Stock market: ಭಾರತ-ಪಾಕ್ ಕದನ ವಿರಾಮ; ಸೆನ್ಸೆಕ್ಸ್ 2,900 ಅಂಕ ಜಿಗಿತ, ಚಿನ್ನ 4,200 ರೂ ದಿಢೀರ್ ಇಳಿಕೆ!
ಭಾರತ-ಪಾಕಿಸ್ತಾನ ಕದನ ವಿರಾಮದ ಹಿನ್ನೆಲೆಯಲ್ಲಿ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 2,975 ಅಂಕ ಏರಿಕೆಯಾಗಿದೆ. 82,429ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ. ನಿಫ್ಟಿ 916 ಅಂಕ ಏರಿಕೆಯಾಗಿ 24,925ಕ್ಕೆ ವೃದ್ಧಿಸಿತು. ಹೂಡಿಕೆದಾರರು 13 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಲಾಭ ಗಳಿಸಿದರು.


ಕೇಶವ ಪ್ರಸಾದ.ಬಿ
ಮುಂಬೈ: ಭಾರತ-ಪಾಕಿಸ್ತಾನ ಕದನ ವಿರಾಮದ ಹಿನ್ನೆಲೆಯಲ್ಲಿ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 2,975 ಅಂಕ ಏರಿಕೆಯಾಗಿದೆ. 82,429ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ. ನಿಫ್ಟಿ 916 ಅಂಕ ಏರಿಕೆಯಾಗಿ 24,925ಕ್ಕೆ ವೃದ್ಧಿಸಿತು. ಹೂಡಿಕೆದಾರರು 13 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಲಾಭ ಗಳಿಸಿದರು. ಕಳೆದ ಒಂದು ವಾರದಲ್ಲಿ ಉಂಟಾಗಿದ್ದ ನಷ್ಟ ಇವತ್ತೊಂದೇ ದಿನ ಭರ್ತಿಯಾಗಿದೆ. ಮತ್ತೊಂದು ಕಡೆ ಫ್ಯೂಚರ್ಸ್ ಟ್ರೇಡ್ನಲ್ಲಿ ಬಂಗಾರದ ದರ ಇಳಿಕೆಯಾಗಿದೆ. ಹಾಗಾದ್ರೆ ಈ ಟ್ರೆಂಡ್ಗೆ ಕಾರಣ ಏನು? ಇದು ಮುಂದುವರಿಯುತ್ತಾ, ಹೂಡಿಕೆದಾರರು ಏನು ಮಾಡಬಹುದು? ಎಂಬುದನ್ನು ತಿಳಿಯೋಣ.
ಮೊದಲನೆಯದಾಗಿ
ಸೆನ್ಸೆಕ್ಸ್-ನಿಫ್ಟಿ ಭಾರಿ ಏರಿಕೆಗೆ ಪ್ರಮುಖ ಕಾರಣಗಳು:
- ಭಾರತ-ಪಾಕಿಸ್ತಾನದ ನಡುವೆ ತಾತ್ಕಾಲಿಕವಾಗಿ ಕದನ ವಿರಾಮ.
- ಅಮೆರಿಕ ಮತ್ತು ಚೀನಾ ನಡುವೆ ಭಾರಿ ಸುಂಕ ಹಿಂತೆಗೆತ
- ಮ್ಯೂಚುವಲ್ ಫಂಡ್ ಹೂಡಿಕೆಯ ಹೆಚ್ಚಳ
- ಸಾವರಿನ್ ರೇಟಿಂಗ್ ಅಪ್ ಗ್ರೇಡ್
- ಎಲ್ಲ ಸೆಕ್ಟರ್ಗಳಲ್ಲೂ ಷೇರುಗಳ ಖರೀದಿ ಭರಾಟೆ
- ಟೆಕ್ನಿಕಲ್ ಬ್ರೇಕೌಟ್.
