ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡಿಎನ್‌ಎ ಎಡವಿದ್ದೇ ಕಾಲ್ತುಳಿತ ದುರಂತಕ್ಕೆ ಕಾರಣ ?

ದುರಂತಕ್ಕೆ ಪೂರ್ವ ಸಿದ್ಧತೆಗಳ ಕೊರತೆಯ ಜತೆಗೆ ತಪ್ಪು ಮಾಹಿತಿಗಳನ್ನು ಹರಿಯಬಿಟ್ಟಿದ್ದು ಕಾರಣ ಇರಬಹುದೇ ಎನ್ನುವ ಅಂಶಗಳನ್ನು ಮುಂದಿಟ್ಟು ತನಿಖೆಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಐಪಿಎಲ್ ಇವೆಂಟ್ ನಿರ್ವಹಿಸುವ ಮತ್ತು ಅದರ ಟಿಕೇಟ್, ಪಾಸ್ ವ್ಯವಹಾರ ನಿರ್ವಹಿಸುವ ಡಿಎನ್‌ಎ ಸಂಸ್ಥೆಯ ಕಡೆಗೆ ತನಿಖಾ ಸಂಸ್ಥೆಗಳು ಹೆಚ್ಚು ಗಮನ ನೀಡಿವೆ ಎನ್ನಲಾಗಿದೆ.

ಡಿಎನ್‌ಎ ಎಡವಿದ್ದೇ ಕಾಲ್ತುಳಿತ ದುರಂತಕ್ಕೆ ಕಾರಣ ?

Profile Ashok Nayak Jun 28, 2025 11:28 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಬದಲಾದ ಮೂರು ವಿಚಾರಣೆಗಳ ಆಯಾಮ

ಆರ್‌ಸಿಬಿ ಅವಾಂತರದ ಶಂಕೆ

ವರದಿ ಸಲ್ಲಿಕೆ ಶೀಘ್ರ

ದೇಶವೇ ಬೆಚ್ಚಿ ಬಿದ್ದು ಕಂಬನಿ ಮಿಡಿದಿದ್ದ 11 ಮಂದಿ ಬಲಿಯಾದ ಐಪಿಎಲ್ ಸಂಭ್ರಮಾಚರಣೆ ದುರಂತ ಜನಮಾನಸದಿಂದ ಮಾಸಿ ಹೋಗುತ್ತಿದೆ ಎನ್ನುವಾಗಲೇ ವಿವಿಧ ತನಿಖಾ ಸಂಸ್ಥೆಗಳ ಆಯಾಮ ಬದಲಾಗುತ್ತಿದೆ. ಒಂದು ದುರಂತ-ನಾಲ್ಕು ವಿಚಾರಣೆಗಳು ಎನ್ನುವಂತಾಗಿದ್ದು, ಒಂದನ್ನು ಬಿಟ್ಟು ಮೂರು ವಿಚಾರಣೆಗಳ ಆಯಾಮ ಈಗ ಡಿಎನ್‌ಎ ಮತ್ತು ಆರ್‌ಸಿಬಿ ಕಡೆ ತಿರುಗಿದೆ ಎಂದು ಗೊತ್ತಾಗಿದೆ.

ದುರಂತಕ್ಕೆ ಪೂರ್ವ ಸಿದ್ಧತೆಗಳ ಕೊರತೆಯ ಜತೆಗೆ ತಪ್ಪು ಮಾಹಿತಿಗಳನ್ನು ಹರಿಯಬಿಟ್ಟಿದ್ದು ಕಾರಣ ಇರಬಹುದೇ ಎನ್ನುವ ಅಂಶಗಳನ್ನು ಮುಂದಿಟ್ಟು ತನಿಖೆಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಐಪಿಎಲ್ ಇವೆಂಟ್ ನಿರ್ವಹಿಸುವ ಮತ್ತು ಅದರ ಟಿಕೇಟ್, ಪಾಸ್ ವ್ಯವಹಾರ ನಿರ್ವಹಿಸುವ ಡಿಎನ್‌ಎ ಸಂಸ್ಥೆಯ ಕಡೆಗೆ ತನಿಖಾ ಸಂಸ್ಥೆಗಳು ಹೆಚ್ಚು ಗಮನ ನೀಡಿವೆ ಎನ್ನಲಾಗಿದೆ.

ಹಾಗೆಯೇ ಈ ಸಂಭ್ರಮಾಚರಣೆಯನ್ನು ತನ್ನ ವ್ಯವಹಾರಕ್ಕೆ ಬಳಸಿಕೊಳ್ಳುವ ಉಮೇದಿನಲ್ಲಿ ಗೊಂದಲ ಮಾಹಿತಿಗಳನ್ನು ಹರಿಯ ಬಿಟ್ಟು ದುರಂತಕ್ಕೆ ದಾರಿ ಮಾಡಿತೇ ಎನ್ನುವ ಶಂಕೆಗಳೊಡನೆ ತನಿಖಾ ಸಂಸ್ಥೆಗಳು ಮುನ್ನಡೆಯುತ್ತಿವೆ.

