Thursday, 19th September 2024

Kangana Ranaut: ‘ಎಮರ್ಜೆನ್ಸಿ’ಬಿಡುಗಡೆ ವಿಳಂಬದಿಂದಾದ ನಷ್ಟವನ್ನು ಬಂಗಲೆ ಮಾರಿ ತೀರಿಸುವೆ ಎಂದ ಕಂಗನಾ

Kangana Ranaut

ಕಂಗನಾ ರಣಾವತ್ (Kangana Ranaut) ಮುಖ್ಯಪಾತ್ರ ವಹಿಸಿರುವ ಎಮರ್ಜೆನ್ಸಿ ಸಿನಿಮಾ ಕೋರ್ಟ್ ತಡೆಯ ಹಿನ್ನೆಲೆಯಲ್ಲಿ ಬಿಡುಗಡೆಗೊಳ್ಳುತ್ತಿಲ್ಲ. ಇದರಿಂದ ತಮಗೆ ನಷ್ಟವಾಗುತ್ತಿದೆ ಎಂದು ನಟಿ ಹಾಗೂ ಸಂಸದೆ ಕಂಗನಾ ಹೇಳಿಕೊಂಡಿದ್ದಾಎ. ಈ ನಷ್ಟವನ್ನು ಸರಿದೂಗಿಸಲು ಮುಂಬಯಿನ ಬಾಂದ್ರಾದಲ್ಲಿರುವ (Bandra in Mumbai) ಪಾಲಿ ಹಿಲ್ ಬಂಗಲೆಯನ್ನು (Pali Hill bungalow) ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಎಮರ್ಜೆನ್ಸಿ ಚಿತ್ರ ಈಗಾಗಲೇ ಬಿಡುಗಡೆಯಾಗಬೇಕಿತ್ತು. ನಾನು ನನ್ನ ಎಲ್ಲಾ ಸಂಪತ್ತನ್ನು ಚಿತ್ರಕ್ಕಾಗಿ ವಿನಿಯೋಗಿಸಿದ್ದೇನೆ. ಆದರೆ ಈಗ ಚಿತ್ರ ಬಿಡುಗಡೆಯಾಗಿಲ್ಲ. ಆದ್ದರಿಂದ ಹೇಗಾದರೂ ಬಿಕ್ಕಟ್ಟಿನ ಸಮಯದಿಂದ ಪಾರಾಗಬೇಕಿದೆ. ಅದಕ್ಕಾಗಿ ಈ ಆಸ್ತಿಯನ್ನು ಮಾರಾಟ ಮಾಡಲು ನಿರ್ಣಯ ಕೈಗೊಂಡಿರುವುದಾಗಿ ಅವರು ಹೇಳಿದರು.

Kangana Ranaut

ಈ ತಿಂಗಳ ಆರಂಭದಲ್ಲಿ ನಟಿ ತನ್ನ ವಿವಾದಿತ ಆಸ್ತಿಯನ್ನು 32 ಕೋಟಿ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿರುವುದಾಗಿ ವರದಿಯೊಂದು ಬಹಿರಂಗ ಪಡಿಸಿತ್ತು.

ಕಂಗನಾ ಅವರು 2017ರ ಸೆಪ್ಟೆಂಬರ್ ನಲ್ಲಿ 20.7 ಕೋಟಿ ರೂಪಾಯಿಗೆ ಈ ಆಸ್ತಿಯನ್ನು ಖರೀದಿಸಿದ್ದಾರೆ. 2022ರ ಡಿಸೆಂಬರ್ ನಲ್ಲಿ ಆಸ್ತಿಯ ಮೇಲೆ ಐಸಿಐಸಿಐ ಬ್ಯಾಂಕ್‌ನಿಂದ 27 ಕೋಟಿ ರೂ. ಸಾಲವನ್ನು ತೆಗೆದುಕೊಂಡಿದ್ದರು. ಬಂಗಲೆಯನ್ನು ಅವರ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ಕಚೇರಿಯಾಗಿ ಬಳಸಲಾಗುತ್ತಿತ್ತು.

