Friday, 20th September 2024

ದುಬಾರಿ ಖಾಸಗಿ ಆಸ್ಪತ್ರೆ; ಸರಕಾರಕ್ಕೊಂದು ಪತ್ರ

ಸ್ವಾಸ್ಥ್ಯ ಸಂಪದ

yoganna55@gmail.com

ಸಮುದಾಯದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆಯೆಂದರೆ ಅದಕ್ಕೆ ಸರಕಾರ ಮತ್ತು ಸಮಾಜಗಳ ತಪ್ಪು ನಿರ್ಣಯಗಳೇ ಕಾರಣ. ಅಭಿವೃದ್ಧಿ ಹೊಂದುತ್ತಿರುವ ಭಾರತವನ್ನಲ್ಲದೆ ಅಭಿವೃದ್ಧಿ ಹೊಂದಿರುವ ಅಮೆರಿಕದಂತಹ ಶ್ರೀಮಂತ ರಾಷ್ಟ್ರಗಳಲ್ಲೂ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದು, ಭಾರತದ ಕೇಂದ್ರ ಸರಕಾರದ ವಾರ್ಷಿಕ ಬಡ್ಜೆಟ್‌ನಷ್ಟು ಹಣವನ್ನು ಅಮೆರಿಕ ತನ್ನ 33 ಕೋಟಿ ಜನರ ಆರೋಗ್ಯ ಕ್ಷೇತ್ರಕ್ಕೆ ವ್ಯಯ ಮಾಡುತ್ತಿದ್ದರೂ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಾಗಿಲ್ಲ.

ಸ್ವೇಚ್ಛಾಚಾರದ ಬದುಕೇ ಇದಕ್ಕೆ ಪ್ರಮುಖ ಕಾರಣ. ಕೇಂದ್ರಸರಕಾರ ಪ್ರಸ್ತುತ ವರ್ಷದ ಬಡ್ಜೆಟ್‌ನಲ್ಲಿ ಕೇವಲ 83000 ಕೋಟಿ ರು.ಗಳನ್ನು 130 ಕೋಟಿ ಜನತೆಗೆ, ರಾಜ್ಯಸರಕಾರ 2.65 ಲಕ್ಷ ಕೋಟಿ ಹಣವನ್ನು 6 ಕೋಟಿ ಜನತೆಗೆ ಮೀಸಲಿಟ್ಟಿರುವುದು ಸರಕಾರಗಳಿಗೆ ಪ್ರತಿಷ್ಠಿತ ಆರೋಗ್ಯ ಕ್ಷೇತ್ರದ ಮೇಲೆ ಇರುವ ದಿವ್ಯನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದು ದೇಶದ ಜಿಡಿಪಿಯ ಶೇ 3 ರಷ್ಟಾಗಿದೆ.

ಅನಾರೋಗ್ಯಕ್ಕೆ ಸರಕಾರವೇ ಹೊಣೆ: ನೀರು, ಆಹಾರ, ವಸತಿ, ಪರಿಶುದ್ಧ ಪರಿಸರ, ಸಾಮಾಜಿಕ ನೆಮ್ಮದಿ ಇವೆಲ್ಲವುಗಳು ಆರೋಗ್ಯವನ್ನು ನಿಯಂತ್ರಿಸುವ ಅವಶ್ಯಕ ಮೂಲಸೌಕರ್ಯಗಳಾಗಿದ್ದು, ಇವುಗಳನ್ನು ಸರಕಾರ ಸಂಪೂರ್ಣವಾಗಿ ಒದಗಿಸದೆ ವಿಫಲವಾಗಿರುವುದು ಅನಾರೋಗ್ಯ ಉಗಮಕ್ಕೆ ಬಹುಮುಖ್ಯ ಕಾರಣವಾಗಿದೆ. ಇದಲ್ಲದೆ ಸರಕಾರದ ಬೊಕ್ಕಸಕ್ಕೆ ಹಣ ತುಂಬಿಕೊಳ್ಳುವ ದೃಷ್ಟಿಯಿಂದ ಹಾನಿಕಾರಕದ ಅರಿವಿದ್ದರೂ ಮದ್ಯಪಾನ ಮತ್ತು ಧೂಮಪಾನಗಳ ಮಾರಾಟಗಳನ್ನು ವಿಸ್ತಾರಗೊಳಿಸುತ್ತಿರುವುದೂ ಅನಾರೋಗ್ಯಕ್ಕೆ ನಾಂದಿಯಾಗಿದೆ.

