Friday, 20th September 2024

ಬೆಲೆಯರಿಯದೇ ಕಳೆ ತೆಗೆದರೆ ಕಳಕೊಳ್ಳುವುದು ನೀವೇ !

ಸುಪ್ತ ಸಾಗರ

rkbhadti@gmail.com

ಬೋಳು ನೆಲವನ್ನು ಆರಲು ಬಿಡದೇ ಸಾಧ್ಯವಾದಷ್ಟು ಹುಲ್ಲು, ಗಿಡ ಗಂಟೆಗಳನ್ನು ಬೆಳೆಯ ಗೊಡುವುದೊಳಿತು. ಸಹಜವಾಗಿ ಹಸಿರು ಬೆಳೆಯದಿದ್ದರೂ ಹೆಸರು, ಉದ್ದು, ಹುರುಳಿಯಂಥವನ್ನು ಚೆಲ್ಲಿಯಾದರೂ ಅದನ್ನು ಉಳಿಸಿಕೊಳ್ಳುವುದು ಉಚಿತ. ತೆರೆದೆ ಭೂಮಿ ಎಂದರೆ ಅದು ಭವಿಷ್ಯದ ಬರಕ್ಕೆ ಆಹ್ವಾನ. ಹೀಗಾಗಿ ಭೂತಾಯ ಮೈಯ ಆದಷ್ಟು ಬೆತ್ತಲಾಗದಂತೆ ಕಾಪಾಡುವುದೊಳಿತು.

ಚಾಮರಾಜನಗರದ ಹಿರಿಯ ರೈತಮಿತ್ರ ಕೈಲಾಸಮೂರ್ತಿಯವರು ವಾಟ್ಸ್‌ಆಪ್ ನಲ್ಲಿ ಒಂದು ಚಿತ್ರ ಕಳುಹಿಸಿದರು. ಸಾಮಾನ್ಯವಾಗಿ ಯಾವುದೇ ಫಾರ್ವಡ್ ಚಿತ್ರಗಳನ್ನು, ಮೆಸೇಜ್‌ಗಳನ್ನು ಕಳುಹಿಸುವ, ಸುಮ್ಮನೇ ಕಾಲಹರಣ ಮಾಡಿ (ಅಷ್ಟೊಂದು ಸಮಯ ಅವರಲ್ಲಿ ಇದ್ದರೆ ತಾನೇ?)
ಅಭ್ಯಾಸವಿಲ್ಲದ ಅವರು ಕಳುಹಿಸಿzರೆಂದರೆ ಏನೋ ಗಂಭೀರ ವಿಷಯವಿದ್ದೀತೆಂದು, ಸಹಜ ಕುತೂಹಲದೊಂದಿಗೆ ತೆರೆದರೆ, ಡಾಂಬರು ರಸ್ತೆಯ ಮಧ್ಯದಂದು ಸಣ್ಣಗೆ ಹುಟ್ಟಿದ ಗರಿಕೆಯ ಗುಂಪಿನ ಚಿತ್ರವದು.

ಅದರನು ವಿಶೇಷ? ತಕ್ಷಣಕ್ಕೆ ಅರ್ಥವಾಗಲಿಲ್ಲ. ಆದರೂ ಸುಮ್ಮನೆ ಕಳುಹಿಸಿರಲಿಕ್ಕಿಲ್ಲ ಎಂಬ ಭರವಸೆಯಲ್ಲಿ ಮತ್ತೆ ಮತ್ತೆ ಅದರಲ್ಲಿ ಏನಾದರೂ ಇದ್ದೀತೆ ಎಂದು ನೋಡಿದೆ. ಹೊಳೆಯಲಿಲ್ಲ. ಕೊನೆಗೆ ಸಂಜೆಯವರೆಗೆ ಕಾದು (ಅಲ್ಲಿಯವರೆಗೆ ಅವರು ಹೊಲ-ತೋಟದಲ್ಲಿ ಬ್ಯುಸಿ) ಕರೆ ಮಾಡಿದೆ. ಈ ಭೂಮಿಯ ಮೇಲೆ ಹುಲ್ಲಿನ ಮಹತ್ವದ ಬಗ್ಗೆ ಪುಟ್ಟದೊಂದು ಭಾಷಣವನ್ನೇ ಮಾಡಿಬಿಟ್ಟಿದ್ದರು ಅವರು. ನಿಜವಾಗಿ ಅವರು ಕಳುಹಿಸಿದ ಚಿತ್ರದಲ್ಲಿ ಬಹಳಷ್ಟು ವಿಶೇಷಗಳಿದ್ದವು.

