Friday, 18th October 2024

ಕ್ರಿಸ್‌ಮಸ್ ಮುನ್ನ ಕಾರ್ಮಿಕರು ಮರಳಿ ಮನೆಗೆ: ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್

ಉತ್ತರಾಖಂಡ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದಿರುವ 41 ಮಂದಿ ಕಾರ್ಮಿಕರು ಕ್ರಿಸ್‌ಮಸ್ ಹಬ್ಬದ ವೇಳೆಗೆ ಸುರಕ್ಷಿತವಾಗಿ ಮರಳಿ ಮನೆ ಸೇರಲಿದ್ದಾರೆ ಎಂದು ಅಂತರರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಭರವಸೆ ವ್ಯಕ್ತಪಡಿಸಿದ್ದಾರೆ.

“ರಕ್ಷಣಾ ಕಾರ್ಯಾಚರಣೆ ಸುಗಮ, ತ್ವರಿತವಾಗಿ ಕೊನೆಗೊಳ್ಳುತ್ತವೆ ಎಂದು ನಾನು ಎಂದಿಗೂ ಭರವಸೆ ನೀಡಲಿಲ್ಲ. ಇಂದು ರಾತ್ರಿ ಅಥವಾ ನಾಳೆಯೊಳಗೆ ಕಾರ್ಯಾಚರಣೆ ಮುಗಿಯುತ್ತದೆ ಎಂದು ಹೇಳಿಲ್ಲ. ಅವರೆಲ್ಲಾ ಕ್ರಿಸ್‌ಮಸ್‌ ಸಮಯದ ವೇಳೆಗೆ ಮನೆಗೆ ಬರುತ್ತಾರೆ ಎಂಬ ಭರವಸೆ ನನ್ನದು. ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ” ಎಂದು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಸೈಯದ್ ಅತಾ ಹಸ್ನೈನ್, “ಸುರಂಗ ರಕ್ಷಣಾ ಕಾರ್ಯಾಚರಣೆಗೆ ಬಳಸಿರುವ ಡ್ರಿಲ್ಲಿಂಗ್‌ ಮಷಿನ್‌ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಸರಿಪಡಿಸಿ ರಕ್ಷಣಾ ಕಾರ್ಯ ಮುಂದುವರಿಸಲಾಗುವುದು. ನಮ್ಮ ರಕ್ಷಕರು ಅನಿರೀಕ್ಷಿತ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುರಂಗದಲ್ಲಿ ಸಿಲುಕಿರುವ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿದ್ದಾರೆ” ಎಂದು ಮಾಹಿತಿ ನೀಡಿದರು.

ಯುದ್ಧದಂತಹ ಪರಿಸ್ಥಿತಿ ಎದುರಾಗಿದೆ. ಸುರಂಗದಿಂದ ಆಗರ್ ಯಂತ್ರದ ಹಾನಿಗೊಳಗಾದ ಭಾಗವನ್ನು ಹೊರತರಲು ಭಾರತೀಯ ವಾಯುಪಡೆಯಿಂದ ಸುಧಾರಿತ ಯಂತ್ರೋ ಪಕರಣಗಳನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ ಎಂದು ತಿಳಿಸಿದರು.