ಇದನ್ನೂ ಓದಿ: Roopa Gururaj Column: ನವಗುಂಜರದ ಭಕ್ತಿ ಸಾರ

ಇದರ ಜತೆಗೆ ಐಪಿಎಲ್ ಕ್ರಿಕೆಟ್ ನಡೆಸುವ ಆರ್‌ಸಿಬಿ ಸಂಭ್ರಮಾಚರಣೆ ಸಿದ್ಧತೆಗಳನ್ನು ಸರಕಾರದ ಜತೆ ಸಮಾಲೋಚಿಸಿ ಖಾತರಿ ಮಾಡಿಕೊಂಡು, ಸರಕಾರದ ಅನುಮೋದನೆಗಳನ್ನು ಪರಿಗಣಿಸಿದೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹರಿಬಿಟ್ಟಿದ್ದು ದುರಂತಕ್ಕೆ ಕಾರಣ ವಾಗಿದೆಯೇ ಎನ್ನುವ ಪ್ರಶ್ನೆ ಮುಂದಿಟ್ಟು ತೀವ್ರ ತನಿಖೆ ನಡೆಸುತ್ತಿವೆ. ಸದ್ಯ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸುತ್ತಿರುವ ಬೆಂಗಳೂರು ಜಿಲ್ಲಾಧಿಕಾರಿಗಳು ಹಾಗೂ ನ್ಯಾ.ಜಾನ್ ಮೈಕೆಲ್ ಕುನ್ಹ ನೇತೃತ್ವದ ತನಿಖಾ ಸಮಿತಿ ತ್ವರಿತಗತಿಯಲ್ಲಿ ವರದಿ ಸಲ್ಲಿಸಲು ಯತ್ನಿಸುತ್ತಿವೆ.

ಹಾಗೆಯೇ ಸಿಐಡಿ ವಿಶೇಷ ತನಿಖಾ ದಳದ ಎಸ್.ಪಿ.ಶುಭನ್ವಿತಾ, ಡಿವೈಎಸ್‌ಪಿಗಳಾದ ಗೌತಮ್, ಪುರುಷೋತ್ತಮ್ ನೇತೃತ್ವದ ತಂಡ ತನಿಖೆಯಲ್ಲಿ ಈಗಾಗಲೇ ಬಹುದೂರ ಕ್ರಮಿಸಿದೆ. ಈ ಮೂರು ವಿಚಾರಣಾ ಸಮಿತಿಗಳೂ ಇನ್ನೊಂದು ತಿಂಗಳ ಅವಧಿಯಲ್ಲಿ ಸರಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದ್ದು, ಸದ್ಯದ ಮಾಹಿತಿ ಪ್ರಕಾರ ಎಲ್ಲಾ ಸಮಿತಿಗಳ ದಿಕ್ಕು ಡಿಎನ್‌ಎ ಮತ್ತು ಆರ್‌ಸಿಬಿ ಕಡೆ ಸಾಗುತ್ತಿದೆ ಎಂದು ತಿಳಿದುಬಂದಿದೆ.

ಇದರ ಮಧ್ಯೆ, ದುರಂತ ನಡೆಯುತ್ತಿದ್ದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಹೈಕೋರ್ಟ್, ಈಗಾಗಲೇ ಎರಡು ವಿಚಾರಣೆ ನಡೆಸಿದೆ. ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯ ಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ಸಿ.ಎನ್. ಜೋಷಿ ಅವರ ವಿಭಾಗೀಯ ಪೀಠದಿಂದ ಪ್ರಕಟ ವಾಗುವ ತೀರ್ಪಿನ ಅಂಶಗಳ ಬಗ್ಗೆ ಬರೀ ಡಿಎನ್‌ಎ, ಆರ್‌ಸಿಬಿ ಮಾತ್ರವಲ್ಲದೆ ಸರಕಾರದ ಕೆಲವು ಅಧಿಕಾರಿಗಳಿಗೆ ಕೊಂಚ ನಡುಕ ಶುರುವಾಗಿದೆ ಎನ್ನಲಾಗಿದೆ.

