಶ್ನೆ ೩: ಪತ್ರಿಕಾ ಲೇಖನಗಳು, ಪುಸ್ತಕಗಳ ಇತಿಮಿತಿಗಳು ಏನು?
ಪತ್ರಿಕಾ ಲೇಖನಗಳು ಹಲವು ಲಕ್ಷ ಓದುಗರನ್ನು ತಲುಪುತ್ತವೆ. ಎಷ್ಟೋ ಜನ ಇವುಗಳ ಕಟಿಂಗ್ ಇಟ್ಟುಕೊಳ್ಳುತ್ತಾರೆ. ಆದರೆ ಇವು ಬೇಕಾದಾಗ ಕೈಗೆ
ಸಿಕ್ಕುವುದಿಲ್ಲ. ಆದ್ದರಿಂದ ಅವು ಪುಸ್ತಕ ರೂಪದಲ್ಲಿ ಬಾರದಿದ್ದರೆ ಬಹಳ ಅನ್ಯಾಯವಾಗುತ್ತದೆ. ಈ ದೃಷ್ಟಿಯಿಂದ ಪುಸ್ತಕಗಳು ಶಾಶ್ವತವಾಗಿ ಉಳಿದು,
ಅಗತ್ಯ ಬಿದ್ದಾಗ ಆಕರ ಸಾಮಗ್ರಿಯಾಗಬಲ್ಲವು. ಆದರೆ ಪುಸ್ತಕ ಕೊಳ್ಳುವವರ ಸಂಖ್ಯೆ ನಮ್ಮಲ್ಲಿ ಕಡಿಮೆ. ಜತೆಗೆ ಪುಸ್ತಕಜ್ಞಾನದಿಂದ ಅನೇಕರು ಸ್ವ-ಚಿಕಿತ್ಸೆ ಮಾಡಿಕೊಳ್ಳುವ ಅಪಾಯವೂ ಇದೆ.

ಪ್ರಶ್ನೆ ೪: ಕೆಲವು ವೈದ್ಯರು ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳನ್ನು ‘ಕೇಸ್’ಗಳೆಂದು ಪರಿಗಣಿಸಿ ಮಾನವೀಯ ಅಂಶಗಳನ್ನು ಗೌಣವಾಗಿಸುತ್ತಾರೆ
ಎಂಬ ದೂರಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇಂದಿನ ಸೂಪರ್ ಸ್ಪೆಷಲೈಸೇಷನ್‌ನಿಂದಾಗಿರೋಗಿಯನ್ನು ಬಿಡಿಬಿಡಿಯಾಗಿ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ರೋಗಿಯ ಸಾಮಾಜಿಕ,
ಕೌಟುಂಬಿಕ ಹಿನ್ನೆಲೆಯ ಬಗ್ಗೆ ಏನೂ ತಿಳಿದಿರುವುದಿಲ್ಲವಾದ್ದರಿಂದ, ರೋಗಿ-ವೈದ್ಯರುಗಳ ನಡುವೆ ಆತ್ಮೀಯತೆ ಮೂಡಲು ಸಾಧ್ಯವೇ ಇಲ್ಲ. ಇಂಥ
ಪರಿಸ್ಥಿತಿಯಲ್ಲಿ ಮಾನವೀಯತೆ, ಅನುಕಂಪಗಳು ಸಹಜವಾಗಿ ಗಾಳಿಪಾಲು.

ಪ್ರಶ್ನೆ ೫: ವೈದ್ಯರ ಗುಣಮಟ್ಟಗಳು ಈಗೀಗ ಇಳಿಮುಖವಾಗುತ್ತಿದೆಯೇ? ಏಕೆ?
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ವೈದ್ಯರ ಲೌಕಿಕ ಆಸಕ್ತಿ ವಿಪರೀತವಾಗುತ್ತಿದೆ. ಇದರಿಂದ ಅವರು ಹಣ ಗಳಿಸುವ ಯಂತ್ರಗಳಾಗಿರುವರೇ ಹೊರತು, ಮಾನವೀಯ ಗುಣಗಳ ವೈದ್ಯರಾಗಿಲ್ಲ. ಜನರ ಸಮಸ್ಯೆ ಅರ್ಥಮಾಡಿಕೊಳ್ಳುವುದು, ಅವರಿಗೆ ತಿಳಿವಳಿಕೆ ನೀಡುವು ಮುಂತಾದವುಗಳಲ್ಲಿ ವೈದ್ಯರಿಗೆ ಆಸಕ್ತಿ ಇಲ್ಲ. ನಮಗೀಗ ಜಾಣವೈದ್ಯರಿಗಿಂತ ವಿವೇಕವುಳ್ಳ ವೈದ್ಯರು ಬೇಕಾಗಿದ್ದಾರೆ.