ಈ ದುಶ್ಚಟಗಳಿಂದ ಬರುವ ಹಣವೆಲ್ಲವನ್ನೂ ಆರೋಗ್ಯದ ರಕ್ಷಣೆಗೂ ಉಪಯೋಗಿಸುತ್ತಿಲ್ಲ. ತೆರಿಗೆಗಾಗಿ ವಾಹನಗಳ ಉತ್ಪತ್ತಿ ಯನ್ನು ಅಧಿಕ ಮಾಡಿ ಪರಿಸರದ ಮಾಲಿನ್ಯ ವೃದ್ಧಿಗೆ ಸರಕಾರ ಎಡೆಮಾಡಿಕೊಡುತ್ತಿದೆ. ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿ ಸದೆ ಜನಸಂಖ್ಯೆಗನುಗುಣವಾಗಿ ಸಸ್ಯ ಸಂಪತ್ತು ಮತ್ತು ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸದಿರುವುದು ಹೆಚ್ಚುತ್ತಿರುವ ಅನಾರೋಗ್ಯಗಳಿಗೆ ಮಗದೊಂದು ಕಾರಣ.

ಧಾರ್ಮಿಕ, ಜಾತಿ ಮತ್ತು ರಾಜಕೀಯ ಸಂಘರ್ಷಗಳು ದಿನೇ ದಿನೇ ಕ್ಯಾನ್ಸರ್‌ನಂತೆ ಹೆಚ್ಚಾಗುತ್ತಿದ್ದು, ಮನುಷ್ಯನ ಮಾನಸಿಕ
ನೆಮ್ಮದಿಯೂ ಸಹ ಹದಗೆಟ್ಟು ಹಲವಾರು ಕಾಯಿಲೆಗಳ ಉಗಮಕ್ಕೆ ನಾಂದಿಯಾಗಿವೆ. ದೀರ್ಘಾವಧಿಯಲ್ಲಿ ಮನುಷ್ಯನನ್ನು ದೈಹಿಕವಾಗಿ ಮತ್ತು ಆರ್ಥಿಕವಾಗಿ ಕಾಡುತ್ತಿರುವ ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೃದಯಾಘಾತ, ಏರು ರಕ್ತ ಒತ್ತಡ, ಸ್ಟ್ರೋಕ್, ಮನೋರೋಗಗಳು, ಸ್ವ ನಿರೋಧಕತ್ವದ ಕಾಯಿಲೆಗಳು ಇವುಗಳಿಗೆ ಪರಿಸರ ಮಾಲಿನ್ಯ ಮತ್ತು ಬದಲಾದ ಜೀವನಶೈಲಿಯೇ ಪ್ರಮುಖ ಕಾರಣಗಳು ಎಂದು ದೃಢಪಟ್ಟಿವೆ. ಇವೆಲ್ಲವುಗಳಿಗೂ ಸರಕಾರ ಮತ್ತು ಸಮಾಜವೇ ಹೊಣೆಯಲ್ಲವೇ?

ಸರಕಾರ/ ಖಾಸಗಿ ಆರೋಗ್ಯ ವ್ಯವಸ್ಥೆ: ಭಾರತದ ಶೇ ೮೫ಕ್ಕೂ ಹೆಚ್ಚು ಆರೋಗ್ಯ ಸೇವೆ ಖಾಸಗಿ ವ್ಯವಸ್ಥೆಯಿಂದ ವಿತರಣೆ
ಯಾಗುತ್ತಿರುವುದು ಸರಕಾರದ ಆರೋಗ್ಯ ನೀತಿಯ ಅಧಃ ಪತನಕ್ಕೆ ಹಿಡಿದ ಕೈಗನ್ನಡಿ. ಖಾಸಗಿ ವೈದ್ಯಕೀಯ ಸೇವೆ ಸರಕಾರಿ
ವೈದ್ಯಕೀಯ ಸೇವೆಗಿಂತ ಉನ್ನತ ಗುಣಮಟ್ಟದ್ದಾಗಿದ್ದು, ಜನರ ವಿಶ್ವಾಸ ಗಳಿಸಿ ಜನಪ್ರಿಯವಾಗಿರುವುದು ನಿರ್ವಿವಾದ.

ಸರಕಾರದ ಮಂತ್ರಿ ಮಹೋದಯರುಗಳು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಸರಕಾರಿ ಆಸ್ಪತ್ರೆಗಳನ್ನು ಪರಿಗಣಿಸದೆ ಖಾಸಗಿ ಆಸ್ಪತ್ರೆ ಗಳತ್ತ ಮುಖಮಾಡುತ್ತಿರುವುದು ಇದಕ್ಕೆ ಜ್ವಲಂತ ಉದಾಹರಣೆ ಹಾಗೂ ನಾಚಿಕೆಗೇಡಿನ ಸಂಗತಿ.

