Friday, 20th September 2024

ಕಾರ್ನಿಯ ಕಸಿ ಶಸ್ತ್ರಚಿಕಿತ್ಸೆಗೆ ಹಂದಿಯ ಚರ್ಮ ಬಳಕೆ ?

ವೈದ್ಯ ವೈವಿಧ್ಯ

drhsmohan@gmail.com

ಕಣ್ಣಿನ ಹೊರಗಿನ ಪಾರದರ್ಶಕ ಪಟಲ ಕಾರ್ನಿಯಾ (ಜನ ಸಾಮಾನ್ಯರ ಭಾಷೆಯಲ್ಲಿ ಕರಿಗುಡ್ಡೆ ಅಥವಾ ಕಪ್ಪು ಗುಡ್ಡೆ) ನಾನಾ
ಕಾಯಿಲೆಗಳಿಗೆ ಒಳಗಾಗುತ್ತದೆ. ಸಣ್ಣ ಪ್ರಮಾಣದ ಕಾಯಿಲೆಗಳನ್ನು ಆರಂಭದಲ್ಲಿಯೇ ಸೂಕ್ತ ಕಣ್ಣಿನ ವೈದ್ಯರಲ್ಲಿ ಪರೀಕ್ಷಿಸಿ ಚಿಕಿತ್ಸೆ ಕೈಗೊಂಡರೆ ಅದು ತೀವ್ರ ಮಟ್ಟಕ್ಕೆ ಹೋಗುವುದಿಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಕಳೆದ ೪೦ ವರ್ಷಗಳಲ್ಲಿ ನಾನು
ಗಮನಿಸಿದಂತೆ ಹಳ್ಳಿಯ ರೈತರು, ಕೆಲಸಗಾರರು, ಕೆಲವೊಮ್ಮೆ ನಗರದ ಕೂಲಿ ಕಾರ್ಮಿಕರು ಸಹಿತ ಕಾರ್ನಿಯದಲ್ಲಿ ಗಾಯವಾಗಿ ಅಲ್ಸರ್ ಆದಾಗ ಆರಂಭದಲ್ಲಿ ತೀರಾ ನಿರ್ಲಕ್ಷ್ಯ ಮಾಡಿ ಹತ್ತಿರದ ಲಭ್ಯವಿರುವ ನಾಟಿ ಔಷಧ, ಸಸ್ಯಗಳ ರಸ – ಈ ರೀತಿಯ ಅವೈಜ್ಞಾನಿಕ ಚಿಕಿತ್ಸೆಗಳನ್ನು ಕೈಗೊಂಡು ಕಾಯಿಲೆ ತೀರಾ ಉಲ್ಬಣ ಗೊಂಡು ನೋವು ಜಾಸ್ತಿಯಾಗಿ ಮೊದಲಿನ ಅವರ ಚಿಕಿತ್ಸೆಗಳೆಲ್ಲ ವಿಫಲವಾದಾಗ ಕಣ್ಣಿನ ವೈದ್ಯರಲ್ಲಿ ಬರುತ್ತಾರೆ.

ಈ ಹಂತದಲ್ಲಿ ಕಣ್ಣಿನ ವೈದ್ಯ ಚಿಕಿತ್ಸೆ ಕೈಗೊಂಡಾಗ ಸಹಿತ ಪೂರ್ಣ ಪ್ರಮಾಣದ ಸಫಲತೆ ಸಿಗದೆ ಕಾರ್ನಿಯ ತನ್ನ ಪಾರ ದರ್ಶಕ ಗುಣವನ್ನು ಕಳೆದುಕೊಂಡು ಅಪಾರದರ್ಶಕತೆ ಹೊಂದತ್ತದೆ. ಬಿಳಿಯ ಬಣ್ಣದಾಗಿ ಹೊರಗಿನಿಂದ ಕಾಣುತ್ತದೆ.
ಇದು ಸಂಪೂರ್ಣ ಅಂಧತ್ವ ಹೊಂದಿದ ಕಣ್ಣು ಎನ್ನ ಬಹುದು. ಈ ತರಹದ ಹಲವಾರು ಕಾಯಿಲೆಗಳು ಕಾರ್ನಿಯವನ್ನು ಅಪಾರದರ್ಶಕತೆ ಉಂಟು ಮಾಡಿ ಅಂಧತ್ವ ತರುತ್ತವೆ. ಅವು ಗಳಲ್ಲಿ ಮುಖ್ಯವಾದವುಗಳೆಂದರೆ – ಮೇಲೆ ತಿಳಿಸಿದ
ಕಾರ್ನಿಯದ ಅಲ್ಸರ್, ಕಾರ್ನಿಯದ ನಾನಾ ಸೋಂಕುಗಳು – ವೈರಸ್, ಫಂಗಸ್, ಬ್ಯಾಕ್ಟೀರಿಯಾಗಳು, ಕೆಲವರಲ್ಲಿ ಹುಟ್ಟಿನಿಂದಲೇ ಇರುವ ಕಾರಿಯಲ್ ಡಿಸ್ಟ್ರೊಪಿ ಮತ್ತು ಡಿಜನರೇ ಷನ್‌ಗಳು, ಕಾರ್ನಿಯದ ಮುಂಭಾಗ ಮಾತ್ರ ಹೊರ ಚಾಚಿರುವ ಕಾರ್ನಿಯದ ಕಾಯಿಲೆ – ಕೆರಟೋಕೋ ನಸ್. ಕೆಲವರಲ್ಲಿ ಹುಟ್ಟಿನಿಂದಲೇ ವಿವಿಧ ಕಾರಣಗಳಿಂದ ಕಾರ್ನಿಯದ ಮಧ್ಯ ಭಾಗ ಬಿಳಿ ಬಣ್ಣದ್ದಾಗಿ ಮಾರ್ಪಟ್ಟು ದೃಷ್ಟಿ ಸಂಪೂರ್ಣವಾಗಿ ಇರುವುದಿಲ್ಲ.

