Wednesday, 23rd October 2024

ದಿಢೀರನೇ ಛಾವಣಿ ಕುಸಿದು 25 ಮಕ್ಕಳಿಗೆ ಗಾಯ

ಚಂಡೀಗಡ: ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮೇಲೆ ಛಾವಣಿ ಕುಸಿದು ಬಿದ್ದು, 25 ಮಕ್ಕಳು ಗಾಯಗೊಂಡ ಘಟನೆ ಹರಿಯಾಣ ದಲ್ಲಿ ನಡೆದಿದೆ. ತರಗತಿಯ ವೇಳೆಯಲ್ಲೇ ಕಟ್ಟಡ ರಿಪೇರಿ ಕೆಲಸ ನಡೆಸಿದ್ದ ವೇಳೆ ಈ ಅನಾಹುತ ಸಂಭವಿಸಿದೆ.

ಹರಿಯಾಣದ ಸೋನಿಪತ್​ ಜಿಲ್ಲೆಯ ಗನ್ನೌರ್​ ತಹಸೀಲಿನ ಬಾಯಿ ಗ್ರಾಮದಲ್ಲಿ ಶಾಲೆಯೊಂದರ ಛಾವಣಿ ಮಳೆಯಿಂದಾಗಿ ಸೋರುವಂತಾಗಿತ್ತು. ಛಾವಣಿ ಸರಿಪಡಿಸಲು ರಿಪೇರಿ ಕಾರ್ಯ ಕೈಗೊಳ್ಳಲಾಗಿತ್ತು.

ಒಂದು ಕೊಠಡಿಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಗಳು ಪಾಠ ಕೇಳುತ್ತಾ ಇದ್ದರು. ಆ ಸಂದರ್ಭಕ್ಕೆ ಛಾವಣಿಯು ದಿಢೀರನೇ ಕುಸಿದು ಬಿತ್ತು. ತರಗತಿಯಲ್ಲಿದ್ದ 25 ಮಕ್ಕಳಿಗೆ ಮತ್ತು ರಿಪೇರಿ ಕೆಲಸ ಮಾಡುತ್ತಿದ್ದ ಮೂರು ಜನ ನಿರ್ಮಾಣ ಕಾರ್ಮಿಕರಿಗೆ ಗಾಯಗಳಾದವು. ಅವರಲ್ಲಿ 5 ಮಕ್ಕಳಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನಲಾಗಿದೆ.