Friday, 20th September 2024

ಪಂಜಾಬಿಗಳನ್ನು ಬಂಧಿಸುವ ಕಾಯ್ದೆ- ’ಪೇಟಾ’ ಆಕ್ಟ್

ತುಂಟರಗಾಳಿ

ಸಿನಿಗನ್ನಡ

ಇಂದಿನ ಕಾಲದಲ್ಲಿ ಸಿನಿಮಾ ಮಾಡೋದು ಎಷ್ಟು ಮುಖ್ಯ ನೋ, ಅದರಷ್ಟೇ ನಾನು ಸಿನಿಮಾ ಮಾಡ್ತಾ ಇದ್ದೀನಿ ಅನ್ನೋ ಸುದ್ದಿಯನ್ನು ಮತ್ತು ತಮ್ಮ ಚಿತ್ರವನ್ನು ಜನರಿಗೆ ತಲುಪಿಸೋದು ಅಷ್ಟೇ ಮುಖ್ಯ. ಈ ವಿಷಯದಲ್ಲಿ ನಮ್ಮ ನಿರ್ದೇಶಕ
ಮಹೇಶ್ ಕುಮಾರ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ.

ಅಯೋಗ್ಯ ಚಿತ್ರದ ಮೂಲಕ ಸೂಪರ್ ಸಿನಿಮಾ ಮತ್ತು ಹಾಡುಗಳನ್ನು ಕೊಟ್ಟ ಮಹೇಶ್ ಕುಮಾರ್ ಸತೀಶ್ ನೀನಾಸಂ ಅವರಿಗೆ ಒಂದು ಬ್ರೇಕ್ ಕೊಟ್ಟಿದ್ದರು. ಆನಂತರ ಮರಳಿ ಅವರ ಜೊತೆ ಮದಗಜ ಸಿನಿಮಾ ಮಾಡಿ ಗೆದ್ದಿದ್ದರು. ಈಗ ಮಹೇಶ್ ಅವರು ಅಭಿಷೇಕ್ ಅಂಬರೀಷ್ ಅವರ ಜತೆ ಸೇರಿ ಒಂದು ಹೊಸ ಸಿನಿಮಾ ಮಾಡ್ತಾ ಇದ್ದಾರೆ.

ಆದರೆ ಸದ್ಯಕ್ಕೆ ಅಭಿಷೇಕ್ ಸೂರಿ ಅವರ ಜೊತೆ ಬ್ಯಾಡ್ ಮ್ಯಾನರ್ಸ್ ಚಿತ್ರ ಮಾಡ್ತಾ ಇದ್ದಾರೆ. ಮಹೇಶ್ ಜೊತೆಗಿನ ಸಿನಿಮಾ ಇನ್ನೂ ಸೆಟ್ಟೇರಬೇಕಿದೆ. ಆದರೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರ ಸಿಕ್ಕ ಮೇಲೆ ಮಹೇಶ್ ಕುಮಾರ್ ಅವರಂತೂ ಅಭಿಷೇಕ್ ಅವರನ್ನು ವರ್ಲ್ಡ್ ಫೇಮಸ್ ಮಾಡೋಕೆ ಹೊರಟಂತಿದೆ. ಅಭಿಷೇಕ್ ಅವರ ಬಗೆಗಿನ ಏನ್ ಅಪ್ಡೇಟ್ ಬೇಕಿದ್ದರೂ ಮಹೇಶ್ ಅವರನ್ನು ಸಂಪರ್ಕ ಮಾಡಬಹುದು ಎನ್ನುವಷ್ಟರ ಮಟ್ಟಿಗೆ.

