Thursday, 19th September 2024

ಆಂಧ್ರಪ್ರದೇಶ ಸಿಎಂ ತಾಯಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಕರ್ನೂಲ್‌: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ ರೆಡ್ಡಿ ಅವರ ತಾಯಿ ವೈ.ಎಸ್‌ ವಿಜಯಮ್ಮ ಪ್ರಯಾಣಿ ಸುತ್ತಿದ್ದ ಕಾರು ಗುರುವಾರ ಅಪಘಾತಕ್ಕೀಡಾಗಿದೆ.

ಘಟನೆಯಲ್ಲಿ ವಿಜಯಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಜಿ ಶಾಸಕಿ ವಿಜಯಮ್ಮ ಅವರು ತಮ್ಮ ಪತಿ ದಿವಂಗತ ವೈ.ಎಸ್‌ ರಾಜಶೇಖರರೆಡ್ಡಿ ಅವರ ಸ್ನೇಹಿತನ ಕುಟುಂಬವನ್ನು ಭೇಟಿ ಮಾಡಲೆಂದು ಕರ್ನೂಲ್‌ಗೆ ಬಂದಿದ್ದರು.

ಕರ್ನೂಲ್‌ನಿಂದ ಹೊರಟ ಅವರ ಕಾರಿನ ಚಕ್ರದ ಟೈರ್‌ ಒಡೆದು ಅಪಘಾತ ಸಂಭವಿಸಿದೆ. ಗುತ್ತಿ ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ವಿಜಯಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ತಿಂಗಳು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷ ಸ್ಥಾನಕ್ಕೆ ವಿಜಯಮ್ಮ ರಾಜೀ ನಾಮೆ ನೀಡಿದ್ದರು. ತೆಲಂಗಾಣದಲ್ಲಿ ರಾಜಕೀಯ ಪಕ್ಷ ಕಟ್ಟಿರುವ ತಮ್ಮ ಪುತ್ರಿ ವೈ.ಎಸ್‌ ಶರ್ಮಿಳಾ ಅವರ ಪರವಾಗಿ ನಿಲ್ಲುವಂತೆ ರಾಜಕೀಯ ನಾಯಕರು ತಮ್ಮನ್ನು ಒತ್ತಾಯಿಸಿ ರುವುದಾಗಿ ವಿಜಯಮ್ಮ ಹೇಳಿದ್ದರು.

2009 ರಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಆಂಧ್ರ ಪ್ರದೇಶದ ಅಂದಿನ ಮುಖ್ಯ ಮಂತ್ರಿ ರಾಜಶೇಖರ ರೆಡ್ಡಿ ಅವರು ದುರ್ಮರಣಕ್ಕೀಡಾಗಿದ್ದರು. ನಂತರ, ವಿಜಯಮ್ಮ ಕಡಪಾ ಜಿಲ್ಲೆಯ ಪುಲಿವೆಂದುಲ ಕ್ಷೇತ್ರದಿಂದ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.

ಜಗನ್ ಮತ್ತು ವಿಜಯಮ್ಮ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ 2011 ರಲ್ಲಿ ನಡೆದ ಉಪಚುನಾವಣೆಯಲ್ಲಿ, ಇಬ್ಬರೂ ಕ್ರಮವಾಗಿ ಕಡಪ ಲೋಕಸಭೆ ಮತ್ತು ಪುಲಿವೆಂದುಲ ವಿಧಾನಸಭಾ ಕ್ಷೇತ್ರಗಳಿಂದ ದಾಖಲೆಯ ಅಂತರದ ಗೆಲುವು ಸಾಧಿಸಿದ್ದರು.