Thursday, 19th September 2024

ಹೈಕಮಾಂಡ್ ಹಿಡಿತ, ಸ್ಥಳೀಯ ನಾಯಕತ್ವಕ್ಕೆ ಹೊಡೆತ

ಅಭಿಪ್ರಾಯ

ಡಾ.ರಾಜಶೇಖರ ಹತಗುಂದಿ

ಹೈಕಮಾಂಡ್ ಸಂಸ್ಕೃತಿ ಎಂಬ ಪದ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಅನ್ವಯಿಸಿ ಬಳಸಲಾಗುತ್ತಿತ್ತು. ಯಾಕೆಂದರೆ ಸ್ವಾತಂತ್ರ್ಯ ನಂತರದ ವರ್ಷಗಳಿಂದ ಎಂಬತ್ತರ ದಶಕದವರೆಗೆ ರಾಷ್ಟ್ರ ರಾಜಕಾರಣದ ಚುಕ್ಕಾಣಿ ಕಾಂಗ್ರೆಸ್ ಪಕ್ಷದ ಹಿಡಿತದ ಇತ್ತು. ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳೇ
ಅಽಕಾರ ಚಲಾಯಿಸುತ್ತಿದ್ದರು.

80ರ ದಶಕದಿಂದೀಚೆಗೆ ಹೈಕಮಾಂಡ್ ಸಂಸ್ಕೃತಿ ಎಲ್ಲ ಪಕ್ಷಗಳಿಗೂ ವ್ಯಾಪಿಸಿದೆ. ಜನತಂತ್ರದ ರಕ್ಷಕರು ಎಂಬಂತೆ ಬಂದ ಜನತಾ ಪರಿವಾರವೂ ಹೈಕಮಾಂಡ್ ಗುಮ್ಮ ಇಟ್ಟುಕೊಂಡೇ ಸ್ಥಳೀಯ ಪ್ರಬಲ ನಾಯಕರನ್ನು ನಿಯಂತ್ರಿಸಲು ಹೋಗಿ ಚೂರು ಚೂರಾಯಿತು. ಕರ್ನಾಟಕದ ಅತ್ಯಂತ ಜನಪ್ರಿಯ ನಾಯಕ, ಮುತ್ಸದ್ದಿ
ರಾಮಕೃಷ್ಣ ಹೆಗಡೆಯವರನ್ನು ಅಂದಿನ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಪಕ್ಷದಿಂದ ಹೊರಹಾಕುವ ಮೂಲಕ ಹೈಕಮಾಂಡ್ ಸಂಸ್ಕೃತಿಯ ವಿಕೃತ ರೂಪವನ್ನು ತೋರಿಸಿದ್ದರು. ಪರಿಣಾಮವಾಗಿ ಜನತಾಪರಿವಾರ ದೇಶದಲ್ಲಿ ಯಾವತ್ತೂ ಒಂದಾಗಿ ಉಳಿಯಲಿಲ್ಲ.

ಇನ್ನು ಕಾಂಗ್ರೆಸ್ ಪಕ್ಷ ಹೈಕಮಾಂಡ್ ಹಿಡಿತ ಬಲಗೊಳಿಸಲು ಹೋಗಿ ನೂರಾರು ಜನ ಸಮರ್ಥ ಸ್ಥಳೀಯ ನಾಯಕರನ್ನು ಬಲಿ ತೆಗೆದುಕೊಂಡಿದೆ. ಕೆಲ ಸ್ಥಳೀಯ ನಾಯಕರು ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಸಿಡಿದೆದ್ದು ಬೇರೆ ಪಕ್ಷ ಕಟ್ಟಿ ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರು ಬೇರೆ ಪಕ್ಷಕ್ಕೆ ಹೋಗಿ ಕಾಂಗ್ರೆಸ್ ಪಕ್ಷವನ್ನು ದುರ್ಬಲ ಗೊಳಿಸಿದ್ದಾರೆ. ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ಮುಖಂಡ ಶರದ್ ಪವಾರ್, ಸಂಗ್ಮಾ, ಆಂಧ್ರಪ್ರದೇಶದ ವೈ.ಎಸ್. ರಾಜಶೇಖರ ರೆಡ್ಡಿಯವರ ಪುತ್ರ ಜಗನ್, ಯುವ ನಾಯಕರಾದ ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧಿಯಾ ಮುಂತಾದವರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡೆದ್ದು ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ವೀರೇಂದ್ರ ಪಾಟೀಲ, ಎಸ್.ಬಂಗಾರಪ್ಪ ಮುಂತಾ ದವರನ್ನು ಕಾಂಗ್ರೆಸ್ ಹೈಕಮಾಂಡ್ ಅಪಮಾನಿಸಿದ್ದರಿಂದಲೇಹತ್ತಾರು ವರ್ಷಗಳ ಕಾಲ ಅಧಿಕಾರದಿಂದ ವಂಚಿತವಾಗಬೇಕಾಯಿತು.

ಕಾಂಗ್ರೆಸ್‌ನಿಂದ ಹೊರಬಂದ ದೇವರಾಜ ಅರಸು, ಎಸ್.ಬಂಗಾರಪ್ಪ ಬೇರೆ ಪಕ್ಷ ಕಟ್ಟಿ ನಿರೀಕ್ಷಿತ ಪ್ರಮಾಣದ ಯಶಸ್ಸು ಸಾಽಸಲಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿಗೆ ಬಲವಾದ ಪೆಟ್ಟನ್ನಂತೂ ನೀಡಿದ್ದರು. 1989ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ವಿರೇಂದ್ರ ಪಾಟೀಲರ ನೇತೃತ್ವದಲ್ಲಿ 179 ಕ್ಷೇತ್ರಗಳಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಕಾಂಗ್ರೆಸ್ ಪಕ್ಷ ವಿರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿ ಸುವ ಮೂಲಕ ಅಪಮಾನಿಸಿದ್ದರ ಫಲವಾಗಿ 1994ರ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯವಾಗಿ ನೆಲಕಚ್ಚಿತು. ಪ್ರಬಲ ಕೋಮಿಗೆ ಸೇರಿದ ನಾಯಕರನ್ನು ಅವಮಾನಿಸಿದಾಗ ಮಾತ್ರ ಹೈಕಮಾಂಡ್‌ಗೆ ಹಿನ್ನಡೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಸಾಮಾನ್ಯವಾಗಿ ಪರಿಭಾವಿಸುತ್ತಾರೆ. ದೇವರಾಜ ಅರಸು, ಎಸ್. ಬಂಗಾರಪ್ಪ ಪ್ರಬಲ ಕೋಮಿಗೆ ಸೇರಿದವರಾಗಿರಲಿಲ್ಲ. ಆದರೆ ಪ್ರಬಲ ನಾಯಕರಾಗಿದ್ದರು. ಹಾಗಾಗಿಯೇ ಅವರು ಪಕ್ಷ ತೊರೆದಾಗಲೆಲ್ಲ ಮಾತೃ ಪಕ್ಷಕ್ಕೆ ಹೊಡೆತ ಬಿದ್ದಿದೆ. ದೇಶದುದ್ದಕ್ಕೂ ಪ್ರಬಲ ಸ್ಥಳೀಯ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ನಿಕೃಷ್ಟವಾಗಿ ಕಂಡಿದ್ದರಿಂದಲೇ ಈ ಹೊತ್ತು ಈ ಸ್ಥಿತಿಗೆ ತಲುಪಿದೆ.

