Saturday, 21st September 2024

Roopa Gururaj Column: ವಿಶ್ವಕರ್ಮ ಮತ್ತು ಪುರಿ ಜಗನ್ನಾಥ ರಥಗಳ ವೈಶಿಷ್ಟ್ಯ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ವಾಸ್ತುಶಿಲ್ಪದ ಮೂಲ ಕರ್ತೃ ಬ್ರಹ್ಮನ ಮಾನಸ ಪುತ್ರರಲ್ಲಿ, ಧರ್ಮಪ್ರಜಾಪತಿ ಎಂಬುವನಿದ್ದ. ಇವನು ದಕ್ಷ ಪ್ರಜಾ‌ ಪತಿಯ ಹೆಣ್ಣು ಮಕ್ಕಳಲ್ಲಿ ಒಬ್ಬಳಾದ ‘ಕುಸು’ ಎಂಬುವಳನ್ನು ಮದುವೆಯಾದನು. ಇವನಿಗೆ ಎಂಟು ಮಕ್ಕಳಾದರು. ಇವರನ್ನು ಅಷ್ಟವಸುಗಳು ಎನ್ನುತ್ತಾರೆ. ಇವರಲ್ಲಿ ಪ್ರಭಾಸ ಎನ್ನುವವನಿಗೆ ದೇವಗುರು ಬೃಹಸ್ಪತಿ ಮಗಳಾದ ಬ್ರಹ್ಮ ವಾದಿನಿ ಎಂಬುವಳನ್ನು ಕೊಟ್ಟು ಮದುವೆ ಮಾಡಿದನು.

ಇವರಿಗೆ ಹುಟ್ಟಿದ ಮಗ ‘ವಿಶ್ವಕರ್ಮ’. ವಿಶ್ವಕರ್ಮನಿಗೆ ಬಾಲ್ಯದಲ್ಲಿಯೇ ಆಶ್ರಮದಲ್ಲಿ ವಾಸಿಸುವ ಋಷಿಮುನಿಗಳಿಗೆ ಸೊಪ್ಪು ಸದೆಗಳಿಂದ ಕಟ್ಟಿದ ಮನೆಗಳ ಬದಲಾಗಿ ಮಣ್ಣು, ಮರ ಇವುಗಳನ್ನು ಬಳಸಿ ಮನೆ ಕಟ್ಟಿಕೊಟ್ಟರೆ ಹೇಗೆ ಎಂದು ಚಿಂತಿಸುತ್ತಾ ಮುಂದೆ ಅದನ್ನೇ ಮಾಡಿದ. ಚಿಕ್ಕಂದಿನ ಬಂಡಿ, ಗಾಡಿ, ದೋಣಿ, ಹಡಗು, ಪಕ್ಷಿಯಂತೆ ಹಾರುವ ಆಟಿಕೆಗಳನ್ನು ಮಾಡಿ, ಅದರಲ್ಲಿ ಓಡಾಡಿ ಬೆರಗು ಗೊಳಿಸುತ್ತಿದ್ದನು.

ಮುಂದೆ ಇವನು ದೇವಲೋಕ, ಸ್ವರ್ಗಲೋಕಗಳನ್ನು ನಿರ್ಮಿಸಿದನು. ವಿಶ್ವಕರ್ಮನು ಕಟ್ಟಡಗಳ ನಿರ್ಮಾಣ,
ರಥ, ಮಂಟಪ, ಆಯುಧ, ಪ್ರಸಿದ್ಧ ದೇವಸ್ಥಾನಗಳು, ಕಲ್ಲಿನ ಕೆತ್ತನೆಗಳು, ಅಪರೂಪದ ಪುಷ್ಪಕ ವಿಮಾನ ನಿರ್ಮಿಸಿ ದನು. ಎಲ್ಲರೂ ವಿಮಾನದಲ್ಲಿ ಕುಳಿತು ಪೂರ್ತಿಯಾದ ಮೇಲೂ ಮತ್ತೊಬ್ಬರು ಬಂದರೆ ವಿಮಾನವೇ ಹಿಗ್ಗಿ ಸ್ಥಳ ವಾಗುತ್ತಿತ್ತು.