ಸರಕಾರ  ನಡೆಸುವವರು ಸರಕಾರಿ ಆಸ್ಪತ್ರೆಗಳನ್ನು ಉಪ ಯೋಗಿಸಿದಲ್ಲಿ ಅವುಗಳಲ್ಲಿನ ನ್ಯೂನತೆಗಳು ಬಹುಬೇಗ ಅವರು ಗಳಿಗೆ ನೇರವಾಗಿ ಮನವರಿಕೆಯಾಗಿ ಸುಸಜ್ಜಿತ ಗೊಳಿಸಲು ನೆರವಾಗುತ್ತದೆ. ಇನ್ನು ಮುಂದೆಯಾದರೂ ಹಾಗಾಗಲಿ ಎಂದು ಆಶಿಸೋಣ. ಆರೋಗ್ಯ ಸೇವೆ ವೈಯಕ್ತಿಕ ಸೇವೆಯಾಗಿದ್ದು, ಮಾನವೀಯ ಅಂತಃಕರಣದಿಂದ ವಿತರಿಸಬೇಕಾದ ಸೇವೆ. ಸರಕಾರಿ ವ್ಯವಸ್ಥೆಯಲ್ಲಿ ಇದು ಸಾಧ್ಯವೇ?

ಖಾಸಗಿ ವೈದ್ಯಕೀಯ ವೆಚ್ಚ ಹೆಚ್ಚಳ : ಕಾರಣಗಳು: ಖಾಸಗಿ ವೈದ್ಯಕೀಯ ಸೇವೆ ಜನಮನ್ನಣೆ ಗಳಿಸಿರುವುದಕ್ಕೆ ಅಲ್ಲಿರುವ
ಶುಚಿತ್ವದ ಆಕರ್ಷಣೀಯ ಪರಿಸರ, ನುರಿತ ತಜ್ಞ ವೈದ್ಯರು ಮತ್ತಿತರ ಸಿಬ್ಬಂದಿಗಳು, ಆತ್ಮವಿಶ್ವಾಸ ಹುಟ್ಟಿಸುವ ನರ್ಸಿಂಗ್ ಸೇವೆ, ಮನನೀಯವಾದ ಸಂವಾದಗಳು, ಸಕಾಲಿಕ ಚಿಕಿತ್ಸೆ, ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಅತ್ಯಾಧುನಿಕ ರೋಗಪತ್ತೆ ಮತ್ತು ಚಿಕಿತ್ಸಾ ಸಲಕರಣೆಗಳು ಲಭ್ಯವಿರುವಿಕೆ ಇವು ಪ್ರಮುಖ ಕಾರಣಗಳು.

ಇವೆಲ್ಲವುಗಳನ್ನು ಪರಸ್ಪರ ಸಂಯೋಜಿಸಿ ರೋಗಿಗೆ ಆತ್ಮವಿಶ್ವಾಸ ಹುಟ್ಟುವಂತೆ ಶಿಸ್ತುಬದ್ಧವಾಗಿ ವೈದ್ಯಕೀಯ ಸೇವೆಯನ್ನು ವಿತರಿಸುವ ಆಡಳಿತ ವ್ಯವಸ್ಥೆ ಅತ್ಯವಶ್ಯಕವಾಗಿದ್ದು ಇದು ಬಹುಪಾಲು ಖಾಸಗಿ ಆಸ್ಪತ್ರೆಗಳಲ್ಲಿ ಸದೃಢವಾಗಿರುವುದರಿಂದ ಖಾಸಗಿ ಆಸ್ಪತ್ರೆಗಳು ರೋಗಿಗೆ ಆಕರ್ಷಣೀಯವಾಗಿವೆ. ಇವೆಲ್ಲಕ್ಕೂ ಕೋಟ್ಯಾಂತರ ರುಪಾಯಿಗಳ ನಿರಂತರ ಬಂಡವಾಳ ಹೂಡಿಕೆ ಅತ್ಯವಶ್ಯಕ. ಖಾಸಗಿ ಆಸ್ಪತ್ರೆಗಳಿಗೆ ಸರಕಾರದಿಂದ ಯಾವ ಬಗೆಯ ಸೌಲಭ್ಯಗಳೂ ಅಥವಾ ವಿನಾಯತಿಗಳು ಲಭ್ಯವಿಲ್ಲ.

