Thursday, 19th September 2024

ರೈತರ ವಿರುದ್ಧದ 900 ಕೇಸ್ ಹಿಂಪಡೆದ ಯೋಗಿ ಸರಕಾರ

ಲಖನೌ: ರೈತರ ವಿರುದ್ಧದ ಸುಮಾರು 900 ಕೇಸ್ ಗಳನ್ನು ಹಿಂತೆಗೆದುಕೊಳ್ಳಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಯೋಗಿ ಸರಕಾರ ಆದೇಶ ಹೊರಡಿಸಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ( ಗೃಹ) ಅವನಿಶ್ ಅವಾಸ್ತಿ ರೈತರ ಮೇಲಿನ ಕೇಸ್ ಹಿಂಪಡೆಯುವ ಆದೇಶವನ್ನು ಹೊರಡಿಸಿದ್ದಾರೆ. ಪೈರನ್ನು ಸುಡುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣವಾದ ಆರೋಪದ ಮೇರೆಗೆ ರೈತರ ಮೇಲೆ ಕೇಸ್ ಹಾಕಲಾಗಿತ್ತು.

ರಾಜ್ಯದ ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿ ರೈತರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಆದ್ದರಿಂದ ಪೈರನ್ನು ಸುಟ್ಟಿದ್ದಕ್ಕಾಗಿ ರೈತರ ವಿರುದ್ಧ ಹಾಕಲಾಗಿದ್ದ 868 ಕೇಸ್ ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅವಾಸ್ತಿ ತಿಳಿಸಿದ್ದಾರೆ.

ಆರ್ಥಿಕ ತೊಂದರೆಯಿಂದ ಸಂಕಷ್ಟ ಪಡುತ್ತಿರುವ ರೈತರ ಹಿತಾಸಕ್ತಿ ರಕ್ಷಿಸುವ ಸಲುವಾಗಿ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿದ್ದ ಕೇಸ್ ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಆದೇಶಿಸಿರುವುದಾಗಿ ಅವಾಸ್ತಿ ಹೇಳಿದ್ದಾರೆ.

ಪೈರನ್ನು ಸುಡುವುದಕ್ಕಾಗಿ ರೈತರ ಮೇಲೆ ಹಾಕಲಾಗಿರುವ ಕೇಸ್ ಗಳನ್ನು ಹಿಂಪಡೆಯುವುದಾಗಿ ಈ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಭರವಸೆ ನೀಡಿದ್ದರು.

Leave a Reply

Your email address will not be published. Required fields are marked *