ಸುಂದರವಾದ ಅದ್ಭುತವಾದ ಲೋಕಗಳನ್ನು ನಿರ್ಮಿಸುತ್ತಾ, ದ್ವಾಪರ ಯುಗದಲ್ಲಿ ದ್ವಾರಕಾ ನಗರ ನಿರ್ಮಾಣ ವನ್ನು ವಿಶ್ವಕರ್ಮನೇ ನಿರ್ಮಾಣ ಮಾಡಿದ್ದು. ವಿಶ್ವಕರ್ಮನ ಬಾಲ್ಯದ ಆಶ್ರಮದಲ್ಲಿ ಒಮ್ಮೆ ನೀರಿನಲ್ಲಿ ಕೆಸರಿನಲ್ಲಿ ನಡೆದರರೂ ಒದ್ದೆ ಆಗದಂತ ಪಾದಕೆಗಳನ್ನು, ಒಲೆಯ ಮೇಲಿಟ್ಟು ಬಗೆ ಬಗೆ ಭಕ್ಷ ಮಾಡುವ ಪಾತ್ರೆಯನ್ನೂ, ಎಂದಿಗೂ ಕೊಳೆಯಾಗದ, ಹರಿಯದ, ಒzಯಾಗದ ಸುಂದರವಾದ ರವಿಕೆಯನ್ನು ಗುರು ಪತ್ನಿಗೆ ಮಾಡಿಕೊಡು ತ್ತಿದ್ದನು.

ಭಗವಂತನ ಇನ್ನೊಂದು ರೂಪವೇ ವಿಶ್ವಕರ್ಮ ಎನ್ನುವಷ್ಟರ ಮಟ್ಟಿಗೆ ಅವನ ಪ್ರಸಿದ್ಧಿ ಇತ್ತು. ಮಹಾಭಾರತದಲ್ಲಿ ದ್ವಾರಕಾ ನಗರವನ್ನು ನಿರ್ಮಿಸಿ ಕಲೆಗಳ ಚಕ್ರವರ್ತಿ ಎಂಬ ಬಿರುದನ್ನು ಪಡೆದವನು. ಇಂಥ ವಿಶ್ವಕರ್ಮನ ಮೂಲ ದಿಂದ ಮಯಾಸುರ ನೆಂಬ ರಾಕ್ಷಸ ಬಂದವನೆಂದು ನಂಬಲಾಗಿದೆ.

ಪುರಿ ಜಗನ್ನಾಥ ರಥ ಯಾತ್ರೆಯಲ್ಲಿ ಪ್ರತಿ ವರುಷವೂ ರಥಯಾತ್ರೆಗಾಗಿ ಹೊಸ ರಥವನ್ನೇ ಮಾಡುತ್ತಾರೆ. ಅದೂ ಮೂರು ರಥಗಳು. ರಥ ತಯಾರಿಕೆಗೆ ಪ್ರತ್ಯೇಕ ಜಾತಿಯ ಮರಗಳನ್ನು ಬಳಸುತ್ತಾರೆ. ಕಬ್ಬಿಣ ಅಥವಾ ಯಾವುದೇ ಲೋಹಗಳನ್ನು ರಥ ನಿರ್ಮಾಣಕ್ಕೆ ಬಳಸುವುದಿಲ್ಲ ‘ವಸಂತ ಪಂಚಮಿ’ ದಿನ ರಥಕ್ಕೆ ಬೇಕಾಗುವ ಮರದ ಆಯ್ಕೆ ಮಾಡಿದರೆ, ಪವಿತ್ರ ದಿನವಾದ ಅಕ್ಷಯ ತದಿಗೆಯಂದು ರಥವನ್ನು ತಯಾರಿಸುವ ಕೆಲಸ ಆರಂಭ ಮಾಡುತ್ತಾರೆ.