ದುಬಾರಿ ಕಾನೂನುಬದ್ಧ ಷರತ್ತುಗಳು: ಆಸ್ಪತ್ರೆ ಸ್ಥಾಪನೆಗೆ ಸರಕಾರ ರೂಪಿಸಿರುವ ನಿಯಮಾವಳಿಗಳ ಪ್ರಕಾರ ಅಗ್ನಿಶಾಮಕ, ಮಾಲಿನ್ಯ ಮಂಡಳಿ, ಕಟ್ಟಡ ರಹದಾರಿ ಇತ್ಯಾದಿ ಸುಮಾರು ೨೦ಕ್ಕೂ ಹೆಚ್ಚು ರಹದಾರಿಗಳು ಅವಶ್ಯಕವಾಗಿದ್ದು, ಪ್ರಾರಂಭದಲ್ಲ ಲ್ಲದೆ ಇವೆಲ್ಲಕ್ಕೂ ಪ್ರತಿವರ್ಷ ನವೀಕರಣಕ್ಕಾಗಿ ಲಕ್ಷಾಂತರ ರುಪಾಯಿಗಳ ಮರು ಬಂಡವಾಳ ಹೂಡಿಕೆ ಅವಶ್ಯಕ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಪ್ರಕಾರ ಎಲ್ಲ ಸೌಲಭ್ಯಗಳನ್ನುಳ್ಳ ಆಸ್ಪತ್ರೆಯನ್ನು ಕಟ್ಟಲು ಪ್ರತಿ ಹಾಸಿಗೆಗೂ 30-60 ಲಕ್ಷರೂಗಳ ಮೂಲ ಪ್ರಾಥಮಿಕ ಬಂಡವಾಳ ಅತ್ಯವಶ್ಯಕ.

ಅಂದರೆ 100 ಹಾಸಿಗೆಯ ಆಸ್ಪತ್ರೆಗೆ ಸುಮಾರು ಕನಿಷ್ಠ 300ಕೋಟಿ ಬಂಡವಾಳ ಹೂಡಿಕೆ ಅತ್ಯವಶ್ಯಕ. ಆಸ್ಪತ್ರೆಗಳಿಗೆ ಕೇಂದ್ರ ಸರಕಾರ ಅನುಮೋದಿತ ಎನ್‌ಎಬಿಹೆಚ್(ನ್ಯಾಷನಲ್ ಅಕ್ರಿಡೇಷನ್ ಬೋರ್ಡ್ ಫಾರ್ ಹೆಲ್ತ್) ಮನ್ನಣೆ ಅವಶ್ಯಕವಾಗಿದ್ದು, ಅದರ ಎಲ್ಲ ಷರತ್ತುಗಳನ್ನು ಪೂರೈಸಿದಲ್ಲಿ ಮಾತ್ರ ಈ ಸಂಸ್ಥೆಯ ಮನ್ನಣೆ ಸಿಗುತ್ತದೆ. ಇದರಿಂದ ಖಾಸಗಿ ಆಸ್ಪತ್ರೆಗಳ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದೆ.

ಮುಂದಿನ ದಿನಗಳಲ್ಲಿ ಎನ್‌ಎಬಿಹೆಚ್ ಮನ್ನಣೆ ಎಲ್ಲ ಆಸ್ಪತ್ರೆಗಳಿಗೂ ಕಡ್ಡಾಯದ ಕಾನೂನು ಬರಲಿದೆ. ಇದು ಬಂದಲ್ಲಿ ಈಗಾಗಲೆ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಸಣ್ಣಪುಟ್ಟ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳು ಮುಚ್ಚಲಿವೆ.

ವ್ಯಾಪಾರೀಕರಣವಾದ ಆರೋಗ್ಯ ಸೇವೆ: ವೈದ್ಯಕೀಯ ಸೇವೆ ಇಂದು ಪವಿತ್ರ ಉಚಿತ ಸೇವೆಯಾಗಿ ಉಳಿದಿಲ್ಲ. ವ್ಯಾಪಾರೀಕರಣ ಗೊಂಡು ಹಲವು ದಶಕಗಳೇ ಕಳೆದಿವೆ. ಕ್ಯಾಪಿಟೇಷನ್ ಶುಲ್ಕ ಆಧಾರಿತ ವೈದ್ಯರ ಉತ್ಪತ್ತಿ, ಖಾಸಗಿ ಆಸ್ಪತ್ರೆಗಳ ನಿರ್ಮಾಣಕ್ಕಾಗು ತ್ತಿರುವ ಅತಿಯಾದ ಬಂಡವಾಳ ಹೂಡಿಕೆ, ವೈದ್ಯರಲ್ಲದ ಕಾರ್ಪೋರೇಟ್ ಸಂಸ್ಕೃತಿಯವರು ಆರೋಗ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡುತ್ತಿರುವುದು, ಕಾನೂನುಬದ್ಧವಾಗಿ ಸರಕಾರದಿಂದ ನಿಗದಿಯಾಗುತ್ತಿರುವ ನೌಕರರ ದುಬಾರಿ ವೇತನ, ಕಾನೂನು ಮತ್ತು ಗ್ರಾಹಕರ ಪರಿಷತ್ ವ್ಯಾಪ್ತಿಗೆ ವೈದ್ಯಕೀಯ ಸೇವೆಯನ್ನು ಒಳಪಡಿಸಿರುವುದು ಇವೆಲ್ಲವು ಸರಕಾರದ ನಿರ್ಧಾರಗಳೇ ಆಗಿವೆ. ಈ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ವೈದ್ಯಕೀಯ ಸಮುದಾಯ/ಆಸ್ಪತ್ರೆಗಳು ವಿಮೆಗಾಗಿ ಮೊರೆ ಹೋಗುತ್ತಿವೆ. ಇವೆಲ್ಲವುಗಳಿಂದಾಗಿ ಖಾಸಗಿ ವೈದ್ಯಕೀಯ ಸೇವೆ ವ್ಯಾಪಾರೀ ವೃತ್ತಿಯಾಗಲು ಸರಕಾರವೇ ಕಾರಣ ವಾಗಿರುತ್ತದೆ.