ಸೂಚ್ಯಂಕಗಳ ಏರಿಕೆಯಿಂದ ಬಿಎಸ್ಇನಲ್ಲಿ ಲಿಸ್ಟ್ ಆಗಿರುವ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 13 ಲಕ್ಷ ಕೋಟಿ ರುಪಾಯಿ ಹೆಚ್ಚಳವಾಗಿದೆ. 427 ಲಕ್ಷ ಕೋಟಿಗೆ ಏರಿಕೆಯಾಗಿದೆ. ಭಾರತ ಮತ್ತು ಪಾಕಿಸ್ತಾನವು ಒಂದು ವಾರಗಳ ಸಂಘರ್ಷದ ಬಳಿಕ ಶನಿವಾರ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿವೆ. ಭಾನುವಾರ ಕದನ ವಿರಾಮ ಉಲ್ಲಂಘನೆಯಾಗಿದ್ದರೂ, ಭಾರತ ತೀಕ್ಷ್ಣ ಎಚ್ಚರಿಕೆಯನ್ನು ಕೊಟ್ಟಿದೆ. ಭದ್ರತೆಗೆ ಅಗತ್ಯ ಕ್ರಮಗಳನ್ನು ನಿರಂತರ ಕೈಗೊಳ್ಳುತ್ತಿದೆ. ಹೀಗಾಗಿ ಷೇರು ಹೂಡಿಕೆದಾರರು ನಿರಾಳರಾಗಿದ್ದಾರೆ. ಇದು ಷೇರು ಪೇಟೆಯ ಚೇತರಿಕೆಗೆ ಮೊದಲ ಕಾರಣವಾಗಿದೆ. ಪಾಕಿಸ್ತಾನದಲ್ಲೂ ಷೇರು ಸೂಚ್ಯಂಕ ಇವತ್ತು ಚೇತರಿಸಿದೆ.
ಎರಡನೆಯದಾಗಿ ಅಮೆರಿಕ-ಚೀನಾ ನಡುವೆ ಜಿನೀವಾದಲ್ಲಿ ನಡೆದಿರುವ ಸುಂಕ ಸಮರ ಕುರಿತ ಮಾತುಕತೆ ಸಕಾರಾತ್ಮಕವಾಗಿತ್ತು. ಉಭಯ ದೇಶಗಳೂ ಇತ್ತೀಚೆಗೆ ಪರಸ್ಪರ ವಿಧಿಸಿದ್ದ ಭಾರಿ ಸುಂಕವನ್ನು ಹಿಂತೆಗೆದುಕೊಳ್ಳಲು ಒಪ್ಪಿವೆ. ಈ ಮಾತುಕತೆ ಗಣನೀಯ ಸುಧಾರಣೆಯಾಗಿರುವುದರಿಂದ ಹೂಡಿಕೆದಾರರು ಸ್ವಾಗತಿಸಿದ್ದಾರೆ. ಏಷ್ಯಾದಲ್ಲಿ ಸೂಚ್ಯಂಕಗಳು ಏರಿಕೆಯಾಗಿವೆ. ಕಚ್ಚಾ ತೈಲ ದರ ವೃದ್ಧಿಸಿದೆ. ಅಮೆರಿಕ ಮತ್ತು ಬ್ರಿಟನ್ ನಡುವೆ ಕೂಡ ಟ್ರೇಡ್ ಡೀಲ್ ಮಾತುಕತೆ ನಡೆದಿದೆ. ಅಮೆರಿಕವು ಚೀನಾ ವಿರುದ್ಧದ 145% ಸುಂಕವನ್ನು 30% ಕ್ಕೆ ಇಳಿಸಿದೆ. ಚೀನಾವು ಅಮೆರಿಕ ವಿರುದ್ಧದ 125% ಸುಂಕವನ್ನು 10% ಕ್ಕೆ ಇಳಿಸಿದೆ.