ಡಾಂಬರು ರಸ್ತೆಯ ಬಿರುಕಿನಡಿಯ ಮಣ್ಣಿನಲ್ಲಿ ಉಳಿದಿದ್ದ ಆ ಗರಿಕೆಯ ಬೇರು ಎಂದೋ ಬಿದ್ದ ಮಳೆಗೆ ಮರು ಜೀವ ಪಡೆದು, ಮೇಲಿದ್ದ ಎಲ್ಲ ಅಡ್ಡಿ ಗಳನ್ನೂ ಭೇದಿಸಿಕೊಂಡು ಚಿಗುರಿ, ಹಬ್ಬುತ್ತಿತ್ತು. ಅಷ್ಟೇ ಆಗಿದ್ದರೆ ವಿಶೇಷವೆನಿಸುತ್ತಿರಲಿಲ್ಲವೇ ಹಾಗೆ ಹಬ್ಬಿದ ಗರಿಕೆ ಹುಲ್ಲು ತನ್ನ ಸುತ್ತಲು ಮಾತ್ರವೇ ಒಂದಷ್ಟು ನೀರಿನ ಪಸೆಯಲ್ಲಿ ಉಳಿಸಿಕೊಂಡು ಉಳಿದಿತ್ತು. ಸುತ್ತೆಲ್ಲ ಡಾಂಬರು ರಸ್ತೆ ಬಿಸಿಲಿಗೆ ಕಾದು ಗಾರುತ್ತಿದ್ದರೂ, ಆ ಹುಲ್ಲಿನ ಸನ್ನಿಧಿಯಲ್ಲಿ ಮಾತ್ರವೇ ನೀರಿನ ಅಸ್ತಿತ್ವ ಹೇಗೆ? ಕೃಷಿಯಲ್ಲಿ ಕಳೆಯ ಮಹತ್ವವನ್ನು ಆ ಗರಿಕೆಯ ಫೋಟೋದ ಮೂಲಕ ಅರ್ಥ ಮಾಡಿಸಲು ಹೊರಟಿದ್ದರು ಕೈಲಾಸಮೂರ್ತಿಗಳು.