ವಂಶಪಾರಂಪರ್ಯವಾಗಿ ಬಂದ ವಿಶ್ವಕರ್ಮ ಬಡಗಿಗಳೇ ರಥಕ್ಕೆ ಬೇಕಾದ ಮರಮುಟ್ಟುಗಳನ್ನು ತರುತ್ತಾರೆ. ಈ ಬಡಗಿಗಳು ವಿಶೇಷ ಗೌರವಕ್ಕೆ ಪಾತ್ರರಾಗಿರುತ್ತಾರೆ. ಪೂರ್ವದಲ್ಲಿ ರಾಜ ಇಂದ್ರದ್ಯುಮ್ನನು ‘ನೀಲ ಮಾಧವನ’ ಕುರಿತು ತಪಸ್ಸು ಮಾಡಿದಾಗ ಕೃಷ್ಣನು ಅನುಗ್ರಹಿಸಿದನು. ಸಮುದ್ರದಲ್ಲಿ ತೇಲಿಬರುವ ಮರದ ದಿಮ್ಮಿಯಿಂದ ಸಾಕ್ಷಾತ್
ವಿಶ್ವಕರ್ಮನೇ ಬಂದು ಜಗನ್ನಾಥ- ಬಲಬದ್ರ- ಸುಭದ್ರ ದೇವಿಯರ ವಿಗ್ರಹಗಳನ್ನು ಕಡೆಯುತ್ತಿದ್ದಾಗ ನಡುವೆ ಮಾತಿಗೆ ತಪ್ಪಿ ನಡೆದ ಕಾರಣ ಅರ್ಧ ಭಾಗ ಮಾತ್ರ ಆಗಿತ್ತು.

ನಾರದರ ಸಲಹೆಯ ಮೇರೆಗೆ ಅವೇ ವಿಗ್ರಹಗಳನ್ನು (ನಾರದರೇ) ಪ್ರತಿಷ್ಠಾಪನೆ ಮಾಡಿದರು. ಅದೇ ಪದ್ಧತಿಯನ್ನು ಮುಂದುವರೆಸಿಕೊಂಡು ರಥಗಳನ್ನು ತಯಾರಿಸಲು ಈಗಲೂ ಸಹ ಮರದ ದಿಮ್ಮಿಗಳನ್ನು ‘ಮಹಾನದಿ’ ಎಂಬ ನದಿಯಲ್ಲಿ ತೆಪ್ಪಗಳ ರೀತಿ ಕಟ್ಟಿ ಸಾಂಪ್ರದಾಯಿಕವಾಗಿ ತೇಲಿಬಿಡುತ್ತಾರೆ. ಆನಂತರ ರಸ್ತೆ ಮಾರ್ಗದಿಂದ ಸಾಗಣೆ ಮಾಡುತ್ತಾರೆ. ಇಂತಹ ಶ್ರೇಷ್ಠ ಪರಂಪರೆ ನಮ್ಮ ಭರತ ಭೂಮಿಯದ್ದು. ಇಂತಹ ಪಾರಂಪರಿಕ ವೈಶಿಷ್ಟ್ಯತೆಗಳನ್ನು ತಿಳಿದುಕೊಂಡು ಅಂತಹ ಸ್ಥಳಗಳಿಗೆ ಭೇಟಿ ಕೊಟ್ಟು, ಅವುಗಳನ್ನು ಕಣ್ಣಾರೆ ಕಂಡು ಧನ್ಯರಾಗೋಣ.

ಪ್ರವಾಸ ಹೋಗುವುದೆಂದರೆ ಯಾವುದೋ ಒಂದು ರೆಸಾರ್ಟಿಗೆ ಹೋಗಿ 3-4 ದಿನಗಳ ಕಾಲ ಕೋಣೆಯಲ್ಲಿ ಕಳೆದು ಹೋಗುವುದಲ್ಲ. ಇಂತಹ ಭವ್ಯ ಇತಿಹಾಸವಿರುವ ನಮ್ಮ ಭರತ ಭೂಮಿಯನ್ನ ಇಂಚಿಂಚು ನೋಡಿ, ಕೃತಾರ್ಥ ರಾಗಲು ಏಳು ಜನ್ಮ ಎತ್ತಿ ಬರಬೇಕು.

ಇದನ್ನೂ ಓದಿ: Roopa_Gururaj_Column: ಸಕಲ ಜೀವರಾಶಿಗಳಲ್ಲೂ ಭಗವಂತನ ಇರುವಿಕೆ