ಅಭಿಷೇಕ್ ಅವರ ಬಗೆಗಿನ ಸಣ್ಣ ಪುಟ್ಟ ವಿಷಯಗಳಿಂದ ಹಿಡಿದು ಅವರ ಮದುವೆ, ಬೀಗರ ಊಟ ಎಲ್ಲದರ ಸಂಪೂರ್ಣ ವಿವರ ಒಪ್ಪಿಸುತ್ತಾರೆ ಮಹೇಶ್. ಅಭಿಷೇಕ್ ಅವರ ಪೋಟೋಗಳು ಮಹೇಶ್ ಅವರ ಆಪ್ತರಿಗೆ ಡೈಲಿ ವಾಟ್ಸಾಪ್‌ನಲ್ಲಿ ಕಾಣಸಿಗುತ್ತವೆ. ಅದರಲ್ಲಿ ತಪ್ಪೇನೂ ಇಲ್ಲ ಬಿಡಿ. ತಮ್ಮ ಮುಂದಿನ ಚಿತ್ರದ ಹೀರೋ ಅನ್ನು ಈಗಲೇ ಒಂದಷ್ಟು ಪಾಪುಲರ್ ಮಾಡಿಸಿ, ಆದಷ್ಟು ಹೆಚ್ಚು ಜನಕ್ಕೆ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟುವಂತೆ ಮಾಡೋದು ಒಬ್ಬ ನಿರ್ದೇಶಕನ ಕರ್ತವ್ಯ. ಅದನ್ನೇ ಮಹೇಶ್
ಮಾಡುತ್ತಿದ್ದಾರೆ. ಅದು ಅವರ ಸಿನಿಮಾ ಪ್ರೀತಿ ಕೂಡಾ ಹೌದು.

ಲೂಸ್ ಟಾಕ್
ನರೇಂದ್ರ ಮೋದಿ (ಕಾಲ್ಪನಿಕ ಸಂದರ್ಶನ)
ನಮ್ ದೇಶದ್ ಕುಸ್ತಿ ಪಟುಗಳ ಕಣ್ಣಲ್ಲಿ ನೀರು ಹಾಕಿಸುತ್ತಿದ್ದೀರಲ್ಲ.. ಸರಿನಾ?
-ಅಯ್ಯೋ.. ಕುಸ್ತಿ ಪಟುಗಳು ಪಟ್ಟು ಬಿಡಲಿಲಿಲ. ಅದಕ್ಕೆ ಪ್ರತಿಭಟನೆ ಟೈಮಲ್ಲಿ ಟಿಯರ್ ಗ್ಯಾಸ್ ಹೊಡೆದ್ವಿ ಅಷ್ಟೇ. ಅದಕ್ಕೇ ಹಿಂಗೆಲ್ಲ ಅನ್ನೋದಾ…

ಆದ್ರೂ ನಮ್ಮ ದೇಶಕ್ಕೆ ಕೀರ್ತಿ ತಂದವರನ್ನ ಬೀದಿಗೆ ತಂದ್ ಬಿಟ್ರಿ ಅಲ್ವಾ ನೀವು?
-ನೋಡಿ, ಮತ್ತದೇ ತಪ್ಪು ತಿಳುವಳಿಕೆ. ಅವರು ಪ್ರತಿಭಟನೆಗೆ ಅಂತ ರಸ್ತೆಗೆ ಇಳಿದಿದ್ರು ಅಷ್ಟೇ. ಅದಕ್ಕೇ ಬೀದಿಗೆ ಬಂದ್ಬಿಟ್ರು ಅಂದ್ರೆ ಹೆಂಗೆ?

ಆದ್ರೂ ಸಡಕ್ ಮೇಲೆ ಇರೋ ಕುಸ್ತಿ ಪಟುಗಳು ಯಾಕೋ ಸಿಕ್ಕಾಪಟ್ಟೆ ಖಡಕ್ ಆಗಿದ್ದಾರಲ್ಲ?
-ಅದಕ್ಕೆ ಕಾರಣ, ಕುಸ್ತಿ ಪಟುಗಳ ಹೆಸರಲ್ಲಿ ಸಿಕ್ಕ ಸಿಕ್ಕವರೆಲ್ಲ ಸಡಕ್‌ಗೆ ಇಳಿದಿರೋದು. ಅವರಿಗೆ ಸರಿಯಾದ ಸಬಕ್
ಸಿಖಾವೂಂಗ.

ಸರಿ, ಅವರ ಜೊತೆಗಿನ ಮಾತುಕತೆಯಲ್ಲಿ ಏನಾದ್ರೂ ಪ್ರೋಗ್ರೆಸ್ ಆಗ್ತಾ ಇದೆಯಾ?
-ಪ್ರೋಗ್ರೆಸ್ ಆಗೋಕೆ ಈ ಕಾಂಗ್ರೆಸ್ ನೋರು ಬಿಟ್ರೆ ತಾನೇ?

ಅಂತೂ ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಅಂತೀರಾ?
-ಹೌದು ಮತ್ತೆ, ನಾವು ಎಷ್ಟೋ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರೋಕೂ ಅವರ ಶಾಸಕರೇ ಕಾರಣ ಅಲ್ವಾ?