ರೋಗಿಗಳನ್ನು ಕೇವಲ ಅಂಕಿಗಳೆಂದು ಭಾವಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ: ಡಾ.ಡಿ.ಎಸ್.ಶಿವಪ್ಪ ಕನ್ನಡದಲ್ಲಿ ವೈದ್ಯಕೀಯ ಲೇಖನ ಬರೆಯುವ
ಯಾವುದೇ ಹೊಸ ಲೇಖಕರಿಗೆ ಎದುರಾಗುವ ಸಮಸ್ಯೆ ಎಂದರೆ ಪಾರಿಭಾಷಿಕ ಶಬ್ದಗಳ ಭಾಷಾಂತರದ ಸಮಸ್ಯೆ. ಈ ಸಮಸ್ಯೆಯನ್ನು ಮೊದಲೇ
ಮನಗಂಡು ಅದಕ್ಕೆ ಪರಿಹಾರವಾಗಿ ವೈದ್ಯತಾಂತ್ರಿಕ ಪದಗಳ- ಗ್ರೀಕ್ ಲ್ಯಾಟಿನ್ ಮೂಲಗಳ ಆಳವಾದ ಅಭ್ಯಾಸ ಮಾಡಿ ೧೯೭೩ರಲ್ಲಿ ‘ಇಂಗ್ಲಿಷ್-ಕನ್ನಡ ವೈದ್ಯ ಪದಕೋಶ’ವನ್ನು ಪ್ರಕಟಿಸಿದ್ದು ಡಾ. ಡಿ. ಎಸ್. ಶಿವಪ್ಪ ಅವರ ಅಮೂಲ್ಯ ಕೊಡುಗೆ.

ದರಲ್ಲಿರುವ ಎಲ್ಲ ಪದಗಳನ್ನೂ ಬಳಸುವ ಬಗ್ಗೆ ವಿವಾದವಿದ್ದರೂ, ಇಂಥ ಒಂದು ಪ್ರಯತ್ನ ಅಪೂರ್ವ ಎಂಬುದರ ಬಗ್ಗೆ ಎರಡು  ಮಾತಿಲ್ಲ. ಈ
ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ದೊರಕಿದೆ. ಬಹುಶಃ ಭಾರತದ ಬೇರೆ ಯಾವ ಭಾಷೆಯಲ್ಲೂ ಇಂಥ ಪದಕೋಶ
ಇರಲಾರದು. ೧೯೮೭ರಲ್ಲಿ ಇದರ ಪರಿಷ್ಕೃತ ಆವೃತ್ತಿ ಹೊರಬಂದಿದೆ. ಇದೇ ವಿಚಾರವಾಗಿ ೨೫ ವರ್ಷಗಳ ಆಳ ಸಂಶೋಧನೆಯ ಫಲವಾಗಿ ರಚಿಸಿರುವ ‘ತಾಂತ್ರಿಕ ವೈದ್ಯಪದಗಳ ಹುಟ್ಟು-ರಚನೆ’ ಪುಸ್ತಕ ಸದ್ಯದಲ್ಲಿಯೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಕಟಗೊಳ್ಳಲಿದೆ.

