Saturday, 27th July 2024

ಶಾಮನೂರರ ಬಾಂಬು ಢಂ ಎನ್ನಲಿಲ್ಲ

ಮೂರ್ತಿಪೂಜೆ

ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಕಿದ ‘ಸ್ಮೆಲ್ ಬಾಂಬು’ ಕೊನೆಗೂ ಸಿಡಿಯದೆ ತಣ್ಣಗಾಗಿದೆ. ‘ಸಿದ್ದರಾಮಯ್ಯರ ಸರಕಾರದಲ್ಲಿ ಲಿಂಗಾಯತ ಅಽಕಾರಿಗಳಿಗೆ ಅನ್ಯಾಯವಾಗುತ್ತಿದೆ. ಅವರಿಗೆ ಸರಿಯಾದ ಪೋಸ್ಟಿಂಗು ಸಿಗುತ್ತಿಲ್ಲ’ ಅಂತ ಅವರು ಹಾಕಿದ ಬಾಂಬು ಡೆಡ್ಲಿಯಾಗಿ ಕಾಣಿಸಿದ್ದೇನೋ ನಿಜ. ಆದರೆ
ನಿರೀಕ್ಷೆಯಂತೆ ಸ್ಪೋಟಿಸದಿರುವುದಕ್ಕೆ ಅದು ಗಟ್ಟಿನೆಲದ ಬದಲು ಮಿದುನೆಲದ ಮೇಲೆ ಬಿದ್ದಿದ್ದೇ ಕಾರಣ. ಅರ್ಥಾತ್, ಸರಕಾರಿ ನೌಕರರ ಪೋಸ್ಟಿಂಗುಗಳ ವಿಷಯದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎನ್ನಲು ದೊಡ್ಡ ಮಟ್ಟದ ಎವಿಡೆನ್ಸು ಗಳು ಇದುವರೆಗೆ ಸಿಗುತ್ತಿಲ್ಲ.

ಮೇಲುಹಂತದ ಉದಾಹರಣೆ ನೋಡುವುದಾದರೆ, ವಿವಿಧ ಇಲಾಖೆಗಳಡಿ ಬರುವ ೨೮ ಮುಖ್ಯ ಎಂಜಿನಿಯರು ಗಳ ಪೈಕಿ ೯ ಮಂದಿ ಲಿಂಗಾಯತರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬೆಂಗಳೂರಿನ ಡಿಸಿಪಿಗಳ ಪಟ್ಟಿ ತೆಗೆದರೆ ಅದರಲ್ಲಿ ೭ ಮಂದಿ ಲಿಂಗಾಯತರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿಗಳ ಪಟ್ಟಿ ತೆಗೆದರೆ ಅದರಲ್ಲಿ ೪ ಮಂದಿ ಲಿಂಗಾಯತರು ಕಾಣಿಸುತ್ತಾರೆ. ರಾಜ್ಯದ ಅಸಿಸ್ಟೆಂಟ್ ಕಮಿಷನರುಗಳ ಪಟ್ಟಿ ತೆರೆದಿಟ್ಟುಕೊಂಡರೆ ೯ ಮಂದಿ, ಜಿಲ್ಲಾಧಿಕಾರಿಗಳ ಪೈಕಿ ೩ ಮಂದಿ ಲಿಂಗಾಯತ ಅಧಿಕಾರಿಗಳಿದ್ದಾರೆ. ರಾಜ್ಯದ ೪೧ ವಿಶ್ವವಿದ್ಯಾಲಯಗಳ ಪೈಕಿ ೧೩ರಲ್ಲಿ ಲಿಂಗಾಯತರು ಉಪಕುಲಪತಿಗಳಾಗಿದ್ದರೆ, ೮ ಮಂದಿ ಒಕ್ಕಲಿಗರು, ೮ ಮಂದಿ ಬ್ರಾಹ್ಮಣರು, ೫ ಮಂದಿ ಪರಿಶಿಷ್ಟ ಜಾತಿಯವರು, ೬ ಮಂದಿ ಹಿಂದುಳಿದ ವರ್ಗದವರು ಮತ್ತು ಪರಿಶಿಷ್ಟ ಪಂಗಡದ ಒಬ್ಬರು ಉಪಕುಲಪತಿ ಗಳಾಗಿದ್ದಾರೆ.

