Friday, 20th September 2024

ಗಾಜಿಪುರ್ ಗಡಿಯಲ್ಲಿ ಮುಂದುವರಿದ ಧರಣಿ: ರೈತರಿಂದ ಜೈ ಜವಾನ್, ಜೈ ಕಿಸಾನ್, ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ

ನವದೆಹಲಿ: ಗಣರಾಜ್ಯೋತ್ಸವ ದಿನ ರಾಜಧಾನಿ ದೆಹಲಿಯಲ್ಲಿ ತೀವ್ರ ಮಟ್ಟದ ಗಲಭೆಯುಂಟಾದರೂ ಪ್ರತಿಭಟನಾ ನಿರತ ರೈತರು ಜೈ ಜವಾನ್, ಜೈ ಕಿಸಾನ್, ಇಂಕ್ವಿಲಾಬ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾ ಗಾಜಿಪುರ್ ಗಡಿ(ದೆಹಲಿ-ಉತ್ತರ ಪ್ರದೇಶ)ಯಲ್ಲಿ ಧರಣಿ ಮುಂದುವರಿಸಿರುವುದು ಕಂಡುಬಂತು.

ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಉತ್ತರ ಪ್ರದೇಶ ಮತ್ತು ಪ್ರಾಂತೀಯ ಸೇನಾ ಕಾನ್ಸ್ ಸ್ಟೇಬಲ್ ಗಳು ಪ್ರತಿಭಟನಾ ಸ್ಥಳವನ್ನು ಕಳೆದ ರಾತ್ರಿ ತೊರೆದಿದ್ದಾರೆ.

ಗಾಜಿಪುರ್ ಗಡಿಭಾಗವನ್ನು ಬಂದ್ ಮಾಡಲಾಗಿದೆ. ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ 24, ರಾಷ್ಟ್ರೀಯ ಹೆದ್ದಾರಿ 9, ರಸ್ತೆ ಸಂಖ್ಯೆ 56, 57ಎ, ಕೊಂಡ್ಲಿ, ಪೇಪರ್ ಮಾರುಕಟ್ಟೆ, ಟೆಲ್ಕೊ ಟಿ ಪಾಯಿಂಟ್, ಇಡಿಎಂ ಮಾಲ್, ಅಕ್ಷರಧಾಮ, ನಿಜಾಮುದ್ದೀನ್ ಕಟ್ಟಾಗಳಲ್ಲಿ ಬದಲಾಯಿಸಲಾಗಿದೆ. ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ತೀವ್ರವಾಗಿ ಕಂಡುಬಂದಿದೆ.

ಇನ್ನು ಸಿಂಘು, ಔಚಂಡಿ, ಮಂಗೇಶ್, ಸಬೊಲಿ, ಪಿಯು ಮನಿಯಾರಿ ಗಡಿಭಾಗಗಳನ್ನು ಮುಚ್ಚಲಾಗಿದೆ. ಲಾಂಪುರ್, ಸಫಿಯಾ ಬಾದ್, ಸಿಂಘು ಶಾಲೆ ಮತ್ತು ಪಲ್ಲ ಟೋಲ್ ಟ್ಯಾಕ್ಸ್ ಗಡಿಭಾಗಗಳನ್ನು ತೆರೆಯಲಾಗಿದೆ. ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ 44ರ ಪಕ್ಕ ಡಿಎಸ್ ಐಡಿಸಿ ನರೇಲಾದಿಂದ ಬದಲಾಯಿಸಲಾಗಿದೆ. ಹೊರ ರಿಂಗ್ ರಸ್ತೆ, ಜಿಟಿಕೆ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಹೋಗದಂತೆ ದೆಹಲಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಗಾಜಿಪುರ್ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಲು ಮುಂದಾಗಿದೆ. ವಲಸೆ ಅಧಿಕಾರಿಗಳು ಹೊರಡಿಸುವ ನೊಟೀಸ್ ಲುಕ್ ಔಟ್ ಸುತ್ತೋಲೆಯಾಗಿದ್ದು ಆರೋಪಿ ವ್ಯಕ್ತಿಗಳು ದೇಶ ಬಿಟ್ಟು ಹೋಗದಂತೆ ಕಾನೂನಿನಲ್ಲಿರುವ ನಿಯಮವಾಗಿದೆ.