Thursday, 19th September 2024

ಆತ್ಮಹತ್ಯೆ ಬೇಡ, NEETನ್ನು ರದ್ದುಗೊಳಿಸಲಾಗುವುದು: ಸಿಎಂ ಎಂ.ಕೆ.ಸ್ಟಾಲಿನ್

ಚೆನ್ನೈ: ನೀಟ್ ಪ್ರವೇಶ ಪರೀಕ್ಷೆಯಲ್ಲಿ ಎರಡನೇ ಬಾರಿಯೂ ಉತ್ತೀರ್ಣರಾಗಲು ಸಾಧ್ಯವಾಗದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಆತನ ತಂದೆ ಕೂಡ ಸಾವಿಗೆ ಶರಣಾಗಿದ್ದು, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ಮಾಡದೇ ಆತ್ಮಸ್ಥೈರ್ಯದಿಂದ ಪರೀಕ್ಷೆಗಳನ್ನು ಎದುರಿಸ ಬೇಕು ಎಂದು ಹೇಳಿದ್ದಾರೆ.

ನೀಟ್ ವಿದ್ಯಾರ್ಥಿ ಜಗದೀಶ್ವರ್ ಹಾಗೂ ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಘಾತ ತಂದಿದೆ. ಚೆನ್ನಾಗಿ ಓದುತ್ತಿದ್ದ ಮಗನನ್ನು ವೈದ್ಯನನ್ನಾಗಿ ನೋಡ ಬೇಕು ಎಂದು ಹೆತ್ತವರು ಬಯಸಿದ್ದರು. ಆದರೆ ಜಗದೀಶ್ವರ್ ನೀಟ್ ಪರೀಕ್ಷೆಯ ಬಲಿಪೀಠದ ಮೇಲೆ ಬಲಿಯಾದವರ ಪಟ್ಟಿಗೆ ಸೇರಿಕೊಂಡಿದ್ದಾನೆ. ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ನೀಟ್ ನಿಂದಾಗಿ ಆತ್ಮಹತ್ಯೆ ಹೆಚ್ಚು ವರದಿಯಾಗುತ್ತಿದೆ ಎಂದು ಸ್ಟಾಲಿನ್ ಕಳವಳ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಬಾರದು. ನಿಮ್ಮ ಬೆಳವಣಿಗೆಗೆ ಅಡ್ಡಿಯಾಗಿರುವ NEETನ್ನು ರದ್ದುಗೊಳಿಸಲಾಗುವುದು ಎಂದು ಭರವಸೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.