ನೆಟ್ ಪಿಕ್ಸ್
ಖೇಮು ಹುಟ್ಟು ಕುರುಡ. ಒಮ್ಮೆ ಖೇಮು ಅಮೆರಿಕಾಕ್ಕೆ ಹೋಗಿದ್ದ. ಅಲ್ಲಿನ ದೊಡ್ಡ ರೆಸಾರ್ಟ್ ಒಂದರಲ್ಲಿ ಉಳಿದುಕೊಳ್ಳಲು ಹೋದ. ಅವನ ಸಹಾಯಕ್ಕೆ ಅಂತ ಅಲ್ಲಿ ಒಬ್ಬ ಸರ್ವಿಸ್ ಬಾಯ್ ಅನ್ನು ನೇಮಿಸಿದರು. ಸರ್ವಿಸ್ ಬಾಯ್ ಖೇಮುಗೆ ಕಾಟೇಜ್ ತೋರಿಸಲು ಕರೆದುಕೊಂಡು ಹೋದ. ರೂಮಿನ ಒಳಗೆ ಹೋದ ಖೇಮು ಅಲ್ಲಿದ್ದ ಬೆಡ್ ಅನ್ನು ಮುಟ್ಟಿ ನೋಡಿ ಓಹ್, ಬೆಡ್ ತುಂಬಾ ದೊಡ್ಡದಿದೆ ಅಂದ. ಅದಕ್ಕೆ ಸರ್ವಿಸ್ ಬಾಯ್ ಹೇಳಿದ ಅಮೆರಿಕದಲ್ಲಿ ಎನೂ ದೊಡ್ಡದೇ. ಸರಿ ಖೇಮು ಫ್ರೆಷ್ ಆಗಿ ಬಂದು ನನ್ನನ್ನ ಬಾರ್ ಸೆಕ್ಷನ್‌ಗೆ ಕರೆದುಕೊಂಡು ಹೋಗು ಅಂದ. ಇಬ್ಬರೂ ಬಾರ್‌ಗೆ ಹೋದರು.

ಅಲ್ಲಿ ಖೇಮು ಒಂದು ಪೆಗ್ ವಿಸ್ಕಿ ಆರ್ಡರ್ ಮಾಡಿದ. ಆ ವಿಸ್ಕಿ ಗ್ಲಾಸ್ ಮುಟ್ಟಿ ನೋಡಿದ ಖೇಮು ಓಹ್ ಎಷ್ಟು ದೊಡ್ಡ ಗ್ಲಾಸ್ ಅಂದ. ಅದಕ್ಕೆ ಸರ್ವಿಸ್ ಬಾಯ್ ಹೇಳಿದ ಅಮೆರಿಕದಲ್ಲಿ ಎನೂ ದೊಡ್ಡದೇ . ಸರಿ ಒಂದೆರಡು ಪೆಗ್ ಆಯ್ತು. ಖೇಮು ಸ್ವಲ್ಪ ಟೈಟ್ ಆದ. ನಂತರ ಖೇಮುಗೆ ಟಾಯ್ಲೆಟ್‌ಗೆ ಹೋಗಬೇಕು ಅನ್ನಿಸಿತು. ಪಕ್ಕದ ಇದ್ದ ಸರ್ವೀಸ್ ಬಾಯ್ ಅನ್ನು ಟಾಯ್ಲೆಟ್‌ಗೆ ಕರ್ಕೊಂಡು ಹೋಗು ಅಂದ. ಅವನೂ ಕೂಡ ಒಂದೆರಡು ಪೆಗ್ ಏರಿಸಿದ್ದ.

ಹಾಗಾಗಿ ಎದ್ದು ಹೋಗಲಾರದೆ, ಹೀಗೇ ನೇರ ಹೋಗಿ, ಲೆಫ್ಟ್ ನಲ್ಲಿ ಎರಡನೇ ಡೋರ್ ಅಂತ ಹೇಳಿದ. ಕುರುಡ ಖೇಮು
ನಶೆಯಲ್ಲಿ ನಡೆದುಕೊಂಡು ಹೋಗಿ, ಎರಡನೇ ಡೋರ್ ಬದಲು ಮೂರನೇ ಡೋರ್‌ನಲ್ಲಿ ಎಂಟ್ರಿ ಆದ. ಅದು ಸ್ವಿಮ್ಮಿಂಗ್ ಪೂಲ್‌ಗೆ ಹೋಗುವ ದಾರಿ ಆಗಿತ್ತು. ಸೀದಾ ಹೋದವನೇ ಖೇಮು ಪೂಲ್‌ನೊಳಗೆ ಬಿದ್ದು ಬಿಟ್ಟ. ತಕ್ಷಣ ಗಾಬರಿಯಾದ ಖೇಮು ಕಿರುಚಿಕೊಳ್ಳತೊಡಗಿದ.