ಒಂದು ಕಾಲದಲ್ಲಿ ಜನತಾ ಪರಿವಾರದ ಭಾಗವಾಗಿದ್ದ ಬಿಜೆಪಿ ಹೈಕಮಾಂಡ್ ಸಂಸ್ಕೃತಿಯನ್ನು ಇಷ್ಟಪಡುತ್ತಿರಲಿಲ್ಲ. ಅಷ್ಟಕ್ಕೂ ಅದು ಆ ಪಕ್ಷದ ಜಾಯಮಾನವೇ ಆಗಿರಲಿಲ್ಲ. ಪಕ್ಷವನ್ನು ಕಟ್ಟುವ, ಬೆಳೆಸುವ ಕ್ರಿಯಾಶೀಲ ನಾಯಕರನ್ನು ಹುಡುಕಿ ಹೊಣೆಗಾರಿಕೆ ನೀಡುತ್ತಿದ್ದರು. ಹಾಗೆ ನೋಡಿದರೆ ಸಂಘಟನಾ ಸಾಮರ್ಥ್ಯವನ್ನು
ಪರಿಗಣಿಸಿ ನಾಯಕತ್ವವನ್ನು ಗುರುತಿಸುವಲ್ಲಿ ಭಾರತೀಯ ಜನತಾ ಪಕ್ಷ ಮುಂಚೂಣಿಯಲ್ಲಿದೆ. ಆ ಕಾರಣಕ್ಕೆ ಈ ಹೊತ್ತು ಆ ಪಕ್ಷ ದೇಶದುದ್ದಕ್ಕೂ ಆವರಿಸುತ್ತಿದೆ. ಹೀಗಿರುವಾಗ ಕರ್ನಾಟಕದಲ್ಲಿ ಯಡಿಯೂರಪ್ಪ ಅವರಂಥ ಪ್ರಬಲ, ಕ್ರಿಯಾಶೀಲ ನಾಯಕನನ್ನು ಬದಲಾವಣೆ ಮಾಡುವ ಆಲೋಚನೆ ಬಿಜೆಪಿಗೆ ಒಪ್ಪಿತವಲ್ಲದ ಹೈಕಮಾಂಡ್ ಸಂಸ್ಕೃತಿಯ ಫಲ.

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾದದ್ದು ಯಡಿಯೂರಪ್ಪ ಅವರ ಸಂಘಟನಾ ಸಾಮರ್ಥ್ಯದಿಂದ
ಎಂಬುದನ್ನು ಆ ಪಕ್ಷದ ಬಹತೇಕರು ಪದೆಪದೇ ಹೇಳುತ್ತಿರುತ್ತಾರೆ. ಈ ಮಾತು ಕರ್ನಾಟಕದ ಸಾರ್ವಜನಿಕ ವಲಯದಲ್ಲಿ ಸ್ಥಾಪಿತವಾಗಿಬಿಟ್ಟಿದೆ. ಆದರೆ ಯಡಿಯೂರಪ್ಪನವರು ಕಷ್ಟ ಪಟ್ಟು ಅಧಿಕಾರ ಹಿಡಿದಾಗಲೆಲ್ಲ ಅವರನ್ನು ಬದಲಾಯಿಸುವ ಮಾತುಗಳು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಶುರು ವಾಗುತ್ತವೆ. ಅದೂ ಹೈಕಮಾಂಡ್ ಹೆಸರಿನಲ್ಲಿ.

2011ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಯಿತು. ನಂತರ ಆಕಸ್ಮಿಕ ಎನ್ನುವಂತೆ ಇಬ್ಬರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಯಡಿಯೂರಪ್ಪ ಮತ್ತು ಬೆರಳೆಣಿಕೆಯ ನಾಯಕರನ್ನು ಹೊರತುಪಡಿಸಿದರೆ ಉಳಿದೆಲ್ಲ ಮುಖಂಡರು ಬಿಜೆಪಿಯ ಇದ್ದರು. ಕೆರಳಿದ ಯಡಿಯೂ ರಪ್ಪ ಅವರು ಕೆಜೆಪಿ ಕಟ್ಟಿ ಚುನಾವಣಾ ಅಖಾಡಕ್ಕೆ ಧುಮುಕಿದರು. ಬಹುದೊಡ್ಡ ಮಟ್ಟದ ಗುಣಾತ್ಮಕ ಯಶಸ್ಸು ದೊರೆಯಲಿಲ್ಲವಾದರೂ ಬಿಜೆಪಿಗೆ ತಕ್ಕ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೆ ನೋಡಿದರೆ ಯಡಿಯೂರಪ್ಪ ಹೊರತುಪಡಿಸಿದ ಬಿಜೆಪಿ ಕಟ್ಟಲು ಆ ಪಕ್ಷದ ಹೈಕಮಾಂಡ್‌ಗೆ 2013 ಮತ್ತು 2018ರಲ್ಲಿ ಉತ್ತಮ ಅವಕಾಶಗಳಿದ್ದವು.