ಮೂರನೆಯದಾಗಿ ಡೊಮೆಸ್ಟಿಕ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಷೇರು ಮಾರುಕಟ್ಟೆಯಲ್ಲಿ ವಿಶ್ವಾಸದಿಂದ ಹೂಡಿಕೆ ಮುಂದುವರಿಸುತ್ತಿದ್ದಾರೆ. ಏಪ್ರಿಲ್ನಲ್ಲಿ 26,632 ಕೋಟಿ ರುಪಾಯಿ ಮೌಲ್ಯದ ಸಿಪ್ ಹೂಡಿಕೆ ಆಗಿದೆ. ಮಾರ್ಚ್ ತಿಂಗಳಿಗೆ ಹೋಲಿಸಿದರೆ 2.72% ಏರಿಕೆಯಾಗಿದೆ.
ನಾಲ್ಕನೆಯದಾಗಿ ಭಾರತದ ಸಾವರಿನ್ ಕ್ರೆಡಿಟ್ ರೇಟಿಂಗ್ ಅನ್ನು ಮಾರ್ನಿಂಗ್ ಸ್ಟಾರ್ DBRS ಅಪ್ ಗ್ರೇಡ್ ಮಾಡಿದೆ. BBB (LOW)ನಿಂದ BBB (STABLE)ಗೆ ಮೇಲ್ದರ್ಜೆಗೇರಿಸಿದೆ. ಮ್ಯಾಕ್ರೊ ಫಂಡಮೆಂಟಲ್ ಪರಿಸ್ಥಿತಿ ಸುಧಾರಿಸಿದೆ ಎಂದು ತಿಳಿಸಿದೆ. ಇದು ಹೂಡಿಕೆದಾರರಿಗೆ ಭಾರತದ ಮಾರುಕಟ್ಟೆ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ.
ಇವತ್ತು ಫಾರ್ಮಾ ಮತ್ತು ಹೆಲ್ತ್ಕೇರ್ ಹೊರತುಪಡಿಸಿ ಎಲ್ಲ ಸೆಕ್ಟರ್ಗಳ ಇಂಡೆಕ್ಸ್ಗಳು ಗ್ರೀನ್ನಲ್ಲಿ ಓಪನ್ ಆಯಿತು.
ನಿಫ್ಟಿ ರಿಯಾಲ್ಟಿ 4.5%
ನಿಫ್ಟಿ ಐಟಿ 3.7%
ನಿಫ್ಟಿ ಪಿಎಸ್ಯು ಬ್ಯಾಂಕ್ 3%
ಏರಿತು.
ನಿಫ್ಟಿ ಮಿಡ್ ಕ್ಯಾಪ್ 100 : 3.3%
ನಿಫ್ಟಿ ಸ್ಮಾಲ್ ಕ್ಯಾಪ್ : 3.5%
ಚೇತರಿಸಿತು.
ಲಾಭ ಗಳಿಸಿದ ಷೇರುಗಳ ಲಿಸ್ಟ್:
ಅದಾನಿ ಪೋರ್ಟ್ಸ್ :
ಎಕ್ಸಿಸ್ ಬ್ಯಾಂಕ್ :
ಎಲ್ &ಟಿ :
ಬಜಾಜ್ ಫೈನಾನ್ಸ್
ಎನ್ಟಿಪಿಸಿ :
ಅಮೆರಿಕ-ಚೀನಾ ವಾಣಿಜ್ಯ ಮಾತುಕತೆ ಪ್ರಗತಿಯ ಹಿನ್ನೆಲೆಯಲ್ಲಿ ಬ್ರೆಂಟ್ ಮಾದರಿಯ ಕಚ್ಚಾ ತೈಲ ದರ ಪ್ರತಿ ಬ್ಯಾರಲ್ಗೆ 64 ಡಾಲರ್ಗೆ ಏರಿಕೆಯಾಗಿದೆ.