ಆಸ್ಪತ್ರೆಗಳು ವ್ಯಾಪಾರೀ ಸಂಸ್ಥೆಗಳು ರಿಸರ್ವ್ ಬ್ಯಾಂಕ್: ಆಸ್ಪತ್ರೆಗಳಿಗೆ ಬಂಡವಾಳ ಹೂಡಲು ಬ್ಯಾಂಕ್‌ಗಳು ಮುಂದೆ
ಬರುತ್ತಿಲ್ಲ. ಸೋಜಿಗದ ಸಂಗತಿಯೆಂದರೆ ರಿಸರ್ವ್ ಬ್ಯಾಂಕ್ ನೀತಿಯ ಪ್ರಕಾರ ಸಾಲ ನೀಡಿಕೆಯಲ್ಲಿ ಬ್ಯಾಂಕ್‌ಗಳು ಆಸ್ಪತ್ರೆ ಗಳನ್ನು ಆದ್ಯತೆಯಲ್ಲಿ ಪರಿಗಣಿಸದೆ ಆಸ್ಪತ್ರೆಗಳನ್ನು ವ್ಯಾಪಾರಿ ಸಂಸ್ಥೆಗಳೆಂದು ಪರಿಗಣಿಸಿ ದುಬಾರಿ ಬಡ್ಡಿ ವಿದಿಸುತ್ತಿರು ವುದೂ ಮತ್ತು ದೀರ್ಘಾವಽಗೆ ಸಾಲ ನೀಡಿ ಸುಲಭ ಮರುಪಾವತಿ ಕಂತುಗಳನ್ನು ನೀಡದಿರುವುದೂ ಸಹ ವೈದ್ಯಕೀಯ ವೆಚ್ಚ ದುಬಾರಿಯಾಗಲು ಕಾರಣವಾಗಿದೆ.

ದುಬಾರಿಯಾದ ಸಲಕರಣೆಗಳ ನಿರ್ವಹಣೆ: ಆಧುನಿಕ ರೋಗಗಳ ಪತ್ತೆಗಾಗಿ ಅವಶ್ಯಕವಿರುವ ಸಿ.ಟಿ, ಎಂಆರ್‌ಐ, ಪೆಟ್
ಸ್ಕ್ಯಾನ್, ಕ್ಯಾಥ್‌ಲ್ಯಾಬ್, ವೆಂಟಿಲೇಟರ್ ಮತ್ತು ಶಸಕ್ರಿಯೆಗೆ ಅವಶ್ಯಕವಾಗಿರುವ ಆಧುನಿಕ ಸಲಕರಣೆಗಳ ಬೆಲೆ ಬಹು ದುಬಾರಿ. ಇವೆಲ್ಲವನ್ನೂ ಅಳವಡಿಸಬೇಕಾದಲ್ಲಿ ಕನಿಷ್ಠ 25-50 ಕೋಟಿ ರುಪಾಯಿಗಳ ಬಂಡವಾಳ ಹೂಡಿಕೆ ಅತ್ಯವಶ್ಯಕ. ಪ್ರತಿವರ್ಷ ಇವುಗಳ ನಿರ್ವಹಣೆಗಾಗಿ ಮೂಲಬೆಲೆಯ ಕನಿಷ್ಠ ಶೇಕಡ 10ರಷ್ಟನ್ನು ಖರ್ಚುಮಾಡಬೇಕು. (2.5- 5ಕೋಟಿ) ಇವುಗಳ ನಿರ್ವಹಣೆಯ ವಿದ್ಯುತ್ ವೆಚ್ಚ ಕನಿಷ್ಠ ಮಾಹೆಯಾನ

10 ರಿಂದ 12 ಲಕ್ಷರೂಗಳು. ಇವುಗಳ ಉಪಯೋಗ ಇರಲಿ ಅಥವಾ ಇಲ್ಲದಿರಲಿ ನಿರ್ವಹಣಾ ಮತ್ತು ವಿದ್ಯುಚ್ಛಕ್ತಿಯ ವೆಚ್ಚವನ್ನು ಭರಿಸಲೇ ಬೇಕು. ಈ ಬಹುಪಾಲು ಯಂತ್ರಗಳು ವಿದೇಶೀಯ ಯಂತ್ರಗಳಾಗಿದ್ದು, ಭಾರತದಲ್ಲಿಯೇ ತಯಾರಿಸಿದಲ್ಲಿ ಇವುಗಳ ಬೆಲೆ ತಗ್ಗಬಹುದೇನೋ? ಇದಲ್ಲದೆ ಕನಿಷ್ಠ ೫ವರ್ಷಗಳಿಗೊಮ್ಮೆ ಈ ಸಲಕರಣೆಗಳನ್ನು ಉನ್ನತೀಕರಣ ಮಾಡಬೇಕಾಗಿದ್ದು, ಅದಕ್ಕೆ ತಗಲುವ ವೆಚ್ಚವೂ ಕೂಡ ದುಬಾರಿ.

