Friday, 25th October 2024

ಪಂಜಾಬ್’ನಲ್ಲಿ ಡಿ.1 ರಿಂದ ರಾತ್ರಿಯಿಡೀ ನಿಷೇದಾಜ್ಞೆ: ಸಿಎಂ ಅಮರೀಂದರ್ ಸಿಂಗ್

ಅಮೃತಸರ್: ಪಂಜಾಬ್ ನಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಸಲುವಾಗಿ ರಾತ್ರಿಯಿಂದ ಬೆಳಗಿನ ವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಡಿ.1ರಿಂದ ರಾಜ್ಯದ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ರಾತ್ರಿಯಿಡೀ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಅವಧಿ ಯಲ್ಲಿ ಆದೇಶ ಉಲ್ಲಂಘಿಸಿ ನಡೆದುಕೊಂಡವರ ವಿರುದ್ಧ ಶಿಸ್ತು ಕ್ರಮದ ಜೊತೆಗೆ 1000 ರೂಪಾಯಿ ದಂಡವನ್ನು ವಿಧಿಸಲಾಗು ತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನಗರ ಮತ್ತು ಪಟ್ಟಣಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನಿಷೇಧಾಜ್ಞೆ ನಿಯಮಗಳು ಜಾರಿಯಲ್ಲಿರಲಿದೆ. ಎಲ್ಲ ಅಂಗಡಿ-ಮುಂಗಟ್ಟು, ಹೋಟೆಲ್ ಮತ್ತು ರೆಸ್ಟೋರೆಂಟ್, ಮದುವೆ ಸಭಾಂಗಣಗಳನ್ನು ಮುಚ್ಚುವಂತೆ ಆದೇಶದಲ್ಲಿ ಸೂಚಿಸ ಲಾಗಿದೆ. ಡಿ.15ರ ನಂತರ ರಾಜ್ಯದಲ್ಲಿ ಕೊವಿಡ್-19 ಪರಿಸ್ಥಿತಿಯನ್ನು ನೋಡಿಕೊಂಡು ನಿಯಮವನ್ನು ಮರು ಪರಿಶೀಲನೆ ನಡೆಸ ಲಾಗುತ್ತದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ 1,47,665 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಇದುವರೆಗೂ ವರದಿಯಾಗಿವೆ. ಈ ಪೈಕಿ, 1,36,178 ಮಂದಿ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, 6834 ಸಕ್ರಿಯ ಪ್ರಕರಣಗಳು ಇರುವುದು ಗೊತ್ತಾಗಿದೆ. ಪಂಜಾಬ್ ನಲ್ಲಿ ಮಹಾ ಮಾರಿಗೆ ಈವರೆಗೂ 4653 ಜನರು ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 92 ಲಕ್ಷದ ಗಡಿ ದಾಟಿದೆ. ಒಂದೇ ದಿನ 44376 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 37,816 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 481 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.