ಹಾಗಾದರೆ ಸೆನ್ಸೆಕ್ಸ್-ನಿಫ್ಟಿಯ ಈ ಏರಿಕೆ ಇನ್ನು ಮುಂಬರುವ ದಿನಗಳಲ್ಲೂ ಮುಂದುವರಿಯಲಿದೆಯೇ ? ಮಾರುಕಟ್ಟೆ ತಜ್ಞರ ಪ್ರಕಾರ ಭಾರತ-ಪಾಕಿಸ್ತಾನದ ನಡುವಣ ಕದನ ವಿರಾಮದ ಬಾಳಿಕೆ ಮತ್ತು ಗ್ಲೋಬಲ್ ಡೆವಲಪ್ಮೆಂಟ್ಗಳು ಪ್ರಭಾವ ಬೀರಲಿವೆ. ಈಗಿನ ಅನಿಶ್ಚಿತತೆ ಮತ್ತು ವೊಲಟಾಲಿಟಿಗಳು ಶಾರ್ಟ್ ಟರ್ಮ್ ಟ್ರೇಡರ್ಸ್ಗೆ ಅನುಕೂಲವಾಗಬಹುದು. ಜತೆಗೆ ದೀರ್ಘಕಾಲೀನ ಹೂಡಿಕೆದಾರರು ಆತಂಕಪಡಬೇಕಿಲ್ಲ. ಏಕೆಂದರೆ ದೇಶದ ಆರ್ಥಿಕ ಬೆಳವಣಿಗೆ ಸದೃಢವಾಗಿ ಇರುವುದರಿಂದ ದೀರ್ಘಕಾಲೀನ ಹೂಡಿಕೆಯನ್ನು ಮುಂದುವರಿಸಬಹುದು ಎನ್ನುತ್ತಾರೆ.
ಜಾಗತಿಕ ಮಟ್ಟದಲ್ಲಿ ಸ್ಟಾಕ್ ಮಾರ್ಕೆಟ್ ಇಂಡೆಕ್ಸ್ಗಳು ಚೇತರಿಸುತ್ತಿದ್ದರೆ, ಮತ್ತೊಂದು ಕಡೆ ಬಂಗಾರದ ದರದಲ್ಲಿ ಇವತ್ತು ಭಾರಿ ಇಳಿಕೆಯಾಗಿದೆ. ಚಿನ್ನವನ್ನು ಖರೀದಿಸಲು ಬಯಸುವವರಿಗೆ ಇದು ಗುಡ್ ನ್ಯೂಸ್ ಆಗಿದೆ.
ಪ್ರತಿ 10 ಗ್ರಾಮ್ ಚಿನ್ನದ ದರದಲ್ಲಿ 4,186 ರುಪಾಯಿ ಇಳಿಕೆಯಾಗಿದ್ದು, 92,543 ರುಪಾಯಿಗೆ ತಗ್ಗಿದೆ.ಜಿಯೊ ಪಾಲಿಟಿಕಲ್ ಟೆನ್ಷನ್ ಕಡಿಮೆಯಾಗುತ್ತಿರುವುದು, ಮುಖ್ಯವಾಗಿ ಅಮೆರಿಕ-ಚೀನಾ ನಡುವಣ ವಾಣಿಜ್ಯ ಮಾತುಕತೆಯ ಸಕಾರಾತ್ಮಕ ಪ್ರಗತಿ ಮತ್ತು ಡಾಲರ್ ಮತ್ತೆ ಪ್ರಬಲವಾಗುತ್ತಿರುವುದು ಇದಕ್ಕೆ ಕಾರಣವಾಗಿದೆ.