2020ರಲ್ಲಿ ಬೃಹತ್ ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ (BMC) ಮನೆ ನಿರ್ಮಾಣದಲ್ಲಿ ಅಕ್ರಮ ನಡೆದಿರುವುದನ್ನು ಪತ್ತೆ ಹಚ್ಚಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಅಕ್ರಮ ನಿರ್ಮಾಣ ಎಂದು ಉಲ್ಲೇಖಿಸಿ ಕಂಗನಾ ಅವರ ಕಚೇರಿಯ ಭಾಗಗಳನ್ನು ಕೆಡವಿತ್ತು. ಬಾಂಬೆ ಹೈಕೋರ್ಟ್‌ನಿಂದ ತಡೆಯಾಜ್ಞೆಯ ಅನಂತರ ಕೆಡವುದನ್ನು ನಿಲ್ಲಿಸಲಾಗಿತ್ತು. ಕಂಗನಾ ಬಿಎಂಸಿ ವಿರುದ್ಧ ಮೊಕದ್ದಮೆ ಹೂಡಿ ಬಿಎಂಸಿಯಿಂದ 2 ಕೋಟಿ ರೂ. ಪರಿಹಾರಕ್ಕೆ ಬೇಡಿಕೆಯಿಟ್ಟರು. ಆದರೆ 2023ರ ಮೇ ತಿಂಗಳಲ್ಲಿ ಅವರು ತಮ್ಮ ಬೇಡಿಕೆಗಳನ್ನು ಕೈಬಿಟ್ಟಿದ್ದರು.

Kangana Ranaut

ಈ ಮಧ್ಯೆ ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಚಿತ್ರದ ಕುರಿತು ಮಾತನಾಡುತ್ತಾ ಚಿತ್ರವು ಸೆಪ್ಟೆಂಬರ್ 6 ರಂದು ಥಿಯೇಟರ್‌ಗಳಲ್ಲಿ ಬರಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ ಇನ್ನೂ ಬಾಕಿ ಉಳಿದಿರುವ ಕಾರಣ ಅದನ್ನು ಮುಂದೂಡಲಾಗಿದೆ. ಚಿತ್ರವು ಬಹಿಷ್ಕಾರ ಮತ್ತು ನಿಷೇಧದ ಬೆದರಿಕೆಯನ್ನೂ ಎದುರಿಸುತ್ತಿದೆ ಎಂದು ಹೇಳಿದರು.

ನಮ್ಮ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ಈ ಬಗ್ಗೆ ನಮಗೆ ಹೇಳಿಲ್ಲ. ಒಳ್ಳೆಯವರಿಗೆ ಇದು ಕಾಲವಲ್ಲ ಎಂದು ಕಂಗನಾ ಹೇಳಿದ್ದಾರೆ.

Stree 2: ಕೆಜಿಎಫ್ ದಾಖಲೆ ಮುರಿದ ಸ್ತ್ರೀ 2: 32 ನೇ ದಿನ ದಿನದ ಕಲೆಕ್ಷನ್ ಎಷ್ಟು ಗೊತ್ತೇ?

ನನ್ನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದಕ್ಕೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಸಿಕ್ಕಿದೆ. 4 ಇತಿಹಾಸಕಾರರು ನಮ್ಮ ಚಲನಚಿತ್ರಗಳನ್ನು ಮೇಲ್ವಿಚಾರಣೆ ಮಾಡಿದ್ದಾರೆ. ನಮ್ಮ ಬಳಿ ಸೂಕ್ತ ದಾಖಲೆಗಳಿವೆ. ನನ್ನ ಸಿನಿಮಾದಲ್ಲಿ ಯಾವುದೇ ತಪ್ಪಿಲ್ಲ. ಆದರೆ ಕೆಲವರು ಭಿಂದ್ರನ್‌ವಾಲೆಯನ್ನು ಸಂತ, ಕ್ರಾಂತಿಕಾರಿ ಅಥವಾ ನಾಯಕ ಎಂದು ಕರೆಯುತ್ತಾರೆ. ಅಂತೆಯೇ ನನಗೂ ಬೆದರಿಕೆಗಳು ಬಂದಿವೆ. ಹಿಂದಿನ ಸರ್ಕಾರಗಳು ಖಲಿಸ್ತಾನಿಗಳನ್ನು ಭಯೋತ್ಪಾದಕರು ಎಂದು ಘೋಷಿಸಿದ್ದವು. ಆತ ಸಂತನಲ್ಲ. ಯಾಕೆಂದರೆ ಅವನು ದೇವಸ್ಥಾನದಲ್ಲಿ ಎಕೆ 47 ಹಿಡಿದು ಕುಳಿತಿದ್ದ ಎಂದು ಕಂಗನಾ ತಿಳಿಸಿದ್ದಾರೆ.