‘ಅಯ್ಯೋ ಅಮೆರಿಕದಲ್ಲಿ ಎನೂ ದೊಡ್ಡದೇ. ಯಾರೂ ಫ್ಲಷ್ ಮಾಡಬೇಡ್ರಪ್ಪ ಪ್ಲೀಸ್.’

ಲೈನ್ ಮ್ಯಾನ್
ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರೋ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡು
ಯಾರಿಗೆ ಚೆನ್ನಾಗಿ ಅನ್ವಯಿಸುತ್ತದೆ.
-ರಾಹುಲ್ ಗಾಂಧಿ

ಇದೇ ಹಾಡನ್ನು ಮೋದಿ ಅವರಿಗೆ ಅನ್ವಯಿಸಿದರೆ ಏನಂತ ಹೇಳಬೇಕು
-ಅನ್ಯಾಯಕಾರಿ ಬ್ರಹ್ಮ ಸಂಸಾರಸ್ಥರನ್ನು ಸನ್ಯಾಸಿ ಮಾಡಬಹುದೇ..
ಪಂಜಾಬಿಗಳನ್ನು ಯಾವ ಕಾಯ್ದೆ ಅಡಿ ಬಂಧಿಸಬಹುದು?
-‘ಪೇಟಾ’ ಆಕ್ಟ್
– ಫುಡ್ ಮಾರುವ ಫುಟ್ ಪಾತ್
-ಫುಡ್ ಪಾತ್
ವಾಣಿ ಅನ್ನೋ ಹುಡುಗಿ ಸತ್ತ ಮೇಲೆ ಏನಾಗ್ತಾಳೆ
-‘ಅಶರೀರ’ ವಾಣಿ

ಇಂಡಿಯಾ ಬಾರ್ಡರ್‌ನಲ್ಲಿ ಚೀನಾ ಹಳ್ಳಿ ನಿರ್ಮಿಸಿದೆ ಅಂತ ಯಾರೋ ಹೇಳಿದ್ದಕ್ಕೆ ಕುಮಾರಸ್ವಾಮಿ ಏನಂದ್ರು?
-ನಾನು ಅಲ್ಲಿ ಗ್ರಾಮ ವಾಸ್ತವ್ಯ ಮಾಡಬಹುದಾ?
ಎಡಗಣ್ಣು ಹೊಡಕೊಂಡ್ರೆ ಏನ್ ಮಾಡಬೇಕು?
-ಮೊನ್ನೆ ಬಲಗಣ್ಣು ಹೊಡಕೊಂಡಾಗ ಯಾವ್ ಸೀಮೆಗಿಲ್ಲದ ಒಳ್ಳೇದೂ ಆಗಿರಲಿಲ್ಲ ಬಿಡು ಅಂತ ಸಮಾಧಾನ ಮಾಡ್ಕೋಬೇಕು.

ಕನ್ನಡಿಗರ ವಿಶಾಲ ಹೃದಯದ ಬಗೆಗಿನ ಮಾತು
-ಈ ಪ್ರಪಂಚ ‘ಕನ್ನಡಿ’ಗರಿದ್ದಂತೆ. ನೀವು ಅವರನ್ನ ಬೇರೆ ಭಾಷೆಯಲ್ಲಿ ಮಾತಾಡಿಸಿದ್ರೆ ಅವರೂ ಅದೇ ಭಾಷೆಯಲ್ಲಿ ಮಾತಾಡ್ತಾರೆ.

ಎಲ್ಲರ ಬಗ್ಗೆನೂ ಸಂದೇಹ ಪಡುವವನು
-ಅನುಮಾನ್ ಭಕ್ತ
ಮನೇಲಿ ಟಿವಿ ಇದ್ರೆ ಬಿಪಿಎಲ್ ಕಾರ್ಡು ರದ್ದು
-ಖೇಮು- ನಮ್ಮನೇಲಿ ಬಿಪಿಎಲ್ ಟಿವಿ ಇಲ್ಲ, ತೊಂದ್ರೆ ಇಲ್ಲ ಬಿಡಿ