Sunday, 27th October 2024

Prakash Raj:‌ ಭಾರೀ ಸಂಚಲನ ಮೂಡಿಸಿದ ಪ್ರಕಾಶ್‌ ರಾಜ್‌ ಟ್ವೀಟ್‌; ಗಾಂಧಿ ಜಯಂತಿ ಪೋಸ್ಟ್‌ನಲ್ಲೇನಿತ್ತು?

prakash raj

ನವದೆಹಲಿ: ಸದಾ ಒಂದಿಲ್ಲೊಂದು ಟ್ವೀಟ್‌ ಮಾಡುವ ಮೂಲಕ ಸುದ್ದಿಯಲ್ಲಿರುವ ಬಹುಭಾಷಾ ನಟ ಪ್ರಕಾಶ್‌ ರಾಜ್‌(Prakash Raj) ಅವರ ಮತ್ತೊಂದು ಎಕ್ಸ್‌ ಪೋಸ್ಟ್‌ ಎಲ್ಲರ ಗಮನ ಸೆಳೆದಿದೆ. ಸ್ವಲ್ಪ ಮಟ್ಟಿಗೆ ಅದು ವಿವಾದವನ್ನೂ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು. ಗಾಂಧಿ ಜಯಂತಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರೀಜಿಯವರ ಜನ್ಮದಿನದ ಹಿನ್ನೆಲೆ ಎಕ್ಸ್‌ನಲ್ಲಿ ಪ್ರಕಾಶ್‌ ರಾಜ್‌, ಪೋಸ್ಟ್‌ ಮಾಡಿದ್ದೂ, ಇದು ಭಾರೀ ಸಂಚಲನ ಮೂಡಿಸಿದೆ.

ಏನಿದು ಪೋಸ್ಟ್‌?

ಮಹಾತ್ಮ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಫೋಟೋಗಳನ್ನು ಅವರವರ ಘೋಷ ವಾಕ್ಯ, ಹೇಳಿಕೆಗಳ ಜತೆ ಪ್ರಕಾಶ್‌ ರಾಜ್‌ ಪೋಸ್ಟ್‌ ಮಾಡಿದ್ದಾರೆ. ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು. ‘ನೀವು ಅಲ್ಪಸಂಖ್ಯಾತರ ಭಾಗವಾಗಿದ್ದರೂ.. ಸತ್ಯ ಯಾವಾಗಲೂ ಸತ್ಯ’ ಎಂದು ಗಾಂಧೀಜಿ ಹೇಳಿದರು ಮತ್ತು ‘ನಮ್ಮಲ್ಲಿ ದೇವಾಲಯಗಳು, ಮಸೀದಿಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳಿವೆ. ಆದರೆ ನಾವು ಅವರನ್ನು ರಾಜಕೀಯಕ್ಕೆ ತರುವುದಿಲ್ಲ. ಇದೇ ನಮಗೂ ಪಾಕಿಸ್ತಾನಕ್ಕೂ ಇರುವ ವ್ಯತ್ಯಾಸ’’ ಎಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ.

ರಾಜ್ ಅವರ ಟ್ವೀಟ್ ಕೋಮು ಸೌಹಾರ್ದತೆ ಮತ್ತು ರಾಜಕೀಯದಲ್ಲಿ ಧರ್ಮದ ಹಸ್ತಕ್ಷೇಪದ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ತಿಳಿಸುವಂತಿದೆ. ತಿರುಪತಿ ಲಡ್ಡು ವಿವಾದದವನ್ನು ಗುರಿಯಾಗಿಸಿ ಈ ಪೋಸ್ಟ್‌ ಮಾಡಿದ್ದಾರೆ ಎಂಬುದು ಹಲವರ ವಾದವಾಗಿದೆ. ಪ್ರಕಾಶ್ ರಾಜ್ ಅವರ ಟ್ವೀಟ್ ಗಾಂಧಿ ಮತ್ತು ಶಾಸ್ತ್ರಿ ಅವರಂತಹ ನಾಯಕರು ಪ್ರತಿಪಾದಿಸಿದ ಮೂಲಭೂತ ತತ್ವಗಳನ್ನು ನೆನಪಿಸುತ್ತದೆ ಎಂದು ಇನ್ನು ಕೆಲವರು ಬೆಂಬಲ ಸೂಚಿಸಿದ್ದಾರೆ.

ಕೆಲವು ದಿನಗಳ ಹಿಂದೆ ತಿರುಪತಿ ಲಡ್ಡು ವಿವಾದದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಪ್ರಕಾಶ್‌ ರಾಜ್‌ ಮತ್ತು ಆಂ‍ಧ್ರ ಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಲಡ್ಡು ವಿವಾದಕ್ಕೂ ಪ್ರಕಾಶ್ ರಾಜ್ ಗೂ ಏನು ಸಂಬಂಧ? ಅವರು ಯಾಕೆ ಮಾತನಾಡುತ್ತಿದ್ದಾರೆ? ಎಂದು ಹೇಳಿ ಗುಡುಗಿದ್ದರು. ಅದಕ್ಕೆ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ಪ್ರಕಾಶ್‌ ರಾಜ್‌, ನನ್ನ ಟ್ವೀಟ್ ಅನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ..? ನಾನು ವಿದೇಶದಲ್ಲಿದ್ದೇನೆ, ಹಿಂದಿರುಗಿದ ನಂತರ ನಿಮಗೆ ಉತ್ತರ ನೀಡುತ್ತೇನೆ ಎಂದು ಹೇಳಿದ್ದರು. ಇದಾದ ಬಳಿಕವೂ ಇವರಿಬ್ಬರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ ಮುಂದುವರೆದಿತ್ತು.

ಈ ಸುದ್ದಿಯನ್ನೂ ಓದಿ: Pawan Kalyan: ತಿರುಪತಿ ಭೇಟಿಗೂ ಮುನ್ನ ಪತ್ರವೊಂದಕ್ಕೆ ಸಹಿ ಹಾಕಿದ ಪವನ್‌ ಕಲ್ಯಾಣ್‌ ಪುತ್ರಿ; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