Monday, 16th September 2024

Ajit Doval: ಮೋದಿ ಭೇಟಿ ಬೆನ್ನಿಗೇ ಅಜಿತ್ ಧೋವಲ್ ರಷ್ಯಾಗೆ ಧಾವಿಸುತ್ತಿರುವುದೇಕೆ?

Ajit doval

ನವದೆಹಲಿ: ಉಕ್ರೇನ್‌(Ukraine) ಜತೆಗಿನ ತನ್ನ ಸಮರಕ್ಕೆ ಅಂತ್ಯ ಹಾಡುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಷ್ಯಾ ಸಂಧಾನಕ್ಕೆ(Russia-Ukraine War) ಮುಂದಾಗಿದ್ದು, ಮಧ್ಯಸ್ಥಿಕೆ ವಹಿಸುವಂತೆ ಭಾರತದತ್ತ ಮುಖಮಾಡಿದೆ. ಉಕ್ರೇನ್‌ ಜತೆಗಿನ ಮಾತುಕತೆಯಲ್ಲಿ ಭಾರತ, ಚೀನಾ ಮತ್ತು ಬ್ರೆಜಿಲ್ ಮಧ್ಯಸ್ಥಿಕೆ ವಹಿಸಬಹುದೆಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಹೇಳಿಕೆ ನೀಡಿರುವ ಬೆನ್ನಲ್ಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್(Ajit Doval) ರಷ್ಯಾ ತೆರಳಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ.

ದೋವಲ್‌ ಅವರು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಶಾಂತಿಯುತ ಪರಿಹಾರದ ಕುರಿತು ಚರ್ಚೆಗಾಗಿ ಮಾಸ್ಕೋಗೆ ತೆರಳುವ ನಿರೀಕ್ಷೆಯಿದೆ ಅಧಿಕೃತ ಮೂಲಗಳು ತಿಳಿಸಿವೆ. ಎರಡೂವರೆ ವರ್ಷಗಳಿಂದ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಭೀಕರ ಸಮರಕ್ಕೆ ಅಂತ್ಯ ಹಾಡುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎನ್ನಲಾಗಿದೆ.

ಉಕ್ರೇನ್‌ ಮತ್ತು ರಷ್ಯಾ ಭಾರತದ ಮಿತ್ರ ರಾಷ್ಟ್ರಗಳಾಗಿದ್ದು, ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಯುದ್ಧ ಕೈಬಿಡುವಂತೆ ಕರೆ ನೀಡಿದ್ದರು. ರಣರಂಗದಲ್ಲಿ ಯಾವುದೇ ಸಮಸ್ಯೆ ಬಗೆಹರಿಯಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದರು. ಅಲ್ಲದೇ ಶಾಂತಿ ಮಾತುಕತೆಯತ್ತಗಮನ ಹರಿಸುವಂತೆ ಪುಟಿನ್‌ಗೆ ಕರೆ ಮಾಡಿ ಮನವಿ ಮಾಡಿದ್ದರು. ಉಕ್ರೇನ್‌ಗೆ ಶಾಶ್ವತ ಶಾಂತಿಯನ್ನು ತರಲು ವಿಚಾರಗಳನ್ನು ಚರ್ಚಿಸಲು ಭಾರತವು ತನ್ನ ಎನ್‌ಎಸ್‌ಎಯನ್ನು ಮಾಸ್ಕೋಗೆ ಕಳುಹಿಸಲಿದೆ ಎಂದು ಉಭಯ ನಾಯಕರು ಈ ಕರೆಯ ಸಮಯದಲ್ಲಿ ಚರ್ಚಿಸಿದ್ದಾರೆ ಎಂದು ಮೂಲಗಳು ಸೂಚಿಸಿವೆ. ಅದೇನೇ ಇದ್ದರೂ, NSA ದೋವಲ್ ಯಾವಾಗ ರಷ್ಯಾಕ್ಕೆ ಭೇಟಿ ನೀಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