ದಾನ ಮಾಡುವ ವ್ಯಕ್ತಿ ಮರಣ ಹೊಂದಿ ೬-೭ ಗಂಟೆಯೊಳಗೆ ಕಾರ್ನಿಯಾವನ್ನು ತೆಗೆದದ್ದಾಗಿರಬೇಕು ಹಾಗೂ ಅದು ಸಂಪೂರ್ಣ ಪಾರದರ್ಶಕವಾಗಿರಬೇಕು. ಜಗತ್ತಿನ ಹಲವು ದೇಶಗಳಲ್ಲಿ ಭಾರತವೂ ಸೇರಿ ಈ ತರಹ ಮರಣ ಹೊಂದಿದ ವ್ಯಕ್ತಿ ದಾನಮಾಡಿ ಲಭ್ಯವಿರುವ ಕಾರ್ನಿಯಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿವೆ. ಏಕೆಂದರೆ ಕಾರ್ನಿಯಾದಿಂದ ಅಂದತ್ವ ಹೊಂದಿ ಕಾರ್ನಿಯಾ ಕಸಿಗಾಗಿ ಕಾಯುತ್ತಿರುವ ವ್ಯಕ್ತಿಗಳ ಸಂಖ್ಯೆ ತುಂಬಾ ಜಾಸ್ತಿ ಪ್ರಮಾಣದಲ್ಲಿದೆ.

ಹಾಗಾಗಿ ಮಾನವನ ಕಣ್ಣಿನ ಹೊರತಾಗಿ ಬೇರೆ ಯಾವುದಾದರೂ ಪಾರದರ್ಶಕ ವಸ್ತುವಿನಿಂದ ಕಾರ್ನಿಯ ಕಸಿ ಮಾಡಲು ಸಾಧ್ಯವೇ ಎಂಬ ಬಗ್ಗೆ ವೈದ್ಯ ವಿeನಿಗಳು ಹಲವಾರು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಅಂದರೆ ಆಗಸ್ಟ್ ೨೦೨೨ರ ಮೊದಲ ವಾರದಲ್ಲಿ ಇಂತಹ ಪ್ರಮುಖ ಸಂಶೋಧನೆಯ ಬಗ್ಗೆ ಸಂಶೋಧಕರು ವಿವರಗಳನ್ನು ಹಂಚಿಕೊಂಡಿದ್ದಾರೆ.