‘ತೃಣಮಪಿ ನ ಚಲತಿ ತೇ ನ ವಿನಾ…’ ರಾಷ್ಟ್ರಕವಿ ಕುವೆಂಪು ಅವರ ಅರ್ಥಪೂರ್ಣ ಗೀತೆ ಮತ್ತೆ ಮತ್ತೆ ಮನಸ್ಸಿನಲ್ಲಿ ಸುಳಿದಾಡತೊಡಗಿತು. ನಿಮ್ಮ
ಮನೆಯಂಗಳದ, ತೋಟದ, ನಿನ್ನೆ ಇಲ್ಲದ ಪುಟ್ಟ ಪುಟ್ಟ ಹಸಿರು ಬಿಂದುಗಳು ಇಂದು ಇದ್ದಕ್ಕಿದ್ದಂತೆ ಮೊಳೆತುಬಿಡಬಹುದು. ಅದನ್ನು ಕಂಡು ಬಹಳಷ್ಟು
ಮಂದಿಗೆ ಏನೂ ಅನ್ನಿಸದಿರಬಹದು. ಅನ್ನಿಸಿದರೂ, ಛೇ, ಬೆಳೆಗಳನ್ನು ಕಾಡುವ ಕಳೆಗಳು ಮಳೆಗೆ ಓ, ತೇವಕ್ಕೋ ಸಿಲುಕಿ ಹುಟ್ಟುತ್ತಿವೆ ಎಂಬ ಭಾವವಷ್ಟೇ! ಆದರೆ ಒಮ್ಮೆ ಯೋಚಿಸಿ, ನಿಮಗೆ ಅತ್ಯಾಶ್ಚರ್ಯ, ಕುತೂಹಲಗಳು ಒತ್ತೊಟ್ಟಿಗೇ ಮೂಡದಿರಲು ಸಾಧ್ಯವೇ ಇಲ್ಲ. ಹಾಗೆ ಹೋಗಿ ಹೀಗೆ
ಬರುವ ಮುನ್ನ ಅವು ಇನ್ನಷ್ಟು ಬೆಳೆದುಬಿಟ್ಟಿರುತ್ತವೆ. ಮೊದಲ ಮಳೆಗೆ ಮೊಲೆಯುವ ಇಂಥ ಕಳೆಗಳು ಇಷ್ಟು ದಿನ ಎಲ್ಲಿದ್ದವು? ಯೋಚಿಸಿ.

ಸಂಜೆಯೋ ರಾತ್ರಿಯೋ ಬಿದ್ದ ಮಳೆಯೇ ಸುಳ್ಳೇನೊ ಎಂಬಷ್ಟರ ಮಟ್ಟಿಗೆ ಧಗೆ ಎದ್ದಿದ್ದರೂ, ಬಿಸಿಲು ಭಾರಿಸುತ್ತಿದ್ದರೂ ಅಂಗಳದೆಡೆಗೋ, ಹೊಲ ದೆಡೆಗೋ ದಷ್ಟಿ ಬೀರಿದರೆ ಮತ್ತಷ್ಟು ಹುಲ್ಲು ಕಡ್ಡಿಗಳು ಮೊಳೆತು, ಚಿಗಿತು ಉದ್ದುದ್ದಕ್ಕೆ ಆಗಸದೆಡೆಗೆ ಮುಖಮಾಡಿ ಹೊರಟ ರಾಕೆಟ್ ಗಳಂತೆ ನಿಮಿರುತ್ತಿರುತ್ತವೆ. ಅರೆ, ಇವೆಲ್ಲಿಂದ ಬಂದವು? ಈ ಹಸಿರು ಸೃಷ್ಟಿಯಾದzದರೂ ಹೇಗೆ? ಗಾರು ಬಿದ್ದ ನೆಲ, ಗೊಚ್ಚು ತುಂಬಿದ ಅಂಗಳದಲ್ಲಿ ಕೆದಕಿದರೂ ಒಂದಷ್ಟು ಹೂದಲು ಇರುವುದಿಲ್ಲ. ಅಗೆದರೆ ಒಣ ಧೂಳು ಏಳುತ್ತದೆಯೇ ವಿನಾ ನೀರಿನ ಪಸೆಯೂ ಸಿಗುವುದಿಲ್ಲ.