ಯಸ್ ಬ್ಯಾಂಕ್ ಷೇರು ದರ ಇವತ್ತು 9% ಏರಿಕೆಯಾಗಿದೆ. 20 ರುಪಾಯಿಗೆ ಏರಿಕೆಯಾಗಿದೆ. ಜಪಾನಿನ ಬ್ಯಾಂಕ್ SMBC ಯು 13,483 ಕೋಟಿ ರುಪಾಯಿ ಕೊಟ್ಟು ಯಸ್ ಬ್ಯಾಂಕಿನ 20% ಷೇರುಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿರುವುದು ಇದಕ್ಕೆ ಕಾರಣ. ಈ ಷೇರಿನ ದರ 28 ರುಪಾಯಿಗೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಚಾಯ್ಸ್ ಈಕ್ವಿಟಿ ಬ್ರೋಕಿಂಗ್ನ ಉಪಾಧ್ಯಕ್ಷ ಕುನಾಲ್ ಪರಾರ್ ಹೇಳಿದ್ದಾರೆ.
ಹಾಗಾದರೆ ಮುಂದೇನಾಗಬಹುದು?
ಖ್ಯಾತ ಆರ್ಥಿಕ ತಜ್ಞರಾದ ಸ್ವಾಮಿನಾಥನ್ ಅವರು ಏನು ಹೇಳ್ತಾರೆ ಅಂದ್ರೆ- ಹಲವಾರು ವಾರಗಳ ಅನಿಶ್ಚಿತತೆಯ ನಂತರ ನಾವು ಗುಡ್ ನ್ಯೂಸ್ ಅನ್ನು ಕೇಳುತ್ತಿದ್ದೇವೆ. ಭಾರತ-ಪಾಕಿಸ್ತಾನ ಆಯಾಮದ ದೃಷ್ಟಿಯಿಂದ ಕದನ ವಿರಾಮದ ಗುಡ್ ನ್ಯೂಸ್ ಬಂದಿದೆ. ಮತ್ತೊಂದು ಕಡೆ ಅಮೆರಿಕ-ಚೀನಾ ನಡುವೆ ಕೂಡ ಸುಂಕ ಸಮರ ತಿಳಿಯಾಗುವ ಲಕ್ಷಣ ತೋರಿಸಿದೆ. ಹೀಗಿದ್ದರೂ ಈಗ ಆಗಿರುವ ವಿದ್ಯಮಾನಗಳು ಮತ್ತು ಅವುಗಳು ಆರ್ಥಿಕ ಬೆಳವಣಿಗೆ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎನ್ನುತ್ತಾರೆ ಸ್ವಾಮಿನಾಥನ್.
ಈ ಸುದ್ದಿಯನ್ನೂ ಓದಿ: Stock Market: ಷೇರು ಮಾರುಕಟ್ಟೆ ಇಂಡೆಕ್ಸ್ ಕುಸಿತದ ವೇಳೆ ಯಾವ ಷೇರು ಬೆಸ್ಟ್?
ಹೂಡಿಕೆದಾರರು ಶಾರ್ಟ್ ಟರ್ಮ್ ಕರೆಕ್ಷನ್ಗಳನ್ನು ಎಚ್ಚರದಿಂದ ಗಮನಿಸಬೇಕು. ಸೂಚ್ಯಂಕಗಳು ಇಳಿಕೆಯಾಗಿದ್ದಾಗ ಷೇರುಗಳನ್ನು ಖರೀದಿಸುವುದು ಉತ್ತಮ. ಆದರೆ ಸ್ಟಾಕ್ ಮಾರ್ಕೆಟ್ನಿಂದಲೇ ನಿರ್ಗಮಿಸಬೇಕಾದ ಅಗತ್ಯ ಇಲ್ಲ. ಆದ್ದರಿಂದ ಯಾವಾಗಲೂ ಒಂದಷ್ಟು ಕ್ಯಾಶ್ ಅನ್ನು ಹೂಡಿಕೆಗೆ ಇಟ್ಟುಕೊಳ್ಳಿ. ಇಂಡೆಕ್ಸ್ ಇಳಿದಾಗ ಇನ್ವೆಸ್ಟ್ ಮಾಡಿ ಎನ್ನುತ್ತಾರೆ ತಜ್ಞರು.