ಹಂದಿಯ ಚರ್ಮದಿಂದ ಮಾಡಿದ ಪಾರದರ್ಶಕ ಪಟಲವನ್ನು ಭಾರತದ ಮತ್ತು ಇರಾನಿನ ಕಣ್ಣಿನ ತಜ್ಞರು ೨೦ ರೋಗಿಗಳಲ್ಲಿ ಉಪಯೋಗಿಸಿ ಸಫಲತೆ ಕಂಡುಕೊಂಡಿದ್ದಾರೆ. ಈ ಎ ವ್ಯಕ್ತಿಗಳು ಕಾರ್ನಿಯ ಕಸಿಗಿಂತ ಮೊದಲು ಆ ಕಣ್ಣಿನ ಅವರ ಕಾರ್ನಿಯ
ಅಪಾರದರ್ಶಕತೆ ಹೊಂದಿ ಸಂಪೂರ್ಣ ಅಂಧರಾಗಿದ್ದರು. ಮಾನವ ಕಣ್ಣಿನ ಗುಡ್ಡೆ ಅಥವಾ ಹೊರಗಿನ ಪಾರದರ್ಶಕ ಪಟಲ ಕಾರ್ನಿಯಾದಲ್ಲಿ ಮುಖ್ಯವಾಗಿ ಕೊಲ್ಯಾಜಿನ್ ಪ್ರೊಟೀನ್ ಇರುತ್ತದೆ. ಮೇಲಿನ ಸಂಶೋಧಕರು ಹಂದಿಯ ಚರ್ಮದಿಂದ ಕೊಲ್ಯಾಜಿನ್ ಘಟಕಗಳನ್ನು ಬೇರ್ಪಡಿಸಿ ಮಾನವ ಉಪಯೋಗಕ್ಕೆ ಉಪಯೋಗಿಸಲು ಬರುವಂತೆ ಬಹಳ ಕಟ್ಟುನಿಟ್ಟಾಗಿ, ಬಹಳ ಸೂಕ್ಷ್ಮವಾಗಿ ಶುದ್ಧೀಕರಿಸಿದರು. ಆಹಾರ ಉದ್ದಿಮೆಯಲ್ಲಿ ಉಪ ಪದಾರ್ಥವಾಗಿ ಹೊರಬರುವ ಹಂದಿ ಚರ್ಮವನ್ನು ಉಪಯೋಗಿಸಿದ್ದರು.

ಏಕೆಂದರೆ ಇದು ಬಹಳ ಕಡಿಮೆ ಬೆಲೆಯಲ್ಲಿ ಎಲ್ಲಾ ಕಡೆ ಲಭ್ಯವಿದ್ದು. ಈ ಚರ್ಮದಲ್ಲಿನ ಬಿಡಿ ಬಿಡಿ ಕೊಲ್ಯಾಜಿನ್ ಘಟಕಗಳನ್ನು
ಎಚ್ಚರದಿಂದ ಕ್ರೋಡೀಕರಿಸಿ ಪಾರದರ್ಶಕ ವಸ್ತುವನ್ನು ನಿರ್ಮಾಣ ಮಾಡಿದರು. ಇದನ್ನು ಬಯೋ ಎಂಜಿನಿಯರ್ ಮಾಡಿದ ಕಾರ್ನಿಯ ಎನ್ನುತ್ತಾರೆ. ಮೃತ ವ್ಯಕ್ತಿಯಿಂದ ತೆಗೆಯಲ್ಪಟ್ಟ ಮಾನವ ಕಾರ್ನಿಯವನ್ನು ಎರಡು ವಾರದೊಳಗೆ ಉಪಯೋಗಿಸ ಬೇಕು. ಆದರೆ ಮೇಲೆ ತಿಳಿಸಿದ ಬಯೋ ಎಂಜಿನಿಯರಿಂಗ್ ರೀತಿಯಿಂದ ರೂಪಿಸಿದ ಕಾರ್ನಿಯವನ್ನು ಎರಡು ವರ್ಷದ ವರೆಗೂ ದಾಸ್ತಾನು ಮಾಡಿ ಆ ಅವಧಿಯವರೆಗೆ ಉಪಯೋಗಿಸಬಹುದು.

ಇದೇ ಸರ್ಜನರ ತಂಡ ಕೆರಟೊಕೋನಸ್ ಎಂಬ ಕಣ್ಣಿನ ಕಾಯಿಲೆಗೂ ಚಿಕಿತ್ಸೆಯನ್ನು ಕಂಡುಹಿಡಿದಿದ್ದಾರೆ. ಕಣ್ಣಿನ ಹೊರಪದರ ಕಾರ್ನಿಯ ತುಂಬಾ ತೆಳುವಾಗಿ ಕಾರ್ನಿಯಾ ವಿಪರೀತವಾಗಿ ಹೊರಭಾಗದಲ್ಲಿ ಚಾಚಿಕೊಂಡಾಗ ನಾವು ಕೆರಟೋಕೋನಸ್
ಎನ್ನುತ್ತೇವೆ. ಮುಂದುವರಿದ ಹಂತದ ಕೆರಟೋಕೋ ನಸ್ ಕಾಯಿಲೆಯಲ್ಲಿ ಕಾರ್ನಿಯವನ್ನು ಶಸ್ತ್ರಕ್ರಿಯೆ ಮಾಡಿ ತೆಗೆದು ದಾನ ಮಾಡಲ್ಪಟ್ಟ ವ್ಯಕ್ತಿಯಿಂದ ತೆಗೆದ ಕಾರ್ನಿಯವನ್ನು ಅದೇ ಸ್ಥಳದಲ್ಲಿರಿಸಿ ಬಹಳಷ್ಟು ಹೊಲಿಗೆಗಳನ್ನು ಉಪಯೋಗಿಸಿ ಹೊಲಿಯ ಲಾಗುತ್ತದೆ. ಆದರೆ, ಈ ಆಧುನಿಕ ವಿಧಾನದಲ್ಲಿ ಕಾಯಿಲೆ ಪೀಡಿತ ಕಾರ್ನಿಯವನ್ನು ಶಸ್ತ್ರಕ್ರಿಯೆ ಮಾಡಿ ತೆಗೆಯದೇ ಒಂದು ಸಣ್ಣ ಗಾಯ ಮಾಡಿ ಸಣ್ಣ ಇಂಪ್ಲಾಂಟ್ ಅನ್ನು ತೂರಿಸಿ ಅಲ್ಲಿರುವ ಕಾರ್ನಿಯಾದ ಜತೆಗೆ ಸೇರಿಸಿ ದೃಷ್ಟಿ ಬರುವಂತೆ ಮಾಡಲಾಗು ತ್ತದೆ.