ರಾತ್ರಿ ಒಂದಷ್ಟು ಮಳೆ ಸುರಿದದ್ದೇ ತಡ ಇದ್ದಕ್ಕಿದ್ದಂತೆ ಮೊಳೆತು, ಚಿಗಿತ ಈ ಹುಲ್ಲು ಕಡ್ಡಿಗಳನ್ನು ಇಲ್ಲಿ ಬಿತ್ತಿ ಹೋಗುವವರಾದರೂ ಯಾರು?
ಏನೋ ಅಂತೂ ಅಂಗಳದಲ್ಲಿ ಒಂದಷ್ಟು ಹುಲ್ಲು ಹುಟ್ಟಿವೆ. ಅದಕ್ಕಾಗಿ ಯಾಕೆ ಇಷ್ಟು ತಲೆ ಕೆಡಿಸಿಕೊಳ್ಳಬೇಕು? ಎಂಬ ನಿರ್ಲಕ್ಷ್ಯವೇ ಕೃಷಿಯಲ್ಲಿ ಸಾಕಷ್ಟು ನಷ್ಟಕ್ಕೆ ಕಾರಣವಾಗುತ್ತಿದೆ. ಒಮ್ಮೆ ಗಮನಿಸಿ, ಯಾವುದೇ ಕೃಷಿಯಿಲ್ಲದೇ, ಗೊಬ್ಬರ ನೀರಿಲ್ಲದೇ ಬೆಳೆಯುವ ಅಂಥ ಕಳೆಗಳ ಬೆಳೆವಣಿಗೆ ವೇಗಕ್ಕೆ ಸಾಟಿ ಬೇರೇ ಯಾವುದಿದೆ? ನಿನ್ನೆ ಇಲ್ಲದ, ರಾತ್ರಿ ಮೊಳೆಯದ ಇವು ಬೆಳಗಾಗುವಷ್ಟರಲ್ಲಿ ಚಿಗಿತು, ಮಧ್ಯಾಹ್ನದ ಹೊತ್ತಿಗೆ ಬೆಳೆದು, ಸಂಜೆಯ ಹೊತ್ತಿಗೆ ಇಡೀ ಅಂಗಳದಲ್ಲ ಹಸಿರು ಹಾಸನ್ನು ಹಾಸಿ ಬಿಟ್ಟಿವೆ ಎಂದರೆ ಅದೆಂಥ ಅಸೀಮ ಶಕ್ತಿಯಿರಬೇಕು ಈ ಹುಲ್ಲು ಕಡ್ಡಿಗಳಿಗೆ!

ಹೌದು, ನಿಸರ್ಗದ ಪುನರುತ್ಥಾನವೆಂದರೆ ಇದೇ. ನೆಲ ಬರಡಾಗಿ, ಒಂದಷ್ಟು ಬಿಸಿಲು ಕಾದು, ಮೇಲ್ಮಣ್ಣು ಗಾರು ಬಿದ್ದು ಹುಲ್ಲು ಬೆಳೆಯದಷ್ಟು ನೆಲ
ಬರಡಾಯಿತೆಂದುಕೊಂಡರೂ ಅದು ಬರಡಲ್ಲ. ‘ಇಲ್ಲಿ ಗರಿಕೆಯೂ ಬೆಳೆಯದು’ ಎಂಬ ಮಾತು ಎಂದಿಗೂ ಸತ್ಯವಲ್ಲ. ಏಕೆಂದರೆ ತೃಣಕ್ಕೆ ಸಾವೆಂಬು ದಿಲ್ಲ. ಅವು ಸತ್ತವೆಂದರೆ ಇಡೀ ಭೂಮಂಡಲವೇ ಸತ್ತಂತೆ. ಅದೇ ಈ ಜಗತ್ತಿನ ಜೀವಶಕ್ತಿಯ ಮೂಲ. ಅದೇ ಬದುಕಿನ ಸಂಕೇತ. ಅದೇ ಜೀವದ್ರವದ ಮಹಾರಕ್ಷಕ. ಹುಲ್ಲು ಹಸಿರು ಕಳೆದುಕೊಂಡು ಮೇಲ್ನೋಟಕ್ಕೆ ನಾಶವಾಯಿತೆಂದುಕೊಂಡರೂ ಸಂಪೂರ್ಣ ನಾಶವಾದಂತಲ್ಲ.

