Friday, 20th September 2024

Zakir Naik: ʻವಕ್ಫ್‌ ಕಾಯ್ದೆಯನ್ನು ಒಗ್ಗಟ್ಟಾಗಿ ವಿರೋಧಿಸಿʼ- ಮುಸ್ಲಿಮರಿಗೆ ಜಾಕಿರ್‌ ನಾಯ್ಕ್‌ ಕರೆ; ಕಿರಣ್‌ ರಿಜಿಜು ಖಡಕ್‌ ವಾರ್ನಿಂಗ್‌

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ವಕ್ಫ್‌ ತಿದ್ದುಪಡಿ ಕಾಯ್ದೆ(Waqf Amendment Bill)ಯನ್ನು ಒಗ್ಗಟ್ಟಾಗಿ ನಿಂತು ವಿರೋಧಿಸುವಂತೆ ಭಾರತದ ಮುಸ್ಲಿಮರಿಗೆ ವಿವಾದಾತ್ಮಕ ಧರ್ಮ ಪ್ರಚಾರ ಜಾಕಿರ್‌ ನಾಯ್ಕ್‌(Zakir Naik) ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಜಾಕಿರ್‌ ನಾಯ್ಕ್‌, ಭಾರತೀಯ ವಕ್ಫ್ ಆಸ್ತಿಗಳನ್ನು ಉಳಿಸಿ, ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿ! ವಕ್ಫ್‌ನ ಪಾವಿತ್ರ್ಯತೆಯನ್ನು ರಕ್ಷಿಸಲು ಮತ್ತು ಮುಂದಿನ ಪೀಳಿಗೆಗೆ ಅದರ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ನಿಲ್ಲೋಣ ಎಂದು ನಾಯ್ಕ್‌ ಟ್ವೀಟ್ ಮಾಡಿದ್ದಾರೆ.

“ವಕ್ಫ್‌ನ ಪವಿತ್ರ ಸ್ಥಾನಮಾನವನ್ನು ಉಲ್ಲಂಘಿಸುವ ಮತ್ತು ಇಸ್ಲಾಮಿಕ್ ಸಂಸ್ಥೆಗಳ ಭವಿಷ್ಯದ ಮೇಲೆ ದುಷ್ಟ ಪರಿಣಾಮಗಳನ್ನು ಉಂಟುಮಾಡುವ ಈ ದುಷ್ಟತನವನ್ನು ನಿಲ್ಲಿಸಲು ಇದು ಭಾರತದ ಮುಸ್ಲಿಮರಿಗೆ ತುರ್ತು ಕರೆಯಾಗಿದೆ. ಈ ಮಸೂದೆಯನ್ನು ಅಂಗೀಕರಿಸಲು ನಾವು ಅನುಮತಿಸಿದರೆ ನಾವು ಅಲ್ಲಾನ ಕೋಪ ಮತ್ತು ನಂತರದ ಪೀಳಿಗೆಯ ಶಾಪಕ್ಕೆ ಗುರಿಯಾಗುತ್ತೇವೆ. ದುಷ್ಟತನವನ್ನು ನಿಲ್ಲಿಸಿ. ವಕ್ಫ್ ತಿದ್ದುಪಡಿ ಮಸೂದೆ ಬೇಡ ಎಂದು ಹೇಳಿ! ಎಂದು ಜಾಕಿರ್‌ ನಾಯ್ಕ್‌ ಪೋಸ್ಟ್‌ ಮಾಡಿದ್ದಾರೆ.

ಭಾರತದ ಕನಿಷ್ಠ 5 ಮಿಲಿಯನ್ ಮುಸ್ಲಿಮರು ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಬೇಕು. ಮುಸ್ಲಿಂ ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವುದನ್ನು ತಡೆಯದಿದ್ದರೆ ಭಾರತದ ಮುಸ್ಲಿಮರಾಗಿ ನಾವು ಅದಕ್ಕೆ ಜವಾಬ್ದಾರರಾಗುತ್ತೇವೆ ಎಂದು ಜಾಕಿರ್ ನಾಯ್ಕ್ ಪೋಸ್ಟ್ ಮಾಡಿದ್ದಾರೆ.

ಕಿರಣ್‌ ರಿಜಿಜು ತಿರುಗೇಟು

ಇನ್ನು ಜಾಕಿರ್‌ ನಾಯ್ಕ್‌ ಅವರ ಈ ಸಂದೇಶ ಕೇಂದ್ರ ಸಚಿವ ಕಿರಣ್‌ ರಿಜಿಜು ತಿರುಗೇಟು ನೀಡಿದ್ದು, ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ದಯವಿಟ್ಟು ನಮ್ಮ ಅಮಾಯಕ ಮುಸ್ಲಿಮರನ್ನು ದಾರಿ ತಪ್ಪಿಸಬೇಡಿ. ಭಾರತವು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದ್ದು, ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದಾರೆ. ಇಂತಹ ದಾರಿ ತಪ್ಪಿಸುವ ಪ್ರಯತ್ನ ಬೇಡ ಎಂದು ಟ್ವೀಟ್‌ ಮಾಡಿದ್ದಾರೆ.

ಏನಿದು ವಕ್ಫ್‌ ಕಾಯ್ದೆ?

ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಕಾರಣಕ್ಕಾಗಿ ದಾನವಾಗಿ ನೀಡಿದ ಭೂಮಿಯನ್ನು ನಿಯಂತ್ರಿಸುವ ದಿಸೆಯಲ್ಲಿ 1995ರಲ್ಲಿ ವಕ್ಫ್‌ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದಕ್ಕೆ ಮುಸ್ಲಿಂ ಕಾನೂನನ್ನು ಕೂಡ ಅನ್ವಯ ಮಾಡಲಾಗಿದೆ. ಧಾರ್ಮಿಕ ಕಾರಣಕ್ಕಾಗಿ ನೀಡಿದ ಆಸ್ತಿಯು ವಕ್ಫ್‌ ಮಂಡಳಿ ವ್ಯಾಪ್ತಿಗೆ ಬರುತ್ತದೆ. ಅಷ್ಟೇ ಅಲ್ಲ, ಯಾವುದೇ ಆಸ್ತಿಯನ್ನು ವಕ್ಫ್‌ ಮಂಡಳಿಯು ತನ್ನ ಆಸ್ತಿಯನ್ನು ಘೋಷಿಸುವ ಜತೆಗೆ ಅದನ್ನು ವಶಕ್ಕೆ ಪಡೆಯುವ ಪರಮಾಧಿಕಾರ ಹೊಂದಿದೆ. ಇದು ಜನರ ಅಸಮಾಧಾನಕ್ಕೂ ಕಾರಣವಾಗಿದೆ. ಈ ತಿದ್ದುಪಡಿ ಮಸೂದೆಯನ್ನು ಕಳೆದ ತಿಂಗಳು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು.

ಈ ಸುದ್ದಿಯನ್ನೂ ಓದಿ: ED Raid: ʻಅತ್ತೆಗೆ ಕ್ಯಾನ್ಸರ್‌ ಇದೆ.. 4 ವಾರ ಟೈಂ ಕೊಡಿʼ- ED ರೇಡ್‌ ವೇಳೆ ಆಪ್‌ MLA ಹೈಡ್ರಾಮಾ; ಕೊನೆಗೂ ಅರೆಸ್ಟ್‌