ಶಾಮನೂರರ ಭದ್ರಕೋಟೆಯಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ, ‘ಧೂಡಾ’ ಕಮಿಷನರ್, ಆಹಾರ ಇಲಾಖೆಯ ಡೆಪ್ಯುಟಿ ಡೈರೆಕ್ಟರ್, ತಹಸೀಲ್ದಾರ್, ಜಿಲ್ಲಾ ಸರ್ಜನ್ ಸೇರಿದಂತೆ ಬಹುತೇಕ ಆಯಕಟ್ಟಿನ ಹುದ್ದೆ ಗಳಲ್ಲಿ ಲಿಂಗಾಯತರು ಕುಳಿತಿದ್ದಾರೆ. ಹೀಗೆ ಲಿಂಗಾಯತರಿಗೆ ಸಿಕ್ಕಿರುವ ಪ್ರಾಮಿನೆನ್ಸು ಢಾಳಾಗಿ ರಾಚುತ್ತಿರುವುದರಿಂದಲೇ
ಶಾಮನೂರರ ಅರೋಪಕ್ಕೆ ಫೋರ್ಸು ಸಿಗುತ್ತಿಲ್ಲ. ಇಷ್ಟಾದರೂ ಲಿಂಗಾಯತ ಅಽಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಅವರ ಕೂಗು ಶುರುವಿನಲ್ಲಿ ಕಾಂಗ್ರೆಸ್ ಪಾಳಯವನ್ನು ಕಂಗಾಲು ಮಾಡಿದ್ದು ನಿಜ.

ಯಾಕೆಂದರೆ ೩೦ ವರ್ಷಗಳ ಹಿಂದೆ ಕೈ ಪಾಳಯದಿಂದ ವಲಸೆ ಹೋಗಿದ್ದ ಲಿಂಗಾಯತರು ಇತ್ತೀಚೆಗಷ್ಟೇ ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಬಿಜೆಪಿಯಲ್ಲಿ
ಯಡಿಯೂರಪ್ಪ ಅವರಿಗಾದ ಅವಮಾನವೇ ಇದಕ್ಕೆ ಕಾರಣ. ಶತಾಯಗತಾಯ ಹೋರಾಡಿ ೨೦೧೯ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಮೋದಿ- ಅಮಿತ್ ಶಾ ಜೋಡಿ ೨೦೨೧ರಲ್ಲಿ ಬಲವಂತವಾಗಿ ಸಿಎಂ ಹುದ್ದೆಯಿಂದ ಕೆಳಗಿಳಿಸಿತು. ವಿಧಾನಸಭಾ ಚುನಾವಣೆ ಹತ್ತಿರ ಬಂದಾಗ ಬಿಜೆಪಿಯಲ್ಲಿ ಸೆಟ್ಲಾದ ನಾಯಕರೊಬ್ಬರು ‘ನಮಗೆ ಲಿಂಗಾಯತರ ವೋಟು ಅನಿವಾರ್ಯವಲ್ಲ’ ಎಂದು ಬಿಟ್ಟರು. ಪರಿಣಾಮ? ಈ ಬೆಳವಣಿಗೆಗಳು ಪ್ರಬಲ ಲಿಂಗಾ
ಯತ ಸಮುದಾಯ ಸಿಡಿದೇಳುವಂತೆ ಮಾಡಿದ್ದಲ್ಲದೆ, ಕಾಂಗ್ರೆಸ್ ಕಡೆ ವಲಸೆ ಹೋಗಿ ಬಿಜೆಪಿಗೆ ಷಾಕ್ ಟ್ರೀಟ್ ಮೆಂಟ್ ಕೊಡುವಂತೆ ಮಾಡಿತು.