ಎಲ್ಲೇ ಆಗಲಿ, ವರ್ಷಗಳ ಹಿಂದೆ ಅಳಿದು ಹೋದ ಹುಲ್ಲಿನ ಬೇರುಗಳಾದರೂ ತಮ್ಮ ಅಸ್ತಿತ್ವವನ್ನು ಉಳಿಸಿಯೇ ಉಳಿಸಿಕೊಂಡಿರುತ್ತವೆ. ಮಣ್ಣಿದೆ
ಎಂದಾದರೆ ಅಲ್ಲಿ ಜೀವ ಸೆಲೆಯ ‘ತೃಣ’ವಾದರೂ ಇದೆ ಎಂದೇ ಅರ್ಥ. ನಾಲ್ಕು ಹನಿಗಳು ಮೇಲೆ ಚೆಲ್ಲಿದವೆಂದರೆ ಮತ್ತೆ ಅವು ಜೀವ ಪಡೆಯುತ್ತವೆ. ಸುತ್ತೆಲ್ಲಕ್ಕೂ ಕಳೆ’ ತುಂಬುತ್ತವೆ. ತುಸು ರಕ್ಷಣೆ ಕೊಟ್ಟು ಜೀವ ಜಾಲದ ವಿಸ್ತರಣೆಗೆ ಅವಕಾಶ ಮಾಡಿಕೊಟ್ಟೆವೆಂದಾದರೆ ಅದು ತನ್ನಿಂದ ತಾನೆ ನಿಸರ್ಗದ ಪುನರ್ ಸೃಷ್ಟಿಗೆ ನಾಂದಿ ಹಾಡುತ್ತದೆ. ಆದರೆ, ನಾವೇ ಮಿತಿಮೀರಿ ಬೆಳೆದು ಎಲ್ಲವನ್ನೂ ಆಕ್ರಮಿಸಿಕೊಳ್ಳುತ್ತಿರುವಾಗ ಅದಕ್ಕೆ ತಾಣ ವಾದರೂ ಎಲ್ಲಿ. ಮನುಷ್ಯನ ಮನೋಭಾವವೇ ಹಾಗೆ.

ತಾನು ಬದುಕಲು ಎಲ್ಲವೂ ಪೂರಕವಾಗಿರಬೇಕು, ಅದಿಲ್ಲದಿದ್ದರೆ ಉಳಿದವೆಲ್ಲವೂ ನಿರರ್ಥಕವೆಂಬ ಸ್ವಾರ್ಥ. ಹೀಗಾಗಿಯೇ ಮಣ್ಣ ಮೇಲೆ ತನ್ನಿಂದ ತಾನೆ ಮೊಳೆಯುವ ಇಂಥ ಹುಲ್ಲುಗಳನ್ನು ‘ಕಳೆ’ಯಾಗಿ ಕಾಣುತ್ತೇವೆ. ಮಾತ್ರವಲ್ಲ ಅದನ್ನು ನಿರ್ಮೂಲ ಮಾಡಿಬಿಡುವ ಹುಚ್ಚು ಸಾಹಸಕ್ಕೆ ತೊಡಗಿಕೊಂಡೇ ಇರುತ್ತೇವೆ. ಒಂದಂತೂ ಸತ್ಯ. ಕಳೆಗಳನ್ನು ಇನ್ನಿಲ್ಲದಂತೆ ಮಾಡಿಬಿಡುತ್ತೇವೆನ್ನುವುದು ಎಷ್ಟು ಮೂರ್ಖತನವೋ ಒಂದೊಮ್ಮೆ ಅವು ಸಂಪೂರ್ಣ ನಾಶವಾದರೆ ನಾವೆಲ್ಲರೂ ನಾಶವಾಗಿ ಬಿಡುವುದೂ ಅಷ್ಟೇ ವಾಸ್ತವ. ಏಕೆಂದರೆ ಈ ಬಹು ಕ್ಷಾಮ ನಿರೋಧಕ ಅಸ. ಭೂಮಿ ಬರಡಾಗದೇ,
ನಾಡಿನಲ್ಲಿ ಬರ ಕಾಡದೇ ಉಳಿಯಬೇಕೆಂದರೆ ಇಂಥ ಹುಲ್ಲು, ಕಳೆಗಳು ಅಗತ್ಯ, ಅನಿವಾರ್ಯ. ಸರ್ವಸ್ವದ ರಕ್ಷಣೆಯೂ ಇದರಿಂದಲೇ. ಹೀಗಾಗಿ ಇದೇನು ತೃಣ ಸಮಾನವೆಂಬ ಕೀಳುದಷ್ಟಿ ಸರ್ವಥಾ ಅಪರಾಧ. ಹುಲ್ಲಿನ ಬೇರುಗಳು ಭೂಮಿಯ ಸಾಕಷ್ಟು ಆಳದವರೆಗೆ ಸಾಗಬಲ್ಲವು.

