Friday, 20th September 2024

ಬಹುಜನ ಸಮಾಜ ಪಕ್ಷದ ಏಳು ಬಂಡಾಯ ಶಾಸಕರ ಅಮಾನತು

ಲಖನೌ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಗುರುವಾರ ತಮ್ಮ ಏಳು ಮಂದಿ ಬಂಡಾಯ ಶಾಸಕರನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ. ರಾಜ್ಯಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ರಾಮ್’ಜೀ ಗೌತಮ್’ರನ್ನು ಆಯ್ಕೆ ಮಾಡಿದ್ದನ್ನು ವಿರೋಧಿಸಿದ್ದೇ ಅಮಾನತಿಗೆ ಕಾರಣವೆನ್ನಲಾಗಿದೆ.

ಚೌಧರಿ ಅಸ್ಲಂ ಅಲಿ, ಹಕೀಂ ಲಾಲ್ ಬಿಂದ್, ಮೊಹಮ್ಮದ್ ಮೊಕ್ತಬಾ ಸಿದ್ದಿಕಿ, ಅಸ್ಲಂ ರೈನಿ, ಸುಷ್ಮಾ ಪಟೇಲ್, ಹರಿಗೋವಿಂದ್ ಭಾರ್ಗವ ಮತ್ತು ಬಂದನಾ ಸಿಂಗ್ ಮುಂತಾದ ಶಾಸಕರು ಅಮಾನತಿಗೊಳಗಾಗಿದ್ದಾರೆ. ಕಳೆದ ಬುಧವಾರ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್’ರನ್ನ ಬಂಡಾಯ ಶಾಸಕರು ಭೇಟಿಯಾಗಿದ್ದರು. ಹಾಗೂ ರಾಮ್’ಜೀ ಗೌತಮ್’ರನ್ನು ಆಯ್ಕೆ ಮಾಡುವಲ್ಲಿ ಬಂಡಾಯ ಶಾಸಕರ ಪೈಕಿ ನಾಲ್ವರ ಸಹಿಗಳನ್ನು ನಕಲು ಮಾಡಲಾಗಿದೆ ಎಂದು ಅಫಿದಾವಿತ್ ಸಲ್ಲಿಸಿದ್ದರು.

ಆದಾಗ್ಯೂ, ಉತ್ತರ ಪ್ರದೇಶ ರಾಜ್ಯಸಭೆಯ ಖಾಲಿ ಇರುವ ಹತ್ತು ಸೀಟುಗಳಿಗೆ ನವೆಂಬರ್‌ 9 ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ಅಧಿಕಾರಿ ರಾಮ್’ಜೀ ಗೌತಮ್’ರ ನಾಮಪತ್ರವನ್ನು ಸ್ವೀಕರಿಸಿದ್ದಾರೆ.

ಉತ್ತರ ಪ್ರದೇಶ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ 11 ಅಭ್ಯರ್ಥಿಗಳ ಪೈಕಿ, ಎಂಟು ಮಂದಿ ಬಿಜೆಪಿಯಿಂದ ಕಣದಲ್ಲಿದ್ದಾರೆ.