ವಸ್ತುಸ್ಥಿತಿ ಎಂದರೆ ೧೯೬೯ ವರೆಗೆ ಕಾಂಗ್ರೆಸ್ ಜತೆಯಿದ್ದ ಕರ್ನಾಟಕದ ಲಿಂಗಾಯತರು, ಕಾಂಗ್ರೆಸ್ ವಿಭಜನೆಯಿಂದ ಬೇಸತ್ತು ಜನತಾ ಪರಿವಾರದ ಕಡೆ ಹೊರಳಿದರು. ೧೯೮೯ರವರೆಗೂ ಅಲ್ಲೇ ಇದ್ದ ಈ ಸಮುದಾಯದ ಗಣನೀಯ ಮತಗಳು ವೀರೇಂದ್ರ ಪಾಟೀಲರ ಕಾರಣದಿಂದಾಗಿ ೧೯೮೯ರಲ್ಲಿ ಕಾಂಗ್ರೆಸ್ ಜತೆ
ನಿಂತವು. ೧೯೯೪ರಲ್ಲಿ ಜನತಾದಳದ ಕಡೆ ಹೋದ ಸಮುದಾಯ ರಾಮಕೃಷ್ಣ ಹೆಗಡೆ ಅವರ ಉಚ್ಚಾಟನೆಯ ನಂತರ ಜನತಾದಳ ತೊರೆದು ಲೋಕಶಕ್ತಿಯ ಜತೆ, ಆ ಮೂಲಕ ಬಿಜೆಪಿಯ ಕಡೆ ಹೊರಳಿತು. ಇದಕ್ಕೆ ೨ ಕಾರಣಗಳಿದ್ದವು.

ಮೊದಲನೆಯದಾಗಿ ತಮ್ಮ ನೆಚ್ಚಿನ ನಾಯಕ ಹೆಗಡೆಯವರು ತೀರಿಕೊಂಡ ನಂತರ ಲಿಂಗಾಯತರಿಗೆ ಪರ್ಯಾಯ ವೇದಿಕೆ ಬೇಕಿತ್ತು. ಈ ವೇಳೆ ಅವರಿಗೆ ಭರವಸೆಯಂತೆ ಕಾಣಿಸಿದವರು ಬಿಜೆಪಿಯಲ್ಲಿದ್ದ ಯಡಿಯೂರಪ್ಪ. ಹೀಗೆ ಕಮಲ ಪಾಳಯದ ಕಡೆ ಬಂದ ಲಿಂಗಾಯತ ಸಮುದಾಯವನ್ನು ಸುದೀರ್ಘ
ಕಾಲ ಅಲ್ಲೇ ಉಳಿಸಿಕೊಂಡ ಯಡಿಯೂರಪ್ಪ, ಕರ್ನಾಟಕದ ನೆಲೆಯಲ್ಲಿ ಬಿಜೆಪಿ ಪದೇ ಪದೆ ಅಧಿಕಾರ ಹಿಡಿಯುವಂತೆ ನೋಡಿಕೊಂಡರು. ಆದರೆ ಅವರನ್ನು ಬಲವಂತವಾಗಿ ಕೆಳಗಿಳಿಸಿದಾಗ ಲಿಂಗಾಯತರು ಮೆಲ್ಲಗೆ ಕಾಂಗ್ರೆಸ್ ಕಡೆ ವಾಲಿದರು.

ಅಂಥ ಲಿಂಗಾಯತ ವರ್ಗ ಇನ್ನೂ ಕಾಂಗ್ರೆಸ್‌ನಲ್ಲಿ ಸೆಟ್ಲಾ ಗುವ ಮುನ್ನವೇ ಶಾಮನೂರರು ಬಾಂಬು ಎಸೆದಾಗ ಸಹಜವಾಗಿಯೇ ಕಾಂಗ್ರೆಸ್ ಕಂಗಾಲಾಯಿತು. ಎಷ್ಟಾದರೂ ಪಾರ್ಲಿಮೆಂಟ್ ಚುನಾವಣೆ ಹತ್ತಿರದಲ್ಲೇ ಇದೆ. ಇಂಥ ವೇಳೆ ತಮ್ಮ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಮೆಸೇಜು ಲಿಂಗಾಯತ ಸಮುದಾಯಕ್ಕೆ ಹೋದರೆ ತನಗೆ ದೊಡ್ಡ ಹಾನಿಯಾಗಬಹುದು ಎಂಬುದು ಕಾಂಗ್ರೆಸ್‌ನ ಆತಂಕ.