೧೯೫೯ರಲ್ಲಿ ‘ಪ್ರಪಂಚ’ ವಾರಪತ್ರಿಕೆಯಲ್ಲಿನ ಪೆನ್ಸಿಲಿನ್ ವಿಚಾರದ ಲೇಖನದಿಂದ ಶುರುವಾಗಿ ಇದುವರೆಗೆ ೫೦೦ಕ್ಕೂ ಹೆಚ್ಚಿನ ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಡಾ. ಶಿವಪ್ಪ ಪ್ರಕಟಿಸಿದ್ದಾರೆ. ಮೈಸೂರು, ಚಿಕ್ಕಬಳ್ಳಾಪುರ, ಸಾಗರ, ಚಿಂತಾಮಣಿಯ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಾಗಿದ್ದು,
ನಂತರ ಔಷಧ ಶಾಸದಲ್ಲಿ ಎಂ.ಡಿ ಮಾಡಿ ಹುಬ್ಬಳ್ಳಿ, ಮೈಸೂರು, ಬೆಂಗಳೂರಿನ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ, ನಂತರ ಸೇಂಟ್
ಜಾನ್ ವೈದ್ಯಕೀಯ ಕಾಲೇಜು ಬೆಂಗಳೂರು, ಆದಿಚುಂಚನಗಿರಿ ವೈದ್ಯವಿಜ್ಞಾನ ಸಂಸ್ಥೆಗಳಲ್ಲಿ ಔಷಧಶಾಸದ ಅಧ್ಯಾಪಕರಾಗಿ, ಪ್ರೊಫೆಸರ್ ಆಗಿ
ಈಗ ನಿವೃತ್ತರಾಗಿದ್ದಾರೆ. ಇದುವರೆಗೆ ೬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ‘ಆರೋಗ್ಯ ಮಾಲೆ’ಯಲ್ಲಿ ೧೬ ವೈದ್ಯ ಪುಸ್ತಕಗಳು ಇವರ ಸಂಪಾದಕತ್ವದಲ್ಲಿ ಪ್ರಕಟವಾಗಿವೆ. ಹಲವು ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಇವರ ಮತ್ತೊಂದು ಪ್ರಮುಖ ಕಾಣಿಕೆ ಎಂದರೆ, ‘ರೀಡರ್ಸ್ ಡೈಜೆಸ್ಟ್’ನಲ್ಲಿ ಪ್ರಕಟವಾಗುವ ‘ಕೋಟಬಲ್ ಕೋಟ್ಸ್’ನಂಥ ಸಾವಿರಾರು ಚತುರೋಕ್ತಿಗಳನ್ನು ಕನ್ನಡೀಕರಿಸಿ ‘ನುಡಿ ಕಿಡಿ’ ಎಂಬುದಾಗಿ ೧೯೮೪ರಲ್ಲಿ ಪ್ರಕಟಿಸಿದ್ದಾರೆ. ವೈದ್ಯವಿದ್ಯಾರ್ಥಿಯಾಗಿದ್ದಾಗಿ
ನಿಂದಲೂ ವೈದ್ಯವೃತ್ತಿಗೆ ಸಂಬಂಧಿಸಿದ ಎಲ್ಲ ಶಾಖೆಗಳ ಪ್ರಖ್ಯಾತ ವೈದ್ಯರ ಸುಭಾಷಿತಗಳನ್ನು ಇಂಗ್ಲಿಷ್‌ನಲ್ಲಿ ಕಲೆಹಾಕಿದ್ದು, ಅದು ಪ್ರಕಟಣೆಗೆ
ಸಿದ್ಧವಾಗಿದೆ.

ಪ್ರಶ್ನೆ ೧: ನಿಮ್ಮ ಅಭಿಪ್ರಾಯದಲ್ಲಿ ವೈದ್ಯಕೀಯ ಲೇಖನಗಳ ಬಗ್ಗೆ ಜನರ ನಿರೀಕ್ಷೆ ಏನು?
ಪ್ರಚಲಿತ ರೋಗ-ರುಜಿನಗಳ ವಿಚಾರವಾಗಿ ವೈದ್ಯಲೇಖನಗಳು ಜನರಿಗೆ ಹೆಚ್ಚಿನ ತಿಳಿವಳಿಕೆ ಯನ್ನು ನೀಡುವತಿರಬೇಕು. ಹೊಸ ಸಂಶೋಧನೆ ಗಳನ್ನೂ ತಿಳಿಸಿಕೊಡಬೇಕು. ರೋಗ ಬಾರದಂತೆ ತಡೆಯುವ ಉಪಾಯಗಳು ಜನರಿಗೆ ಮುಖ್ಯವೆನಿಸಿದರೂ, ಅನೇಕರು ಹೊಗೆ ಸೇದುವಂಥ
(ಧೂಮಪಾನಗಳ) ತಮ್ಮ ಚಟಗಳ ವಿಚಾರವಾಗಿ ಮಗೆ ಇಷ್ಟವಾಗದ ಸಲಹೆಗಳನ್ನು ದೂರ ತಳ್ಳುವರು. ರೋಗಿಗಳು ಬಳಸುವ, ವೈದ್ಯರ ಚೀಟಿ
ಇಲ್ಲದೆ ಕೊಳ್ಳಬಹುದಾದ ಸಾಮಾನ್ಯ ದಿನಬಳಕೆಯ ಔಷಧಗಳ ವಿಚಾರವಾಗಿ ಜನರಿಗೆ ಯಾರೂ ತಿಳಿಸಿಕೊಡುತ್ತಿಲ್ಲ.