ದುಬಾರಿ ಅತ್ಯಾಧುನಿಕ ಆಸ್ಪತ್ರೆಗಳು ಅವಶ್ಯಕವೇ?: ಭಾರತೀಯ ಪುರಾತನ ಸಮಾಜದಲ್ಲಿ ಸೋಂಕುರೋಗಗಳನ್ನು ಹೊರತು ಪಡಿಸಿ ಇಂದು ವ್ಯಾಪಿಸಿರುವ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಹೃದಯಾಘಾತ ಇತ್ಯಾದಿ ಕಾಯಿಲೆಗಳು ಹೆಚ್ಚಾಗಿರ ಲಿಲ್ಲ. ಅಂದಿನ ಶಿಸ್ತುಬದ್ಧ ಜೀವನಶೈಲಿ, ಆಹಾರ ಪದ್ಧತಿ, ನೆಮ್ಮದಿಯ ಬದುಕು ಆರೋಗ್ಯಕ್ಕೆ ಪೂರಕವಾಗಿದ್ದು, ಅಂದು ಚಾಲ್ತಿ ಯಲ್ಲಿದ್ದ ಆಯುರ್ವೇದ, ಯೋಗ ಇತ್ಯಾದಿ ವೈದ್ಯ ಪದ್ಧತಿಗಳೇ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳ ನಿವಾರಣೆಗೆ ಪರಿಣಾಮ ಕಾರಿಯಾಗಿದ್ದವು.

ಆಧುನಿಕ ಮನುಷ್ಯನಿಗೆ ಎಲ್ಲ ವೈಜ್ಞಾನಿಕ ಅರಿವಿದ್ದರೂ ಸ್ವೇಚ್ಛಾಚಾರದ ಜೀವನಶೈಲಿಯಿಂದಾಗಿ ಮಾರಣಾಂತಿಕ ರೋಗ ಗಳಿಂದ ಪಾರಾಗಲು ಪಾಶ್ಚಿಮಾತ್ಯದ ಆಧುನಿಕ ವೈದ್ಯಕೀಯ ಸೇವೆಯ ಆಸ್ಪತ್ರೆಗಳು ಇಂದು ಅತ್ಯವಶ್ಯಕ. ಹೃದಯಾಘಾತ ವಾದ ರೋಗಿಗೆ ೪-೬ಗಂಟೆಗಳ ಒಳಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಮಾಡದಿದ್ದಲ್ಲಿ ಜೀವವೇ ಹಾರಿಹೋಗಬಹುದು.

ಕಿಡ್ನಿ ವಿಫಲತೆಯುಳ್ಳವರಿಗೆ ಕಿಡ್ನಿ ನಾಟಿಮಾಡುವುದರಿಂದ, ಈಲಿ ನಾಶವಾದವರಿಗೆ ಈಲಿ ನಾಟಿ ಹೀಗೆ ಅಂಗಾಂಗಗಳು ನಾಶ ವಾದವರಿಗೆ ಸಂಬಂಧಿಸಿದ ಅಂಗಾಂಗಗಳನ್ನು ನಾಟಿಮಾಡುವುದರಿಂದ ಹಲವಾರು ವರ್ಷಗಳ ಕಾಲ ಬದುಕುತ್ತಾರೆ. ಜೀವವನ್ನು ಉಳಿಸುವ ಈ ಯಾವ ಚಿಕಿತ್ಸೆಗಳನ್ನು ಇನ್ನಿತರ ಯಾವುದೇ ಪರ್ಯಾಯ ವೈದ್ಯ ಪದ್ಧತಿಯಿಂದ ಪಡೆಯಲು ಸಾಧ್ಯವಿಲ್ಲ ದಿರುವುದರಿಂದ ಆಧುನಿಕ ತಂತ್ರಜ್ಞಾನದ ಆಸ್ಪತ್ರೆಗಳು ಇಂದು ಅತ್ಯವಶ್ಯಕವಾಗಿವೆ.