ಶಾಮನೂರರು ಸಿಟ್ಟಿಗೆದ್ದಿದ್ದೇಕೆ?
ಇತ್ತೀಚಿನವರೆಗೂ ಸುಮ್ಮನಿದ್ದ ಶಾಮನೂರರು ಇದ್ದಕ್ಕಿದ್ದಂತೆ, ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೂಗು ಹಾಕಲು ಕಾರಣವೇನು? ಎಂಬ ಪ್ರಶ್ನೆ ಮುಂದಿಟ್ಟು ಕೊಂಡು ಕೈ ಪಾಳಯಕ್ಕೆ ನುಗ್ಗಿದರೆ ಇಂಟರೆಸ್ಟಿಂಗ್ ವಿಷಯಗಳು ಕೇಳಿಬರುತ್ತವೆ. ಅದರ ಪ್ರಕಾರ, ‘ದಾವಣಗೆರೆ ಧಣಿ’ ಬಿರುದಾಂಕಿತ ಶಾಮನೂರರಿಗೆ ಇಂಧನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಾಂತೇಶ್ ಎಂಬ ಅಧಿಕಾರಿಯನ್ನು ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ತಂದುಕೊಳ್ಳುವ ಇಚ್ಛೆ ಇತ್ತಂತೆ. ಹಾಗಂತಲೇ ಅವರು ಸಿದ್ದರಾಮಯ್ಯರಿಗೆ ಮೆಸೇಜು ಮುಟ್ಟಿಸಿದ್ದಾರೆ. ಆದರೆ ಅದು ವರ್ಕ್‌ಔಟ್ ಆಗಿಲ್ಲ. ಇದೇ ರೀತಿ ಕುವೆಂಪು ವಿಶ್ವವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಗಳಿಗೆ ತಾವು ಹೇಳಿದವರನ್ನು ಉಪ ಕುಲಪತಿಗಳನ್ನಾಗಿ ನೇಮಿಸಬೇಕು ಅಂತ ಶಾಮನೂರರು
ಹೇಳಿದ್ದರಂತೆ, ಅದು ಕೂಡಾ ಇಂಪ್ಲಿಮೆಂಟ್ ಆಗಿಲ್ಲ.

ಯಾವಾಗ ತಾವು ಹೇಳಿದ್ದ ಈ ಮೂರು ಕೆಲಸಗಳು ಆಗಲಲ್ಲವೋ, ಸಹಜವಾಗಿಯೇ ಶಾಮನೂರರ ಕೋಪ ನೆತ್ತಿಗೇರಿದೆ. ಹಾಗಂತಲೇ ಸಿಡಿದೆದ್ದು, ‘ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ’ ಅಂತ ಬಾಂಬು ಎಸೆದಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ಸಿಎಂ ಆದವರು ಆಡಳಿತ ಯಂತ್ರ ತಮಗೆ ಅನುಕೂಲವಾಗುವಂತೆ ಸಾಫ್ಟ್ ಮಾಡಿಟ್ಟು ಕೊಳ್ಳುತ್ತಾರೆ. ಈ ಪರಿಪಾಠಕ್ಕೆ ಸಿದ್ದರಾಮಯ್ಯ ಹೊರತೇನಲ್ಲ.
ಕಾರಣ? ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ನಾಯಕರು, ಸರಕಾರದ ಆಯಕಟ್ಟಿನ ಹುದ್ದೆಗಳಲ್ಲಿ ತಮಗೆ ಬೇಕಾದವರನ್ನು ತಂದು ಕೂರಿಸಿದ್ದರು. ಅದು ಅನಿವಾರ್ಯ ಕೂಡಾ.