ಇಂಗ್ಲಿಷ್‌ನಲ್ಲಿ ಅನೇಕ ಪುಸ್ತಕಗಳಿವೆ. ಜನರಿಗೆ ಇವುಗಳ ಮಾಹಿತಿಯನ್ನು ಕೊಟ್ಟರೆ ವೈದ್ಯರೊಂದಿಗೆ ಇನ್ನೂ ಚೆನ್ನಾಗಿ ಸಹಕರಿಸಬಲ್ಲರು.
ಮುಂದುವರಿದ ದೇಶಗಳಲ್ಲಿ ಮಾಡುತ್ತಿರುವಂತೆ ತೀರಾ ಸಾಮಾನ್ಯ ರೋಗಗಳ ವಿಚಾರವಾಗಿ ಸೂಕ್ಷ್ಮ ವಾದ ಸಲಹೆ, ಸೂಚನೆ, ಮಾಹಿತಿ ನೀಡುವಂಥ ಕಿರುಹೊತ್ತಗೆಗಳನ್ನು ಪ್ರಕಟಿಸಿ ಹಂಚಿದರೆ ವೈದ್ಯರು ಪ್ರತಿಯೊಬ್ಬ ರೋಗಿಗೂ ಹೇಳಬೇಕಾದ ವಿಚಾರಗಳನ್ನೆಲ್ಲ ಚಾಚೂತಪ್ಪದೆ ತಿಳಿಸಿದಂತಾಗುತ್ತದೆ.

ಪ್ರಶ್ನೆ ೨: ವೈದ್ಯರ ಗುಣಮಟ್ಟಗಳು ಈಗೀಗ ಇಳಿಮುಖವಾಗುತ್ತಿವೆಯೇ? ಏಕೆ?

ರೋಗಿಗಳನ್ನು ಕೇವಲ ಅಂಕಿಗಳೆಂದು ಭಾವಿಸುವ ಪ್ರವೃತ್ತಿಯು, ಸೇವಾತತ್ಪರತೆಗೆ ಹೆಸರಾದ ಬೇರೆ ವೃತ್ತಿಗಳ ಹಾಗೆಯೇ ವೈದ್ಯರಲ್ಲೂ ಈಗೀಗ
ತುಂಬುತ್ತಿದೆ. ಶಿಕ್ಷಕರ ಸ್ಥಿತಿಯೂ ಇದೇ ಗತಿಗೆ ಇಳಿಯುತ್ತಿದೆ. ಇತ್ತೀಚೆಗೆ ಬಹುಮಟ್ಟಿಗೆ ವೈದ್ಯಕೀಯವೂ ಒಂದು ವ್ಯಾಪಾರವಾಗಿ ಪರಿಣಮಿಸಿ ರುವುದರಿಂದ, ಯಾವ ರೋಗಿ ತನ್ನಲ್ಲಿಗೆ ಬಂದರೂ ಅವನಿಂದ ಎಷ್ಟು ಹಣ ಗಿಟ್ಟಿಸಬಹುದೆಂಬ ವೈದ್ಯರ ಚಿಂತೆ ಕಾಲಿಡುತ್ತಿದೆ. ಇಂಥ ವ್ಯಾಪಾರಿದೃಷ್ಟಿ ಇರುವವರಲ್ಲಿ ಮಾನವೀಯತೆಗೆ ಅವಕಾಶವೇ ಇಲ್ಲ, ನೀತಿ-ನಿಯಮಗಳಿಲ್ಲ. ಇದರ ವಿನಾಯಿತಿ ಎಂಬಂತೆ, ಸೇವೆಯ ಮನೋಭಾವದಿಂದ
ವರ್ತಿಸುವ ವೈದ್ಯರು ಈಗಲೂ ತಾರೆಗಳಂತೆ ಅಲ್ಲಲ್ಲಿ ಮಿನುಗುವರು.