2013ರಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇತ್ತೆಂದು ಭಾವಿಸಿದರೂ ೨೦೧೮ರ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸ ಮುಖವನ್ನು ತೋರಿಸಿ ಗೆದ್ದು
ಬರಬಹುದಿತ್ತು. ಹೇಗೂ ಯಡಿಯೂರಪ್ಪ ಅವರಿಗೆ ವಯಸ್ಸಾಗಿತ್ತು… ಕೇಂದ್ರದಲ್ಲಿ ಮೋದಿ, ಅಮಿತ್ ಶಾರಂತಹ ಪ್ರಬಲ ನಾಯಕರಿದ್ದರು. ಮೋದಿಯವರ ಹೆಸರಿನಲ್ಲಿ ಕರ್ನಾಟಕದ ಚುನಾವಣೆ ಗೆಲ್ಲುವ ಅವಕಾಶವಿದ್ದಾಗ ಕೆಜೆಪಿ ಯಲ್ಲಿದ್ದ ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ಕರೆ ತರುವ ಅಗತ್ಯವಾದರೂ ಏನಿತ್ತು? ಅವರ ಗುಣಾವಗಣಗಳು ಬಿಜೆಪಿ ಹೈಕಮಾಂಡ್‌ಗೆ ಚೆನ್ನಾಗಿ ಗೊತ್ತಿದ್ದವು.

ಭ್ರಷ್ಟಾಚಾರದ ಆರೋಪದಲ್ಲಿ ಯಡಿಯೂರಪ್ಪ ಅವರು ಜೈಲಿಗೂ ಹೋಗಿ ಬಂದಿದ್ದರು. ಆಗಲೇ ಸರ್ವಸಮ್ಮತ ವ್ಯಕ್ತಿಯನ್ನು ಹುಡುಕಿ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ ಗೆದ್ದು ಬಂದಿದ್ದರೆ ಈ ಎಲ್ಲ ರಗಳೆಗಳೆ ಇರುತ್ತಿರಲಿಲ್ಲ. ಬಿಜೆಪಿ ಸರಕಾರವೆಂದರೆ ಜನರಿಗೆ ವಾಕರಿಕೆ ಬರುವಂತಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಒಳಜಗಳ, ಬೀದಿ ರಂಪ ಸಾಮಾನ್ಯ ಎನ್ನುವಂತಾಗಿದೆ. ಕೆಜೆಪಿಯಲ್ಲಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಗೆ
ಕರೆತಂದು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿಸಿದ್ದು ಇದೇ ಹೈಕಮಾಂಡ್. ಅಷ್ಟು ಮಾತ್ರವಲ್ಲ ಚುನಾವಣಾ ಪ್ರಚಾರದುದ್ದಕ್ಕೂ ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಸಾವಿರ ಬಾರಿಯಾದರೂ ಹೇಳಿರಬೇಕು.

ಚುನಾವಣಾ ಫಲಿತಾಂಶ ಬಂದಾಗ ಬಿಜೆಪಿಗೆ ಸರಳ ಬಹುಮತವೇನೂ ಬಂದಿರಲಿಲ್ಲ. ಸುಮ್ಮನೆ ಪ್ರತಿಪಕ್ಷದ ಸಾಲಿನಲ್ಲಿ ಕೂರಿ ಎಂದು ಹೈಕಮಾಂಡ್ ಹೇಳಬಹುದಿತ್ತು. ಆದರೆ ಆಪರೇಷನ್ ಕಮಲ ಮಾಡಲು ಒಪ್ಪಿಗೆ ನೀಡಿದ ಹೈಕಮಾಂಡ್ ಸರಕಾರ ಅಸ್ತಿತ್ವಕ್ಕೆ ಬರುವವರೆಗೆ ಸುಮ್ಮನಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಽಕಾರ ವಹಿಸಿದ ದಿನದಿಂದ ಅವರನ್ನು ನಿಯಂತ್ರಿಸಲು ಯತ್ನಿಸುತ್ತಿದೆ.