ಯಾಕೆಂದರೆ ಅವರಿಗಿಂತ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್, ತನ್ನ ಅನುಕೂಲಕ್ಕೆ ತಕ್ಕಂಥ ಅಧಿಕಾರಿಗಳನ್ನು ಹಾಗೆಯೇ ಕೂರಿಸಿತ್ತು. ಈಗ ಕಾಂಗ್ರೆಸ್ ಸರದಿ. ಅದರೆ, ಬಿಜೆಪಿ ಅವಧಿಯಲ್ಲಿ ಹೀಗೆ ಆಯಕಟ್ಟಿನ ಜಾಗಗಳಲ್ಲಿ ಕುಳಿತ ಅಧಿಕಾರಿ ಗಳನ್ನು ಸಿದ್ದರಾಮಯ್ಯ ಅಲ್ಲೇ ಮುಂದುವರಿಸಬೇಕು, ಆಡಳಿತ ನಡೆಸಬೇಕು ಎಂಬುದು ತಪ್ಪು. ಯಾಕೆಂದರೆ ಹಿಂದಿದ್ದ ಬಿಜೆಪಿ ಸರಕಾರ ಕೂಡಾ ಆಯಕಟ್ಟಿನ ಜಾಗಗಳಲ್ಲಿದ್ದ ವರನ್ನು ಎತ್ತಂಗಡಿ ಮಾಡಿಯೇ ತನಗೆ ಬೇಕಾದ ಆಡಳಿತ
ಯಂತ್ರವನ್ನು ರೆಡಿ ಮಾಡಿಕೊಂಡಿತ್ತಲ್ಲ? ಇವತ್ತು ಸಿದ್ದರಾಮಯ್ಯ ಕೂಡಾ ಇದನ್ನು ಮಾಡುತ್ತಿದ್ದಾರೆ. ಈ ಪ್ರಕ್ರಿಯೆ ಯಲ್ಲಿ ಕೆಲ ಲಿಂಗಾಯತ ಅಽಕಾರಿಗಳಿಗೆ ಆಯಕಟ್ಟಿನ ಹುದ್ದೆಗಳು ತಪ್ಪಬಹುದು. ಅದರರ್ಥ, ಹೋಲ್‌ಸೇಲಾಗಿ ಅವರಿಗೆ ಅನ್ಯಾಯವಾಗಿದೆ ಅಂತಲ್ಲ.

ವಸ್ತುಸ್ಥಿತಿಯೆಂದರೆ ಬಿಜೆಪಿ ಸರಕಾರ ಕೆಳಗಿಳಿದು ತಾವು ಸಿಎಂ ಹುದ್ದೆಗೇರುವ ಗಳಿಗೆ ಹತ್ತಿರವಾಗುತ್ತಿದ್ದಂತೆಯೇ ಸರಕಾರದ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್‌ಮೆಂಟಿನಲ್ಲಿ ಸೆಟ್ಲಾಗಿದ್ದ ಲಿಂಗಾಯತ ಅಧಿಕಾರಿಗಳ ಸಂಖ್ಯೆ ನೋಡಿ ಸಿದ್ದರಾಮಯ್ಯ ಹೌಹಾರಿದ್ದರಂತೆ. ಇದಕ್ಕೆ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕಾರಣ ಎಂಬುದು ರಹಸ್ಯ ವೇನಲ್ಲ. ಈಗಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಅಹಿಂದ ಸಮುದಾಯಗಳ ಅಧಿಕಾರಿಗಳಿಗೆ ಆದ್ಯತೆ ಸಿಗತೊಡಗಿದ್ದರೆ
ಅದು ಸಹಜವೇ. ಹೀಗೆ ಅವರಿಗೆ ಒಂದಷ್ಟು ಪ್ರಾಮಿನೆನ್ಸು ನೀಡಲಾಗುತ್ತಿದೆ ಎಂದರೂ, ಒಟ್ಟಾರೆಯಾಗಿ ನೋಡಿದರೆ ಅಲ್ಲಿ ಪ್ರಬಲ ವರ್ಗಗಳ ಪಾಲು ಗಣನೀಯವಾಗಿಯೇ ಇದೆ.