ಹಾಗೆ ಸಾಗುವ ಜತೆಗೆ ಅಲ್ಲಿನ ತೇವಾಂಶವನ್ನು ಹೀರಿ ತಂದು ಸುತ್ತಲಿನ ನೆಲವನ್ನೂ ತಂಪಾಗಿಡುತ್ತವೆ. ನೆಲದಾಳಕ್ಕೂ ಆಗಸಕ್ಕೂ ನಡುವಿನ ಕೊಂಡಿಯಾಗಿ ಇಂಥ ಸಣ್ಣಪುಟ್ಟ ಸಸಿಗಳು ಕೆಲಸ ಮಾಡುತ್ತವೆ. ಮಳೆ ಬಿದ್ದ ಮರುಕ್ಷಣವೇ ಜೀವ ಪಡೆಯುವ ಇಂಥ ಸಸ್ಯವರ್ಗ ಬೆಳೆಬೆಳೆಯುತ್ತಲೇ ಗಾಳಿಗೆ ತೊಯ್ದಾಡಿ ತಮ್ಮ ಬುಡದ ನೆಲದ ಬಿಗುವನ್ನು ಸಡಿಲಗೊಳಿಸುತ್ತವೆ. ಇದರಿಂದ ಭೂಮಿಯ ಮೇಲೆ ಬಿದ್ದ ನೀರು ಇಂಗುವುದು
ಸುಲಭ ವಾಗುತ್ತದೆ. ಮೇಲ್ಮಣ್ಣು ಕೊಚ್ಚಿ ಹೋಗದಂತೆ ತಡೆಯುವುದರೊಂದಿಗೆ ಮಣ್ಣನಲ್ಲಿನ ಸಾರವನ್ನೂ ಸಂರಕ್ಷಿಸುತ್ತವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮಣ್ಣಿನಲ್ಲಿನ ನೀರಿನಂಶ ಆವಿಯಾಗಿ ಹೋಗದಂತೆ ತಡೆಯುತ್ತವೆ. ಒಂದು ಬೇಸಿಗೆಯಲ್ಲಿ ಒಣಗಿ ಸತ್ತಂತೆ ಕಾಣುವ ಹುಲ್ಲು, ಕಳೆ, ಗರಿಕೆಗಳು ನೆಲದ ಉಳಿದು ಮುಂದಿನ ಮಳೆಗೆ ಕೊಳೆತು ಸಾರವಾಗಿ ಪರಿವರ್ತಿತವಾಗುತ್ತವೆ.

ನೆಲದ ಹೂದಲು’ ರಕ್ಷಣೆಗೆ ಇಂಥ ಸಣ್ಣ ಸಸ್ಯ ವರ್ಗದ ಕೊಡುಗೆ ಅಪಾರ. ಹುಲ್ಲು, ಗಿಡ-ಗಂಟಿಗಳ ನಡುವೆ ಸಷ್ಟಿಯಾಗುವ ಜೀವಜಾಲವೇ ಇಡೀ ಮನುಕುಲಕ್ಕೆ ಆಧಾರ. ಹೀಗಾಗಿ ಹುಟ್ಟುವ ಯಾವುದೇ ಹಸಿರು ಚಿಗುರನ್ನು ಕಿತ್ತು ನಾಶ ಮಾಡದಿರುವ ಎಚ್ಚರ ಅಗತ್ಯ. ಸಾಧ್ಯವಾದಷ್ಟು ಭೂಮಿಯನ್ನು ಇಂಥ ಮುಚ್ಚುಗೆಗಳಿಂದ ಮುಚ್ಚಿ ಇಡುವುದು ಒಳಿತು. ಒಣಗಿದ ಎಲೆಗಳು, ಹುಲ್ಲು, ಸೋಗೆ, ಕಾಯಿ, ಹಣ್ಣು, ಬೀಜ, ಬಳ್ಳಿ ಹೀಗೆ ನಿಸರ್ಗದ ಪ್ರತೀ
ಅಂಗಗಳು ಅವು ಹುಟ್ಟಿದಲ್ಲಿಯೇ ಬಿದ್ದು ಕೊಳೆಯುವುದು ಅತ್ಯುತ್ತಮ.

