Thursday, 19th September 2024

ಸಂಸದ ಅಶೋಕ್ ಗಸ್ತಿ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆ ದಿನಾಂಕ ಪ್ರಕಟ

ನವದೆಹಲಿ: ಕೋವಿಡ್’ನಿಂದಾಗಿ ಸೆ.17ರಂದು ನಿಧನರಾದ ಸಂಸದ ಅಶೋಕ್ ಗಸ್ತಿ ಅವರಿಂದ ತೆರ ವಾದ ಕರ್ನಾಟಕದ ರಾಜ್ಯ ಸಭಾ ಸ್ಥಾನಕ್ಕೆ ಉಪಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಡಿಸೆಂಬರ್ 1ರಂದು ಮತದಾನ ಮತ್ತು ಮತ ಎಣಿಕೆ ನಡೆಯಲಿದೆ.

ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗುವ ಎಲ್ಲರೂ ಫೇಸ್ ಮಾಸ್ಕ್ ಧರಿಸಬೇಕು ಎಂದು ಆಯೋಗ ಹೇಳಿದೆ. ಡಿ.1ರಂದು ರಾಜ್ಯಸಭೆ ಸ್ಥಾನಕ್ಕಾಗಿನ ಚುನಾವಣೆ ಜತೆಗೇ ಉತ್ತರ ಪ್ರದೇಶ ವಿಧಾನ ಪರಿಷತ್ತಿನ 11 ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಮತ್ತು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಐದು ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ ಎಂದು ಪ್ರಕಟಣೆ ಹೇಳಿದೆ.

ಬಿಜೆಪಿ ಮುಖಂಡ ಗಸ್ತಿ ಅವರು ಜುಲೈನಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಕೋವಿಡ್ -19 ಕಾರಣ ಸಂಸತ್ತಿನ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.