ಯಾಕೆಂದರೆ, ಈ ಹಿಂದೆ ಅಽಕಾರಕ್ಕೆ ಬಂದು ಕುಳಿತಿದ್ದ ನಾಯಕರು ತಮ್ಮ ತಮ್ಮ ವರ್ಗಗಳಿಗೆ ದೊಡ್ಡ ಮಟ್ಟದ ಪ್ರಾಮಿನೆನ್ಸು ನೀಡಿದ್ದಾರೆ. ಸರಕಾರದ ಆಯಕಟ್ಟಿನ
ಹುದ್ದೆಗಳಲ್ಲಿ ಕುಳಿತವರ ಪಟ್ಟಿ ನೋಡಿದರೆ ಇದು ಸ್ಪಷ್ಟವಾಗುತ್ತದೆ. ತಕರಾರೇನಿದ್ದರೂ ಈ ವರ್ಗಗಳ ತಳದಲ್ಲಿರುವವರಿಂದ ಬರಬೇಕು ಅಷ್ಟೇ. ಯಡಿಯೂರಪ ಬೇಸ್ತುಬಿದ್ದಿದ ರು ಅಽಕಾರ ಹಿಡಿದಾಗ ತಮಗೆ ಬೇಕಾದಂತೆ ಆಡಳಿತ ಯಂತ್ರ ವನ್ನು ಸಜ್ಜುಮಾಡಿಕೊಳ್ಳದ ಕಾರಣಕ್ಕೆ ಬೇಸ್ತುಬಿದ್ದವರು ಯಡಿಯೂರಪ್ಪ ಮಾತ್ರ. ೨೦೦೮ರಲ್ಲಿ ಅವರು ಸಿಎಂ ಆದಾಗ ಅವರ ಆಪ್ತರು ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಹಲವು ಅಧಿಕಾರಿಗಳ ಹೆಸರುಗಳಿದ್ದ ಪಟ್ಟಿಯೊಂದನ್ನು ತಂದು
ಮುಂದಿಟ್ಟಿದ್ದರಂತೆ.

ಅದನ್ನು ನೋಡಿದ ಯಡಿಯೂರಪ್ಪ ನವರು ‘ಇದೇನು?’ ಅಂತ ಕೇಳಿದಾಗ, ‘ಎಚ್.ಡಿ.ದೇವೇಗೌಡರ ಕುಟುಂಬದವರಿಗೆ ಹತ್ತಿರದವರಾದ ಇವರೆಲ್ಲ ಸರಕಾರದ ಆಯಕಟ್ಟಿನ ಹುದ್ದೆಗಳಲ್ಲಿದ್ದಾರೆ. ಹೀಗಾಗಿ ಇವರನ್ನು ಎತ್ತಂಗಡಿ ಮಾಡಿ ಅಲ್ಲಿ ನಮಗೆ ನಿಷ್ಠರಾದವರನ್ನು ಕೂರಿಸಬೇಕು’ ಎಂದರಂತೆ. ಆದರೆ ಯಡಿಯೂರಪ್ಪ, ‘ಯೇ, ಅವರೆಲ್ಲ ಏನು ಮಾಡುತ್ತಾರೆ? ಎಷ್ಟಾದರೂ ಅವರು ಸರಕಾರದ ಅಧಿಕಾರಿಗಳು. ಅವರಿದ್ದಾಗ ಅವರಿಗೆ ಬೇಕಾದಂತೆ, ನಾವಿದ್ದಾಗ ನಮಗೆ ಬೇಕಾದಂತೆ ಕೆಲಸ ಮಾಡುತ್ತಾರೆ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ’ ಎಂದುಬಿಟ್ಟರು.