ಸಂಪುಟ ರಚನೆಗೆ ಬೇಗ ಅನುಮತಿ ನೀಡಲಿಲ್ಲ. ಶತಮಾನ ಕಂಡ ಭೀಕರ ಪ್ರವಾಹದ ಸಂದರ್ಭದಲ್ಲಿ ಮುಖ್ಯಮಂತ್ರಿ ಒಬ್ಬರೇ ನಾಡು ಸುತ್ತಬೇಕಾಯಿತು. ಸಂಪುಟ ರಚನೆಗೆ ಅವಕಾಶ ನೀಡಿದರೂ ಸಂಪೂರ್ಣ ಸ್ವಾತಂತ್ರ್ಯ ಕೊಡಲಿಲ್ಲ. ಸೋತ ಲಕ್ಷ್ಮಣ ಸವದಿಯವರಿಗೆ ಉಪಮುಖ್ಯಮಂತ್ರಿ ಮಾಡುವ ಮೂಲಕ ಉಳಿದ ಶಾಸಕರು ಬಂಡೇಳಲು ಅವಕಾಶ ಕಲ್ಪಿಸಲಾಯಿತು. ಯಡಿಯೂರಪ್ಪ ಅವರನ್ನು ನಂಬಿ ಬಂದ 17 ಜನ ಶಾಸಕರ ಭವಿಷ್ಯ ಕ್ಷಣ ಕ್ಷಣಕ್ಕೂ ಅತಂತ್ರವಾಗುವಂತೆ ಮಾಡಲಾಯಿತು. ಇನ್ನು ಮುಂದೆ ಬಿಜೆಪಿಯನ್ನು ಯಾರೂ ನಂಬದ ಸ್ಥಿತಿ ನಿರ್ಮಾಣವಾಗಿದೆ.

ಹೈಕಮಾಂಡ್ ಮತ್ತು ಸ್ಥಳೀಯ ನಾಯಕತ್ವದ ಮೇಲಾಟದಲ್ಲಿ ಸರಕಾರದ ಆಡಳಿತ ಯಂತ್ರ ಸಂಪೂರ್ಣ ಹಳಿ ತಪ್ಪಿದೆ. ಬಿಜೆಪಿಗಿಂತಲೂ ಕಾಂಗ್ರೆಸ್ ಪಕ್ಷವೇ ವಾಸಿ
ಎಂಬ ಭಾವನೆ ಜನಮಾನಸದಲ್ಲಿ ಮೂಡುವಂತಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿತ್ತು. ಒಳಜಗಳ, ಬೀದಿ ರಂಪಾಟಕ್ಕೆ ಅವಕಾಶ ಮಾಡಿ ಕೊಟ್ಟಿರಲಿಲ್ಲ. ಭಾರತೀಯ ಜನತಾ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೂ ಗೊತ್ತು ಯಡಿಯೂರಪ್ಪ ಪ್ರಬಲ ಜನನಾಯನೆಂದು. ಅವರಿಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳಲು ಆಗುವುದಿಲ್ಲ. ಬಿಜೆಪಿ ಹೈಕಮಾಂಡ್ ಕರ್ನಾಟಕದ ವಿದ್ಯಮಾನ ಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎನ್ನುವುದಕ್ಕೆ ನೂರು ನಿದರ್ಶನ ನೀಡಬಹುದು.

ಒಂದಂತೂ ಸತ್ಯ ಯಡಿಯೂರಪ್ಪ ಅವರನ್ನು ಅಪಮಾನಿಸುವ ಮೂಲಕ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನಾಯಾಸವಾಗಿ ಅಽಕಾರ
ಹಸ್ತಾಂತರ ಮಾಡುತ್ತಿದೆ. ಕಳೆದ ಎರಡು ವರ್ಷಗಳ ಬಿಜೆಪಿಯಲ್ಲಿನ ಬೆಳವಣಿಗೆಗಳು ಸಾಮಾನ್ಯ ವ್ಯಕ್ತಿಯಲ್ಲೂ ಇಂತಹ ಭಾವನೆಗಳನ್ನು ಮೂಡುವಂತೆ ಮಾಡಿವೆ.