ಡಿಎನ್‌ಎ ಎದೆ ಢವಢವ

ರಾಜ್ಯ ಕಂಡ ಧೀಮಂತ ರಾಜಕೀಯ ದಂತಕತೆಯ ಕುಟುಂಬಕ್ಕೆ ಸೇರಿದ ವೆಂಕಟವರ್ಧನ್ ಅವರಿಗೆ ಸೇರಿದೆ ಎನ್ನಲಾಗುವ ಡಿಎನ್‌ಎ ಸಂಸ್ಥೆಯ ಕಾರ್ಯ ವೈಖರಿ ಶಂಕಿಸಿ ತನಿಖಾ ಸಂಸ್ಥೆಗಳು ವೇಗವಾಗಿ ಮುನ್ನುಗ್ಗುತ್ತಿವೆ. ಕಾಲ್ತುಳಿತ ದುರಂತಕ್ಕೆ ಕಾರಣವಿರಬಹುದು ಎಂದು ಆರೋಪಿಸಿ ಡಿಎನ್‌ಎ ಸಂಸ್ಥೆಯ ಮಾರ್ಕೆಟಿಂಗ್ ಮುಖ್ಯಸ್ಥ ಸುನಿಲ್ ಮ್ಯಾಥ್ಯು ಹಾಗೂ ಟಿಕೆಟ್ ಮುಖ್ಯಸ್ಥ ಸುಮಂತ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಅಂದರೆ ಕ್ರಿಕೆಟ್‌ನ ಪಂದ್ಯಾವಳಿಗಳನ್ನು ನಡೆಸಿ ವ್ಯವಹಾರ ನಡೆಸಿದ್ದ ಡಿಎನ್‌ಎ ಸಂಭ್ರಮಾ ಚರಣೆಗೂ ಟಿಕೆಟ್ ನಿಗದಿ ಮಾಡಬೇಕೆಂದು ನಿರ್ಧರಿಸಿತ್ತು. ನಂತರ ಪಾಸ್ ವ್ಯವಸ್ಥೆ ಮಾಡುವ ನಿರ್ಧಾರಗಳನ್ನು ಪ್ರಕಟಿಸಿ, ನಂತರ ಎಲ್ಲರಿಗೂ ಉಚಿತ ಎನ್ನುವ ಮಾಹಿತಿ ಯನ್ನು ತನ್ನ ವೆಬ್ ಸೈಟ್, ತಂತ್ರಾಂಶಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹರಿಯ ಬಿಟ್ಟಿದ್ದರಿಂದ ಲಕ್ಷಾಂತರ ಮಂದಿ ವಿಜಯೋತ್ಸವಕ್ಕೆ ಪ್ರವಾಹದಂತೆ ಬರುವಂತಾಗಿತ್ತು ಎನ್ನುವ ಅಭಿಪ್ರಾಯಗಳು ಸಮಿತಿ ಮುಂದೆ ವ್ಯಕ್ತವಾಗಿವೆ ಎನ್ನಲಾಗಿದೆ.

ಆರ್‌ಸಿಬಿ ಮಾಡಿದ ಎಡವಟ್ಟು

ಈಗಾಗಲೇ ವಿಚಾರಣೆ ಎದುರಿಸುತ್ತಿರುವ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಹಾಗೂ ಸಿಇಒ ರಾಜೇಶ್ ಮೆನನ್ ಅವರ ನಿರ್ಧಾರಗಳು ದುರಂತಕ್ಕೆ ಕಾರಣ ಇರಬಹುದು ಎನ್ನುವ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಸಂಭ್ರಮಾಚರಣೆ ಬಗ್ಗೆ ಸರಕಾರದ ಅಧಿಕೃತ ನಿರ್ಧಾರಗಳು ಮತ್ತು ಅನುಮೋದನೆಗಳನ್ನು ಪರಿಶೀಲಿಸದೆ, ದೇಶದಲ್ಲೇ ಗರಿಷ್ಠ ಫಾಲೋವರ್ಸ್ ಹೊಂದಿರುವ ಆರ್ ಸಿಬಿಯ ಟ್ವಿಟರ್‌ಗಳಲ್ಲಿ ಸಂಭ್ರಮಾಚರಣೆ ಪ್ರಕಟಿಸಿದ್ದು ಕಾರಣವಾಗಿರಬಹುದೇ ಎನ್ನುವ ಪ್ರಶ್ನೆಗಳು ಸಮಿತಿಗಳಿಗೆ ಹರಿದು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ, ಜತೆಗೆ ಕ್ರೀಡಾಂಗಣದ ಗೇಟ್‌ಗಳನ್ನು ಮುಚ್ಚಿ ಸಕಾಲಕ್ಕೆ ಸರಿಯಾಗಿ ಕ್ರಮಕೈಗೊಳ್ಳುವಲ್ಲಿ ಕೆಎಸ್‌ಸಿಎ ವಿಫಲವಾಗಿತ್ತೇ ಎನ್ನುವ ಪ್ರಶ್ನೆಗಳು ಕೆಎಸ್‌ಸಿಎ ಕಾರ್ಯದರ್ಶಿ ಶಂಕರ್ ಮತ್ತು ಖಜಾಂಚಿ ಜಯರಾಮ್ ಅವರಿಗೆ ಎದುರಾಗುತ್ತಿವೆ ಎನ್ನಲಾಗಿದೆ.