Friday, 20th September 2024

ರೈಸ್ ಮಿಲ್‌ನಲ್ಲಿ ಅಗ್ನಿ ಅವಘಡ: 15 ಸಾವಿರ ಕ್ವಿಂಟಾಲ್ ಧಾನ್ಯ ಹಾನಿ

ತೆಲಂಗಾಣ: ರೈಸ್ ಮಿಲ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಉಂಟಾ ಗಿರುವ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಅವಘಡದಿಂದ ರೂ. 2 ಕೋಟಿ ಆಸ್ತಿ ಹಾನಿ, 15 ಸಾವಿರ ಕ್ವಿಂಟಾಲ್ ಧಾನ್ಯ ಹಾಗೂ 5 ಸಾವಿರ ಕ್ವಿಂಟಾಲ್ ಅಕ್ಕಿ ಹಾನಿಯಾಗಿದೆ.

ಮಹಬೂಬಾಬಾದ್ ಜಿಲ್ಲೆಯ ಕೇಸಮುದ್ರಂ ಮಂಡಲದ ಭೂಕ್ಯರಂತಂಡ ಗ್ರಾಮದಲ್ಲಿ ಮಹದೇವ ಇಂಡಸ್ಟ್ರೀಸ್ ಅಡಿಯಲ್ಲಿ ಎಂದಿನಂತೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಂಜೆಯವರೆಗೂ ಇದ್ದು ನಂತರ ಮನೆಗೆ ತೆರಳಿದರು. ನಂತರ ಮುಂಜಾನೆ ಕಾರ್ಮಿಕರು ಅಲ್ಲಿಗೆ ತಲುಪುವ ವೇಳೆಗೆ ಒಳಗಿನಿಂದ ಹೊಗೆ ಬರಲಾರಂಭಿಸಿದ್ದನ್ನು ಕಂಡು ತಕ್ಷಣ ರೈಸ್ ಮಿಲ್ ಮಾಲೀಕರಿಗೆ, ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಯಿತು.

ಸಿಬ್ಬಂದಿ ಗಿರಣಿ ಹಿಂದಿನ ಗೋಡೆಯನ್ನು ತೆಗೆದು ಹಾಕಿದ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಯಿತು. ಬೆಂಕಿಯಲ್ಲಿ 15 ಸಾವಿರ ಕ್ವಿಂಟಾಲ್ ಧಾನ್ಯ, 5 ಸಾವಿರ ಕ್ವಿಂಟಾಲ್ ಅಕ್ಕಿ ಸುಟ್ಟು ಭಸ್ಮವಾಗಿದೆ. ಯಂತ್ರಗಳು ಸುಟ್ಟು ಕರಕಲಾಗಿವೆ. ಈ ಅವಘಡದಲ್ಲಿ ಸುಟ್ಟು ಕರಕಲಾದ ನಂತರ ಉಳಿದ ಧಾನ್ಯವನ್ನು ಮತ್ತೊಂದು ಸ್ಥಳೀಯ ರೈಸ್ ಮಿಲ್‌ಗೆ ಕೊಂಡೊಯ್ಯಲಾಯಿತು.. ಬೆಂಕಿಯನ್ನು ಹತೋಟಿಗೆ ತರಲು ಸಿಬ್ಬಂದಿ ಹರಸಾಹಸ ಪಟ್ಟರು.