ಲಾಭ – ನಷ್ಟ: ನೂರು ಹಾಸಿಗೆಯ ಆಧುನಿಕ ತಂತ್ರಜ್ಞಾನದ ಆಸ್ಪತ್ರೆಗೆ ಹೂಡುವ ಸುಮಾರು 300 ಕೋಟಿ ರುಪಾಯಿಗಳ
ಮೂಲ ಬಂಡವಾಳವನ್ನು ವಾಪಸ್ ಪಡೆಯಲು ಆಸ್ಪತ್ರೆ ಯಶಸ್ವಿಯಾದಲ್ಲಿ ಮಾತ್ರ ಸುಮಾರು 30-40 ವರ್ಷಗಳೇ ಬೇಕಾಗ ಬಹುದು. ಈ ಮಟ್ಟದ ಆಸ್ಪತ್ರೆಯನ್ನು ನಿರ್ವಹಿಸಲು ಪ್ರತಿ ತಿಂಗಳು ಕನಿಷ್ಠ 3 ಕೋಟಿ ರುಪಾಯಿಗಳ ನಿರ್ವಹಣಾ ವೆಚ್ಚ ತಗಲುತ್ತದೆ. ಆಸ್ಪತ್ರೆಯೊಂದು ಯಶಸ್ವಿಯಾಗಿ ನಡೆದಲ್ಲಿ ಲಾಭ ನಷ್ಟವಿಲ್ಲದೆ ತನ್ನ ಕಾಲಿನ ಮೇಲೆ ನಿಂತುಕೊಳ್ಳಲು ಕನಿಷ್ಠ
5-8 ವರ್ಷಗಳು ಬೇಕಾಗಿದ್ದು, ಅಲ್ಲಿಯವರೆವಿಗೂ ಮರು ಬಂಡವಾಳವನ್ನು ಹೂಡಬೇಕಾಗುತ್ತದೆ. ಹೀಗಾಗಿ ಬಹುಪಾಲು
ಆಸ್ಪತ್ರೆಗಳು ನಷ್ಟದಲ್ಲಿವೆ.

ಪಾಶ್ಚಿಮಾತ್ಯಕ್ಕಿಂತ ಕಡಿಮೆ ಶುಲ್ಕ: ಆಸ್ಪತ್ರೆಗಳು ತಮ್ಮ ಚಿಕಿತ್ಸೆಗಳಿಗೆ ನಿರ್ಧರಿಸುವ ಶುಲ್ಕ ಆಯಾಯ ಆಸ್ಪತ್ರೆಗಳಲ್ಲಿ
ಲಭಿಸುವ ಚಿಕಿತ್ಸೆಗಳ ಗುಣಮಟ್ಟ, ಬಂಡವಾಳ ಹೂಡಿಕೆಯ ಮೊತ್ತ, ಉಪಯೋಗಿಸುವ ಆಧುನಿಕ ಸಲಕರಣೆಗಳ ಗುಣ
ಮಟ್ಟ, ವಿಶೇಷ ತಜ್ಞವೈದ್ಯರ ಗುಣಮಟ್ಟ ಮತ್ತು ನಿರ್ವಹಣಾ ವೆಚ್ಚಗಳನ್ನು ಅವಲಂಬಿಸಿರುವುದರಿಂದ ಆಸ್ಪತ್ರೆಗಳ ಶುಲ್ಕವನ್ನು
ಸಾರ್ವತ್ರಿಕಗೊಳಿಸಲು ಸಾಧ್ಯವಿಲ್ಲ. ಇವೆಲ್ಲ ಸೌಲಭ್ಯಗಳ ಹಿನ್ನೆಲೆಯಲ್ಲಿ ಆಯಾಯ ಆಸ್ಪತ್ರೆಗಳಿಗೆ ಅನುಸರಿಸುವಂತೆಯೇ
ಚಿಕಿತ್ಸಾ ವೆಚ್ಚವನ್ನು ನಿರ್ಧರಿಸಬೇಕು. ಭಾರತದ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಗುಣಮಟ್ಟ ಪಾಶ್ಚಿಮಾತ್ಯರ ಯಾವುದೇ ದೇಶದ ಚಿಕಿತ್ಸಾ ಗುಣಮಟ್ಟಕ್ಕೆ ಸಮನಾಗಿದ್ದು, ಅಲ್ಲಿನ ಶುಲ್ಕಕ್ಕಿಂತ ೧೦-೨೦ ಪಟ್ಟು ಕಡಿಮೆ ಇದ್ದರೂ ದುಬಾರಿ ಎಂದು ಹೇಳುತ್ತಿರುವು ದಕ್ಕೆ ನಮ್ಮಲ್ಲಿ ಆರೋಗ್ಯ ವಿಮೆ ಜನಪ್ರಿಯವಾಗದಿರುವುದು ಮತ್ತು ನಮ್ಮ ಜನರ ಆರ್ಥಿಕ ಸ್ಥಿತಿಗತಿ ಶೋಚನೀಯವಾಗಿರುವುದು ಕಾರಣವೇ ವಿನಃ ದುಬಾರಿಯಾದ ಶುಲ್ಕವಲ್ಲ.