ಹಾಗೆಯೇ ಸೂಕ್ಷ್ಮವಾದ ಲೇಸರ್ ಕಿರಣಗಳನ್ನು ಉಪಯೋಗಿಸಿ ಮೇಲೆ ತಿಳಿಸಿದ ಗಾಯ ಮಾಡುವುದರಿಂದ ಶಸಕ್ರಿಯೆಯ ನಂತರ ಹೊಲಿಗೆಗಳನ್ನು ಉಪಯೋಗಿಸುವ ಅವಶ್ಯಕತೆ ಇಲ್ಲ. ಇರಾನಿನ ೧೨ ರೋಗಿಗಳು ಹಾಗೂ ೮ ಭಾರತದ ರೋಗಿ ಗಳು ಈ ಹೊಸ ರೀತಿಯ ಶಸ್ತ್ರಕ್ರಿಯೆಯಿಂದ ದೃಷ್ಟಿ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಈ ಶಸ್ತ್ರಕ್ರಿಯೆಯನ್ನು ದೆಹಲಿಯ ಪ್ರತಿಷ್ಠಿತ ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಮಾಡಿದ್ದಾರೆ.

ಶಸ್ತ್ರಕ್ರಿಯೆಯ ಹಂತದಲ್ಲಿ ಮತ್ತು ನಂತರ ಯಾವುದೇ ತೊಡಕುಗಳು ಕಂಡುಬಂದಿಲ್ಲ, ಅಂಗಾಂಶಗಳು ಬೇಗ ಗುಣ ಹೊಂದಿ ದವು. ಇಮ್ಯುನೋಸಪ್ರೆಸ್ಸಿವ್ ಕಣ್ಣಿನ ಹನಿ ಔಷಧ ಗಳನ್ನು ೮ ವಾರಗಳವರೆಗೆ ಉಪಯೋಗಿಸಲಾಯಿತು. ಪ್ರಾಯೋಗಿಕವಾಗಿ ನಡೆಸಿದ ಈ ಶಸ್ತ್ರಕ್ರಿಯೆಗಳು ಬಹಳ ಸಫಲವಾದದ್ದು ಗಮನಿಸಿ ಇದನ್ನು ಕೈಗೊಂಡ ವೈದ್ಯರಿಗೇ ಆಶ್ಚರ್ಯ ಉಂಟುಮಾಡಿದೆ. ಇದರಲ್ಲಿ ಉಪಯೋಗಿಸಿದ ಬಯೋ ಎಂಜಿನಿಯರಿಂಗ್ ವಸ್ತು ಎರಡು ವರ್ಷಗಳ ನಂತರವೂ ನಿಜವಾದ ಕಾರ್ನಿಯದ
ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ.

ಹಾಗೆಯೇ ಕಾರ್ನಿಯಾದ ದಪ್ಪಗಿನ ಪ್ರಮಾಣ ಮತ್ತು ಅದರ ಬಾಗುವಿಕೆ ಎರಡಕ್ಕೂ ಈ ವಸ್ತು ಹೊಂದಿಕೊಂಡು ಮೊದಲಿನ ಆರೋಗ್ಯವಂತ ಕಾರ್ನಿಯಾದ ವಿನ್ಯಾಸವನ್ನೇ ಹೋಲುತ್ತಿದೆ. ಮೇಲೆ ಚಿಕಿತ್ಸೆ ಮಾಡಿದ ೨೦ರಲ್ಲಿ ೧೪ ಜನರು ಈ ಶಸ್ತ್ರಕ್ರಿಯೆ ಯ ಮೊದಲು ಸಂಪೂರ್ಣವಾಗಿ ಅಂಧರಾಗಿದ್ದರು. ಈಗ ಅವರಲ್ಲಿ ಎಲ್ಲರೂ ಆರೋಗ್ಯಪೂರ್ಣ ದೃಷ್ಟಿ ಹೊಂದಿದ್ದಾರೆ.