ಅವನ್ನೆಲ್ಲ ಒಟ್ಟು ಮಾಡಿ ಆವರಣದ ಹೊರಗೆಸೆದರೆ ಮೌಲ್ಯಯುತ ಸಂಪತ್ತನ್ನೇ ಹೊರಗೆಸೆದಂತೆ. ಹಾಗೆ ಮಾಡುತ್ತ ಹೋದರೆ ನೀರಿನ ಅಂಶ ವೆನ್ನುವುದು ಇನಿತೂ ಭೂಮಿಯೊಳಕ್ಕೆ ಇಳಿಯದೇ, ಅಲ್ಲಿ ಉಳಿಯದೇ ಎಲ್ಲೂ ಹಾಹಾಕಾರವೆದ್ದೀತು. ಬರೀ ಬೋಳು ನೆಲವನ್ನು ಆರಲು ಬಿಡದೇ ಸಾಧ್ಯವಾದಷ್ಟು ಹುಲ್ಲು, ಗಿಡಗಳಂತೆ. ಬೆಳೆಯಗೊಡುವುದೊಳಿತು.

ಒಂದೊಮ್ಮೆ ಸಹಜವಾಗಿ ಹಸಿರು ಬೆಳೆಯದಿದ್ದರೂ ಹೆಸರು, ಉದ್ದು, ಹುರುಳಿಯಂಥವನ್ನು ಚೆಲ್ಲಿಯಾದರೂ ಅದನ್ನು ಉಳಿಸಿಕೊಳ್ಳುವುದು ಉಚಿತ.
ತೆರೆದೆ ಭೂಮಿ ಎಂದರೆ ಅದು ಭವಿಷ್ಯದ ಬರಕ್ಕೆ ಆಹ್ವಾನ. ಹೀಗಾಗಿ ಭೂತಾಯ ಮೈಯ ಆದಷ್ಟು ಬೆತ್ತಲಾಗದಂತೆ ಕಾಪಾಡುವುದೊಳಿತು. ಕಿತ್ತು ಎಸೆಯುವ ಬದಲು ಇನ್ನಷ್ಟು ಬಿತ್ತಿ ಬೆಳೆಯುವುದು ಉತ್ತಮ.

ಕಳೆ, ಹುಲ್ಲುಗಳು ಸಮೃದ್ಧವಾಗಿವೆಯೆಂದರೆ ಭೂತಾಯ ಒಡಲು ಬತ್ತದೇ ತಣ್ಣಗೆ ತುಂಬಿ ನಿಂತಿದೆಯೆಂದೇ ಅರ್ಥ. ಬೋಳು ಗುಡ್ಡ, ಬಯಲು ಪ್ರದೇಶದಲ್ಲಿ ಪ್ರಕತಿ ಸಹಜವಾಗಿ ಹಸಿರು ನಿರ್ಮಾಣವಾಗಲು ವರ್ಷಗಳೇ ಬೇಕಾದಿತು. ಅಂಥ ಸುದೀರ್ಘ ಪ್ರಯತ್ನವನ್ನು ನಿಮಿಷದಲ್ಲಿ ನಾಶಗೊಳಿಸುವುದು ಸರಿಯೆ ?