Sunday, 8th September 2024

‘ಕೌನ್ ಬನೇಗಾ ಕರೋಡ್ ಪತಿ’ ನಿರೂಪಕ ಅಮಿತಾಭ್​ ವಿರುದ್ಧ ಎಫ್​ಐಆರ್

ಹಿಂದುಗಳ ಭಾವನೆಗೆ ನೋವು ಉಂಟು ಮಾಡಿದ ಆರೋಪ

ಮುಂಬೈ: ‘ಕೌನ್ ಬನೇಗಾ ಕರೋಡ್ ಪತಿ’ 12ನೇ ಸೀಸನ್ ಇದೀಗ ವಿವಾದಕ್ಕೆ ಕಾರಣವಾಗಿದ್ದು, ನಿರೂಪಕ, ಬಾಲಿವುಡ್​ ಹಿರಿಯ ನಟ ಅಮಿತಾಭ್​​ ಬಚ್ಚನ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಅ.30ರ ಎಪಿಸೋಡ್​ನಲ್ಲಿ ಅಮಿತಾಭ್​ ಮನುಸ್ಮೃತಿಯ ಬಗ್ಗೆ ಕೇಳಿದ ಪ್ರಶ್ನೆಯೇ ಇದಕ್ಕೆ ಕಾರಣ. ಎಪಿಸೋಡ್​​ನಲ್ಲಿ ಸಾಮಾಜಿಕ ಹೋರಾಟಗಾರ ವಿಲ್ಸನ್ ಮತ್ತು ನಟ ಅನುಪ್ ಸೋನಿ ಅತಿಥಿಗಳಾಗಿದ್ದರು. ಅವರಿಗೆ, 1927ರ ಡಿಸೆಂಬರ್​ 25ರಂದು ಡಾ.ಬಿ.ಆರ್​.ಅಂಬೇಡ್ಕರ್​ ಮತ್ತು ಅವರ ಬೆಂಬಲಿಗರು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟುಹಾಕಿದರು? ಎಂಬ 6.40 ಲಕ್ಷ ರೂಪಾಯಿಯ ಪ್ರಶ್ನೆಯನ್ನು ಬಚ್ಚನ್​ ಕೇಳಿದ್ದರು. ಹಾಗೇ ಅದಕ್ಕೆ, ವಿಷ್ಣುಪುರಾಣ, ಭಗವದ್ಗೀತೆ, ಋಗ್ವೇದ ಮತ್ತು ಮನುಸ್ಮೃತಿ ಎಂಬ ನಾಲ್ಕು ಆಯ್ಕೆಗಳನ್ನು ಕೊಡಲಾಗಿತ್ತು.

ಅದಾದ ಬಳಿಕ ಅಮಿತಾಭ್​ 1927ರಲ್ಲಿ ನಡೆದ ಘಟನೆಯನ್ನು ವಿವರಿಸುತ್ತ, ಅಂಬೇಡ್ಕರ್​ ಅವರು ಪುರಾತನ ಹಿಂದು ಗ್ರಂಥ ಮನು ಸ್ಮೃತಿಯನ್ನು ವಿರೋಧಿಸುತ್ತಿದ್ದರು. ಮನುಸ್ಮೃತಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ ಎಂಬ ಕಾರಣಕ್ಕೆ ಅದರ ಪ್ರತಿಗಳನ್ನು ಸುಟ್ಟು ಹಾಕಿದರು ಎಂದು ಹೇಳಿದ್ದರು.

ಆದರೆ ಬಚ್ಚನ್​ ಅವರ ಈ ವಿವರಣೆ ಅನೇಕರಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು. ಲಾತೂರ್ ಜಿಲ್ಲೆಯ ಆಸಾದ ಬಿಜೆಪಿ ಶಾಸಕ ಅಭಿಮನ್ಯು ಪವಾರ್​ ಅವರು ಅಮಿತಾಭ್​ಬಚ್ಚನ್​ ಮತ್ತು ಸೋನಿ ಚಾನಲ್​ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಶ್ನೆಯ ಹಿಂದಿನ ಉದ್ದೇಶ ಹಿಂದುಗಳ ಭಾವನೆಗೆ ನೋವು ಉಂಟು ಮಾಡುವುದೇ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

Leave a Reply

Your email address will not be published. Required fields are marked *

error: Content is protected !!