ಪರಿಹಾರ: ಸರಕಾರ ಶಿಕ್ಷಣ, ಕೈಗಾರಿಕೆ, ಹೋಟೆಲ್‌ಗಳು ಇತ್ಯಾದಿಗಳಿಗೆ ಸಹಾಯಧನ ಮತ್ತು ಅನುದಾನ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೂ ವಾರ್ಷಿಕ ಅನುದಾನ ಮತ್ತು ಸಹಾಯಧನ ನೀಡಿ, ನಿರ್ವಹಣಾ ವೆಚ್ಚ ತಗ್ಗಿಸಿ ಖಾಸಗಿ ಆಸ್ಪತ್ರೆಗಳ ಸೌಲಭ್ಯ ಜನಸಾಮಾನ್ಯರಿಗೆ ತಲುಪುವಂತಾಗಿಸಬೇಕು. ಸರಕಾರ ಮತ್ತು ಖಾಸಗಿಯವರು ಜಂಟಿಯಾಗಿ ಬಂಡವಾಳ ಹೂಡಿ ನಿರ್ವಹಣೆ ಯನ್ನು ಖಾಸಗಿಯವರಿಗೆ ಕೊಟ್ಟು ಮೇಲು ನಿಯಂತ್ರಣವನ್ನು ಸರಕಾರ ನಿರ್ವಹಿಸಬೇಕು.

ಖಾಸಗಿ ಆರೋಗ್ಯ ವಿಮಾ ಕಂಪನಿಗಳ ಜೊತೆಗೂಡಿ ಒಡಂಬಡಿಕೆ ಮಾಡಿಕೊಂಡು ಸಾರ್ವಜನಿಕರೆಲ್ಲರನ್ನೂ ಆರೋಗ್ಯ
ವಿಮೆಗೆ ಒಳಪಡಿಸುವ ಮತ್ತು ವಿಮಾ ಹಣವನ್ನು ಸರಕಾರವೇ ತುಂಬುವ ಯೋಜನೆಯನ್ನು ರೂಪಿಸಿದಲ್ಲಿ ಪಾಶ್ಚಿಮಾತ್ಯ
ದೇಶಗಳಲ್ಲಿ ಆರೋಗ್ಯ ವಿಮೆ ಯಶಸ್ವಿಯಾಗಿರುವಂತೆ ಇಲ್ಲಿಯೂ ಯಶಸ್ವಿಯಾಗಬಹುದು. ಇವುಗಳಲ್ಲಿ ಯಾವುದಾದರೊಂದು ಯೋಜನೆಯ ಜಾರಿ ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಸಂಜೀವಿನಿಯಾಗಬಹುದಲ್ಲವೇ?

ಸರಕಾರಿ ಯೋಜನೆಗಳಿಗೆ ಸೂಕ್ತ ದರ: ಸರಕಾರ ಯಶಸ್ವಿನಿ ಮತ್ತು ಆಯುಷ್ಮಾನ್ ಆರೋಗ್ಯ ಭಾಗ್ಯ ಯೋಜನೆಗಳನ್ನು
ತಂದು ಜನಸಾಮಾನ್ಯರು ಸುಸಜ್ಜಿತ ಆಧುನಿಕ ಆರೋಗ್ಯ ಸೇವೆಯನ್ನು ಖಾಸಗಿ ಆಸ್ಪತ್ರೆಗಳಿಂದ ಪಡೆಯಲು ಅನುವು ಮಾಡಿ ಕೊಟ್ಟಿರುವುದು ಉತ್ತಮ ಬೆಳವಣಿಗೆ. ಆದರೆ ನಿರ್ಧರಿಸಿರುವ ಚಿಕಿತ್ಸಾ ವೆಚ್ಚಗಳು ಅತ್ಯಂತ ಕಡಿಮೆಯದ್ದಾಗಿದ್ದು, ಖಾಸಗಿ ಆಸ್ಪತ್ರೆಗಳಿಗೆ ಅತೀವ ನಷ್ಟ ಉಂಟಾಗುತ್ತದೆ. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ, ಸಾರ್ವಜನಿಕರ ಮತ್ತು ಸರಕಾರದ ಪ್ರತಿನಿಧಿಗಳ ನ್ನೊಳಗೊಂಡ ಸಮಿತಿಯನ್ನು ರಚಿಸಿ ಆಯಾಯ ಆಸ್ಪತ್ರೆಗಳಲ್ಲಿ ಲಭಿಸುವ ಗುಣಮಟ್ಟದ ಸೌಲಭ್ಯಗಳಿಗನುಗುಣವಾಗಿ ಚಿಕಿತ್ಸಾ ದರವನ್ನು ನಿಗದಿಪಡಿಸಬೇಕು.

Read E-Paper click here