ಪ್ರಪಂಚದ ೨ನೇ ಮಹಾಯುದ್ಧದ ಹಿಂದಿನ ಕಾಲಕ್ಕೆ ಹೋಲಿಸಿದರೆ ವೈದ್ಯವಿಜ್ಞಾನಗಳಲ್ಲಿ ಅಪಾರ ಮುನ್ನಡೆಯಾಗಿದೆ. ಆದರೆ ಹಿಂದಿನ
ಕಾಲದ ‘ವೈದ್ಯ-ರೋಗಿ’ಯ ಸಂಬಂಧದ ಬದಲಾಗಿ ವ್ಯಾಪಾರದ ಒಪ್ಪಂದ ಬಂದು ಕುಳಿತಿದೆ. ಹಿಂದಿನ ಕಾಲದಲ್ಲಿ ಕುಟುಂಬ ವೈದ್ಯರು
ಇರುತ್ತಿದ್ದರು; ಕುಟುಂಬದಲ್ಲಿ ಯಾರಿಗೇನೇ ಆದರೂ ಆ ವೈದ್ಯರು ನೆರವಾಗುತ್ತಿದ್ದರು. ಆದರೆ ಈಗೀಗ ವಿಶೇಷ ತಜ್ಞವೈದ್ಯರಲ್ಲಿಗೆ ಹೋಗಬೇಕೆಂದು
ನಿರ್ಧರಿಸುವ ಕಾಲ ಬರುತ್ತಿದೆ. ವಿಜ್ಞಾನದ ಮಟ್ಟಕ್ಕೇರಲು ಹವಣಿಸುತ್ತಿರುವ ವ್ಯಕ್ತಿಗತವಾದ ಒಂದು ಕಲೆ- ವೈದ್ಯಶಾಸ.

ವೈದ್ಯ ವೃತ್ತಿಗಾರನಾಗಿದ್ದಾಗ, ಯಾವ ಪ್ರಯಗಾಲಯದ ಪರೀಕ್ಷೆಗಳನ್ನು ನಡೆಸದೆಯೇ ರೋಗಿಗಳಲ್ಲಿನ ಕಾಯಿಲೆಯ ವಿವರಗಳನ್ನು ತಿಳಿದುಕೊಂಡು, ರೋಗಿಯನ್ನು ಪರೀಕ್ಷಿಸಿಯೇ ಎಷ್ಟೋ ರೋಗಗಳನ್ನು ಕಂಡುಕೊಳ್ಳುತ್ತಿದ್ದ. ಈಗೀಗ ಪ್ರಯೋಗಾಲಯದ ಪರೀಕ್ಷೆಗಳನ್ನೇ ನೆಚ್ಚಿಕೊಂಡು ರೋಗ ಏನಾಗಿದೆಯೆಂದು ನಿರ್ಧರಿಸುವ ಪ್ರವೃತ್ತಿ ಕಂಡುಬರುತ್ತಿದೆ.

ಪ್ರಶ್ನೆ ೩: ನಿಮ್ಮ ಲೇಖನ, ಪುಸ್ತಕಗಳ ಪ್ರಭಾವಗಳ ಬಗ್ಗೆ ನಿಮ್ಮ ಮನಸ್ಸಿಗೆ ತೃಪ್ತಿಕೊಟ್ಟ ವಿಚಾರಗಳು ಯಾವುವು?
ಸರಕಾರಿ ನೌಕರಿಯಲ್ಲಿ ವೈದ್ಯನಾಗಿದ್ದಾಗ ದೈಹಿಕ ಕಾಯಿಲೆಗಳ ಮೇಲೆ ಮನಸ್ಸಿನ ಪರಿಣಾಮಗಳನ್ನು ಕಂಡು ಆಶ್ಚರ್ಯ ಹೊಂದಿದೆ. ನನ್ನ ವೈದ್ಯಲೇಖನ ಓದಿ ಅನುಕೂಲ ಆಯಿತೆಂದು ತಿಳಿಸಿದಾಗ ರೋಗಿಯ ಸಫಲ ಚಿಕಿತ್ಸೆಯಿಂದ ಆಗುವಷ್ಟೇ ತೃಪ್ತಿ ಸಿಗುತ್ತದೆ.