ವ್ಲಾಡಿವೋಸ್ಟಾಕ್ ನಗರದಲ್ಲಿ ರಷ್ಯಾದ ಪೂರ್ವ ಆರ್ಥಿಕ ವೇದಿಕೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಪುಟಿನ್, ರಷ್ಯಾ ಮಾತುಕತೆಗೆ ಸಿದ್ಧವಾಗಿದೆ. ನಾವು ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿಯೇ ಇದ್ದೇವೆ. ನಾವು ಎಂದೂ ಮಾತುಕತೆಗೆ ನಿರಾಕರಿಸಿಲ್ಲ, ಆದರೆ ಕೆಲವು ಅಲ್ಪಕಾಲಿಕ ಬೇಡಿಕೆಗಳ ಆಧಾರದ ಮೇಲೆ ಮಾತುಕತೆ ಸಫಲವಾಗಲು ಸಾಧ್ಯವಿಲ್ಲ. ಮಾತುಕತೆಯ ಮಧ್ಯಸ್ಥಿಕೆಯನ್ನು ಭಾರತ, ಚೀನಾ ಮತ್ತು ಬ್ರೆಜಿಲ್‌ ವಹಿಸಿದರೆ ಉತ್ತಮ ಎಂದು ಅವರು ತಿಳಿಸಿದ್ದಾರೆ.

ಉಕ್ರೇನ್‌ನ ಪೋಲ್ಟವಾ ನಗರದಲ್ಲಿ ಮಂಗಳವಾರ ನಡೆದ ರಷ್ಯಾದ  ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 51 ಜನರು ಸಾವನ್ನಪ್ಪಿದ್ದಾರೆ ಮತ್ತು 180 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಷ್ಯಾದ ಪಡೆಗಳು ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಯುದ್ಧಪೀಡಿತ ಉಕ್ರೇನ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ಸರ್ಕಾರದ ಪುನರ್‌ರಚನೆಯ ಮುಂಚಿತವಾಗಿ ಕ್ಯಾಬಿನೆಟ್‌ ಸಚಿವರು ಸೇರಿ ಕನಿಷ್ಠ 6 ಮಂದಿ ಉನ್ನತ ಮಟ್ಟದ ಅಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ಮುಂದುವರಿದಿರುವ ಹಿನ್ನಲೆಯಲ್ಲಿ ಈ ಬದಲಾವಣೆಗೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಸರ್ಕಾರದ ಪ್ರಮುಖ ಹುದ್ದೆಯಾದ ಶಸ್ತ್ರಾಸ್ತ್ರ ಉತ್ಪಾದನೆಯ ಉಸ್ತುವಾರಿ ಹೊಂದಿರುವ ಕೈಗಾರಿಕಾ ಸಚಿವರು ಸೇರಿ ಕೆಲವು ಉನ್ನತ ಸ್ಥಾನಮಾನಗಳನ್ನು ಹೊಂದಿರುವ ನಾಯಕರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ. ಆಡಳಿತಾರೂಢ ಸರ್ವೆಂಟ್ ಆಫ್ ದಿ ಪೀಪಲ್ ಪಕ್ಷ (Servant of the People party)ದ ಸಂಸದೀಯ ನಾಯಕ ಡೇವಿಡ್ ಅರಾಖಾಮಿಯಾ (David Arakhamia) ಇತ್ತೀಚೆಗೆ ಸರ್ಕಾರ ಪುನರ್‌ರಚನೆಯಾದ ಬಳಿಕ  ಕ್ಯಾಬಿನೆಟ್‌ ಅರ್ಧದಷ್ಟು ಬದಲಾಗಲಿದೆ ಎಂದು ಹೇಳಿಕೆ ನೀಡಿದ್ದರು. ಅದರಂತೆ ಇದೀಗ ಈ ಬೆಳವಣಿಗೆ ಕಂಡು ಬಂದಿದೆ.

ಈ ಸುದ್ದಿಯನ್ನೂ ಓದಿ: ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸಾಂಸ್ಕೃತಿಕ ನೃತ್ಯದೊಂದಿಗೆ ಸ್ವಾಗತ

Leave a Reply

Your email address will not be published. Required fields are marked *