ಮುಂದೆ ಕೆಲಕಾಲದಲ್ಲೇ ತಮ್ಮ ಸರಕಾರದ ವಿರುದ್ದ ಎಚ್ .ಡಿ.ಕುಮಾರಸ್ವಾಮಿ ಮುಗಿಬೀಳುತ್ತಿದ್ದ ರೀತಿ ನೋಡಿ ಯಡಿಯೂರಪ್ಪ ಕಂಗಾಲಾದರಂತೆ. ಯಾಕೆಂದರೆ ಸರಕಾರದ ಮಟ್ಟದಲ್ಲಿ ಯಾವುದೇ ತೀರ್ಮಾನವಾದರೂ ಅದರ ವಿವರ ಕುಮಾರಸ್ವಾಮಿ ಅವರ ಕೈಲಿರುತ್ತಿತ್ತು! ಈ ವಿಸ್ಮಯದ ಕುರಿತು ತಮ್ಮ ಆಪ್ತರನ್ನು ಯಡಿಯೂರಪ್ಪ ಪ್ರಶ್ನಿಸಿದಾಗ, ‘ಸರ್, ಈ ವಿಷಯದ ಬಗ್ಗೆ ಹಿಂದೆಯೇ ನಿಮ್ಮ ಗಮನ ಸೆಳೆದಿದ್ದೆವು. ಆದರೆ ನೀವು ಅದು ದೊಡ್ಡ ವಿಷಯವಲ್ಲ ಎಂದಿರಿ. ಆದರೆ
ಇವತ್ತು ನಿಮ್ಮ ಯಾವುದೇ ತೀರ್ಮಾನ ಅಽಕೃತ ಸರಕಾರಿ ಆದೇಶವಾಗಿ ಪ್ರಕಟವಾದರೆ, ಅದು ಮುದ್ರಿತವಾಗುತ್ತಿದ್ದಂತೆಯೇ ಒಂದು ಪ್ರತಿ ದೇವೇಗೌಡರ ಕುಟುಂಬದವರಿಗೆ ತಲುಪುತ್ತದೆ’ ಎಂದರಂತೆ. ಈ ಮಾತು ಕೇಳುತ್ತಿದ್ದಂತೆ ಯಡಿ ಯೂರಪ್ಪ ಆಡಳಿತ ಯಂತ್ರಕ್ಕೆ ಸರ್ಜರಿ ಶುರುಮಾಡಿದರು.

ಹೀಗಾಗಿ ಆಡಳಿತಗಾರರು ತಮಗೆ ಬೇಕಾದವರು ಯಾರೆಂದು ನಿರ್ಧರಿಸಿ ಆಯಕಟ್ಟಿನ ಹುದ್ದೆಗಳಲ್ಲಿ ತಂದು ಕೂರಿಸಿರುತ್ತಾರೋ, ಅವರಲ್ಲಿ ಬಹುತೇಕರು ಹೊಸ ಸರಕಾರ ಬಂದಾಗ ಬೇರೆಡೆಗೆ ವರ್ಗವಾಗಿ ಹೋಗುತ್ತಾರೆ. ಈಗ ಆಗುತ್ತಿರುವುದೂ ಅದೇ. ಶಾಮನೂರರು ಎಸೆದ ಬಾಂಬು ‘ಢಂ’ ಅನ್ನದೇ ಇದ್ದರೆ ಅದಕ್ಕೆ ಇದೇ ಮುಖ್ಯಕಾರಣ. ಹಾಗಂತ ಅದು ಆರಿಹೋಗಿದೆ ಅಂತಲೂ ಅಲ್ಲ. ಒಂದೊಮ್ಮೆ ಅದು ಆರದೇಹೋದರೆ ಅರಸರ ಕಾಲದಲ್ಲಾದ ಜಾತಿ ಸಂಘರ್ಷ ಪುನರಾವರ್ತನೆಯಾಗುವುದು ನಿಶ್ಚಿತ.

Leave a Reply

Your email address will not be published. Required fields are marked *

error: Content is protected !!