Thursday, 19th September 2024

ಸಂತ್ರಸ್ತರಿಗೆ ಪರಿಹಾರ ನೀಡಲು ₹4 ಕೋಟಿ ರೂಪಾಯಿ ಜಮೆ ಮಾಡಿ: ಎನ್‌ಜಿಟಿ

ನವದೆಹಲಿ: ರಾಜಸ್ಥಾನದ ಬಿಲ್ವಾಡ ಜಿಲ್ಲೆಯಲ್ಲಿ ಜಿಂದಾಲ್‌ ಸಾ ಲಿಮಿಟೆಡ್‌ ಅಕ್ರಮವಾಗಿ ನಡೆಸಿದ ಗಣಿ ಸ್ಫೋಟದ ಪರಿಣಾಮ ಮನೆಗಳು ಹಾನಿಗೊಂಡಿದ್ದು, ಸಂತ್ರಸ್ತರಿಗೆ ಪರಿಹಾರ ಒದಗಿಸಲು ₹4 ಕೋಟಿ ರೂಪಾಯಿ ಜಮೆ ಮಾಡುವಂತೆ ಜಿಂದಾಲ್‌ ಸಂಸ್ಥೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನ ನೀಡಿದೆ.

ನ್ಯಾಯಮಂಡಳಿ ಅಧ್ಯಕ್ಷ ನ್ಯಾ.ಆದರ್ಶ್‌ ಕುಮಾರ್‌ ಗೋಯಲ್ ನೇತೃತ್ವದ ಪೀಠ ಆದೇಶ ಹೊರಡಿಸಿದೆ. ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟದಿಂದಾಗಿ ಮನೆಗಳು ಹಾನಿಗೊಳಗಾಗಿವೆ ಎಂದು 2019ರಲ್ಲಿ ರಾಜಸ್ಥಾನ ಮಾಲಿನ್ಯ ನಿಯಂತ್ರಣ ಮಂಡಳಿ(ಪಿಸಿಬಿ) ಸಲ್ಲಿಸಿದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. 375 ಸಂತ್ರಸ್ತರಿಗೆ ತಲಾ ₹1ಲಕ್ಷ ನೀಡಲಾಗುವುದು’ ಎಂದು ಪೀಠವು ಹೇಳಿದೆ. ಈ ಪ್ರಕರಣದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ ₹4 ಕೋಟಿ ಜಮಾ ಮಾಡುವಂತೆ ಜಿಂದಾಲ್‌ ಸಾ ಲಿಮಿಟೆಡ್‌ಗೆ ಪೀಠವು ಸೂಚಿಸಿದೆ.

ಗಣಿಗಾರಿಕೆ ವೇಳೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ಗಣಿಗಾರಿಕೆ ಸ್ಥಗಿತಗೊಳಿಸುವ ಎಲ್ಲಾ ಅಧಿಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಇದೆ’ ಎಂದು ಎನ್‌ಜಿಟಿ ಎಚ್ಚರಿಸಿದೆ.

‘ಸಂತ್ರಸ್ತರಿಗೆ ವಿತರಿಸಿದ ನಂತರ ಉಳಿದ ಹಣವನ್ನು ಪರಿಸರ ಸಂರಕ್ಷಣಾ ಕಾರ್ಯಗಳಿಗೆ ಬಳಸಬೇಕು. ಈ ಕಾರ್ಯವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಎರಡು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ರಾಜಸ್ಥಾನದ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಇಲಾಖೆ ಇದರ ಮೇಲ್ವಿಚಾರಣೆ ನಡೆಸಬೇಕು’ ಪೀಠವು ತಿಳಿಸಿದೆ.

Leave a Reply

Your email address will not be published. Required fields are marked *